ಮಹದೇವಪುರ: ಸವರ್ಣೀಯರ ಮನೆ ಪಕ್ಕದಲ್ಲಿ ದಲಿ ತರು ವಾಸಿಸಿದರೆ ಮೈಲಿಗೆ ಎಂದು ಬಿಬಿಎಂಪಿಯಿಂದ ಅಭಿವೃದ್ಧಿಗೊಳಿಸಿದ್ದ ರಸ್ತೆಯಲ್ಲಿ ದಲಿತರ ಮನೆಗಳಿಗೆ ತಡೆಗೋಡೆ ನಿರ್ಮಿಸಿ ದೌರ್ಜನ್ಯವೆಸಗಿರುವ ಅಮಾನವೀಯ ಘಟನೆ ಕಾಡುಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾದರಮಂಗಲದಲ್ಲಿ ನಡೆದಿದೆ.
ಕ್ಷೇತ್ರದ ಸಾದರಮಂಗಲದ ತೋಳಪ್ಪ ರಸ್ತೆಯಲ್ಲಿ ಸುಮಾರು 50 ವರ್ಷಗಳಿಂದ ವಾಸವಿರುವ ದಲಿತರ ಮನೆಗಳ ಪಕ್ಕದಲ್ಲಿ ಅದೇ ಗ್ರಾಮದ ಸವರ್ಣೀಯ ಇತ್ತೀಚೆಗೆ ಮನೆ ನಿರ್ಮಿಸಿದ್ದು ದಲಿತರು ವಾಸಿಸಿದರೆ ಅಪಶಕುನ ಹಾಗೂ ಮೈಲಿಗೆಯಾಗುತ್ತದೆ ಎಂದು ಬಿಬಿಎಂಪಿ ಅನುದಾನದಲ್ಲಿ ಅಭಿವೃದ್ಧಿಗೊಳಿಸಿರುವ ರಸ್ತೆಯಲ್ಲಿ ದಲಿತರ ಮನೆಗಳಿಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಲಾಗಿದೆ ಎಂದು ದಲಿತ ಕುಂಟುಂಬದ ನಂಜಮ್ಮ ಆರೋಪಿಸಿದ್ದಾರೆ.
ಈ ರಸ್ತೆಯಲ್ಲಿ ಚರಂಡಿ ನಿರ್ಮಾಣಕ್ಕೆ ಸವರ್ಣೀಯ ವ್ಯಕ್ತಿ ವಿರೋಧ ವ್ಯಕ್ತಪಡಿಸಿದ್ದು ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದನ್ನೇ ಗುರಿಯಾಗಿಸಿಕೊಂಡು ನಮ್ಮ ಮನೆಗಳಿಗೆ ಅಡ್ಡಲಾಗಿ ತಡೆಗೊಡೆ ನಿರ್ಮಿಸಿ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ದೂರಿದರು.
ಈ ಬಗ್ಗೆ ಕಾಡುಗುಡಿ ಪೋಲಿಸ್ ಠಾಣೆಗೆ ದೂರು ನೀಡಲು ತೆರಳಿದಾಗ ಪೋಲಿಸರು ದೂರು ದಾಖಲಿಸಿಕೊಳ್ಳದೆ ಆ ವ್ಯಕ್ತಿಗೆ ಸಹಕರಿಸಿ ನಮ್ಮ ಮೇಲೆ ದರ್ಪ ತೋರುತ್ತಿದ್ದಾರೆ ಎಂದು ಅಳಲು ತೊಡಿಕೊಂಡರು. ಅಲ್ಲದೆ ಆತ ಪೊಲೀಸರೊಂದಿಗೆ ಬಂದು ರಾತ್ರೋರಾತ್ರಿ ತಡೆಗೋಡೆ ನಿರ್ಮಿಸಿದ್ದಾರೆಂದು ಆರೋಪಿಸಿದ್ದಾರೆ.
ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ದಲಿತರು- ಸವರ್ಣೀಯರೆಂಬ ಬೇಧ ಭಾವ ಜೀವಂತವಾಗಿರುವುದು ಬೇಸರ ತಂದಿದೆ. ರಕ್ಷಣೆ ಒದಗಿಸಬೇಕಾದ ಪೋಲಿಸರೇ ದಲಿತರ ಮೇಲೆ ಗದಾಪ್ರಹಾರ ನಡೆಸುತ್ತಿರುವುದು ಯಾವ ನ್ಯಾಯ? ಎಂದು ಸಾಮಾಜಿಕ ಕಾರ್ಯಕರ್ತ ಪರಮೇಶ್ ಹೇಳಿದರು.