Advertisement

ಕೋವಿಡ್‌ ಮಾರ್ಗಸೂಚಿಯೊಂದಿಗೆ ಆರ್ಚರಿ ಜೋಡಿ ಮದುವೆಗೆ ಸಜ್ಜು

10:10 PM Jun 27, 2020 | Sriram |

ರಾಂಚಿ: ಭಾರತದ ಖ್ಯಾತ ಬಿಲ್ಗಾರರಾದ ಅತನು ದಾಸ್‌ ಮತ್ತು ದೀಪಿಕಾ ಕುಮಾರಿ ಮಂಗಳವಾರ ರಾಂಚಿಯ ಮೊರಾಬಾದಿಯಲ್ಲಿ ಹಸೆಮಣೆ ಏರಲಿದ್ದಾರೆ. ಈ ವೇಳೆ ಕೋವಿಡ್‌ ಮಾರ್ಗಸೂಚಿಯನ್ನು ಕಟ್ಟುನಿಟ್ಟಿನಿಂದ ಪಾಲಿಸಲು ನಿರ್ಧರಿಸಿದ್ದಾರೆ. ಇದನ್ನವರು ಪುಟ್ಟ ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಿದ್ದಾರೆ.

Advertisement

“ಮದುವೆಗೆ ಕೇವಲ 60 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದೆ. ದೊಡ್ಡ ಹಾಲ್‌ ಕಾದಿರಿಸಲಾಗಿದೆ. ಇದರಿಂದ ಸಾಮಾಜಿಕ ಅಂತರವನ್ನು ಪಾಲಿಸಲು ಸುಲಭವಾಗುತ್ತದೆ. ಬಂದವರಿಗೆಲ್ಲ ಮಾಸ್ಕ್, ಸ್ಯಾನಿಟೈಸರ್‌ ಹಂಚಲಾಗುವುದು…’ ಎಂದು ದೀಪಿಕಾ ಕುಮಾರಿ ತಮ್ಮ ಮದುವೆ ಸಿದ್ಧತೆ ಬಗ್ಗೆ ರಾಂಚಿಯಿಂದ ದೂರವಾಣಿ ಮೂಲಕ ಪಿಟಿಐಗೆ ತಿಳಿಸಿದರು.

ಉಳಿದವರಿಗೆ ಮಾದರಿ
“ಮದುವೆ ಮಂಟಪದಲ್ಲಿ ನಾವು ಏನನ್ನೂ ಮುಟ್ಟುವುದಿಲ್ಲ. ನಾವು ಸುರಕ್ಷಾ ನಿಯಮವನ್ನು ಪಾಲಿಸಿ ಉಳಿದವರಿಗೂ ಮಾದರಿಯಾಗಬೇಕು. 60 ಮಂದಿ ಅತಿಥಿಗಳಿಗೆ ಎರಡು ಪ್ರತ್ಯೇಕ ಸಮಯವನ್ನು ನಿಗದಿಗೊಳಿಸಲಾಗಿದೆ. 30 ಮಂದಿಗೆ ಸಂಜೆ 5.30ರಿಂದ 7 ಗಂಟೆ ಸಮಯವನ್ನು ಸೂಚಿಸಲಾಗಿದೆ. ಉಳಿದ 30 ಮಂದಿ ಅತಿಥಿಗಳು ಅನಂತರ ಆಗಮಿಸುವರು. ಈ ಸಂದರ್ಭದಲ್ಲಿ ನಮ್ಮ ಮನೆಯವರ್ಯಾರೂ ಉಪಸ್ಥಿತರಿರುವುದಿಲ್ಲ’ ಎಂದು ದೀಪಿಕಾ ಹೇಳಿದರು.

ಭಾರತೀಯ ಆರ್ಚರಿ ಅಸೋಸಿಯೇಶನ್‌ನ ನೂತನ ಅಧ್ಯಕ್ಷ, ಜಾರ್ಖಂಡ್‌ನ‌ ಮಾಜಿ ಮುಖ್ಯ ಮಂತ್ರಿ ಅರ್ಜುನ್‌ ಮುಂಡಾ ಈ ಸಮಾರಂಭಕ್ಕೆ ಆಗ ಮಿಸುವ ಪ್ರಮುಖ ಅತಿಥಿಗಳಲ್ಲೊಬ್ಬರು. ದೀಪಿಕಾ ಕುಮಾರಿ ಅವರ ಆರ್ಚರಿ ಏಳಿಗೆಯಲ್ಲಿ ಮುಂಡಾ ಪಾತ್ರ ಮಹತ್ವದ್ದಾಗಿದೆ. ಅತನು ದಾಸ್‌-ದೀಪಿಕಾ ಕುಮಾರಿ ಅವರ ನಿಶ್ಚಿತಾರ್ಥ 2018ರಲ್ಲೇ ನಡೆದಿತ್ತು. ಮೊನ್ನೆ ಜೂ. 10ರಂದು ಮದುವೆ ದಿನಾಂಕವನ್ನು ಅಂತಿಮಗೊಳಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next