Advertisement

“ಲೆಕ್ಕಾಚಾರ”ದ ಆಟ

11:03 PM Aug 01, 2019 | mahesh |

“ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬ ಚಿತ್ರದ ಹೆಸರನ್ನು ತುಂಬಾ ದಿನಗಳಿಂದ ನೀವು ಕೇಳಿರಬಹುದು. ಆದರೆ, ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಮಾಹಿತಿ ಇರಲಿಲ್ಲ. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಹಾಡು ಹಾಗೂ ಟ್ರೇಲರ್‌ ಹೊರಬಂದಿದೆ. ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌, ಕಾರ್ಯದರ್ಶಿ ಎನ್‌.ಎಂ.ಸುರೇಶ್‌, ನಟ ವಸಿಷ್ಠ ಸಿಂಹ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭಕೋರಿದರು. ಈ ಚಿತ್ರವನ್ನು ರಾಮಚಂದ್ರ ಎನ್ನುವವರು ನಿರ್ದೇಶಿಸಿದ್ದಾರೆ. ಇವರಿಗಿದು ಮೊದಲ ಚಿತ್ರ. ಸಿನಿಮಾದ ಮೇಲಿನ ಆಸಕ್ತಿಯಿಂದ ಸಿನಿಮಾ ಕ್ಷೇತ್ರಕ್ಕೆ ಬಂದ ರಾಮಚಂದ್ರ ಮೊದಲ ಚಿತ್ರಕ್ಕೇ “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂದು ಟೈಟಲ್‌ ಇಟ್ಟಿದ್ದಾರೆ. ಈ ಟೈಟಲ್‌ ಕೇಳಿದ ಅನೇಕರು, “ಟೈಟಲ್‌ ತುಂಬಾ ನೆಗೆಟಿವ್‌ ಅನಿಸುತ್ತಿದೆ. ಬದಲಿಸಿ’ ಎಂದರಂತೆ. ಆದರೆ, ನಿರ್ದೇಶಕರ ಕಥೆಗೆ ಅದೇ ಸೂಕ್ತವಾದ ಕಾರಣ, ಕೊನೆಗೆ ಅದನ್ನೇ ಇಟ್ಟಿದ್ದಾಗಿ ಹೇಳಿಕೊಂಡರು ನಿರ್ದೇಶಕರು. ಚಿತ್ರದಲ್ಲಿ ಮನುಷ್ಯನಲ್ಲಿರುವ ಒಂದು ಸೂಕ್ಷ್ಮ ಗುಣದ ಬಗ್ಗೆ ಹೇಳಿದ್ದಾರಂತೆ. ಹಾಗಾದರೆ, ಅದು ಏನು ಎಂದು ನೀವು ಕೇಳಬಹುದು. ಅದನ್ನು ಚಿತ್ರದಲ್ಲೇ ನೋಡಬೇಕು ಎಂಬುದು ನಿರ್ದೇಶಕರ ಮಾತು.

Advertisement

ಚಿತ್ರದಲ್ಲಿ ಸಂಚಾರಿ ವಿಜಯ್‌, ಮಯೂರಿ, ರಶ್ಮಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಸಂಚಾರಿ ವಿಜಯ್‌ ಹೇಳುವಂತೆ, ಈ ಚಿತ್ರವನ್ನು ಒಂದು ವಾಕ್ಯದಲ್ಲಿ ಕಟ್ಟಿಕೊಡೋದು ಕಷ್ಟವಂತೆ. ಏಕೆಂದರೆ ಹಲವು ಪದರಗಳೊಂದಿಗೆ ಚಿತ್ರದ ಕಥೆ ಸಾಗುತ್ತದೆ ಎಂಬುದು ಅವರ ಮಾತು. ನಾಯಕಿಯರಾದ ಮಯೂರಿ ಹಾಗೂ ರಶ್ಮಿ ಕೂಡಾ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಚಿತ್ರಕ್ಕೆ ನೊಬಿನ್‌ ಪೌಲ್‌ ಸಂಗೀತ, ವಾಸುಕಿ ವೈಭವ್‌ ಸಾಹಿತ್ಯ ಚಿತ್ರಕ್ಕಿದೆ. ಅಂದಹಾಗೆ, ಚಿತ್ರ ಆಗಸ್ಟ್‌ 23 ರಂದು ತೆರೆ ಕಾಣುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next