Advertisement

ಗಂಗೊಳ್ಳಿ ಯ ಬಂದರಿನಲ್ಲಿ ದಡ ಸೇರಿದವು ಬೋಟು- ದೋಣಿಗಳು

12:28 AM May 31, 2019 | Team Udayavani |

ಗಂಗೊಳ್ಳಿ: ಈ ಬಾರಿಯ ಮೀನುಗಾರಿಕಾ ಋತು ಮೇ 31ಕ್ಕೆ ಅಂತ್ಯವಾಗಲಿದ್ದು, ಗಂಗೊಳ್ಳಿ ಬಂದರಿನಲ್ಲಿ ಈಗಾಗಲೇ ಬಹುತೇಕ ಬೋಟುಗಳು, ದೋಣಿಗಳು ಮೀನುಗಾರಿಕೆಯನ್ನು ಮುಗಿಸಿ, ದಡದಲ್ಲಿ ಲಂಗರು ಹಾಕಿವೆ. ಜೂ. 1ರಿಂದ ಅಧಿಕೃತವಾಗಿ ಈ ಮೀನುಗಾರಿಕಾ ಋತು ಸ್ಥಗಿತಗೊಳ್ಳಲಿದೆ.

Advertisement

ಗಂಗೊಳ್ಳಿಯ ಬಂದರಿನಲ್ಲಿ ಈಗ ಬೋಟುಗಳನ್ನು ಸಮುದ್ರದಿಂದ ದಡದತ್ತ ಎಳೆದು ತರಲಾಗುತ್ತಿದೆ. ಅಲ್ಲದೇ ಅದಕ್ಕೆ ಮಳೆ ನೀರು ಬೀಳದಂತೆ ಮತ್ತೆ ತಟ್ಟಿಯನ್ನು ಕಟ್ಟುವ ಕಾರ್ಯ ಕೂಡ ಭರದಿಂದ ಸಾಗಿದೆ. ಇನ್ನೆರಡು ತಿಂಗಳು ಯಾಂತ್ರಿಕ ಮೀನುಗಾರಿಕೆಗೆ ನಿಷೇಧವಿದ್ದು, ಮತ್ತೆ ಆಗಸ್ಟ್‌ ಮೊದಲ ವಾರದಲ್ಲಿ ಆರಂಭವಾಗುವ ಸಾಧ್ಯತೆಗಳಿವೆ.

ಮೀನು ಕಡಿಮೆ, ದರ ಗಗನಕ್ಕೆ

ಉಡುಪಿ ಜಿಲ್ಲೆಯಲ್ಲಿ ಹಿಂದಿನೆರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಸಿಕ್ಕಿರುವ ಮೀನಿನ ಪ್ರಮಾಣ ಹಾಗೂ ಆದಾಯದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಈ ಮೀನುಗಾರಿಕಾ ಋತು ಮೀನುಗಾರರಿಗೆ ಫಲಪ್ರದವಾಗಿರಲಿಲ್ಲ.

ಈ ಬಾರಿ ಸಿಕ್ಕ ಮೀನಿನ ಪ್ರಮಾಣ ಕಡಿಮೆಯಿದ್ದರೂ, ಉತ್ತಮ ಬೇಡಿಕೆ ಇದ್ದುದರಿಂದ ಎಲ್ಲ ಮೀನಿನ ದರವೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಇದು ಮೀನು ಪ್ರಿಯರಿಗೆ ಸ್ವಲ್ಪ ಮಟ್ಟಿಗೆ ಕಹಿ ಅನುಭವ ನೀಡಿತ್ತು.

Advertisement

ಹಲವು ಕಾರಣಗಳು

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕರಾವಳೆಯೆಲ್ಲೆಡೆ ಮೀನಿನ ಬರ ಆವರಿಸಿತ್ತು. ಅದರಲ್ಲೂ ಓಖೀ, ಗಜ, ಫನಿ, ಇನ್ನಿತರ ಚಂಡಮಾರುತ ಭೀತಿಯಿಂದ ಕೆಲ ಸಮಯ ಮೀನುಗಾರಿಕೆ ಸ್ಥಗಿತ, ಲೈಟ್ ಫಿಶಿಂಗ್‌ ಮೀನುಗಾರಿಕೆ ಗೊಂದಲ, ಹವಾಮಾನ ವೈಪರೀತ್ಯದಿಂದಾಗಿ ಮೀನುಗಾರಿಕೆಗೆ ಹೊಡೆತ ಬಿದ್ದಿತ್ತು.

ಇನ್ನು ಕಳೆದ ವರ್ಷ ಕುಂದಾಪುರ ತಾಲೂಕಿನಲ್ಲಿ 37,458 ಲಕ್ಷ ರೂ. ಮೀನುಗಾರಿಕಾ ವಹಿವಾಟು ಆಗಿದ್ದರೆ, ಈ ಬಾರಿ 16,307 ಲಕ್ಷ ರೂ. ವಹಿವಾಟು ಆಗಿದೆ.

ಈ ಪ್ರಮಾಣದ ಇಳಿಕೆಗೆ ಪ್ರಮುಖ ಕಾರಣ ಹಿಂದಿನ ವರ್ಷ ಇಲ್ಲಿನ ಮೀನುಗಾರರು ಇಲ್ಲಿನ ಬಂದರುಗಳಲ್ಲಿ ಮೀನು ಇಳಿಸುತ್ತಿದ್ದರು. ಆದರೆ ಈ ಬಾರಿ ಮಲ್ಪೆ, ಭಟ್ಕಳ ಸಹಿತ ಎಲ್ಲ ಕಡೆಗಳಲ್ಲಿ ಮೀನು ಬೋಟು, ದೋಣಿಗಳಿಂದ ಇಳಿಸಿರುವುದರಿಂದ ಸ್ವಲ್ಪ ಮಟ್ಟಿಗೆ ಇಳಿಮುಖವಾಗಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next