Advertisement

ಬಾಂಜಾರುಮಲೆ: ಕನಿಷ್ಠ ಇನ್ನೂ ಎರಡು ಸೇತುವೆ ಬೇಕು

10:37 PM Sep 01, 2019 | Sriram |

ಬೆಳ್ತಂಗಡಿ: ಇತ್ತೀಚೆಗಷ್ಟೇ ಭೀಕರ ನೆರೆಯಿಂದ ಬಾಂಜಾರುಮಲೆಗೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿಹೋದ ಎರಡೇ ದಿನಗಳಲ್ಲಿ ಸ್ಟೀಲ್‌ ಬ್ರಿಡ್ಜ್ ನಿರ್ಮಾಣ ಮಾಡಿಸಿದ ಶಾಸಕರು, ತಹಶೀಲ್ದಾರ್‌ ಸಹಿತ ಇಡೀ ಅಧಿಕಾರಿ ವರ್ಗಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಅನೇಕ ವರ್ಷಗಳಿಂದಲೂ ಮೂಲಸೌಕರ್ಯ ವಂಚಿತ ಪ್ರದೇಶವೆಂದೇ ಗುರುತಿಸಿಕೊಂಡ ಬಾಂಜಾರುಮಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿದ್ದು ಶೀಘ್ರವೇ ಆಗಬೇಕಾದ ಆವಶ್ಯಕತೆ ಇದೆ.

Advertisement

ಅಡಿಕೆ ಮರದ ಕಾಲುಸಂಕ
ಬಾಂಜಾರುಮಲೆಗೆ ಸಂಪರ್ಕ ಕಲ್ಪಿಸುವ ಮುಖ್ಯ ಸೇತುವೆಯನ್ನು ಹೊರತುಪಡಿಸಿ ಊರಿನೊಳಗೆ ಹೆಚ್ಚುವರಿ ಎರಡು ಸೇತುವೆಗಳ ಆವಶ್ಯಕತೆ ಇದೆ. ಊರಿನೊಳಗೆ ಎರಡು ದೊಡ್ಡ ಹಳ್ಳಗಳು ಹಾದುಹೋಗಿದ್ದು, ಅವುಗಳಾಚೆಗೆ ಇರುವ ಒಟ್ಟು ಹತ್ತೂಂಬತ್ತು ಮನೆಗಳವರು ಅಡಿಕೆ ಮರಗಳಿಂದ ನಿರ್ಮಿಸಿದ ಕಾಲುಸಂಕವನ್ನೇ ನಂಬಿಕೊಂಡಿದ್ದಾರೆ. ಮಳೆಗಾಲದಲ್ಲಿ ನೀರಿನ ರಭಸ ಹೆಚ್ಚಿ ರಾತ್ರಿ ಕಳೆಯುವ ಮುನ್ನವೇ ಕಾಲುಸಂಕಗಳು ಕೊಚ್ಚಿಹೋಗುವುದರಿಂದ ಚಿಂತೆಯಲ್ಲೇ ದಿನ ಕಳೆಯುವುದು ಅನಿವಾರ್ಯ ವಾಗಿದೆ. ಶಾಲೆಗೆ ಹೋಗುವ ಮಕ್ಕಳು ಇದೇ ಕಾಲುಸಂಕಗಳ ಮೇಲೆ ಹಾದು ಹೋಗಬೇಕಾಗಿದ್ದು, ಅವರು ಮರಳುವ ತನಕ ಹೆತ್ತವರು ಜೀವ ಕೈಯಲ್ಲಿ ಹಿಡಿದು ಕಾಯುವಂತಾಗಿದೆ. ಈ ಹಳ್ಳಗಳಿಗೆ ಶಾಶ್ವತ ಸೇತುವೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಪ್ರಯೋಜನವಾಗಿಲ್ಲ.

ವಿದ್ಯುತ್‌ ಸಂಪರ್ಕ
ಇಷ್ಟೇ ಅಲ್ಲದೇ, ಬಾಂಜಾರುಮಲೆ ಊರಿಗೆ ನಾಲ್ಕೈದು ತಿಂಗಳ ಹಿಂದೆ ನೀಡಿದ್ದ ವಿದ್ಯುತ್‌ ಸಂಪರ್ಕ ಕೇವಲ ಒಂದು ವಾರದೊಳಗೆ ಕಡಿತಗೊಂಡಿದೆ. ಇಲ್ಲಿನ ಹಾದಿ ದಟ್ಟ ಕಾಡಿನ ನಡುವೆ ಹಾದು ಹೋಗುವುದರಿಂದ ಇಲ್ಲಿ ವಿದ್ಯುತ್‌ ಕಂಬಗಳನ್ನು ನೆಡುವ ಬದಲು ಕೇಬಲ್‌ ವ್ಯವಸ್ಥೆ ಮಾಡುವುದು ಸೂಕ್ತ ಎಂಬುದು ಗ್ರಾಮಸ್ಥರ ಒಕ್ಕೊರಲ ಅಭಿಪ್ರಾಯ.

ಪರ್ಯಾಯ ರಸ್ತೆ ನಿರ್ಮಿಸಿದರೆ ಅನುಕೂಲ
ಬಾಂಜಾರುಮಲೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ರಸ್ತೆ ಸರಿ ಯಿಲ್ಲದ ಕಾರಣ ಯಾವುದೇ ವಾಹನದವರು ಬರಲು ಒಪ್ಪುವುದಿಲ್ಲ. ಬಂದರೂ ಒಂದಕ್ಕೆ ಎರಡು ಪಟ್ಟು ಬಾಡಿಗೆೆ. ಬಾಂಜಾರುಮಲೆಗೆ ಚಾರ್ಮಾಡಿ ಘಾಟಿಯ ಮಾರ್ಗವಲ್ಲದೇ ಪರ್ಯಾಯ ಮಾರ್ಗ ಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆ. ನೆರಿಯದಿಂದ ಬಾಂಜಾರುಮಲೆಗೆ ಪ್ರತ್ಯೇಕ ರಸ್ತೆ ವ್ಯವಸ್ಥೆ ಮಾಡಿಕೊಟ್ಟರೆ ಅನುಕೂಲವಾಗುತ್ತದೆ ಎಂಬುದು ಅವರ ಆಗ್ರಹ.

ಸ್ಟೀಲ್‌ ಬ್ರಿಡ್ಜ್
ಆ. 9ರಂದು ಪ್ರವಾಹದ ಹೊಡೆತಕ್ಕೆ ಬಾಂಜಾರುಮಲೆಗೆ ಸಂಪರ್ಕಿಸುವ ಸೇತುವೆ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಈ ಹಿನ್ನೆಲೆ ನಡೆದಾಡಲು ಹಾಗೂ ಬೈಕ್‌ ತೆರಳುವಷ್ಟು ಸಾಮರ್ಥ್ಯವುಳ್ಳ ಸ್ಟೀಲ್‌ ಬ್ರಿಡ್ಜ್ ನಿರ್ಮಿಸಲಾಗಿತ್ತು. ಆದರೆ ಘನ ವಾಹನಗಳ ಸಂಚಾರಕ್ಕೆ ಸಮಸ್ಯೆ ಇರುವುದರಿಂದ ಯೇನಪೊಯ ವತಿಯಿಂದ 30 ಟನ್‌ ಸಾಮರ್ಥ್ಯದ ಸ್ಟೀಲ್‌ ಬ್ರಿಡ್ಜ್ ನಿರ್ಮಾಣ ಮಾಡಲಾಗುತ್ತಿದೆ. ಬಳಿಕ ವಿದ್ಯುತ್‌ ಸಂಪರ್ಕ ಕಲ್ಪಿಸಲು ಅನುಕೂಲವಾಗಲಿದೆ.

Advertisement

ಸೌರ ವಿದ್ಯುತ್‌
ಸೇತುವೆ ಸಂಪರ್ಕ ಕಡಿತ ಗೊಂಡಿದ್ದರಿಂದ ತುರ್ತು ವಿದ್ಯುತ್‌ ಸಂಪರ್ಕ ಒದಗಿಸಲು ಸಾಧ್ಯವಾಗುತ್ತಿಲ್ಲ. ತಾತ್ಕಾಲಿಕವಾಗಿ 11 ಮನೆಗಳಿಗೆ ಸೆಲ್ಕೋ ಜತೆ ಸೇರಿ ಸೌರ ವಿದ್ಯುತ್‌ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಬಾಂಜಾರು ಮಲೆಗೆ ಯೇನಪೊಯದಿಂದ 30 ಟನ್‌ ಸಾಮರ್ಥ್ಯದ ಸ್ಟೀಲ್‌ ಬ್ರಿಡ್ಜ್ ಅಳವಡಿಕೆ ಕಾಮಗಾರಿ ಹಂತದಲ್ಲಿದೆ.
-ಹರೀಶ್‌ ಪೂಂಜ, ಶಾಸಕರು

 ಕಾಲುಸಂಕಕ್ಕೆ ಪರ್ಯಾಯ
ಮುಖ್ಯ ಸೇತುವೆ ಸೇರಿ ಕನಿಷ್ಠ ಮೂರು ಸೇತುವೆಗಳಾದರೂ ಬೇಕು. ತೋಟದ ನಡುವಲ್ಲಿ ಹಾದು ಹೋಗುವ ಹಳ್ಳ ಮಳೆಗಾಲದಲ್ಲಿ ಹೊಳೆಯಂತೆಯೇ ಹರಿಯುತ್ತದೆ. ಪದೇ ಪದೇ ಕಾಲುಸಂಕ (ಪಾಪು) ಕೊಚ್ಚಿ ಹೋಗುತ್ತಿರುತ್ತದೆ. ಹೆಂಗಸರು, ಮಕ್ಕಳು ಓಡಾಡುವುದೇ ಕಷ್ಟ.
 -ಯೋಗೀಶ್‌
ಬಾಂಜಾರುಮಲೆ ಗ್ರಾಮಸ್ಥ

 ಶಾಶ್ವತ ಸೇತುವೆ
ಅನಿಯೂರು ಹೊಳೆಯ ಸೇತುವೆ ಕೊಚ್ಚಿ ಹೋದ ಅನಂತರ ಸ್ಟೀಲ್‌ ಬ್ರಿಡ್ಜ್ ನಿರ್ಮಿಸಿರುವುದು ನಿಜಕ್ಕೂ ಅನುಕೂಲವಾಗಿದೆ. ಆದರೆ ಈಗ ಕೇವಲ ದ್ವಿಚಕ್ರ ವಾಹನಗಳು ಮಾತ್ರ ಸಂಚರಿಸಬಹುದಾದ್ದರಿಂದ ಪಟ್ಟಣಕ್ಕೆ ಬಂದು ಹೋಗಿ ಬರಲು, ದಿನಸಿ ಸಾಮಾನು ತರಲು ಬಾಡಿಗೆಗೆ 1,500 ಖರ್ಚು ಮಾಡುವುದು ನಮಗೆ ದುಬಾರಿ ಆಗುತ್ತದೆ. ಆದ್ದರಿಂದ ಶಾಶ್ವತ ಸೇತುವೆ ಆದಷ್ಟು ಬೇಗ ನಿರ್ಮಾಣವಾದರೆ ಒಳ್ಳೆಯದು.
 -ರವೀಶ
ಬಾಂಜಾರುಮಲೆ ಗ್ರಾಮಸ್ಥ

 ಸೇತುವೆ ಆದಲ್ಲಿ ಕಂಬ ಜೋಡಣೆ
ವಿದ್ಯುತ್‌ ಕಂಬ ಹಾನಿಯಾಗಿರುವುದರಿಂದ ಬಾಂಜಾರುಮಲೆಗೆ ವಿದ್ಯುತ್‌ ಸಮಸ್ಯೆಯಾಗಿದೆ. ಸೇತುವೆ ಆದಲ್ಲಿ ಕಂಬಗಳ ಜೋಡಣೆ ಕಾರ್ಯ ನಡೆಯಲಿದೆ. ಬಾಂಜಾರುಮಲೆ ನಿವಾಸಿಗಳು ಸ್ವಯಂಚಾಲಿತ ವಿದ್ಯುತ್‌ ಅಳವಡಿಕೆ ಮಾಡಿ ಕೊಂಡಿರುವುದರಿಂದ ಸಮಸ್ಯೆ ಇಲ್ಲ.
-ಶಿವಶಂಕರ್‌, ಮೆಸ್ಕಾಂ ಎಇಇ

- ಸ್ಕಂದ ಆಗುಂಬೆ
ಉದಯವಾಣಿ ವಿದ್ಯಾರ್ಥಿ ಪತ್ರಕರ್ತ ಯೋಜನೆಯ ಶಿಕ್ಷಣಾರ್ಥಿ.

Advertisement

Udayavani is now on Telegram. Click here to join our channel and stay updated with the latest news.

Next