Advertisement

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

10:49 AM Jun 30, 2021 | Team Udayavani |

ಪ್ರತೀ ವರ್ಷ ಜೂನ್‌ 30ರಂದು ಕ್ಷುದ್ರಗ್ರಹ ಗಳ ದಿನವನ್ನು ಆಚರಿಸಲಾಗುತ್ತದೆ. 1908ರ ಜೂನ್‌ 30ರಂದು ಸೈಬೀರಿಯಾದ ತುಂಗುಸ್ಕಾದಲ್ಲಿ ಅಪ್ಪಳಿ ಸಿದ ಕ್ಷುದ್ರಗ್ರಹ ಅಪಾರ ಹಾನಿಯುಂಟು ಮಾಡಿತು. ಭವಿಷ್ಯದಲ್ಲಿ ತುಂಗುಸ್ಕಾ ಘಟನೆ ಯಂತಹ ಅನಾಹುತಗಳನ್ನು ಎದುರಿಸಲು ಕ್ಷುದ್ರ ಗ್ರಹಗಳ ಬಗ್ಗೆ ಅರಿವು, ಹಾನಿ ತಪ್ಪಿಸಲು ಮಾಡಿಕೊಳ್ಳಬೇಕಾದ ಸಿದ್ಧತೆ, ಇವುಗಳು ಸಾಗುವ ಹಾದಿ ತಿಳಿಯುವ ಅನಿವಾರ್ಯಗಳ ಬಗ್ಗೆ ಜನತೆಗೆ ಮಾಹಿತಿ ನೀಡು ವುದೇ ಈ ದಿನಾಚರಣೆಯ ಉದ್ದೇಶ.

Advertisement

ಜಗತ್ತಿನಾದ್ಯಂತ ಜೂನ್‌ 30ರಂದು ಕ್ಷುದ್ರಗ್ರಹ ಗಳ ದಿನವನ್ನು ಆಚರಿಸುವ ಮನವಿಗೆ 2016ರಲ್ಲಿ ವಿಶ್ವಸಂಸ್ಥೆಯು ಸ್ಪಂದಿಸಿ ಒಪ್ಪಿಗೆ ನೀಡಿದ ಬಳಿಕ ಪ್ರತೀ ವರ್ಷ ಈ ದಿನವನ್ನು ಆಚರಿಸಿಕೊಂಡು ಬರಲಾಗಿದೆ.

ಈ ದಿನದಂದು ಎಲ್ಲ ದೇಶಗಳಲ್ಲೂ ಉಪನ್ಯಾಸ, ವಸ್ತುಪ್ರದರ್ಶನ ಮತ್ತು ಭಿತ್ತಿ ಚಿತ್ರಗಳ ಮೂಲಕ ಕ್ಷುದ್ರಗ್ರಹಗಳ ಬಗೆಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ನಡೆಸಲಾಗುತ್ತದೆ.

ಕ್ಷುದ್ರಗ್ರಹಗಳೆಂದರೇನು?
ಸೌರವ್ಯೂಹದಲ್ಲಿ ಮಂಗಳ ಮತ್ತು ಗುರುಗ್ರಹಗಳ ಮಧ್ಯದಲ್ಲಿ ದಪ್ಪ ಪಟ್ಟೆಯಾಕಾರದ ಕಕ್ಷೆಯಲ್ಲಿ ಸೂರ್ಯನ ಸುತ್ತ ಸುತ್ತುತ್ತಿರುವ ಮಿಲಿಯಗಟ್ಟಲೆ ಶಿಲಾಮಯ ಆಕಾಶಕಾಯಗಳನ್ನು ಕ್ಷುದ್ರಗ್ರಹಗ ಳೆಂದು ಕರೆಯಲಾಗುತ್ತದೆ. ಗಾತ್ರದಲ್ಲಿ ನೂರಾರು ಕಿ.ಮೀ. ಗಳಿಂದ ಒಂದು ಕಿ.ಮೀ. ವರೆಗಿನ ಈ ಕ್ಷುದ್ರಗ್ರಹಗಳು ತಮ್ಮ ಕಕ್ಷೆಯಿಂದ ಕಾರಣಾಂತರಗಳಿಂದ ಹೊರಬಂದು ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಸೆಳೆತಕ್ಕೆ ಸಿಕ್ಕಿದರೆ, ವಾತಾವರಣದ ಘರ್ಷಣೆಯಿಂದ ಉರಿಯುತ್ತ, ಭೂಮಿಯತ್ತ ಧಾವಿಸುತ್ತವೆ. ಸಣ್ಣ ಶಿಲೆಗಳು ಭೂಮಿ ತಲುಪುವ ಮುನ್ನ ಆವಿಯಾಗುತ್ತವೆ. ದೊಡ್ಡ ಗಾತ್ರದವುಗಳಾದರೆ ಹಾನಿ ಉಂಟುಮಾಡುತ್ತವೆ. ಹಲವು ಸಂದರ್ಭಗಳಲ್ಲಿ ಅತೀದೊಡ್ಡ ಕ್ಷುದ್ರಗ್ರಹ ಗಳು ಭೂಮಿಯ ಸನಿಹವೇ ಅತೀ ವೇಗದಲ್ಲಿ ಹಾದುಹೋಗುತ್ತಿರುತ್ತವೆ. ಈ ಎಲ್ಲ ಕಾರಣಗಳಿಂದಾಗಿ ಸಹಜವಾಗಿ ಖಗೋಳ ಶಾಸ್ತ್ರಜ್ಞರು ಇವುಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಭೂ ಸಮೀಪದ ಆಕಾಶಕಾಯಗಳ (Nಛಿಚr ಉಚrಠಿಜ Oಚಿjಛಿcಠಿs) ಅಧ್ಯಯನ ಬಹಳ ಮಹತ್ವ ಪಡೆದುಕೊಂಡಿದೆ. ಸೌರಮಂಡಲ ರೂಪುಗೊಳ್ಳುತ್ತಿರುವ ಕಾಲದ (ಸುಮಾರು 4.6 ಬಿಲಿಯನ್‌ ವರ್ಷಗಳ ಹಿಂದೆ) ಈ ಪಳೆಯುಳಿಕೆಗಳ ಬಗ್ಗೆ ವಿಜ್ಞಾನಿಗಳಿಗೆ ಕುತೂಹಲವಂತೂ ಇನ್ನೂ ಇದೆ. ಈ ಕ್ಷುದ್ರಗ್ರಹಗಳು ಏನು ಮತ್ತು ಇವುಗಳಲ್ಲಿ ಏನಿರಬಹುದು? ಎಂಬ ಬಗೆಗೆ ನಿರಂತರವಾಗಿ ಅಧ್ಯಯನಗಳನ್ನು ನಡೆಸುತ್ತಲೇ ಬಂದಿದ್ದಾರೆ.

ನಿರಂತರ ಸಂಶೋಧನೆ
ಮೊದಲಾಗಿ ಕ್ಷುದ್ರಗ್ರಹಗಳ ರಚನೆ, ಅವುಗಳಲ್ಲಿರಬಹುದಾದ ಮೂಲವಸ್ತುಗಳು – ಲೋಹಗಳು, ನೀರು ಮಂಜುಗಡ್ಡೆಗಳೇ, ಜೀವ ಉಗಮಕ್ಕೆ ಬೇಕಾದ ಸಂಯುಕ್ತಗಳೇ ಇತ್ಯಾದಿ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಸಾಗಿದೆ. ಉಪಗ್ರಹ ತಂತ್ರಜ್ಞಾನ ಬೆಳೆದು ಬಂದಾಗ ಅಮೆರಿಕ, ಜಪಾನ್‌, ಚೀನ ಮುಂತಾದ ದೇಶಗಳು ಗಗನ ನೌಕೆಗಳ ಮೂಲಕ ಇವುಗಳ ಮಾದರಿಗಳನ್ನು ಸಂಗ್ರಹಿಸುವ ಕಾರ್ಯಗಳನ್ನು ಕೈಗೊಂಡು ಸಂಶೋಧನೆಗಳನ್ನು ನಡೆಸಿದವು. ಸೌರವ್ಯೂಹದ ಪೂರ್ವ ರಹಸ್ಯಗಳನ್ನು ತಿಳಿಯಲು ಈ ಮಾಹಿತಿಗಳು ಸಹಾಯವಾಗಬಹುದೆಂಬ ಆಸೆ, ಅವುಗಳ ಗಣಿಗಾರಿಕೆ, ಮುಂದೊಂದು ದಿನ ಬಾಹ್ಯಾಕಾಶ ಯಾನಗಳಲ್ಲಿ ಅವುಗಳ ಉಪಯೋಗ ಹೀಗೆ ಹಲವಾರು ತರ್ಕಗಳು. ಅದರೊಂದಿಗೆ ಭೂಮಿ ಯತ್ತ ಅಥವಾ ಸನಿಹದಲ್ಲಿ ಅವು ಬರುವ ಸಂಭವನೀ ಯತೆ ಇದ್ದಲ್ಲಿ ಅವುಗಳ ಪಥ ಬದಲಾವಣೆ ಸಾಧ್ಯವೇ? ಇವುಗಳು ಅಪ್ಪಳಿಸಿದಲ್ಲಿ ಅದರ ಪರಿಣಾಮವನ್ನು ಎದುರಿಸಲು ನಾವು ಏನೆಲ್ಲ ಸಿದ್ಧತೆ ಮಾಡಿಕೊಳ್ಳಬೇಕು? ಸಿಗುವ ಸಮಯ ಎಷ್ಟು ? ಎಂಬ ಬಗ್ಗೆ ಅಧ್ಯಯನಗಳು. ಹಾಗಾಗಿ ಅಂತಾರಾಷ್ಟ್ರೀಯ ಖಗೋಳ ವಿಜ್ಞಾನಿಗಳ ಸಂಸ್ಥೆಯು (ಐಅಖೀ) ವಿಶ್ವಾ ದ್ಯಂತ ವಿಜ್ಞಾನಿಗಳ ತಂಡ ಕಟ್ಟಲು ಕಾರ್ಯಕ್ರಮಗಳನ್ನು ರೂಪಿಸುತ್ತಿದೆೆ. ತೀರಾ ಇತ್ತೀ ಚೆಗೆ ಇಂತಹ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಭಾರತೀಯ ವಿದ್ಯಾರ್ಥಿಗಳು 16 ಕ್ಷುದ್ರಗ್ರಹ ಗಳನ್ನು ಪತ್ತೆ ಹಚ್ಚಿದ್ದಾರೆ. ಇದ ರಲ್ಲಿ ಪುಣೆಯ ವಿದ್ಯಾರ್ಥಿಗಳ ಪಾಲು 6. ವಿಜ್ಞಾನ ಪ್ರಸಾರದ ಭಾರತೀಯ ವಿಜ್ಞಾನಿಗಳ ತಂಡವೊಂದು 4 ಭೂ ಸಮೀಪದ ಕ್ಷುದ್ರಗ್ರಹಗಳನ್ನು ಪತ್ತೆಹಚ್ಚಿದೆ.

Advertisement

ಇವೆಲ್ಲ ಯಾಕೆ ಮುಖ್ಯ?
ಭೂಮಿಯ ಮೇಲೆ ಜೀವ ಸಂಕುಲದ ಉಗಮ ಕ್ಷುದ್ರಗ್ರಹಗಳಿಂದಾಯಿತೇ?, ಸುಮಾರು 66 ಮಿಲಿಯ ವರ್ಷಗಳ ಹಿಂದೆ ಕ್ಷುದ್ರಗ್ರಹ ಅಪ್ಪಳಿಸಿದ್ದರಿಂದ ಡೈನೋಸಾರ್‌ಗಳ ಅಂತ್ಯವಾ ಯಿತೇ? ಅಥವಾ ಅದರಿಂದ ಉಂಟಾದ ಧೂಳು ಸುಮಾರು ಎರಡು ವರ್ಷಗಳ ಕತ್ತಲೆಯನ್ನುಂಟು ಮಾಡಿದ್ದರಿಂದಾಯಿತೇ? ಈಗಿನ ತಂತ್ರಜ್ಞಾನಗಳಿಂದ ಭೂಮಿಗೆ ಹತ್ತಿರವಾದ ದಾರಿಯಲ್ಲಿ ಅವು ಬಂದಾಗ ರಾಕೆಟ್‌ಗಳ ಢಿಕ್ಕಿಯಿಂದ ಅವುಗಳ ಪಥ ಬದಲಿಸಿ ಅಪಾಯ ತಪ್ಪಿಸಬಹುದೇ? (ನಾಸಾದ ಅಭಿಪ್ರಾಯ ಸಾಧ್ಯವಾಗದು ಎಂದು)ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಇನ್ನಷ್ಟೇ ಕಂಡುಕೊಳ್ಳ ಬೇಕಿದೆ. ಉಪಗ್ರಹಗಳ ಈ ಯುಗದಲ್ಲಿ ಅವುಗಳ ಉಪಯೋಗ, ಅಪಾಯಗಳೇನು? ಎಲ್ಲಿ? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವ ಅನ್ವೇಷಣೆಗಳು, ಪ್ರಯೋಗಗಳು ನಡೆಯುತ್ತಿವೆ. ಅತ್ಯಂತ ಚಿಕ್ಕ ಗಾತ್ರದ (2 ಮೀ.) ಕ್ಷುದ್ರಗ್ರಹವನ್ನು ಪತ್ತೆಹಚ್ಚಿದ ತಂಡದಲ್ಲಿ ಭಾರತೀಯ ಮೂಲದ ವಿಜ್ಞಾನಿ ಇದ್ದಾರೆ ಎನ್ನುವುದು ನಮ್ಮೆಲ್ಲರ ಪಾಲಿಗೆ ಖುಷಿಯ ಸಂಗತಿ.

– ಡಾ| ಕೆ.ವಿ. ರಾವ್‌ , ನಿರ್ದೇಶಕರು, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next