Advertisement

ಜ್ಯೋತಿಷ್ಯ ವಿಜ್ಞಾನವಾಗಿದ್ದು,ಅದನ್ನು ನಿಷೇಧಿಸುವುದಿಲ್ಲ: ಅಶೋಕ್‌

10:10 AM Jan 25, 2020 | Sriram |

ಬೆಂಗಳೂರು: ಜ್ಯೋತಿಷ್ಯವು ವಿಜ್ಞಾನವಾಗಿರುವುದರಿಂದ ಅದನ್ನು ನಿಷೇಧಿಸುವುದಿಲ್ಲ. ಆದರೆ ಜ್ಯೋತಿಷ್ಯದ ಹೆಸರಿನಲ್ಲಿ ಮೋಸ, ಕಿರುಕುಳ ನೀಡಿದ ಬಗ್ಗೆ ನೊಂದವರು ದೂರು ನೀಡಿದರೆ ಪೊಲೀಸರು ಕಾನೂನು ಕ್ರಮ ಜರಗಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು.

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್‌ ಸರಕಾರ ಜಾರಿಗೊಳಿಸಲು ಉದ್ದೇಶಿಸಿದ್ದ ಮೌಡ್ಯ ಪ್ರತಿಬಂಧಕ ಕಾಯ್ದೆಯನ್ನು ಕೆಲವು ಬದಲಾವಣೆಗಳೊಂದಿಗೆ ಸರಕಾರ ಜಾರಿಗೊಳಿಸಿದೆ. ಧರ್ಮದ ಹೆಸರಿನಲ್ಲಿ ನಡೆಯುವ ಎಲ್ಲ ರೀತಿಯ ಮೌಡ್ಯವನ್ನು ನಿಷೇಧಿಸಬೇಕು. ಹಿಂದಿನ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಧರ್ಮದ ವಿಷಯಗಳನ್ನು ಎಳೆದು ತಂದಿದ್ದರಿಂದ ವಿರೋಧಿಸಲಾಗಿತ್ತು. ಮಕ್ಕಳನ್ನು ಮುಳ್ಳಿನ ಮೇಲೆ ಮಲಗಿಸುವುದು, ಮೇಲಿನಿಂದ ಕೆಳಕ್ಕೆ ಎಸೆಯುವುದು ಸಹಿತ ಇತರ ಆಚರಣೆಗಳಿಗೆ ನನ್ನ ವಿರೋಧವಿದೆ ಎಂದು ಹೇಳಿದರು.

ಕಾಂಗ್ರೆಸ್‌, ಜೆಡಿಎಸ್‌ನವರಿಗೆ ಹೋಲಿಸಿದರೆ ಬಿಜೆಪಿಯವರು ಜ್ಯೋತಿಷ್ಯ ಕೇಳುವುದು ಕಡಿಮೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಮಧ್ಯಪ್ರದೇಶದಲ್ಲಿ ಹೋಮ ಮಾಡಿಸುತ್ತಿಲ್ಲವೇ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಯಾವಾಗಲೂ ಜ್ಯೋತಿಷ್ಯ ನಂಬುತ್ತಾರೆ. ನಾವು ಜ್ಯೋತಿಷ್ಯ ನಿಷೇಧಿಸಿದರೆ ಅವರಿಗೆ ಕಷ್ಟವಾಗುತ್ತದೆ. ಹಾಗಾಗಿ ಜ್ಯೋತಿಷ್ಯ ನಿಷೇಧಿಸುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಜಿಲ್ಲಾಧಿಕಾರಿ ಸ್ಥಾನದ ಹೆಸರು ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್‌.ಅಶೋಕ್‌, ಜಿಲ್ಲಾಧಿಕಾರಿಗಳನ್ನು ಕಲೆಕ್ಟರ್‌ ಎಂದು ಹಲವು ರಾಜ್ಯಗಳಲ್ಲಿ ಕರೆಯಲಾಗುತ್ತಿದೆ. ಹಾಗಾಗಿ ರಾಜ್ಯದಲ್ಲೂ ಜಿಲ್ಲಾಧಿಕಾರಿ ಹೆಸರಿನ ಬದಲಿಗೆ ಕಲೆಕ್ಟರ್‌ ಎಂದು ಬದಲಾಯಿಸಬೇಕು ಎಂದು ಕೆಲವು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಇದರ ಸಾಧಕ-ಬಾಧಕ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಕಂದಾಯ ಇಲಾಖೆಯಲ್ಲಿ ಬಳಕೆಯಲ್ಲಿರುವ ಅನ್ಯ ಭಾಷೆಯ ಪದಗಳ ಬದಲಾಗಿ ಕನ್ನಡ ಪದಗಳ ಬಳಕೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಸಿಎಂ ಜತೆ ಚರ್ಚೆ
ನಿವೇಶನಗಳ ನೋಂದಣಿ ವೇಳೆ ಅಕ್ರಮ ತಡೆಗೆ “ಕಾವೇರಿ’ ತಂತ್ರಾಂಶ ಬಳಸಿಕೊಳ್ಳಲಾಗುತ್ತಿದೆ. ದಾಖಲೆಗಳು ಸರಿಯಾಗಿಲ್ಲದಿದ್ದರೆ ತಂತ್ರಾಂಶವು ನೋಂದಣಿಗೆ ಅವಕಾಶ ನೀಡುವುದಿಲ್ಲ. ಇದರಿಂದಾಗಿ ಭೂಪರಿವರ್ತನೆಯಾಗದ ಮತ್ತು ಸಕ್ಷಮ ಯೋಜನಾ ಪ್ರಾಧಿಕಾರದಿಂದ ಮಂಜೂರಾತಿ ಸಿಗದ ಕಂದಾಯ ನಿವೇಶನಗಳ ನೋಂದಣಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

Advertisement

ಮುಖ್ಯಮಂತ್ರಿಗಳು ಶೀಘ್ರವೇ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳು ಈಗಾಗಲೇ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿದ್ದು, ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರೊಂದಿಗೂ ಮತ್ತೂಮ್ಮೆ ಚರ್ಚಿಸಿ ಅಂತಿಮಗೊಳಿಸಲಿದ್ದಾರೆ.

ಹೈಕಮಾಂಡ್‌ನಿಂದ ಸಂಪುಟ ವಿಸ್ತರಣೆಗೆ ಯಾವುದೇ ತಕರಾರು ಇಲ್ಲ. ಉಪ ಚುನಾವಣೆಯಲ್ಲಿ ಗೆದ್ದ ಅರ್ಹ ಶಾಸಕರಿಗೆ ಈ ಹಿಂದೆ ನೀಡಿದ್ದ ಭರವಸೆಯಂತೆ ನಡೆದುಕೊಳ್ಳಲಾಗುವುದು. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸಂಪುಟ ವಿಸ್ತರಣೆ ವಿಳಂಬವಾಗುವುದಿಲ್ಲ ಎಂದು ಸಚಿವ ಆರ್‌.ಅಶೋಕ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next