Advertisement

ಸಂಘಟಿತ ಯತ್ನವಿಲ್ಲದೆ ಉಗ್ರವಾದವನ್ನು ಮಟ್ಟ ಹಾಕಲಾಗದು: ಪ್ರಧಾನಿ ಮೋದಿ

03:56 PM Jun 09, 2017 | Team Udayavani |

ಅಸ್ತಾನಾ : ಭಯೋತ್ಪಾದನೆಯ ಪಿಡುಗನ್ನು ಆಮೂಲಾಗ್ರವಾಗಿ ಮಟ್ಟಹಾಕಲು ಶಾಂಘೈ ಸಹಕಾರ ಸಂಘಟನೆಯ ಸದಸ್ಯರ ಸಂಘಟಿತ ಪ್ರಯತ್ನ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಸಾರ್ವಭೌಮತೆ ಮತ್ತು ಭಾವೈಕ್ಯಕ್ಕೆ ಧಕ್ಕೆಯಾಗದಂತೆ ಸಂಘಟನೆಯ ಸದಸ್ಯರು ತಮ್ಮೊಳಗಿನ ಸಂಪರ್ಕ, ಸಂವಹನವನ್ನು ಹೆಚ್ಚಿಸಿಕೊಳ್ಳಲು ಶ್ರಮಿಸುವ ಅಗತ್ಯವಿದೆ ಎಂದು ಮೋದಿ ಹೇಳಿದರು. 

ಅವರು ಕಝಕ್‌ ರಾಜಧಾನಿ ಅಸ್ತಾನಾದಲ್ಲಿ ಇಂದು ಆರಂಭಗೊಂಡ ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಓ) ವಾರ್ಷಿಕ ಶೃಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಭಯೋತ್ಪಾದನೆಯನ್ನು ಮಟ್ಟ ಹಾಕುವ ಸಂಘಟಿತ ಯತ್ನದಲ್ಲಿ ಎಸ್‌ಸಿಓ ಕೂಟಕ್ಕೆ ಭಾರತದ ಸೇರ್ಪಡೆಯಿಂದ ಹೊಸ ಶಕ್ತಿ ಮತ್ತು ಆವೇಗ ಲಭಿಸುವುದೆಂಬ ವಿಶ್ವಾಸವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದರು. 

ಭಯೋತ್ಪಾದನೆಯು ಇಡಿಯ ಮನುಕುಲಕ್ಕೆ ಎದುರಾಗಿರುವ  ಅತೀ ದೊಡ್ಡ ಬೆದರಿಕೆಯಾಗಿದೆ. ಆದುದರಿಂದ ಭಯೋತ್ಪಾದನೆ ವಿರುದ್ಧ ಸಂಘಟಿತ ಯತ್ನ, ಸಹಕಾರ ಏರ್ಪಡುವ ಅಗತ್ಯ ಇದೆ ಎಂದು ಮೋದಿ ಹೇಳಿದರು. 

Advertisement

ಶೃಂಗಕ್ಕೆ ಮುನ್ನ ಮೋದಿ ಅವರು ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಶೃಂಗದ ಪಾರ್ಶ್ವದಲ್ಲಿ ಭೇಟಿಯಾದರು. ಉಭಯ ನಾಯಕರೊಳಗಿನ ಈ ಭೇಟಿಯು ಉಭಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯ, ಚೀನ-ಪಾಕಿಸ್ಥಾನ ಇಕಾನಮಿಕ್‌ ಕಾರಿಡಾರ್‌ ಮತ್ತು ಎನ್‌ಎಸ್‌ಜಿ ಸೇರಿದಂತೆ ವಿವಿಧ ವಿವಾದಿತ ವಿಷಯಗಳಲ್ಲಿನ ಭಿನ್ನಮತಕ್ಕೆ  ತೇಪೆ ಹಾಕುವ ಪ್ರಯತ್ನವೆಂದು ರಾಜತಾಂತ್ರಿಕ ವಲಯದಲ್ಲಿ  ತಿಳಿಯಲಾಗಿದೆ. 

ಕಳೆದ ತಿಂಗಳಲ್ಲಿ ಬೀಜಿಂಗ್‌ನಲ್ಲಿ ನಡೆದಿದ್ದ, 29 ರಾಷ್ಟ್ರಗಳ ನಾಯಕರು ಭಾಗವಹಿಸಿದ್ದ, “ಬೆಲ್ಟ್ ಆ್ಯಂಡ್‌ ರೋಡ್‌’ ವೇದಿಕೆಯನ್ನು ಭಾರತ ಬಹಿಷ್ಕರಿಸಿದ ಬಳಿಕ, ಇದೇ ಮೊದಲ ಬಾರಿಗೆ ಮೋದಿ ಮತ್ತು ಕ್ಸಿ ಜಿನ್‌ಪಿಂಗ್‌ ಭೇಟಿಯಾಗುತ್ತಿರುವುದು ವಿಶೇಷವೆನಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next