Advertisement

ಸಹಕಾರಿ ಭೀಷ್ಮ ಮೊಳಹಳ್ಳಿ ಶಿವರಾವ್‌

12:13 AM Aug 04, 2023 | Team Udayavani |

ಸಹಕಾರ ರಂಗದಲ್ಲಿ ತ್ಯಾಗಮಯಿ ಯಾಗಿ ಕಾಣಿಸಿಕೊಂಡ ದಿ| ಮೊಳಹಳ್ಳಿ ಶಿವರಾವ್‌ ಅವರು ಗ್ರಾಮಗಳ ಅಭಿ ವೃದ್ಧಿ ನಿಟ್ಟಿನಲ್ಲಿ ದುಡಿದ ರೀತಿ ಅನುಪಮ ವಾದದ್ದು. ಸಹಕಾರ ರಂಗದ ದಿವ್ಯಶಕ್ತಿ ಯಾಗಿದ್ದ ಶಿವರಾಯರು ಈ ಕ್ಷೇತ್ರದಲ್ಲಿ ಕೈಗೊಂಡ ಯೋಜನೆಗಳೆಲ್ಲವೂ ಸಫ‌ಲ ವಾಗಿ ಇಂದು ಸಾವಿರಾರು ಜನರ ಜೀವ ನಕ್ಕೆ ಆಸರೆಯಾಗಿದೆ. ಎಳವೆಯಿಂದಲೇ ಮೊಳೆತಿದ್ದ ಸೇವಾ ಮನೋಭಾವ ಅವರನ್ನು ಸಮಾಜಮುಖೀಯನ್ನಾಗಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಆಂದೋಲನದ ನೇತಾರ ರನ್ನಾ ಗಿಸಿತು. ಮಹಾತ್ಮಾ ಗಾಂಧೀಜಿಯವರ ಗ್ರಾಮ ಭಾರತದ ತತ್ವಕ್ಕೆ, ಧ್ಯೇಯಕ್ಕೆ ಮೊಳಹಳ್ಳಿ ಶಿವರಾಯರು ಈ ಮೂಲಕ ಅಪೂರ್ವ ಕೊಡುಗೆ ನೀಡಿ ಚಿರಸ್ಥಾಯಿ ಯಾದವರು. ಅನನ್ಯ ಸೇವೆಯೊಂದಿಗೆ ಅವರು ಸಹಕಾರಿ ರಂಗದ ಪಿತಾಮಹ ರಾದರು. ಇಂತಹ ಮಹಾನುಭಾವರ ಜನ್ಮದಿನ ಇಂದು.

Advertisement

ಸಹಕಾರ ರಂಗದಲ್ಲಿ ಅಜರಾ ಮರರಾಗಿರುವ ಮೊಳಹಳ್ಳಿ ಶಿವ ರಾಯರು 1880ರ ಆಗಸ್ಟ್‌ 4ರಂದು ಪುತ್ತೂರಿನಲ್ಲಿ ಜನಿಸಿ ದರು. ರಂಗಪ್ಪಯ್ಯ ಹಾಗೂ
ಮೂಕಾಂಬಿಕಾ ದಂಪತಿ ಇವರ ತಂದೆ ತಾಯಿ. ವೃತ್ತಿಯಲ್ಲಿ ವಕೀಲರಾಗಿದ್ದ ಶಿವರಾಯರು ಗಳಿಕೆಯ ಹಿಂದೆ ಹೋ ಗದೆ ಬಡ ರೈತರ ಉದ್ಧಾರದ ಕಡೆಗೆ ಹೆಚ್ಚು ಆಕರ್ಷಿತರಾದರು. ಸಹಕಾರ ರಂಗವೊಂದನ್ನು ಸಂಸ್ಥಾಪಿಸಿ ಬಡ ರೈತರನ್ನು ಪೋಷಿಸುವ ಕೈಂಕರ್ಯಕ್ಕೆ ಮುಂದಾದರು. ದೇಶದಲ್ಲಿ ಸಹಕಾರ ಆಂದೋಲನ 1904ರ ಮಾರ್ಚ್‌ 23ರಂದು ಕಾಯ್ದೆ ರೂಪದಲ್ಲಿ ಜಾರಿಗೆ ಬಂದಾಗ ಶಿವರಾಯರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಆಂದೋಲನದ ನೇತೃತ್ವ ವಹಿಸಿದ್ದರು.

“ನಾನು ನಿನಗಾಗಿ, ನೀನು ನನಗಾಗಿ, ನಾವೆಲ್ಲರೂ ದೇಶಕ್ಕಾಗಿ’ ಎನ್ನುವ ಸಹ ಕಾರ ತತ್ವಕ್ಕೆ ಕಟಿಬದ್ಧರಾದ ಶಿವರಾ ಯರು, ಅದಕ್ಕೆ ತಮ್ಮನ್ನು ಒಪ್ಪಿಸಿಕೊಂಡು ದುಡಿದದ್ದು ಅವರ ನಿಸ್ವಾರ್ಥ ಸೇವೆ ಯನ್ನು ಸಾಕ್ಷೀಕರಿಸುತ್ತದೆ. ಸಹಕಾರಿ ಕ್ರೆಡಿಟ್‌ ಸೊಸೈಟಿಯನ್ನು ಅವರು ಮೊದಲು 1909ರಲ್ಲಿ ಪುತ್ತೂರಿನಲ್ಲಿ ಹುಟ್ಟು ಹಾಕಿದರು. ಈ ಸೊಸೈಟಿ ಮುಂದೆ ಪುತ್ತೂರು ಟೌನ್‌ ಕೋ ಆಪರೇಟಿವ್‌ ಬ್ಯಾಂಕ್‌ ಆಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಹಳ್ಳಿ ಹಳ್ಳಿ ಗಳಲ್ಲೂ ಸಹಕಾರಿ ಸಂಘಗಳನ್ನು ಸ್ಥಾಪಿಸಿದ್ದೇ ಅಲ್ಲದೆ ಕೃಷಿಕರ ಶ್ರೇಯೋ ಭಿವೃದ್ಧಿಯನ್ನೇ ಸಹಕಾರ ಸಂಘದ ಧ್ಯೇಯವನ್ನಾಗಿಸಿಕೊಂಡು ಕಾರ್ಯ ವೆಸಗಿದವರು ಶಿವರಾಯರು.

ಎಸ್‌ಸಿಡಿಸಿಸಿ ಬ್ಯಾಂಕ್‌ ಸಂಸ್ಥಾಪಕ: ಹಳ್ಳಿಗಳ ಸಹಕಾರ ಸಂಘಗಳಿಗೆ ಆರ್ಥಿ ಕ ಬಲ ತುಂಬುವ ತುರ್ತನ್ನು ಅರಿತು ಕೊಂಡ ಮೊಳಹಳ್ಳಿ ಶಿವರಾಯರು, 1914ರಲ್ಲಿ ಪುತ್ತೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ (ಎಸ್‌ಸಿಡಿಸಿ ಬ್ಯಾಂಕ್‌) ಅನ್ನು ಹುಟ್ಟು ಹಾಕಿದರು. ಎಣಿಕೆಯಂತೆ ರೈತರ ಆಶೋತ್ತರಗಳನ್ನು ಪೂರೈಸುತ್ತ ಬಂದ ಈ ಬ್ಯಾಂಕ್‌, ಜಿಲ್ಲಾ ಕೇಂದ್ರ ಸ್ಥಾನ ಮಂಗ ಳೂರಿನಲ್ಲಿರುವುದೇ ಸೂಕ್ತ ಎಂದು ನಿರ್ಧ ರಿಸಿ ಪುತ್ತೂರಿನಿಂದ ಮಂಗಳೂರಿಗೆ 1925ರಲ್ಲಿ ಸ್ಥಳಾಂತರಿಸಿದರು.

ಶಿವರಾಯರು 1931ರಲ್ಲಿ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿ ಆಯ್ಕೆಗೊಂಡರು. ಅವರು 1952ರ ವರೆಗೆ ಅಂದರೆ 21 ವರ್ಷಗಳ ಕಾಲ ಈ ಬ್ಯಾಂಕ್‌ನ್ನು ಯಶಸ್ವಿಯಾಗಿ ಮುನ್ನಡೆಸಿದರು. ಈ ಬ್ಯಾಂಕ್‌ ಇಂದು ಯಶ ಸ್ವಿಯಾಗಿ 109 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ.

Advertisement

ಜೀವಪರ ಕಾಳಜಿ: ಮೊಳಹಳ್ಳಿ ಶಿವರಾ ಯರ ಜೀವಪರ ಕಾಳಜಿಯಿಂದಾಗಿ ಹಲವಾರು ಸಹಕಾರ ಸಂಘಗಳು ಉದಯವಾಗಿವೆ. ಎರಡನೇ ಮಹಾ ಯುದ್ಧ ಕಾಲದಲ್ಲಿ ಜಿಲ್ಲಾದ್ಯಂತ ತಲೆ ದೋರಿದ ಆಹಾರ ಧಾನ್ಯದ ಕೊರತೆ ಹೋಗಲಾಡಿಸಲು ಶಿವರಾಯರು ದಕ್ಷಿಣ ಕನ್ನಡ ಜಿಲ್ಲಾ ಹೋಲ್‌ ಸೇಲ್‌ ಸ್ಟೋರ್ಸ್‌ ಸಂಘವನ್ನು ಸ್ಥಾಪಿಸಿ, ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಡಿಪೋ ತೆರೆದು ಆಹಾರ ಧಾನ್ಯ ಸಂಗ್ರಹಿಸಿ ಅದರ ಕ್ರಮಬದ್ಧ ವಿತರಣೆಯಿಂದ ಸಾರ್ವಜನಿಕರ ಮನಗೆದ್ದಿದ್ದರು. 1936ರಲ್ಲಿ ಪುತ್ತೂರು ಸಹಕಾರಿ ಭೂ ಅಭಿವೃದ್ಧಿ ಬ್ಯಾಂಕ್‌ ಸ್ಥಾಪ ನೆಗೆ ಕಾರಣರಾದ ಶಿವರಾಯರು ಇದರ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ದ್ದರು. ದ್ರಾವಿಡ ಬ್ರಾಹ್ಮಣ ಸಹಕಾರಿ ಹಾಸ್ಟೆಲ್‌ ಸಂಘ, ಧಾನ್ಯದ ಬ್ಯಾಂಕ್‌, ಮಹಿಳೆಯರ ಕೈಗಾರಿಕಾ ಸಂಘ, ಬಿಲ್ಡಿಂ ಗ್‌ ಸೊಸೈಟಿ ಮೊದಲಾದ ಸಹ ಕಾರಿ ಸಂಘಗಳನ್ನು ಪುತ್ತೂರಿನಲ್ಲಿ ಸ್ಥಾಪಿಸಿ ದ್ದರು. ಕೃಷಿಕರು ಉತ್ಪಾದಿಸಿದ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ಇಲ್ಲದೆ ಸಂಕಷ್ಟ ಸ್ಥಿತಿ ಯಲ್ಲಿದ್ದಾಗ 1919ರಲ್ಲಿ ಪುತ್ತೂರಿನಲ್ಲಿ “ಕೃಷಿಕರ ಸಹಕಾರಿ ಭಂಡಸಾಲೆ” ಸಂಘ ಸ್ಥಾಪಿ ಸಿದರು. ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರೆಯುವಂತೆ ಈ ಸಂಘವು ಶ್ರಮಿಸಿತು. ಹೀಗೆ ಹಲವಾರು ಸಹಕಾರ ಸಂಘಗಳ ಸ್ಥಾಪನೆಗೆ ಶಿವರಾಯರು ಕಾರಣರಾಗಿದ್ದರು.

ಮೊಳಹಳ್ಳಿ ಶಿವರಾಯರು ಮುಖ್ಯ ವಾಗಿ ಸಹಕಾರ ರಂಗದ ಮೂಲಕ ಬಡ ವರ್ಗದ ಜನರ ಶ್ರೇಯೋಭಿವೃದ್ದಿಯನ್ನು ಬಯಸಿ, ಬಡವರ ಹಸಿವು ನೀಗಿಸಿದ, ಜೀವ ಉಳಿಸಿದ ಮಹಾನುಭಾವರು. ಬದುಕಿನುದ್ದಕ್ಕೂ ಸಹಕಾರ ತತ್ವವನ್ನೇ ಉಸಿರಾಡುತ್ತಾ ಬಂದ ಮೊಳಹಳ್ಳಿ ಶಿವರಾ ಯರು ತನ್ನ 87 ವರ್ಷಗಳ ಸಾರ್ಥಕ ಬದುಕಿನಲ್ಲಿ 58 ವರ್ಷಗಳನ್ನು ಸಹಕಾರ ಕ್ಷೇತ್ರಕ್ಕೆ ಮೀಸಲಿರಿಸಿದ್ದರು. 1967ರ ಜುಲೈ 4ರಂದು ಕೀರ್ತಿಶೇಷರಾದ ಶಿವರಾಯರು ಬದುಕಿನ ತತ್ವವನ್ನು ಬಿತ್ತಿ ಶಾಶ್ವತವಾಗಿದ್ದಾರೆ. ವ್ಯಕ್ತಿಯೊಬ್ಬ ಶಕ್ತಿಯಾಗುವ ಬಗೆಯನ್ನು ಬಿತ್ತರಿಸಿದ ಮೊಳಹಳ್ಳಿ ಶಿವರಾಯರು ಇಂದು ಕೂಡ ಸಹಕಾರಿಗಳೆಲ್ಲರ ಮನದಲ್ಲಿ ರಾರಾಜಿಸುತ್ತಾ ಅನುಕ್ಷಣವೂ ಸ್ಮರಣೆಗೆ ಪಾತ್ರರಾಗಿದ್ದಾರೆ.

 ಎಸ್‌. ಜಗದೀಶ್ಚಂದ್ರ ಅಂಚನ್‌, ಸೂಟರ್‌ಪೇಟೆ

Advertisement

Udayavani is now on Telegram. Click here to join our channel and stay updated with the latest news.

Next