Advertisement

ದೇಶದ ಸಮಗ್ರತೆಗೆ ಕೈ ಜೋಡಿಸಿ

04:51 PM Jan 27, 2018 | |

ಮಾನ್ವಿ: ಸಂಕುಚಿತ ಮನೋಭಾವ ಬಿಟ್ಟು ದೇಶದ ಸಮಗ್ರತೆ ಮತ್ತು ಐಕ್ಯತೆಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಶಾಸಕ ಹಾಗೂ ಕಾಡಾ ಅಧ್ಯಕ್ಷ ಜಿ. ಹಂಪಯ್ಯ ನಾಯಕ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಳ್ಳಲಾಗಿದ್ದ 69ನೇ ಗಣರಾಜೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ನೆಲದ ಶ್ರೀಮಂತ ಪರಂಪರೆಯನ್ನು ಇನ್ನಷ್ಟು ಉಜ್ವಲಗೊಳಿಸುವ ನಿಟ್ಟಿನಲ್ಲಿ ಭಾತೃತ್ವ, ಐಕ್ಯತೆ ಬಲಪಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ತತ್ವ ಸಿದ್ಧಾಂತ ಅಭಿಪ್ರಾಯಗಳ ವ್ಯತ್ಯಾಸ ಇದ್ದರೂ ಸಂವಿಧಾನದ ನೆಲೆಗಟ್ಟಿನಲ್ಲಿ ಪರಸ್ಪರ ಗೌರವ, ಸಹಬಾಳ್ವೆಯಿಂದ ಬಾಳುವ ಪಣತೊಟ್ಟು ಸಂವಿಧಾನ ಆಶಯಗಳಿಗೆ ಕಂಕಣ ಬದ್ಧರಾಗಿ ಕೆಲಸ ಮಾಡಬೇಕಾಗಿದೆ. ಭಾರತೀಯ ಪ್ರಜಾಪ್ರಭುತ್ವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಲ್ಲದೇ ಹಲವಾರು ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಹೋರಾಡಿದ ಮಹಾನ್‌ ವ್ಯಕ್ತಿಗಳ ಆದರ್ಶಗಳನ್ನು ನಾವೆಲ್ಲರು ಪಾಲಿಸಬೇಕಿದೆ. ಸಂವಿಧಾನದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ. ನಮ್ಮ ದೇಶ
ಎಲ್ಲ ರಂಗಗಳಲ್ಲಿ ಇನ್ನೂ ಹೆಚ್ಚು ಅಭಿವೃದ್ದಿಯಾಗಬೇಕಿದ್ದು, ಪ್ರಗತಿಪರ ಚಿಂತನೆ ಮೂಲಕ ಸಮೃದ್ಧ ಸ್ವಾಭಿಮಾನ ದೇಶ
ಕಟ್ಟಲು ಮುಂದಾಗಬೇಕು ಎಂದು ಹೇಳಿದರು.

ತಹಶೀಲ್ದಾರ ಅಮರೇಶ ಬಿರದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ತಾಲೂಕು ಆಡಳಿತದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Advertisement

ಪುರಸಭೆ ಅಧ್ಯಕ್ಷೆ ತಬಸುಮ್‌ ಅಮ್ಜದ್‌ ಖಾನ್‌, ತಾಪಂ ಅಧ್ಯಕ್ಷೆ ಶರಣಮ್ಮ ಮುದಿಗೌಡ, ನಗರ ಯೋಜನಾ ಪ್ರಾಧಿಕಾರಿದ ಅಧ್ಯಕ್ಷ ಸೈಯದ್‌ ಇಲಿಯಾಸ್‌ ಖಾದ್ರಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಸೈಯದ್‌ ಅಬೀದ್‌ ಖಾದ್ರಿ ಗುರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬೀರಪ್ಪ ಕಡದಿನ್ನಿ, ಪುರಸಭೆ ಮುಖ್ಯಾ ಧಿಕಾರಿ ವೆಂಕಟೇಶ, ಉಪ ಖಜಾನೆ ಇಲಾಖ ಅಧಿಕಾರಿ ಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಿಹಾಳ ಇದ್ದರು.

ಧ್ವಜಾರೋಹಣ ಮಾಡದೆ ಅವಮಾನ: ಚಿತ್ರನಾಳ 
ಹಟ್ಟಿಚಿನ್ನದಗಣಿ:
ಅಧಿಸೂಚಿತ ಪ್ರದೇಶದಲ್ಲಿರುವ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ ಸಿಬ್ಬಂದಿ ಗಣರಾಜ್ಯೋತ್ಸವದ ದಿನದಂದು ಧ್ವಜಾರೋಹಣ ಮಾಡಿಲ್ಲ ಎಂದು ಜೈ ಭೀಮ ಯುವ ಸೇನೆ ಅಧ್ಯಕ್ಷ ಮಲ್ಲಿಕಾರ್ಜುನ ಚಿತ್ರನಾಳ ಆರೋಪಿಸಿದ್ದಾರೆ. ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ ಸಿಬ್ಬಂದಿ ಕಳೆದ ಐದು ವರ್ಷದಿಂದ ಧ್ವಜಾರೋಹಣ ಮಾಡಿಲ್ಲ.
ಆದ್ದರಿಂದ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸ್ಪಷ್ಟನೆ: ಮೇಲಾ ಧಿಕಾರಿಗಳಿಂದ ಯಾವುದೇ ಆದೇಶ ಇಲ್ಲ. ಮೊದಲಿನಿಂದಲೂ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಧ್ವಜಾರೋಹಣ ನೆರವೇರಿಸಲಾಗುತ್ತದೆ. ಗ್ರಾಮೀಣ ಮಟ್ಟದಲ್ಲಿ ನಾವು ಧ್ವಜಾರೋಹಣ ಮಾಡುವುದಿಲ್ಲ ಎಂದು ಪಿಜಿಬಿ ವ್ಯವಸ್ಥಾಪಕ ಎ.ವಿ. ಮಠ ಸ್ಪಷ್ಟಪಡಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next