Advertisement

ತಡರಾತ್ರಿ ಮಹಿಳೆಗೆ ಔಷಧ ಕೊಂಡೊಯ್ಯಲು ನೆರವಾದ ಎಎಸ್‌ಐ: ಪೊಲೀಸ್‌ ಆಯುಕ್ತರಿಂದ ಪ್ರಶಂಸೆ

11:58 PM Jul 09, 2019 | Team Udayavani |

ಮಹಾನಗರ: ತಡರಾತ್ರಿ ವೇಳೆ ಆಸ್ವಸ್ಥ ವ್ಯಕ್ತಿಗೆ ತುರ್ತು ನೆಲೆಯಲ್ಲಿ ಮೆಡಿಕಲ್ ಶಾಪ್‌ನಿಂದ ಔಷಧ ತಂದು ಕೊಡುವ ಮೂಲಕ ಕದ್ರಿ ಪೊಲೀಸ್‌ ಠಾಣೆಯ ಎಎಸ್‌ಐ ಸಂತೋಷ್‌ ಪಡೀಲ್ ಮಾನವೀಯತೆ ಮೆರೆದಿದ್ದಾರೆ. ಅವರ ಮಾನವೀಯ ಗುಣ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್ ಅವರು ಸೋಮವಾರ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.

Advertisement

ಜು. 5ರಂದು ತಡ ರಾತ್ರಿ 1 ಗಂಟೆ ವೇಳೆಗೆ ಓರ್ವ ಮಹಿಳೆ ಕದ್ರಿ ಶಿವಬಾಗ್‌ ಬಳಿ ರಸ್ತೆಯ ಬದಿ ನಿಂತಿರುವುದನ್ನು ಸಾಗರ್‌ ಗಸ್ತು ವಾಹನದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಎಎಸ್‌ಐ ಸಂತೋಷ್‌ ಪಡೀಲ್ ಗಮನಿಸಿದ್ದರು. ಆಕೆಯನ್ನು ವಿಚಾರಿಸಿದಾಗ ತನ್ನ ತಂದೆಗೆ ಹುಷಾರಿಲ್ಲ; ಅವರಿಗೆ ತುರ್ತಾಗಿ ಔಷಧ ಬೇಕಾಗಿದೆ. ಅದಕ್ಕಾಗಿ ಆಟೋ ರಿಕ್ಷಾಕ್ಕೆ ಕಾಯುತ್ತಿದ್ದೇನೆ ಎಂದು ತಿಳಿಸಿದ್ದರು. ಒಬ್ಬಂಟಿ ಮಹಿಳೆ ತಡ ರಾತ್ರಿ ಈ ರೀತಿ ಓಡಾಡುವುದು ಸರಿಯಲ್ಲ ಎಂದು ಹೇಳಿದ ಎಎಸ್‌ಐ ಸಂತೋಷ್‌ ಆಕೆಯನ್ನು ಸಾಗರ್‌ ವಾಹನದಲ್ಲಿ ಕಂಕನಾಡಿಯ ಮೆಡಿಕಲ್ ಶಾಪ್‌ಗೆ ಕರೆದೊಯ್ದು ಆಕೆ ಔಷಧ ಖರೀದಿಸಿದ ಬಳಿಕ ವಾಪಸ್‌ ಮನೆಗೆ ತಲುಪಿಸುವಲ್ಲಿ ನೆರವಾದರು.

ತನಗೆ ಪೊಲೀಸರು ನೆರವು ಒದಗಿಸಿದ ಬಗ್ಗೆ ಕೃತಜ್ಞತೆ ಸಲ್ಲಿಸಿ ಈ ಮಹಿಳೆ ರವಿವಾರ ಟ್ವಿಟರ್‌ನಲ್ಲಿ ಹಾಕಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್ ಅವರಿಗೆ ಸಂದೇಶ ಕಳುಹಿಸಿದ್ದರು. ಸೋಮವಾರ ಪೊಲೀಸ್‌ ಆಯುಕ್ತರು ಎಎಸ್‌ಐ ಸಂತೋಷ್‌ ಅವರನ್ನು ತಮ್ಮ ಕಚೇರಿಗೆ ಕರೆಸಿ ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next