Advertisement

ಕಿರೀಟ ಉಳಿಸಿಕೊಳ್ಳಲು ಭಾರತ ಹೋರಾಟ

06:00 AM Sep 28, 2018 | Team Udayavani |

ಭಾರತ-ಬಾಂಗ್ಲಾದೇಶ ನಡುವೆ ಸತತ 2ನೇ ಏಶ್ಯ ಕಪ್‌ ಕ್ರಿಕೆಟ್‌ ಫೈನಲ್‌
ಏಳನೇ, ಸತತ 2ನೇ ಪ್ರಶಸ್ತಿಯ ಕನಸಿನಲ್ಲಿ ಟೀಮ್‌ ಇಂಡಿಯಾ
ಗಾಯಾಳುಗಳಿಂದ ತತ್ತರಿಸಿರುವ ಬಾಂಗ್ಲಾಕ್ಕೆ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆ

Advertisement

ದುಬಾೖ: ಹದಿನಾಲ್ಕನೇ ಏಶ್ಯ ಕಪ್‌ ಕ್ರಿಕೆಟ್‌ ಫೈನಲ್‌ ಪಂದ್ಯದ ಕ್ಷಣಗಣನೆ ಆರಂಭಗೊಂಡಿದೆ. ಆದರೆ ಬಹು ಜನರ ನಿರೀಕ್ಷೆಯಂತೆ ಭಾರತದ ಎದುರಾಳಿಯಾಗಿ ಕಣಕ್ಕಿಳಿಯುವ ಅವಕಾಶ ಪಾಕಿಸ್ಥಾನಕ್ಕೆ ಲಭಿಸಿಲ್ಲ. ಪಾಕ್‌ ಪಡೆಯನ್ನು ಮನೆಗಟ್ಟಿದ ಬಾಂಗ್ಲಾದೇಶ ಶುಕ್ರವಾರದ ಪ್ರಶಸ್ತಿ ಸೆಣಸಾಟದಲ್ಲಿ ಟೀಮ್‌ ಇಂಡಿಯಾವನ್ನು ಎದುರಿಸಲಿದೆ. ಇದರೊಂದಿಗೆ ಸತತ 2ನೇ ಏಶ್ಯ ಕಪ್‌ ಫೈನಲ್‌ನಲ್ಲಿ ಭಾರತ-ಬಾಂಗ್ಲಾದೇಶ ತಂಡಗಳೇ ಮುಖಾಮುಖೀಯಾಗಲಿವೆ.

2016ರ ಕಳೆದ ಏಶ್ಯ ಕಪ್‌ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಅವರದೇ ನೆಲದಲ್ಲಿ 8 ವಿಕೆಟ್‌ಗಳಿಂದ ಬಗ್ಗುಬಡಿದ ಧೋನಿ ಪಡೆ 6ನೇ ಸಲ ಏಶ್ಯ ಕಪ್‌ ಕಿರೀಟ ಏರಿಸಿಕೊಂಡಿತ್ತು. ಅಂದಿನದು ಟಿ20 ಮಾದರಿಯ ಪಂದ್ಯಾವಳಿಯಾಗಿತ್ತು. ಇದನ್ನು ಉಳಿಸಿಕೊಂಡು ಮೆರೆಯುವುದು ಭಾರತದ ಗುರಿಯಾದರೆ, ಅಂದಿನ ಸೋಲಿಗೆ ಸೇಡು ತೀರಿಸಿಕೊಂಡು ಮೊದಲ ಸಲ ಏಶ್ಯದ ಕ್ರಿಕೆಟ್‌ ಕಿಂಗ್‌ ಆಗುವುದು ಬಾಂಗ್ಲಾದೇಶದ ಬಹು ದೊಡ್ಡ ಕನಸು. ಜತೆಗೆ ಸೂಪರ್‌ ಫೋರ್‌ ಹಂತದಲ್ಲಿ ಭಾರತದ ಕೈಯಲ್ಲಿ ಅನುಭವಿಸಿದ ಸೋಲಿಗೂ ಮೊರ್ತಜ ಪಡೆ ಸೇಡು ತೀರಿಸಿಕೊಳ್ಳಬೇಕಿದೆ. ಪಾಕಿಸ್ಥಾನವನ್ನು ಕೂಟದಿಂದ ಹೊರದಬ್ಬಿದ ಹುರುಪಿನಲ್ಲಿರುವ ಬಾಂಗ್ಲಾ ಟೈಗರ್ಗೆ ಭಾರತವನ್ನು ಬೇಟೆಯಾಡಲು ಸಾಧ್ಯವೇ ಎಂಬುದೊಂದು ಕುತೂಹಲ.

ಬಾಂಗ್ಲಾ ಗಾಯಗೊಂಡ ಹುಲಿ
ಮೇಲ್ನೋಟಕ್ಕೆ ಭಾರತವೇ ಫೇವರಿಟ್‌. ಆದರೆ 3ನೇ ಸಲ ಫೈನಲ್‌ ಅದೃಷ್ಟ ಪರೀಕ್ಷೆಗೆ ಇಳಿದಿರುವ ಬಾಂಗ್ಲಾ ಅತ್ಯಂತ ಅಪಾಯಕಾರಿ ತಂಡ ಎಂಬುದರಲ್ಲಿ ಅನುಮಾನವಿಲ್ಲ. “ಬಾಂಗ್ಲಾ ಟೈಗರ್’ ಎಂದೇ ಗುರುತಿಸಿಕೊಳ್ಳುವ ಅದೀಗ ಗಾಯಗೊಂಡ ಹುಲಿಯೂ ಹೌದು. ಆರಂಭಕಾರ ತಮಿಮ್‌ ಇಕ್ಬಾಲ್‌ ಅವರನ್ನು ಕೂಟದ ಮೊದಲ ಪಂದ್ಯದಲ್ಲೇ ಕಳೆದುಕೊಂಡ ಬಾಂಗ್ಲಾ, ಫೈನಲ್‌ ಹೊತ್ತಿಗೆ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಸೇವೆಯಿಂದಲೂ ವಂಚಿತವಾಗಿದೆ. ಕೈ ಬೆರಳಿನ ಮೂಳೆ ಮುರಿತಕ್ಕೊಳಗಾದ ಅವರು ತವರಿಗೆ ವಾಪಸಾಗಿದ್ದಾರೆ. ಶಕಿಬ್‌ ಗೈರಲ್ಲಿ ಪಾಕ್‌ ಸವಾಲನ್ನು ಮೊರ್ತಜ ಪಡೆ ಹೇಗೋ ನಿಭಾಯಿಸಿತು. ಆದರೆ ಕೊಹ್ಲಿ ಗೈರಲ್ಲೂ ಅತ್ಯಂತ ಶಕ್ತಿಶಾಲಿಯಾಗಿಯೇ ಉಳಿದಿರುವ ಭಾರತವನ್ನು ಹಿಮ್ಮೆಟ್ಟಿಸುವುದು ಎಣಿಸಿದಷ್ಟು ಸುಲಭವಲ್ಲ. ಆದರೆ ಗಾಯಗೊಂಡ ಹುಲಿ ಹೆಚ್ಚು ಆಕ್ರಮಣಕಾರಿ ಎಂಬ ಮಾತಿದೆ. ರಹೀಂ, ಮಹಮದುಲ್ಲ ಜೋಡಿ ಬ್ಯಾಟಿಂಗ್‌ ಮೂಲಕ; ಮುಸ್ತಫಿಜುರ್‌, ರುಬೆಲ್‌, ಮೊರ್ತಜ ಅವರೆಲ್ಲ ಬೌಲಿಂಗ್‌ ಮೂಲಕ ಭಾರತದ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದಾರೆ. ಹೀಗಾಗಿ ರೋಹಿತ್‌ ಪಡೆ ಹೆಚ್ಚು ಎಚ್ಚರದಿಂದ ಇರಬೇಕಾಗುತ್ತದೆ.

ಪೂರ್ಣ ಸಾಮರ್ಥ್ಯದ ತಂಡ
ಅಫ್ಘಾನಿಸ್ಥಾನ ವಿರುದ್ಧದ ಔಪಚಾರಿಕ ಪಂದ್ಯದಲ್ಲಿ ತನ್ನ ಮೀಸಲು ಸಾಮರ್ಥ್ಯವನ್ನು ಪರೀಕ್ಷಿಸಿ ಭಾಗಶಃ ಯಶಸ್ವಿಯಾದ ಟೀಮ್‌ ಇಂಡಿಯಾ, ಫೈನಲ್‌ ಹಣಾಹಣಿಯಲ್ಲಿ ಮತ್ತೆ ಪೂರ್ಣ ಸಾಮರ್ಥ್ಯದ ತಂಡವನ್ನು ನೆಚ್ಚಿಕೊಳ್ಳಲಿದೆ. ನಾಯಕ ರೋಹಿತ್‌, ಅವಳಿ ಶತಕ ವೀರ ಧವನ್‌, ಬೌಲಿಂಗ್‌ ಹೀರೋಗಳಾದ ಭುವನೇಶ್ವರ್‌, ಬುಮ್ರಾ ಜತೆಗೆ ಚಾಹಲ್‌ ಹನ್ನೊಂದರ ಬಳಗಕ್ಕೆ ಮರಳಲಿದ್ದಾರೆ. ಆದರೆ ಅಫ್ಘಾನ್‌ ವಿರುದ್ಧ ಮಿಂಚಿದ ಕೆ.ಎಲ್‌. ರಾಹುಲ್‌ ಸ್ಥಾನ ಉಳಿಸಿಕೊಳ್ಳುವ ಬಗ್ಗೆ ಯಾವುದೇ ಖಾತ್ರಿ ಇಲ್ಲ. ದಿನೇಶ್‌ ಕಾರ್ತಿಕ್‌ ಅವರನ್ನೇ ಮುಂದುವರಿ ಸುವುದು ಬಹುತೇಕ ಖಚಿತ. 

Advertisement

ಕೂಟದ್ದುಕ್ಕೂ ಭಾರತದ ಓಪನಿಂಗ್‌ ಭರ್ಜರಿ ಯಶಸ್ಸು ಕಾಣುತ್ತ ಬಂದಿದೆ. ಧವನ್‌ 327 ರನ್‌, ರೋಹಿತ್‌ 269 ರನ್‌ ಪೇರಿಸಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದಾರೆ. ಇದು ಫೈನಲ್‌ನಲ್ಲೂ ಮುಂದುವರಿದರೆ ಭಾರತ ಅರ್ಧ ಗೆದ್ದಂತೆ! ಆದರೆ ಮಧ್ಯಮ ಕ್ರಮಾಂಕದ ಬ್ಯಾಟಿಂಗಿಗೆ ಇನ್ನೂ ಸೂಕ್ತ ಪರಿಹಾರ ಸೂತ್ರ ಲಭಿಸಿಲ್ಲ. ಇದಕ್ಕೆ ಅಫ್ಘಾನ್‌ ವಿರುದ್ಧದ ಪಂದ್ಯವೇ ಸಾಕ್ಷಿ. ಇಲ್ಲಿಯೂ ಭಾರತದ ಆರಂಭವೇ ಕ್ಲಿಕ್‌ ಆದುದನ್ನು ಮರೆಯುವಂತಿಲ್ಲ. ರಾಹುಲ್‌-ರಾಯುಡು ಆರಂಭಿಕ ವಿಕೆಟಿಗೆ ಶತಕದ ಜತೆಯಾಟ ನಿಭಾಯಿಸದೇ ಇದ್ದಲ್ಲಿ ಬಹುಶಃ ಭಾರತಕ್ಕೆ ಟೈ ಕೂಡ ಸಾಧ್ಯವಿರುತ್ತಿರಲಿಲ್ಲ.

ಅದೇನೇ ಇದ್ದರೂ ವಿರಾಟ್‌ ಕೊಹ್ಲಿ ಗೈರಲ್ಲಿ ಭಾರತ ಏಶ್ಯ ಕಪ್‌ ಜಯಿಸಿದ್ದೇ ಆದಲ್ಲಿ ಅದು ಮುಂದಿನ ವರ್ಷದ ವಿಶ್ವಕಪ್‌ ಪಂದ್ಯಾವಳಿ ಗೊಂದು “ಬೂಸ್ಟ್‌’ ಲಭಿಸಿದಂತೆ. ಹಾಗೆಯೇ ಇಂಗ್ಲೆಂಡ್‌ನ‌ಲ್ಲಿ ಅನುಭವಿಸಿದ 1-4 ಅಂತರದ ಟೆಸ್ಟ್‌ ಸರಣಿ ಸೋಲಿಗೂ ಸಣ್ಣದೊಂದು ಪ್ರಾಯಶ್ಚಿತ್ತ ಮಾಡಿಕೊಂಡಂತಾಗುತ್ತದೆ.

ಏಶ್ಯ ಕಪ್‌ ಫೈನಲ್‌ ಬಿಟ್ಸ್‌
ಈವರೆಗಿನ 13 ಏಶ್ಯ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ-ಪಾಕಿಸ್ಥಾನ ಎಂದೂ ಫೈನಲ್‌ನಲ್ಲಿ ಮುಖಾಮುಖೀಯಾಗಿಲ್ಲ. ಈ ಬಾರಿಯ ನಿರೀಕ್ಷೆ ಕೂಡ ಬಾಂಗ್ಲಾದೇಶದ ಗೆಲುವಿನೊಂದಿಗೆ ಹುಸಿಯಾಯಿತು.

ಭಾರತ-ಬಾಂಗ್ಲಾದೇಶ ಸತತ 2ನೇ ಸಲ ಫೈನಲ್‌ ತಲುಪಿದವು. 2016ರ ಮಿರ್ಪುರ್‌ ಫೈನಲ್‌ನಲ್ಲಿ ಆತಿಥೇಯ ಬಾಂಗ್ಲಾವನ್ನು 8 ವಿಕೆಟ್‌ಗಳಿಂದ ಮಣಿಸಿ ಚಾಂಪಿಯನ್‌ ಆಗಿತ್ತು. ಅಂದಿನದು ಟಿ20 ಮಾದರಿಯ ಪಂದ್ಯಾವಳಿಯಾಗಿತ್ತು. 

ಬಾಂಗ್ಲಾದೇಶ ಏಶ್ಯ ಕಪ್‌ನಲ್ಲಿ 3ನೇ ಸಲ ಫೈನಲ್‌ ಪ್ರವೇಶಿಸಿತು. ಹಿಂದಿನೆರಡು ಸಲವೂ ಅದು ಪ್ರಶಸ್ತಿ ಗೆಲ್ಲುವಲ್ಲಿ ವಿಫ‌ಲವಾಗಿತ್ತು. 2016ರಲ್ಲಿ ಭಾರತದ ವಿರುದ್ಧ ಎಡವಿದರೆ, 2012ರಲ್ಲಿ ಬಾಕಿಸ್ಥಾನ ವಿರುದ್ಧ ಕೇವಲ 2 ರನ್ನುಗಳಿಂದ ಪರಾಭವಗೊಂಡಿತ್ತು.

1984ರ ಆರಂಭಿಕ ಆವೃತ್ತಿಯನ್ನು ಹೊರತುಪಡಿಸಿ ಭಾರತ 9ನೇ ಸಲ ಏಶ್ಯ ಕಪ್‌ ಫೈನಲ್‌ ಪ್ರವೇಶಿಸಿತು. ಈ ವರೆಗೆ ಸರ್ವಾಧಿಕ 6 ಸಲ ಚಾಂಪಿಯನ್‌ ಆಗಿದೆ. 3 ಸಲ ಫೈನಲ್‌ನಲ್ಲಿ ಸೋಲನುಭವಿಸಿದೆ. ಈ ಎಲ್ಲ ಸೋಲು ಶ್ರೀಲಂಕಾ ವಿರುದ್ಧವೇ ಎದುರಾಗಿತ್ತು.

1984ರ ಆರಂಭಿಕ ಆವೃತ್ತಿಯ ಏಶ್ಯ ಕಪ್‌ ಪಂದ್ಯಾವಳಿಯನ್ನು “ರಾಥ್‌ಮನ್ಸ್‌ ಕಪ್‌’ ಎಂಬ ಹೆಸರಲ್ಲಿ ಆಡಲಾಗಿತ್ತು. ರೌಂಡ್‌ ರಾಬಿನ್‌ ಮಾದರಿಯ ಈ ಕೂಟದಲ್ಲಿ ಭಾರತ, ಪಾಕಿಸ್ಥಾನ ಮತ್ತು ಶ್ರೀಲಂಕಾ ಸೆಣಸಿದ್ದವು. ಅಂದು “ಫೈನಲ್‌’ ಮಾದರಿ ಇರಲಿಲ್ಲ. ಲೀಗ್‌ ಹಂತದ ಎರಡೂ ಪಂದ್ಯಗಳನ್ನು ಗೆದ್ದ ಭಾರತ ಪ್ರಶಸ್ತಿ ಜಯಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next