Advertisement

ನೆಹ್ರಾ ಮೇಲೆ ನಂಬಿಕೆ: ಟಿ-20 ಸರಣಿ: ಟೀಮ್‌ ಇಂಡಿಯಾ ಪ್ರಕಟ

06:20 AM Oct 03, 2017 | Team Udayavani |

ಹೊಸದಿಲ್ಲಿ: ಆಸ್ಟ್ರೇಲಿಯ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ-20 ಸರಣಿಗಾಗಿ ಹಿರಿಯ ಎಡಗೈ ಪೇಸ್‌ ಬೌಲರ್‌ ಆಶಿಷ್‌ ನೆಹ್ರಾ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಏಕದಿನ ಸರಣಿಯಿಂದ ದೂರ ಉಳಿದಿದ್ದ ಸ್ಪಿನ್‌ದ್ವಯರಾದ ಆರ್‌. ಅಶ್ವಿ‌ನ್‌ ಮತ್ತು ರವೀಂದ್ರ ಜಡೇಜ ಅವರನ್ನು ಟಿ-ಟ್ವೆಂಟಿಗೂ ಕಡೆಗಣಿಸಲಾಗಿದೆ. 

Advertisement

ಆಸೀಸ್‌ ವಿರುದ್ಧದ ಏಕದಿನ ಸರಣಿಯಲ್ಲಿ ಸತತ 4 ಅರ್ಧ ಶತಕ ಬಾರಿಸಿದ್ದ ಅಜಿಂಕ್ಯ ರಹಾನೆ, ಟೆಸ್ಟ್‌ ಸ್ಪೆಷಲಿಸ್ಟ್‌ ಬೌಲರ್ ಎಂದೇ ಪರಿಗಣಿಸಲ್ಪಟ್ಟಿರುವ ಉಮೇಶ್‌ ಯಾದವ್‌, ಮೊಹಮ್ಮದ್‌ ಶಮಿ ಅವರನ್ನೂ ಕೈಬಿಡಲಾಗಿದೆ.

ಕೌಟುಂಬಿಕ ಕಾರಣಗಳಿಂದ ಏಕದಿನ ಸರಣಿಯಿಂದ ಬೇರ್ಪಟ್ಟಿದ್ದ ಎಡಗೈ ಆರಂಭಕಾರ ಶಿಖರ್‌ ಧವನ್‌ ಮರಳಿ ತಂಡವನ್ನು ಕೂಡಿಕೊಂಡಿದ್ದಾರೆ. ಯುವ ಕೀಪರ್‌ ರಿಷಬ್‌ ಪಂತ್‌ ಅವರನ್ನು ಮೀರಿಸಿ ಅನುಭವಿ ದಿನೇಶ್‌ ಕಾರ್ತಿಕ್‌ ಅವಕಾಶ ಸಂಪಾದಿಸಿದ್ದೊಂದು ಅಚ್ಚರಿ. ಧೋನಿ ಪ್ರಧಾನ ಕೀಪರ್‌ ಆಗಿರುವುದರಿಂದ ಕಾರ್ತಿಕ್‌ ಅವರನ್ನು ಕೇವಲ ಬ್ಯಾಟ್ಸ್‌ಮನ್‌ ಆಗಿ ಪರಿಗಣಿಸುವ ಸಾಧ್ಯತೆ ಹೆಚ್ಚು. ಈ ಸರಣಿಯ ವೇಳೆ ರಿಷಬ್‌ ಪಂತ್‌ ನ್ಯೂಜಿಲ್ಯಾಂಡ್‌ “ಎ’ ಎದುರಿನ 5 ಪಂದ್ಯಗಳ ಲಿಸ್ಟ್‌ ಎ ಸರಣಿಯಲ್ಲಿ ಆಡುವುದರಿಂದ ಟೀಮ್‌ ಇಂಡಿಯಾಕ್ಕೆ ಆಯ್ಕೆಯಾಗಿಲ್ಲ ಎಂದು ತೀರ್ಮಾನಿಸಬಹುದಾಗಿದೆ.

ನೆಹ್ರಾ ಆಯ್ಕೆ ಸಮರ್ಥನೆ
38ರ ಹರೆಯದ ಆಶಿಷ್‌ ನೆಹ್ರಾ ಅವರನ್ನು ತಂಡಕ್ಕೆ ಸೇರಿಸಿಕೊಂಡದ್ದು ಅನೇಕರಿಗೆ ಆಶ್ಚರ್ಯವಾಗಿ ಕಂಡಿದೆ. ಆದರೆ ಬಿಸಿಸಿಐ ಅಧಿಕಾರಿಯೊಬ್ಬರು ನೆಹ್ರಾ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. “ನೆಹ್ರಾ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಟಿ-20 ಸರಣಿಯ ಎಲ್ಲ ಪಂದ್ಯಗಳಲ್ಲಿ ಆಡಿದ್ದರು. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಗೂ ನೆಹ್ರಾ ಆಯ್ಕೆಯಾಗುವ ಸಾಧ್ಯತೆ ಇತ್ತು. ಆದರೆ ಐಪಿಎಲ್‌ ವೇಳೆ ಗಾಯಾಳಾದ್ದರಿಂದ ಅವರಿಗೆ ಈ ಅವಕಾಶ ತಪ್ಪಿತು. ಭಾರತ ತನ್ನ ಕಳೆದ ಟಿ-20 ಸರಣಿಯಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ಶ್ರೀಲಂಕಾ ವಿರುದ್ಧ ಒಂದೊಂದೇ ಪಂದ್ಯವನ್ನಾಡಿತ್ತು. ಹೀಗಾಗಿ ನೆಹ್ರಾ ಅವರನ್ನು ಆರಿಸಿರಲಿಲ್ಲ’ ಎಂದು ಅವರು ಹೇಳಿದ್ದಾರೆ. 

“ನೆಹ್ರಾ ಅವರ ದಾಖಲೆಗಳನ್ನೇ ಗಮನಿಸಿ, ಫಿಟ್‌ನೆಸ್‌ ಹಾಗೂ ಫಾರ್ಮ್ ಕೊರತೆಯಿಂದ ಅವರನ್ನೆಂದೂ ತಂಡ ದಿಂದ ಕೈಬಿಟ್ಟ ಉದಾಹರಣೆ ಇಲ್ಲ’ ಎಂದೂ ಬಿಸಿಸಿಐ ಅಧಿಕಾರಿ ಹೇಳಿದರು. ನೆಹ್ರಾ ಈವರೆಗೆ 25 ಟಿ-20 ಅಂತಾ ರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 34 ವಿಕೆಟ್‌ ಉರುಳಿಸಿದ್ದಾರೆ.

Advertisement

ಅನುಭವಿ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಮತ್ತು ರವೀಂದ್ರ ಜಡೇಜ ಅವರನ್ನು ಮತ್ತೆ ಕಡೆಗಣಿಸಿದ್ದು ಕೂಡ ಚರ್ಚೆ ಯನ್ನು ಹುಟ್ಟುಹಾಕಿದೆ. ತಂಡದ ಉಳಿದ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌ ಮತ್ತು ಅಕ್ಷರ್‌ ಪಟೇಲ್‌ ಗಮನಾರ್ಹ ನಿರ್ವಹಣೆ ತೋರುತ್ತಿರು ವುದು ಇದಕ್ಕೆ ಮುಖ್ಯ ಕಾರಣ ಆಗಿರಬಹುದು. ಇದನ್ನು ಗಮನಿಸಿದಾಗ ಅಶ್ವಿ‌ನ್‌-ಜಡೇಜ ಜೋಡಿ ಟೆಸ್ಟ್‌ ಪಂದ್ಯಗಳಿ ಗಷ್ಟೇ ಮೀಸಲಾಗುವ ಸಾಧ್ಯತೆಯೊಂದು ಗೋಚರಿಸುತ್ತಿದೆ. ಅಶ್ವಿ‌ನ್‌ ಇತ್ತೀಚೆಗಷ್ಟೇ ಇಂಗ್ಲಿಷ್‌ ಕೌಂಟಿಯಲ್ಲಿ ವೂರ್ಸೆಸ್ಟರ್‌ಶೈರ್‌ ಪರ 4 ಪಂದ್ಯಗಳನ್ನಾಡಿದ್ದು, 28 ವಿಕೆಟ್‌ ಹಾಗೂ ಇನ್ನೂರಕ್ಕೂ ಹೆಚ್ಚು ರನ್‌ ಸಂಪಾದಿಸಿ ಮಿಂಚಿದ್ದರು. ಆದರೆ ಆಯ್ಕೆ ಸಮಿತಿ ಇದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.

ಟಿ-20 ಪಂದ್ಯಗಳು ರಾಂಚಿ (ಅ. 7), ಗುವಾಹಟಿ (ಅ. 10) ಮತ್ತು ಹೈದರಾಬಾದ್‌ನಲ್ಲಿ (ಅ. 13) ನಡೆಯಲಿವೆ.

ಭಾರತ ತಂಡ: 
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ, ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ಮನೀಷ್‌ ಪಾಂಡೆ, ಮಹೇಂದ್ರ ಸಿಂಗ್‌ ಧೋನಿ, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ, ಆಶಿಷ್‌ ನೆಹ್ರಾ, ದಿನೇಶ್‌ ಕಾರ್ತಿಕ್‌, ಅಕ್ಷರ್‌ ಪಟೇಲ್‌.

Advertisement

Udayavani is now on Telegram. Click here to join our channel and stay updated with the latest news.

Next