Advertisement

ಸಂಬಂಧ ಗಟ್ಟಿಯಾಗಲಿ : ಆಸಿಯಾನ್‌-ಭಾರತ 25ನೇ ವರ್ಷಾಚರಣೆಯಲ್ಲಿ ಪ್ರಧಾನಿ

08:20 AM Jan 26, 2018 | Karthik A |

ಹೊಸದಿಲ್ಲಿ: “ಆಸಿಯಾನ್‌ ರಾಷ್ಟ್ರಗಳು ಮತ್ತು ಭಾರತದ ನಡುವೆ ಕಡಲ ಸಂಬಂಧಿ ರಕ್ಷಣೆ, ವ್ಯಾಪಾರ ಮತ್ತು ಸಂಪರ್ಕ ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು. ನಮ್ಮ ನಡುವೆ ನಿಯಮಗಳಿಗೆ ಒಳಪಟ್ಟು ಸಮುದ್ರದಲ್ಲಿ ನೌಕಾಯಾನ ನಡೆಸಲು ಅವಕಾಶ ಇರಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವದಿಲ್ಲಿಯಲ್ಲಿ ಆಸಿಯಾನ್‌-ಭಾರತ ಸ್ನೇಹದ 25ನೇ ವರ್ಷಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ಸಮ್ಮೇಳನದಲ್ಲಿ ಅವರು ಮಾತನಾಡಿದರು. 

Advertisement

ದಕ್ಷಿಣ ಸಮುದ್ರ ಚೀನ ವ್ಯಾಪ್ತಿಯಲ್ಲಿ ಚೀನದ ಪ್ರಾಬಲ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಟ್ಟುಕೊಂಡು ಮಾತನಾಡಿದ ಪ್ರಧಾನಿ ಮೋದಿ, 1990ರಿಂದ ಈಚೆಗೆ ಭಾರತವು ಆಸಿಯಾನ್‌ ರಾಷ್ಟ್ರಗಳ ಜತೆ ನಿಕಟ ಸಂಪರ್ಕ ಇರಿಸಿಕೊಂಡಿದೆ. ಶಾಂತಿ, ಪ್ರಗತಿ ಮತ್ತು ಅಭಿವೃದ್ಧಿಗಾಗಿ ಐದು ವರ್ಷಗಳಲ್ಲಿ ಹಾಕಿಕೊಂಡಿರುವ ಯೋಜನೆ ಯಶಸ್ವಿಯಾಗಿದೆ. ಭಾರತದ 121 ಕೋಟಿ ಜನಸಂಖ್ಯೆಗೆ ನಮ್ಮ ಹಾಜರಿಯ ಅರಿವು ಉಂಟಾಗಿದೆ’ ಎಂದರು. ವ್ಯೂಹಾತ್ಮಕವಾಗಿ ಮತ್ತು ರಾಜತಾಂತ್ರಿಕವಾಗಿ ಆಸಿಯಾನ್‌ ಮಹತ್ವ ಪ್ರಸ್ತಾಪಿಸಿದ ಪ್ರಧಾನಿ ಮೋದಿ, “ನಮ್ಮ ನಡುವಿನ ಸ್ನೇಹ ಮತ್ತು ಬಾಂಧವ್ಯ ಇತಿಹಾಸ ಕಾಲದ ಸಂಸ್ಕೃತಿ ಮತ್ತು ನಾಗರಿಕತೆಯಿಂದಲೂ ನಡೆದುಕೊಂಡು ಬಂದಿದೆ. 

ಆಸಿಯಾನ್‌ ಮತ್ತು ಭಾರತದ ಉಪಖಂಡದಲ್ಲಿ ರಾಮಾಯಣ ಮತ್ತು ಇತರ ಮಹಾಕಾವ್ಯಗಳು ಅದರದ್ದೇ ಆಗಿರುವ ಕೊಡುಗೆ ನೀಡಿದೆ. ಬೌದ್ಧ ಧರ್ಮ, ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಇಸ್ಲಾಂ ಕೂಡ ತನ್ನದೇ ಆದ ಕೊಡುಗೆ ನೀಡಿದ್ದು, ಭಾರತದ ಜತೆಗೂ ಹಲವು ದಶಕಗಳ ನಡುವೆ ಅವಿನಾಭಾವ ಸಂಬಂಧ ಹೊಂದಿದೆ’ ಎಂದರು.

ದ್ವಿಪಕ್ಷೀಯ ಮಾತುಕತೆ: ಪ್ರಧಾನಿ ಮೋದಿ ಅವರು ಸಿಂಗಾಪುರ ಪ್ರಧಾನಿ ಲೀ ಹೀಸನ್‌ ಲೂಂಗ್‌, ಬ್ರೂನೈನ ಸುಲ್ತಾನ ಹಾಜಿ ಹಸನಾಲ್‌ ಬೂಲ್ಕಿಯಾ ಹಾಗೂ ಥಾಯ್ಲೆಂಡ್‌ ಪ್ರಧಾನಿ ಜತೆ ಮಾತುಕತೆ ನಡೆಸಿದರು. ಈ ಬಗ್ಗೆ ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ಕುಮಾರ್‌ ಟ್ವೀಟ್‌ ಮಾಡಿದ್ದು, “ಪ್ರಧಾನಿ ಮೋದಿ ಥಾಯ್ಲೆಂಡ್‌ ಪ್ರಧಾನಿಯನ್ನು ಭೇಟಿಯಾದರು. ಈಶಾನ್ಯದತ್ತ ನಮ್ಮ ನೋಟದ ಮೂಲಕ ಥಾಯ್ಲೆಂಡ್‌ನ‌ ಪಶ್ಚಿಮದತ್ತ ನೋಟಕ್ಕೆ ಅಭಿನಂದನೆ ಸಲ್ಲಿಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ. 

ರಾಷ್ಟ್ರಪತಿ ಔತಣಕೂಟ: ಆಸಿಯಾನ್‌ ರಾಷ್ಟ್ರಗಳ ಜತೆಗೆ ಭಾರತ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ತಿಳಿಸಿದ್ದಾರೆ. ಆಸಿಯಾನ್‌ ನಾಯಕರ ಗೌರವಾರ್ಥ ಗುರುವಾರ ಮಧ್ಯಾಹ್ನ ಆಯೋಜಿಸಲಾಗಿದ್ದ ಭೋಜನ ಕೂಟದಲ್ಲಿ ಅವರು ಮಾತನಾಡಿದರು. “ಈಶಾನ್ಯದತ್ತ ನೋಟ ಎಂಬ ಭಾರತದ ನಿಲುವು ಪ್ರಾಚೀನಕಾಲದಿಂದ ಆಸಿಯಾನ್‌ ರಾಷ್ಟ್ರಗಳ ಜತೆಗೆ ಹೊಂದಿದ್ದ ಬಾಂಧವ್ಯವನ್ನು ಮತ್ತೂಮ್ಮೆ ದೃಢಪಡಿಸಲು ನೆರವಾಗಿದೆ. ಆಧುನಿಕ ವ್ಯವಸ್ಥೆಯಲ್ಲಿ ರಾಜಕೀಯ, ಭದ್ರತೆ, ಆರ್ಥಿಕ ಮತ್ತು ಸಾಂಸ್ಕೃತಿಕ ಬಾಂಧವ್ಯ ದೃಢಪಡಿಸಲು ಸಹಾಯಕವಾಗಿದೆ’ ಎಂದರು ರಾಷ್ಟ್ರಪತಿ. 

Advertisement

ಔತಣಕೂಟದಲ್ಲಿ ಅಸ್ಸಾಂ ಸಿಎಂ: ಆಸಿಯಾನ್‌ ರಾಷ್ಟ್ರಗಳ ನಾಯಕರ ಗೌರವಾರ್ಥ ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾತ್ರಿ ಆಯೋಜಿಸಿರುವ ಔತಣಕೂಟದಲ್ಲಿ ಅಸ್ಸಾಂ ಸಿಎಂ ಸರ್ವಾನಂದ ಸೊನೊವಾಲ್‌ ಭಾಗವಹಿಸಿದ್ದರು. ಆಸಿಯಾನ್‌ ರಾಷ್ಟ್ರಗಳ ಜತೆಗೆ ಅಸ್ಸಾಂ ಸೇರಿದಂತೆ ಈಶಾನ್ಯ ರಾಷ್ಟ್ರಗಳು ಗಡಿಯನ್ನು ಹೊಂದಿವೆ. ಹೀಗಾಗಿ ಇವರ ಉಪಸ್ಥಿತಿ ಗಮನ ಸೆಳೆಯಿತು.

ವಿಶೇಷ ಪ್ರಸಾರಕ್ಕೆ ಸಿದ್ಧತೆ: ಈ ಬಾರಿಯ ಗಣರಾಜ್ಯದಿನದ ಕಾರ್ಯಕ್ರಮ ನೇರ ಪ್ರಸಾರಕ್ಕೆ ದೂರದರ್ಶನ ವಿಶೇಷ ವ್ಯವಸ್ಥೆ ಮಾಡಿದೆ. ಇಂಡಿಯಾ ಗೇಟ್‌ನಿಂದಲೂ ದೂರದ ದೃಶ್ಯಗಳನ್ನು ಸೆರೆ ಹಿಡಿಯಲು 38 ಕ್ಯಾಮೆರಾ ಬಳಸಿಕೊಳ್ಳಲಿದ್ದೇವೆ ಎಂದು ಪ್ರಸಾರ ಭಾರತಿ ಅಧ್ಯಕ್ಷ ಎ.ಸೂರ್ಯಪ್ರಕಾಶ್‌ ತಿಳಿಸಿದ್ದಾರೆ. ಭಾಗವಹಿಸಿರುವವರ ಅಭಿಪ್ರಾಯ ಸೆರೆ ಹಿಡಿಯಲೋಸುಗವೇ ರೋಬೋಟಿಕ್‌ ಕ್ಯಾಮೆರಾ ಬಳಸಲಾಗುತ್ತಿದೆ ಎಂದಿದ್ದಾರೆ. ಇದೇ ವೇಳೆ, ದಿಲ್ಲಿಯಾದ್ಯಂತ ಬಂದೋಬಸ್ತ್ ಕಲ್ಪಿಸಲಾಗಿದ್ದು, 50 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 

ಚೀನದಿಂದ ಎಚ್ಚರಿಕೆಯ ಪ್ರತಿಕ್ರಿಯೆ: ಹೊಸದಿಲ್ಲಿಯಲ್ಲಿ ಆಸಿ ಯಾನ್‌ ನಾಯಕರ ಸಭೆ ಸೇರುವಿಕೆಯ ಬಗ್ಗೆ ಚೀನ ವಿದೇಶಾಂಗ ಇಲಾಖೆ ವಕ್ತಾರ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದ್ದಾರೆ. “ಶಾಂತಿಗಾಗಿ ಎಲ್ಲಾ ರಾಷ್ಟ್ರಗಳು ಜತೆಗೂಡಿ ಪ್ರಯತ್ನ ನಡೆಸಬೇಕು. ಈ ಪ್ರದೇಶದಲ್ಲಿ ಸ್ಥಿರತೆ ಮತ್ತು ಅಭಿವೃದ್ಧಿಗೆ ಶ್ರಮಿಸಬೇಕು’ ಎಂದಿದ್ದಾರೆ. ಸಭೆ ಚೀನ ವಿರುದ್ಧವಾಗಿಯೇ ಇದೆ ಎಂದು ವರದಿ ಮಾಡಿರುವ ಭಾರತದ ಮಾಧ್ಯಮಗಳನ್ನು ಟೀಕಿಸಿರುವ ವಕ್ತಾರರು “ಭಾರತದ ಮಾಧ್ಯಮ ವಿಶ್ವಾಸಕ್ಕೆ ಅರ್ಹವಲ್ಲ ಮತ್ತು ಅವುಗಳು ನಮ್ಮನ್ನು ನಂಬುವುದಿಲ್ಲ’ ಎಂದು ಹೇಳಿದ್ದಾರೆ.

ರಾಹುಲ್‌ಗೆ 4ನೇ ಸಾಲಲ್ಲಿ ಆಸನಕ್ಕೆ ಕಾಂಗ್ರೆಸ್‌ ಕಿಡಿ
69ನೇ ಗಣರಾಜ್ಯದಿನದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ನಾಲ್ಕನೇ ಸಾಲಿನಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿದ್ದಕ್ಕೆ ಪಕ್ಷ ಕಿಡಿಕಿಡಿಯಾಗಿದೆ. ಇದು ಪಕ್ಷದ ನಾಯಕತ್ವಕ್ಕೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಹಿಂದಿನ ವರ್ಷಗಳಲ್ಲಿ ಪ್ರತಿಪಕ್ಷದ ಅಧ್ಯಕ್ಷರಿಗೆ ಮೊದಲ ಸಾಲಿನಲ್ಲಿಯೇ ಅವಕಾಶ ನೀಡಲಾಗುತ್ತಿತ್ತು ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ಅಧ್ಯಕ್ಷ ಸೇರಿದಂತೆ ಪ್ರಮುಖರಿಗೆ ಆಸನ ನಿಗದಿ ಬಗ್ಗೆ ಕೇಂದ್ರದಿಂದ ಯಾವುದೇ ಸ್ಪಷ್ಟನೆ ನೀಡಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next