Advertisement

ಅರುಣ್‌ ನಂದಗಿರಿಯ ಆನಂದದ ಗೆರೆಗಳು!

06:00 AM Dec 09, 2018 | |

ಮೂವತ್ತೂಂಬತ್ತು ವರ್ಷ ಮಲಗಿದಲ್ಲಿಯೇ ಇರಬೇಕಾದ ಸ್ಥಿತಿಯಲ್ಲಿದ್ದ ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಅರುಣ್‌ ನಂದಗಿರಿ ಇತ್ತೀಚೆಗೆ ನಿಧನರಾಗಿದ್ದಾರೆ. ರಾಯಚೂರಿನ ಮನೆಯಲ್ಲಿದ್ದುಕೊಂಡು, ವಕ್ರರೇಖೆಗಳ ಮೂಲಕ ಜಗವನ್ನು ನಗಿಸಿದ ಅರುಣ್‌, ಅಮಿತ ಜೀವನೋತ್ಸಾಹ ಹೊಂದಿದ್ದರು…

Advertisement

ಮಿತ್ರ ಅರುಣ್‌ ನಂದಗಿರಿ ವಿಧಿವಶರಾದರು ಎಂದು ಕೇಳಿ ಬಹಳ ದುಃಖವಾಯಿತು. Smile is a small curve which makes many things straight  ಅನ್ನೋ ಒಂದು ಮಾತಿದೆ. ನಗು ಎನ್ನುವ ಒಂದು ಸಣ್ಣ ವಕ್ರಗೆರೆ ಬದುಕಿನ ಎಷ್ಟೋ ಸಂಗತಿಗಳನ್ನು ಡೊಂಕುಗಳನ್ನು ನೇರಮಾಡುತ್ತದೆ  ಅಂತ. ಸ್ನೇಹಿತ ಅರುಣ್‌ ನಂದಗಿರಿ ತನ್ನ ನಿಲುವು ನೇರವಾಗಿರಲಿಲ್ಲ ; ಆದರೆ, ಜನರ ಬದುಕಿನ ಅಸಂಬದ್ಧತೆಗಳನ್ನ ತನ್ನ  ನಗೆ ಗೆರೆಗಳ  ಮೂಲಕ ನೇರವಾಗಿಸುವ ಛಲದಂಕ ಮಲ್ಲರಾಗಿದ್ದರು. 

ಅರುಣ್‌ ನಂದಗಿರಿ ನನಗೆ ಪತ್ರಮುಖೇನ ಪರಿಚಯವಾದಾಗ ತಮ್ಮ ಬಗ್ಗೆ ಏನೊಂದೂ ಹೇಳಿಕೊಂಡಿರಲಿಲ್ಲ. ಎಲ್ಲರಂತೆ ತಾವೊಬ್ಬ ವ್ಯಂಗ್ಯ ಚಿತ್ರಕಾರ ಎಂದಷ್ಟೇ ಪರಿಚಯಿಸಿಕೊಂಡಿದ್ದರು. ಇವರಲ್ಲಿ ಅಂತಹ ಹೆಚ್ಚುಗಾರಿಕೆ ಇದೆ ಎಂದು ನನಗೂ ಅನಿಸಿರಲಿಲ್ಲ. ಆ ನಂತರ ಪತ್ರಿಕೆಯೊಂದರಲ್ಲಿ ಅರುಣ್‌ರವರ ಬಗ್ಗೆ ಪರಿಚಯ ಲೇಖನವೊಂದು ಪ್ರಕಟವಾದಾಗ ಅದರಲ್ಲಿದ್ದ ಈ ವಾಮನ ಮೂರ್ತಿಯ ಭಾವಚಿತ್ರ ಕಂಡು ದಂಗುಬಡಿದು ಹೋದೆ. ದಿನದ 24 ಗಂಟೆಯೂ ಹಾಸಿಗೆಯ ಮೇಲೇ ಮಲಗಿರುವ ಈ ವ್ಯಕ್ತಿ ನಗೆಚಿತ್ರಗಳನ್ನು ಹೇಗೆ ರಚಿಸಬಲ್ಲ ಎಂದು ಅಚ್ಚರಿಯಾಯಿತು. ಅರುಣ್‌ ಅವರ  ಅಸಹಾಯಕ ಸ್ಥಿತಿಯ ಬಗ್ಗೆ ತೀವ್ರ ವಿಷಾದ ಎನಿಸಿತು. ಅವರಿಗೆ ತಕ್ಷಣ ಫೋನಾಯಿಸಿದೆ. 

“ನಿಮ್ಮ ಸ್ಥಿತಿಯ ಬಗ್ಗೆ ನೀವೇಕೆ ನನಗೆ ಏನೂ ಹೇಳಲಿಲ್ಲ’ ಎಂದು ನಯವಾಗಿ ಆಕ್ಷೇಪಿಸಿದೆ. ಅದಕ್ಕವರು ಕೊಟ್ಟ ಉತ್ತರ, “ಅಣ್ಣ, ನಾವು ಬೇರೆಯವರಿಗೆ ನಗುವನ್ನು ಮಾತ್ರ ಹಂಚಬೇಕು. ನೋವನ್ನು ಹಂಚಬಾರದು. ಇಲ್ಲಿಯವರೆಗೆ ನಾನು ಮಾಡಿರೋದೂ ಅದನ್ನೇ! ಜನ ನನ್ನ ಬಗ್ಗೆ ಅನುಕಂಪ ಪಡೋದು ಬೇಡ, ಅವರು ನನ್ನನ್ನು   ಪ್ರೀತಿಸಬೇಕು, ನನ್ನ ವ್ಯಂಗ್ಯಚಿತ್ರಗಳು ಅವರ ದುಃಖ, ದುಮ್ಮಾನಗಳನ್ನ ಹಗುರಾಗಿಸಬೇಕು, ನಾನು ಹೇಗಿದೀನಿ ಅನ್ನೋದು ಮುಖ್ಯ ಅಲ್ಲ’ ಅರುಣ್‌ ಅವರ ಮಾತು ಕೇಳಿ ನನಗೆ ಅವರ ಬಗ್ಗೆ ತುಂಬಾ ಅಭಿಮಾನ, ಗೌರವ ಮೂಡಿತು. ಬಾಯ್ತುಂಬ, “ಅಣ್ಣ’ ಎಂದು ಕರೆದ ಅರುಣ್‌ ಅವತ್ತಿನಿಂದ ನನ್ನ ಸಹೋದರನಾದರು.
ಅರುಣ್‌ ನೋಡಿದಾಕ್ಷಣ ನನ್ನ ನೆನಪಿಗೆ ಬಂದದ್ದು ಗತಿಸಿದ ಮಿತ್ರ ಟಿ. ಎಂ.ಷಡಕ್ಷರಿ. 80ರ ದಶಕದ ಕೊನೆಯಲ್ಲಿ ಮತ್ತು 90 ದಶಕದ ಪ್ರಾರಂಭದಲ್ಲಿ ಗೆಳೆಯ ಷಡಕ್ಷರಿ ಸಾಹಿತ್ಯ ಕ್ಷೇತ್ರಕ್ಕೆ ಅದ್ಭುತವೆನಿಸುವ ಕೊಡುಗೆ ನೀಡಿದ್ದರು. ಸತತ 10 ವರ್ಷಕ್ಕೂ ಹೆಚ್ಚು ಕಾಲ ಕಾಲು ನುಂಗುವ ಕಾಯಿಲೆಯಿಂದ ನರಳುತ್ತ ತಿಪಟೂರಿನ ಜನರಲ್‌ ಆಸ್ಪತ್ರೆಯ ಜನರಲ್‌ ವಾರ್ಡ್‌ನಲ್ಲಿ  ಅಂಗಾತ ಮಲಗಿಯೇ ತನ್ನ ವೇದನೆಗಳಿಗೆ ಕಾವ್ಯ ರೂಪ ನೀಡಿದ್ದರು. ಬಿಳಿಗೆರೆ ಕೃಷ್ಣಶಾಸಿŒಗಳು ಅವರ ಮೌನಸ್ಪಂದನ ಕವನ ಸಂಕಲನವನ್ನು ತಾವೇ ಮುಂದೆ ನಿಂತು ಪ್ರಕಟಿಸಿದ್ದರು. ನಾನು ಭೇಟಿ ಮಾಡಲು ಹೋದಾಗಲೆಲ್ಲ ಅವರಿಗೆ ಖುಷಿಯೋ ಖುಷಿ. ಅದಕ್ಕೆ ಮುಖ್ಯ ಕಾರಣ, ನಾನು ಹಾಸ್ಯ ಬರೆಯುತ್ತೇನೆಂದು. ಸರ್‌! “ಇತ್ತೀಚಿನ ನಿಮ್ಮ ಹಾಸ್ಯ ಓದಿದೆ, ತುಂಬಾ ಖುಷಿಯಾಯಿತು ಸರ್‌, ನಗು ಬರೋದು ಏನಾದರೂ ಓದುತ್ತಿದ್ದರೆ ನನ್ನ ನೋವು ಅರ್ಧ ಕಮ್ಮಿಯಾಗುತ್ತೆ’ ಅನ್ನುತ್ತಿದ್ದರು. 

ಅರುಣ್‌ ಪರಿಚಯವಾದ ಮೇಲೆ ನನ್ನ ಸ್ನೇಹಿತ ನನಗೆ ವಾಪಸ್‌ ಸಿಕ್ಕಿದ ಎಂದು ನಿಜಕ್ಕೂ ಖುಷಿಯಾಗಿತ್ತು. ಷಡಕ್ಷರಿಗೂ ಅರುಣ್‌ರವರಿಗೂ ಇರುವ ಒಂದು ವ್ಯತ್ಯಾಸವೆಂದರೆ ಷಡಕ್ಷರಿಯ  ಬಹುತೇಕ ಕವನಗಳಲ್ಲಿ ಬದುಕು ಮತ್ತು ವ್ಯವಸ್ಥೆಯ ಬಗ್ಗೆ ತೀವ್ರ ವಿಷಾದವಿತ್ತು, ಒಂದು ರೀತಿ ಬಂಡಾಯದ ಧ್ವನಿಯಿತ್ತು. ಅದರೆ, ಅರುಣ್‌ ಗೆರೆಗಳಲ್ಲಿ  ಪುಟಿಯುವ ಜೀವನೋತ್ಸಾಹ ವಿತ್ತು. 

Advertisement

ಯಾವುದೇ ಕ್ಷೇತ್ರದಲ್ಲಿ ಮುಂದೆ ಬರಲು  ಮತ್ತು ನಿರಂತರವಾಗಿ ತನ್ನ ಛಾಪು ಮೂಡಿಸಲು ವ್ಯಕ್ತಿಯೊಬ್ಬ ಬದಲಾಗುತ್ತಿರುವ ಪರಿಸರ,ಸಾಂಸ್ಕƒತಿಕ ವಾತಾವರಣ ಮತ್ತು ಹೊಸ ಅವಿಷ್ಕಾರಗಳೊಂದಿಗೆ ತನ್ನನ್ನು ತಾನು ಗುರುತಿಸಿಕೊಳ್ಳುತ್ತಿರಬೇಕಾಗುತ್ತದೆ. ಇದಕ್ಕೆ ಚಲನಶೀಲತೆ, ಅನುಭವ ಮತ್ತು ಅಧ್ಯಯನ ಆಧಾರವಾಗುತ್ತದೆ. ಆದರೆ, ಅರುಣ್‌ರವರು ಮಲಗಿದ್ದಲ್ಲಿಂದಲೇ  ಪ್ರತಿದಿನ ಅಪ್‌ಡೇಟ್‌ ಆಗುವ ಪರಿಯಂತೂ ತುಂಬಾ ಆಶ್ಚರ್ಯ ಮೂಡಿಸುತ್ತಿತ್ತು. ಮಾಮೂಲಿ ಸಾಂಸಾರಿಕ ವಿಷಯಗಳಿಂದ ಹಿಡಿದು ಅಮೆರಿಕದ ಆರ್ಥಿಕ ಹಿಂಜರಿತ, ಒಲಿಂಪಿಕ್ಸ್‌, ಮಹಾನ್ಪೋಟ, ಭಯೋತ್ಪಾದನೆ, ಚಂದ್ರಯಾನ- ಹೀಗೆ ಹತ್ತು ಹಲವು ಜಾಗತಿಕ ವಿದ್ಯಮಾನಗಳನ್ನೂ ತಮ್ಮ ವ್ಯಂಗ್ಯಚಿತ್ರದೊಳಗೆ ಎಳೆದುತರುವುದು ಅವರ ಬೌದ್ಧಿಕ ದಾಹಕ್ಕೆ ಸಾಕ್ಷಿಯಾಗುತ್ತು. ಹಾಗೆಯೇ ದೇಶೀಯ ಆಗುಹೋಗುಗಳನ್ನೂ ತಮ್ಮ ಗೆರೆಗಳಲ್ಲಿ ಹಿಡಿದಿಡುವುದರಲ್ಲೂ ಅವರು ಎತ್ತಿದ ಕೈ. ರಾಜಕೀಯದಿಂದ ಹಿಡಿದು ಕನ್ನಡದ ಶಾಸ್ತ್ರೀಯ ಸ್ಥಾನಮಾನ ನೀಡಿಕೆ, ರಿಯಾಲಿಟಿ ಶೋಗಳವರೆಗೆ ಅವರ ಚಿತ್ರಗಳು ಅಧಿಕೃತವಾಗಿ ಮಾತಾಡುತ್ತಿದ್ದವು, ಕಚಗುಳಿಯಿಡುತ್ತಿದ್ದವು, ಹಿಂದೆಯೇ ಚಿಂತನೆಗೆ ಹಚ್ಚುತ್ತಿದ್ದವು.

ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ದೌರ್ಜನ್ಯಗಳನ್ನು  ಕಾಣದಷ್ಟು ಕುರುಡರಾಗಿದ್ದೇವೆ. ನಾಡಿಗಾಗಿ, ದೇಶಕ್ಕಾಗಿ ಕೈ ಎತ್ತಲಾರದಷ್ಟು ಹೆಳವರಾಗಿದ್ದೇವೆ. ಇದಕ್ಕಿಂತ ಅಂಗವೈಕಲ್ಯ ಬೇಕಾ? ಆದರೆ, ಅರುಣ್‌ ಚಿತ್ರಗಳು ಈ ಎಲ್ಲದರ ಬಗ್ಗೆ ಧ್ವನಿಮೂಡಿಸುತ್ತಿದ್ದವು. ಮಲಗಿದಲ್ಲಿಂದಲೇ ಅರುಣ್‌ ಹೊಸ ಕಾಯಕಲ್ಪಕ್ಕೆ ತಮ್ಮ ಗೆರೆಗಳ ಮೂಲಕವೇ ಸೂಚ್ಯವಾಗಿ ಕರೆನೀಡುತ್ತಿದ್ದರು.  ಅರುಣ್‌ ಅವರ ನಗೆಚಿತ್ರಗಳು, ಅವರ ಸಾಹಸಮಯ ಜೀವನಗಾಥೆ ನೋಡಿದಾಗ ಈ ಸಮಾಜ ಅವರಿಂದ ಕಲಿಯುವುದು ಬಹಳಷ್ಟಿದೆ ಎನಿಸುತ್ತದೆ. 
ಅರುಣ್‌ ತಮ್ಮ ಕೃತಿ ಅರುಣ್‌ ಕಂಡ ಪ್ರಪಂಚ ದ ಮೂಲಕ ಹೊಸ ಇತಿಹಾಸ ಬರೆದಿದ್ದರು. ಅವರು ನಗುನಗುತ್ತ ನೂರ್ಕಾಲ ಬಾಳಬೇಕಿತ್ತು. ಆದರೆ, ಸುಳಿವೇ ಕೊಡದೆ ನಮ್ಮನ್ನು ಅಗಲಿ ಹೋಗಿದ್ದಾರೆ. 

– ತುರುವೇಕೆರೆ ಪ್ರಸಾದ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next