ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಕೇಂದ್ರ ಹಣಕಾಸು ಸಚಿವಾಲಯದ ಮಧ್ಯೆ ಇರುವ ಭಿನ್ನಾಭಿಪ್ರಾಯಗಳು ಆಗಾಗ್ಗೆ ಹೊರಬರುತ್ತಲೇ ಇರುತ್ತವೆ. ಈಗ ಮತ್ತೂಮ್ಮೆ ಈ ಅಂತಃಕಲಹ ಬಹಿರಂಗಗೊಂಡಿದೆ. ಈ ಹಿಂದೆ ಸಾಲ ನೀಡಿಕೆ ಪ್ರಕ್ರಿಯೆಯನ್ನು ನಿಯಂತ್ರಿಸುವಲ್ಲಿ ಆರ್ಬಿಐ ವಿಫಲವಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ. ಕೆಲವು ದಿನಗಳ ಹಿಂದೆ ಮಾತನಾಡಿದ್ದ RBI ಡೆಪ್ಯುಟಿ ಗವರ್ನರ್ ವಿರಳ್ ಆಚಾರ್ಯ, ಕೇಂದ್ರ ಸರಕಾರ RBI ಕಾರ್ಯಚಟುವಟಿಕೆಯಲ್ಲಿ ಮೂಗು ತೂರಿಸುತ್ತಿದೆ ಎಂಬ ಆರೋಪಿಸಿದ್ದರು. ಇದು ದೇಶವನ್ನು ವಿಪತ್ತಿಗೆ ದೂಡಲಿದೆ ಎಂದು ಎಚ್ಚರಿಸಿದ್ದರು.
ಜೇಟ್ಲಿ ಹೇಳಿದ್ದೇನು?
2008ರಿಂದ 2014ರ ಅವಧಿಯಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಉಂಟಾದಾಗ ಆರ್ಥಿಕ ಬೆಳವಣಿಗೆಯನ್ನು ಕೃತಕವಾಗಿ ಉತ್ತೇಜಿಸಲು ಬ್ಯಾಂಕ್ಗಳಿಗೆ ಯಥೇಚ್ಛವಾಗಿ ಸಾಲ ನೀಡುವಂತೆ ಸೂಚಿಸಲಾಗಿತ್ತು. ಸಾಲ ನೀಡಿಕೆ ಪ್ರಮಾಣ ನಿಯಂತ್ರಿಸುವಲ್ಲಿ ಆರ್ಬಿಐ ವಿಫಲವಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.
ವಿರಳ್ ಆಚಾರ್ಯ ಹೇಳಿದ್ದೇನು?
ಆರ್ಬಿಐ ಸ್ವಾತಂತ್ರ್ಯವನ್ನು ಗೌರವಿಸದ ಸರಕಾರವು ಹಣಕಾಸು ಮಾರುಕಟ್ಟೆಯ ಸಮಸ್ಯೆಯನ್ನು ಎದುರಿಸುತ್ತದೆ. ಅಷ್ಟೇ ಅಲ್ಲ, ಅದು ಆರ್ಥಿಕ ಸಂಕಷ್ಟಕ್ಕೂ ಕಾರಣವಾಗಬಹುದು ಎಂದು ಆಚಾರ್ಯ ಹೇಳಿದ್ದರು.
ಸಭೆಗೂ ಮುನ್ನ ಭಿನ್ನಾಭಿಪ್ರಾಯ
ಜೇಟ್ಲಿ ಹಾಗೂ ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಮಂಗಳವಾರ ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಭೇಟಿಯಾಗಿದ್ದಾರೆ. ಹಣಕಾಸಿನ ದ್ರವ್ಯತೆ ಹಾಗೂ ಇತರ ವಿಷಯಗಳ ಕುರಿತು ಜೇಟ್ಲಿ ಮತ್ತು ಪಟೇಲ್ ಮಾತುಕತೆ ನಡೆಸಿದ್ದಾರೆ.
Related Articles
ಏನಿದು ವಿವಾದ?
ಆರ್ಬಿಐ ಹಾಗೂ ಸರಕಾರದ ಮಧ್ಯೆ ಹಿಂದಿನಿಂದಲೂ ಭಿನ್ನಾಭಿಪ್ರಾಯಗಳಿದ್ದವು. ಸರಕಾರಕ್ಕೆ ಅನುಕೂಲಕರವಾದ ವಿತ್ತ ನೀತಿಯನ್ನು ಕೈಗೊಳ್ಳಬೇಕೆಂದು ಆರ್ಬಿಐ ಮೇಲೆ ಸರಕಾರಗಳು ಒತ್ತಡ ಹೇರುತ್ತಲೇ ಇದ್ದವು. ರೆಪೋ ದರ ಇಳಿಕೆಯಿಂದಲೇ ಆರ್ಥಿಕ ಸ್ಥಿತಿಯನ್ನು ನಿಯಂತ್ರಿಸಲಾಗದು ಎಂಬುದಾಗಿ ಬಹುತೇಕ ಆರ್ಬಿಐ ಗವರ್ನರ್ಗಳು ಸರಕಾರದ ವಿರುದ್ಧ ಚಾಟಿ ಬೀಸುತ್ತಲೇ ಇದ್ದರು. ಆದರೆ ಈ ಬಾರಿಯ ವಿವಾದ ಸಂಪೂರ್ಣ ವಿಭಿನ್ನ ನೆಲೆಯಲ್ಲಿದೆ. ಇತ್ತೀಚೆಗೆ ಹಣಕಾಸು ಮುಗ್ಗಟ್ಟಿಗೀಡಾದ ಐಎಲ್ಆ್ಯಂಡ್ಎಫ್ಎಸ್ ಹಣಕಾಸು ಸಂಸ್ಥೆಯ ಪರಿಣಾಮ ಇಡೀ ದೇಶದ ಆರ್ಥಿಕ ವಲಯಕ್ಕೆ ಹರಡುವ ಭೀತಿ ಎದುರಾಗಿದ್ದು, ಇದನ್ನು ನಿಯಂತ್ರಿಸುವಂತೆ ಸರಕಾರ ಆರ್ಬಿಐ ಮೇಲೆ ಒತ್ತಡ ಹೇರಿದೆ. ಆದರೆ ಯಾವುದೇ ದ್ರವ್ಯತೆ ಸಮಸ್ಯೆ ಇಲ್ಲ ಎಂದು ಆರ್ಬಿಐ ಭರವಸೆ ನೀಡಿದೆ.