Advertisement

ಕಲಾವಿದನೊಬ್ಬನಿಂದ ಕಲೆ-ಕಲಾವಿದರ ಸೇವೆ ಶ್ಲಾಘನೀಯ: ಕಡಂದಲೆ ಸುರೇಶ್‌ ಭಂಡಾರಿ

03:43 PM Dec 07, 2021 | Team Udayavani |

ಮುಂಬಯಿ: ನಮ್ಮ ಧಾರ್ಮಿಕ ಆಚಾರ-ವಿಚಾರಗಳನ್ನು, ವೇದ ಪುರಾಣಗಳನ್ನು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ತಲುಪಿಸುವಂತಹ ಕಲೆಯೆಂದರೆ ಅದು ಯಕ್ಷಗಾನವಾಗಿದೆ. ದೇಶದ ಆರ್ಥಿಕ ರಾಜಧಾನಿಯಾಗಿರುವ ಮುಂಬಯಿ ಮಹಾನಗರದಲ್ಲಿ ತುಳು-ಕನ್ನಡಿಗರು ಈ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಇದರ ಫಲವಾಗಿ ಮುಂಬಯಿ ಮಹಾನಗರದಲ್ಲಿ  ನಿರಂತರ ಯಕ್ಷಗಾನ ಸೇರಿದಂತೆ ತುಳುನಾಡಿನ ಸಾಂಸ್ಕೃತಿಕ ಕಲೆಗಳು ಜರಗುತ್ತಿವೆ ಎಂದು ಸಮಾಜ ಸೇವಕ, ಉದ್ಯಮಿ, ಅಸಲ್ಫಾ ಶ್ರೀ ಗೀತಾಂಬಿಕಾ ದೇವಸ್ಥಾನದ ಅಧ್ಯಕ್ಷ ಕಡಂದಲೆ ಸುರೇಶ್‌ ಭಂಡಾರಿ ಅಭಿಪ್ರಾಯಪಟ್ಟರು.

Advertisement

ಭಾಂಡುಪ್‌ನ ಟೆಂಕ್‌ರೋಡ್‌ನ‌ಲ್ಲಿರುವ ಹಾರ್ಮೋನಿ ಬ್ಯಾಂಕ್ವೆಟ್‌ ಸಭಾಗೃಹದಲ್ಲಿ  ಡಿ. 5ರಂದು ಅಪರಾಹ್ನ ಜರಗಿದ ನಗರದ ಪ್ರಸಿದ್ಧ ಯಕ್ಷಗಾನ ಕಲಾವಿದ ರಾಜ ತುಂಬೆ ನೇತೃತ್ವದ “ಯಕ್ಷ ಧ್ವನಿ ಮುಂಬಯಿ’ ಇದರ 17ನೇ ವಾರ್ಷಿಕೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ 17 ವರ್ಷಗಳಿಂದ ಯಕ್ಷಗಾನ ಕಲಾವಿದ ರಾಜ ತುಂಬೆ ಅವರು ಯಕ್ಷಗಾನ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ನಿರಂತರ ಕಾರ್ಯಕ್ರಮಗಳನ್ನು ನೀಡಿದ್ದು, ಅವರ ಕಲಾಸೇವೆ ಮಾದರಿಯಾಗಿದೆ. ಓರ್ವ ಕಲಾವಿದನಾಗಿ ಕಲಾವಿದರ ಕಷ್ಟಗಳನ್ನು ಮನಗಂಡು ಯಕ್ಷಗಾನಕ್ಕಾಗಿ ಕೊಡುಗೆ ನೀಡಿ ದಂತಹ ಮಹನೀಯರನ್ನು ಸ್ಮರಿಸುವ ಹಾಗೂ ಗೌರವಿಸುವ ಕೆಲಸವನ್ನು ಇಲ್ಲಿ ಮಾಡುತ್ತಿರು ವುದು ಅಭಿನಂದನೀಯ. ಅವರ ಈ ಕಾರ್ಯಕ್ಕೆ ಕಲಾ ಭಿಮಾನಿಗಳ, ಕಲಾಪೋಷಕರ ಸಹಾಯ ಸದಾ ಇರುತ್ತದೆ ಎಂದು ತಿಳಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ ಉಪಾಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ  ಪಾಲ್ಗೊಂಡಿದ್ದರು. ಮುಂಬಯಿಯ ಹವ್ಯಾಸಿ ಯಕ್ಷಗಾನ ರಂಗದ ಖ್ಯಾತ ಚೆಂಡೆವಾದಕ ದಿ| ಕೆ. ಕೆ. ದೇವಾಡಿಗ ಸ್ಮರಣಾರ್ಥ ನಿರ್ಮಿತ ವೇದಿಕೆಯಲ್ಲಿ ಸಮಾರಂಭ ನಡೆಯಿತು. ಈ ಸಂದರ್ಭ ಯಕ್ಷಗಾನ ಪ್ರಸಂಗಕರ್ತ, ಹಿರಿಯ ಯಕ್ಷಗಾನ ಕಲಾವಿದ ಎಂ. ಟಿ. ಪೂಜಾರಿ ಅವರನ್ನು ಗಣ್ಯರು ಸಮಸ್ತ ತುಳು-ಕನ್ನಡಿಗರ ಪರವಾಗಿ ಸಮ್ಮಾನಿಸಿದರು.

ಸಮ್ಮಾನಕ್ಕೆ ಉತ್ತರಿಸಿದ ಎಂ. ಟಿ. ಪೂಜಾರಿ,  ಹಿರಿಯ ಯಕ್ಷಗಾನ ಕಲಾವಿದ, ಖ್ಯಾತ ಚಂಡೆವಾದಕ ದಿ| ಕೆ. ಕೆ. ದೇವಾಡಿಗ ಅವರ ಸ್ಮರಣಾರ್ಥ ವೇದಿಕೆಯಲ್ಲಿ ಈ ಸಮ್ಮಾನ ದೊರೆತಿರುವುದು ನನಗೆ ಅತೀವ ಸಂತೋಷವಾಗಿದೆ. ಮುಂಬಯಿ ಮಹಾನಗರದಲ್ಲಿ ಕಲಾ ಪೋಷಕರಾದ ಸುರೇಶ್‌ ಭಂಡಾರಿ, ಯಕ್ಷಗಾನ ಕಲಾವಿದ ರಾಜ ತುಂಬೆ ಅವರಂತಹ ಮಹನೀಯರು ಇರುವಾಗ ಇಲ್ಲಿ ಯಕ್ಷಗಾನ ಹಾಗೂ ಯಕ್ಷಗಾನ ಕಲಾವಿದರಿಗೆ ಯಾವುದೇ ತೊಂದರೆಯಾಗಲು ಸಾಧ್ಯವಿಲ್ಲ. ಮುಂಬಯಿಯು ಯಕ್ಷಗಾನ ಕಲೆಯನ್ನು ಬೆಳೆಸಿ ಮಹಾ ನಗರವಾಗಿದೆ ಎಂದರು.

ಅತಿಥಿಗಳಾಗಿದ್ದ ದಕ್ಷಿಣ ಭಾರತೀಯ ಘಟಕ ಬಿಜೆಪಿ ಮುಂಬಯಿ ಪ್ರದೇಶದ ಮುಖ್ಯಸ್ಥ ಸದಾನಂದ್‌ ಪೂಜಾರಿ, ಬಂಟರ ಸಂಘ ಮುಂಬಯಿ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ಜತೆ ಕೋಶಾಧಿಕಾರಿ ರಮೇಶ್‌ ಶೆಟ್ಟಿ ಸಿದ್ದಕಟ್ಟೆ, ಶ್ರೀ ಶನೀಶ್ವರ ಮಂದಿರ ಬಟ್ಟಪ್ಪಾಡಿ ಅಧ್ಯಕ್ಷ ದಯಾನಂದ್‌ ಡಿ. ಶೆಟ್ಟಿ, ಧಾರ್ಮಿಕ ಗ್ರಂಥಕತೃì, ಕಲಾಪೋಷಕ ಶಂಭು ಕೆ. ಸನಿಲ್‌, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಭಾಂಡುಪ್‌ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಜನಾರ್ದನ ಆರ್‌. ಪೂಜಾರಿ, ಉದ್ಯಮಿ ಚಂದ್ರಹಾಸ ಶೆಟ್ಟಿ  ಉಜಿರೆ, ಸಾಕಿ ಮೋಹಿಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಿ ಸಾಕಿನಾಕ ಅಧ್ಯಕ್ಷ ದಿನೇಶ್‌ ಕೆ. ದೇವಾಡಿಗ, ಬಿಲ್ಲವರ ಅಸೋಸಿಯೇಶನ್‌ ಕಲ್ಯಾಣ್‌ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಸದಾಶಿವ ಜಿ. ಸುವರ್ಣ, ರಾಧಾಕೃಷ್ಣ ಶನೀಶ್ವರ ಮಂದಿರ ಡೊಂಬಿವಲಿ ಮತ್ತು ಜಗದಂಬಾ ಮಂದಿರದ ಯಕ್ಷ ಕಲಾ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಸಿ. ಕೋಟ್ಯಾನ್‌, ಶ್ರೀ ಭಗವತಿ ತೀಯ ಸಂಘ ಮುಂಬಯಿ ಇದರ ಗೌರವ ಕೋಶಾಧಿಕಾರಿ ರಮೇಶ್‌ ಸಾಲ್ಯಾನ್‌, ಸಮಾಜ ಸೇವಕ ಸದಾನಂದ್‌ ಎಸ್‌. ಶೆಟ್ಟಿ  ಮೊದಲಾದವರು ಶುಭ ಹಾರೈಸಿದರು.

Advertisement

ಪ್ರಸಿದ್ಧ ರಂಗ ನಿರ್ದೇಶಕ ಮನೋಹರ್‌ ಶೆಟ್ಟಿ ನಂದಳಿಕೆ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪೊಳಲಿ ನಾಗೇಶ್‌  ನಿರ್ದೇಶನದಲ್ಲಿ, ಯಕ್ಷ ಪ್ರಿಯ ಬಳಗ ಮೀರಾ-

ಭಾಯಂದರ್‌ ಇದರ ಕಲಾವಿದರ ಕೂಡುವಿ ಕೆಯಲ್ಲಿ “ಶಶಿಪ್ರಭಾ ಪರಿಣಯ’ ಯಕ್ಷಗಾನ ನಾಟ್ಯ ರೂಪಕ ಮತ್ತು ತವರೂರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ  “ಬೇಡರ ಕಣ್ಣಪ್ಪ’ ಯಕ್ಷಗಾನ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುಳು-ಕನ್ನಡಿಗರು, ಕಲಾರಸಿಕರು, ಯಕ್ಷಗಾನ ಪ್ರೇಮಿಗಳು ಉಪಸ್ಥಿತರಿದ್ದರು. ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿ ಅಸಲ್ಫಾ, ಶ್ರೀ ಸಸಿಹಿತ್ಲು ಭಗವತಿ ತೀಯ ಸಂಘ ಮುಂಬಯಿ, ಸದಾನಂದ ಅಮೀನ್‌, ಪ್ರಮೋದ್‌ ಜಿ. ನಾಯಕ್‌, ಯಕ್ಷಧ್ವನಿ ಸಂಸ್ಥೆ ಹಾಗೂ ರಾಜ ತುಂಬೆ ಅವರ ಅಭಿಮಾನಿಗಳು, ಯಕ್ಷಗಾನ ಕಲಾವಿದರು, ಕಲಾ ಪೋಷಕರು ಸಮಾರಂಭದ ಯಶಸ್ಸಿಗೆ ಸಹಕರಿಸಿದರು.

ಯಕ್ಷಗಾನ ಪ್ರದರ್ಶನ :

ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ಭಾಗವತರಾಗಿ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಪ್ರಶಾಂತ್‌ ರೈ ಪುತ್ತೂರು, ದಯಾನಂದ್‌ ಡಿ. ಶೆಟ್ಟಿ, ಚೆಂಡೆಯಲ್ಲಿ  ಪ್ರವೀಣ್‌ ಶೆಟ್ಟಿ ಎಕ್ಕಾರು, ಮದ್ದಳೆಯಲ್ಲಿ ಆನಂದ ಶೆಟ್ಟಿ ಇನ್ನ, ಚಕ್ರತಾಳದಲ್ಲಿ ಕುಶರಾಜ್‌ ಪೂಜಾರಿ, ಮುಮ್ಮೇಳದಲ್ಲಿ ಕಲಾವಿದರಾಗಿ ಹಾಸ್ಯರತ್ನ ಬಂಟ್ವಾಳ ಜಯರಾಮ ಆಚಾರ್ಯ, ಪ್ರಜ್ವಲ್‌ ಕುಮಾರ್‌, ಜಗನ್ನಾಥ್‌ ಶೆಟ್ಟಿ ಸಾಣೂರು, ಸ್ತ್ರೀ ಪಾತ್ರದಲ್ಲಿ ರಕ್ಷಿತ್‌ ಶೆಟ್ಟಿ ಪೆಡ್ರ, ದಾಮೋದರ್‌ ಶೆಟ್ಟಿ ಇರುವೈಲು ಮುಂಬಯಿ, ನಾಗೇಶ್‌ ಪೊಳಲಿ, ನರೇಂದ್ರ ಸುವರ್ಣ, ಗೋವಿಂದ ಸಫಲಿಗ, ಜಗದೀಶ್‌ ಶೆಟ್ಟಿ ಪಂಜಿನಡ್ಕ ಮೊದಲಾದವರು ಪಾಲ್ಗೊಂಡಿದ್ದರು.

ಮುಂಬಯಿ ಮಹಾನಗರದ ಒತ್ತಡದ ಜೀವನ ನಡುವೆ ತುಳುನಾಡಿನ ಜನರು ಯಕ್ಷಗಾನವನ್ನು ಪ್ರೋತ್ಸಾಹಿಸುತ್ತಾ ನಮ್ಮ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ನಿರಂತರ ಶ್ರಮಿಸುತ್ತಿದ್ದಾರೆ. ಕಳೆದೆರಡು ವರ್ಷಗಳಿಂದ ಮುಂಬಯಿ ಮಹಾನಗರದಲ್ಲಿ ಯಕ್ಷಗಾನ ಸಹಿತ ಇತರ ಕಾರ್ಯಚಟುವಟಿಕೆಗಳು ಸ್ತಬ್ಧಗೊಂಡಿದ್ದರೂ ಇದೀಗ ಯಕ್ಷ ಕಲಾವಿದ ರಾಜ ತುಂಬೆ ಅವರಂತಹ ಯಕ್ಷ ಪ್ರೇಮಿಗಳು ಯಕ್ಷಗಾನ ಮತ್ತೆ ಮಹಾನಗರದಲ್ಲಿ ಪ್ರದರ್ಶನಗೊಳ್ಳುವಂತೆ ಮಾಡುತ್ತಿರುವುದು ಅಭಿನಂದನೀಯ. ಅವರು ಯಕ್ಷಗಾನ ಹಾಗೂ ಯಕ್ಷಗಾನ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಅವರಂತಹ ಕಲಾವಿದರಿಗೆ ನಾವೆಲ್ಲರೂ ಪ್ರೋತ್ಸಾಹಕರವಾಗಿ ಇರುತ್ತೇವೆ. ರಾಜಾ ತುಂಬೆ ಅವರ ಕಲಾ ಸೇವೆ ನಿರಂತರವಾಗಿ ನಡೆಯಲಿ.-ಸಿಎ ಸುರೇಂದ್ರ ಶೆಟ್ಟಿ, ಉಪಾಧ್ಯಕ್ಷರು, ಬಾಂಬೆ ಬಂಟ್ಸ್‌ ಅಸೋಸಿಯೇಶನ್‌

ಇಂದಿನ ಕಾಲಘಟ್ಟದಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಗಳು ಹೆಚ್ಚುತ್ತಿವೆ. ನಮ್ಮ ಸಂಸ್ಕೃತಿ ಆಚಾರ-ವಿಚಾರಗಳನ್ನು ಟೀಕಿಸುವಂತಹ ಹಾಗೂ ಲವ್‌ ಜೆಹಾದ್‌ ಮೊದಲಾದ ಅನಿಷ್ಠ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಈ ಬಗ್ಗೆ ಜಾಗೃತಿ ಮೂಡಿಸಲು ನಾವೆಲ್ಲರೂ ಪ್ರಯತ್ನಿಸಬೇಕು. ಯಕ್ಷಗಾನ ಕಲೆ ಮೂಲಕ ನಮ್ಮ ಧರ್ಮ-ಸಂಸ್ಕೃತಿಯನ್ನು ಯುವಜನರಿಗೆ ತಿಳಿಯಪಡಿಸುವ ಕಾರ್ಯ ನಮ್ಮಿಂದಾಗಬೇಕು. ಇಂದಿನ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ  ಪ್ರೋತ್ಸಾಹ ನೀಡಿದ ಕಲಾ ಪೋಷಕರನ್ನು, ಮಹಾದಾನಿಗಳನ್ನು ನಾನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸುತ್ತೇನೆ ಹಾಗೂ ಅಭಿನಂದಿಸುತ್ತೇನೆ. ನಿಮ್ಮೆಲ್ಲರ ಸಹಕಾರ ದೊರೆತರೆ ಇನ್ನೂ ಹೆಚ್ಚು ಇಂತಹ ಕಾರ್ಯಕ್ರಮಗಳನ್ನು ನಡೆಸಲು ನಮ್ಮಂತಹ ಯಕ್ಷ ಪ್ರೇಮಿಗಳಿಗೆ ಪ್ರೋತ್ಸಾಹ ದೊರೆಯಲಿದೆ.-ರಾಜ ತುಂಬೆ, ಸಂಚಾಲಕರು, ಯಕ್ಷ ಧ್ವನಿ ಮುಂಬಯಿ

-ಚಿತ್ರ-ವರದಿ: ಸುಭಾಷ್‌ ಶಿರಿಯ

Advertisement

Udayavani is now on Telegram. Click here to join our channel and stay updated with the latest news.

Next