Advertisement

ಜಿಲ್ಲೆಯ ಜಲ ಪ್ರವಾಸಿ ಉತ್ಸವಗಳಿಗೆ ಮರು ಚಾಲನೆಯ ನಿರೀಕ್ಷೆ

10:01 PM Mar 19, 2021 | Team Udayavani |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯ ಜಲ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಆರಂಭಿಸಿದ್ದ ಸರ್ಫಿಂಗ್‌ ಉತ್ಸವ ಹಾಗೂ ನದಿ ಉತ್ಸವ ಇದೀಗ ಮೂಲೆ ಸೇರಿದ್ದು ಇವುಗಳಿಗೆ ಮರು ಚಾಲನೆ ದೊರೆಯುವ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ.

Advertisement

ಮಂಗಳೂರು ಹೊಂದಿರುವ ವಿಸ್ತಾರ ಮತ್ತು ಸುಂದರ ಸಮುದ್ರ ತೀರದಲ್ಲಿ ಸಾಗರ ಪ್ರವಾಸೋ ದ್ಯಮಕ್ಕಿರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ನಿಟ್ಟಿನಲ್ಲಿ ಸಸಿಹಿತ್ಲುವಿನಲ್ಲಿ ರಾಷ್ಟ್ರೀಯ ಮಟ್ಟದ ಸರ್ಫಿಂಗ್‌ ಉತ್ಸವ ಹಾಗೂ ಕುಳೂರು ಫಲ್ಗುಣಿ ನದಿಯಲ್ಲಿ ನದಿ ಉತ್ಸವ ಆರಂಭಿಸಲಾಗಿತ್ತು. ಈ ಎರಡೂ ಉತ್ಸವಗಳು ಭಾರೀ ಜನಾಕರ್ಷಣೆಯನ್ನು ಪಡೆದುಕೊಂಡು ಸಾಗರ ಪ್ರವಾಸೋದ್ಯಮದಲ್ಲಿ ಹೊಸ ಶಕೆಯೊಂದನ್ನು ತೆರೆದಿಡುವ ಭರವಸೆಯನ್ನು ಮೂಡಿಸಿತ್ತು. ಆದರೆ ಇದನ್ನು ಮುಂದುವರಿಸುವ ಬಗ್ಗೆ ಸರಕಾರ ತೋರಿದ ನಿರುತ್ಸಾಹ ತೋರಿತ್ತು. ಸರಕಾರದ ನಿರುತ್ಸಾಹದ ನಡುವೆಯೂ ಇದೀಗ ಖಾಸಗಿ ಸಂಘ-ಸಂಸ್ಥೆಗಳು ಈ ಬಗ್ಗೆ ಮುತುವರ್ಜಿ ವಹಿಸಿ ಜಲಪ್ರವಾಸಿ ಉತ್ಸವಗಳನ್ನು ಉರ್ಜಿತದಲ್ಲಿಡುವ ಕಾರ್ಯಕ್ಕೆ ಮುಂದಾಗಿದ್ದು, ಮಾ. 20ರಿಂದ ಸಸಿಹಿತ್ಲುವಿನಲ್ಲಿ ನಡೆಯುವ ಎರಡು ದಿನಗಳ ನಂದಿನಿ ಉತ್ಸವ ಇದಕ್ಕೆ ನಿದರ್ಶನ.

ಜನಾಕರ್ಷಣೆಯ ನದಿ ಉತ್ಸವ

ರಾಜ್ಯದಲ್ಲೇ ಪ್ರಥಮವಾಗಿ ಪ್ರಯೋಗವಾಗಿ ಮಂಗಳೂರಿನಲ್ಲಿ 2019ರ ಜನವರಿ 12, 13ರಂದು ಆಯೋಜನೆಗೊಂಡಿದ್ದ ಎರಡು ದಿನಗಳ ನದಿ ಉತ್ಸವ ನಿರೀಕ್ಷೆಗೂ ಮೀರಿದ ಜನಸ್ಪಂದನೆಯೊಂದಿಗೆ ಜಿಲ್ಲೆಯಲ್ಲಿ ಜಲ ಪ್ರವಾಸೋದ್ಯಮದ ಹೊಸ ಆಯಾಮವೊಂದನ್ನು ಪರಿಚಯಿಸಿತ್ತು. ಜಲ ಕ್ರೀಡೆಗಳು, ರಿವರ್‌ಕ್ರೂಸ್‌, ನದಿಯಲ್ಲಿ ತೇಲುವ ಜಟ್ಟಿ ಗಳೊಂದಿಗೆ ಆಹಾರ ಮಳಿಗೆಗಳು, ವಸ್ತುಪ್ರದರ್ಶನ, ಜಿಲ್ಲೆಯ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನದಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗಿತ್ತು. ಸುಮಾರು 25,000ಕ್ಕೂ ಅಧಿಕ ಮಂದಿ ಪಾಲ್ಗೊಂಡು ಸಂಭ್ರಮಿ ಸಿದ್ದರು. ನದಿ ಉತ್ಸವಕ್ಕೆ ಇನ್ನಷ್ಟು ಮೆರಗು ನೀಡಿ ವೈವಿಧ್ಯಮಯ ರೀತಿಯಲ್ಲಿ ಆಯೋಜಿಸಲು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ 1 ಕೋ.ರೂ. ಅನುದಾನವನ್ನು ಕೋರಿ 2019ರ ಆಗಸ್ಟ್‌ನಲ್ಲಿ
ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಈ ಪ್ರಸ್ತಾವನೆಗೆ ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಪೂರಕ ಸ್ಪಂದನೆ ದೊರಕಿ ರಲಿಲ್ಲ. ಇದರಿಂದ ನಿರೀಕ್ಷೆ ಮೂಡಿಸಿದ್ದ ನದಿ ಉತ್ಸವದ ಉತ್ಸಾಹ ಒಂದೇ ವರ್ಷಕ್ಕೆ ಸೀಮಿತಗೊಂಡಿತು.

ತಳಕ್ಕೆ ಜಾರಿದ ತೇಲುವ ಜೆಟ್ಟಿ ಯೋಜನೆಗಳು

Advertisement

ಉತ್ಸವ ಮಾತ್ರ ಮೂಲೆ ಸೇರಿದ್ದಲ್ಲ. ಇದರ ಜತೆಗೆ ಫಲ್ಗುಣಿ ನದಿಯಲ್ಲಿ ಕೂಳೂರು ಸೇತುವೆ ಬಳಿ, ಬಂಗ್ರಕೂಳೂರು ನದಿ ಈತೀರ, ಸುಲ್ತಾನ್‌ ಬತ್ತೇರಿ, ತಣ್ಣೂರುಬಾವಿ ಸಮೀಪಕೂಳೂರು ಉತ್ತರ ಮರುಳು ಮಿಶ್ರಿತ ಪ್ರದೇಶ, ಹಳೆ ಬಂದರು, ಕಸಬ ಬೆಂಗ್ರೆ, ಹಳೆ ಬಂದರು ಫೆರಿ ಸಮೀಪ, ಬೆಂಗ್ರೆ ಸ್ಯಾಂಡ್‌ ಫೀಟ್‌ ಬಳಿ, ನೇತ್ರಾವತಿ ನದಿತೀರದಲ್ಲಿ ಜಪ್ಪಿನಮೊಗರು ಹಳೆಯ ಫೆರಿ ಸಮೀಪ, ಉಳ್ಳಾಲ ಹಳೆಯ ಫೆರಿ ಬಳಿ, ಸಸಿಹಿತ್ಲು ಕಡಲ ತೀರದ ಬಳಿ ನಂದಿನ ನದಿ ತಟದ ಬಳಿ ಸಹಿತ ಒಟ್ಟು 26 ಕೋಟಿ ರೂ. ವೆಚ್ಚದಲ್ಲಿ 13 ತೇಲುವ ಜಟ್ಟಿಗಳನ್ನು ನಿರ್ಮಿಸುವ ಪ್ರಸ್ತಾವನೆಯೂ ತಳಕ್ಕೆ ಜಾರಿದೆ.

ಸರ್ಫಿಂಗ್‌ ಉತ್ಸವ 4 ವರ್ಷಗಳಿಂದ ನಡೆದಿಲ್ಲ

ಸಸಿಹಿತ್ಲು ಸರ್ಫಿಂಗ್‌ ಉತ್ಸವ ಮೂರು ವರ್ಷಗಳಿಂದ ನಡೆದಿಲ್ಲ. ರದ್ದುಗೊಂಡಿದ್ದ ಸರ್ಫಿಂಗ್‌ ಕ್ರೀಡೆ, ಸರ್ಫಿಂಗ್‌ ಉತ್ಸವವನ್ನು 2020ರ ಜನವರಿಯಲ್ಲಿ ನಡೆಸುವ ಉದ್ದೇಶದಿಂದ 2019ರ ಆಗಸ್ಟ್‌ನಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸರಕಾರಕ್ಕೆ 1 ಕೋ.ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಿತ್ತು. ಸರಕಾರದಿಂದ ಇದಕ್ಕೆ ಈವರೆಗೆ ಪೂರಕ ಸ್ಪಂದನೆ ದೊರಕಿಲ್ಲ.

ಪೂರಕ ಸ್ಪಂದನೆ ಅಗತ್ಯವಿದೆ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮಿಗಳ ವತಿಯಿಂದ ಪ್ರಯತ್ನಗಳು ಆರಂಭಗೊಂಡಿದೆ. ರಾಜ್ಯ ಪ್ರವಾಸೋದ್ಯಮ ಖಾತೆಯ ನೂತನ ಸಚಿವ ಸಿ.ಪಿ. ಯೋಗೇಶ್ವರ್‌ ಕೂಡ ಈ ಬಗ್ಗೆ ಉತ್ಸುಕತೆ ತೋರ್ಪಡಿಸುತ್ತಿದ್ದಾರೆ. ಕರಾವಳಿ ಜಿಲ್ಲೆಗಳ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಬೀಚ್‌ಗಳು, ಹಿನ್ನೀರು ಪ್ರವಾಸಿ ತಾಣಗಳನ್ನು ಇದನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವ ನಿಟ್ಟಿನಲ್ಲಿ ನದಿ ಉತ್ಸವ, ಸರ್ಫಿಂಗ್‌ ಉತ್ಸವಗಳಂತಹ ಆಕರ್ಷಣೀಯ ಕಾರ್ಯಕ್ರಮಗಳು ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಗಮನ ಸೆಳೆಯುವ ಕಾರ್ಯ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next