Advertisement

ಕುಂಚಬ್ರಹ್ಮನತ್ತ ಕೊಂಚ ಕಾಳಜಿ ತೋರುವಿರಾ?

05:10 PM Aug 30, 2019 | Team Udayavani |

ಹುಬ್ಬಳ್ಳಿ: ಅವಳಿ ನಗರದಲ್ಲಿ ಚಿತ್ರಕಲೆ ಪರಂಪರೆ ಗಟ್ಟಿಗೊಳ್ಳುವ, ಹಲವಾರು ಚಿತ್ರಕಲಾವಿದರನ್ನು ಸೃಷ್ಟಿಸುವ ನಿಟ್ಟಿನಲ್ಲಿ ತಮ್ಮದೇ ಶ್ರಮ, ತ್ಯಾಗಗೈದ ಕುಂಚಬ್ರಹ್ಮ ಡಾ| ಎಂ.ವಿ. ಮಿಣಜಗಿ ಆರ್ಟ್‌ ಗ್ಯಾಲರಿ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ದುರಸ್ತಿಗೆ ಪಾಲಿಕೆಯಿಂದ 1 ಲಕ್ಷ ರೂ. ನೀಡುವ ಭರವಸೆ ಹಾಗೇ ಉಳಿದಿದೆ. ಮಳೆ ಬಂದರೆ ಕಟ್ಟಡ ಸೋರುತ್ತಿದ್ದು, ಆಡಳಿತಕ್ಕೆ ಕನಿಷ್ಠ ಕಾಳಜಿ ಇಲ್ಲವಾಗಿದೆ.

Advertisement

ಇಲ್ಲಿನ ಇಂದಿರಾಗಾಜಿನ ಮನೆ ಆವರಣದಲ್ಲಿ ಡಾ| ಎಂ.ವಿ. ಮಿಣಜಗಿ ಆರ್ಟ್‌ ಗ್ಯಾಲರಿ ಕಟ್ಟಡ ಇದೆ. ಚಿತ್ರಕಲಾ ಪ್ರದರ್ಶನ, ಚಿತ್ರಕಲೆಗೆ ಸಂಬಂಧಿಸಿದ ಸಂವಾದ, ಚರ್ಚೆ, ಗೋಷ್ಠಿ, ತರಬೇತಿಗೆ ವೇದಿಕೆಯಾಗಬೇಕಿದ್ದ ಕಟ್ಟಡ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಈಗಾಗಲೇ ಕೋಟ್ಯಂತರ ರೂ. ವೆಚ್ಚದಲ್ಲಿ ಕೈಗೊಂಡಿದ್ದ ಇಂದಿರಾ ಗಾಜಿನಮನೆ ಆವರಣ ಮಹಾತ್ಮಗಾಂಧಿ ಉದ್ಯಾನವನ ನೆಲಹಾಸು ಸೇರಿದಂತೆ ವಿವಿಧ ಭಾಗವನ್ನು ತೆರವುಗೊಳಿಸಿ, ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಮತ್ತೆ ದುರಸ್ತಿ ಮಾಡಲಾಗುತ್ತಿದೆ. ಆದರೆ, ಚಿತ್ರಕಲೆಗೆ ವೇದಿಕೆಯಾಗುವ ಆರ್ಟ್‌ ಗ್ಯಾಲರಿಗೆ ಕನಿಷ್ಠ ದುರಸ್ತಿ ಯತ್ನಗಳು ಆಗುತ್ತಿಲ್ಲ.

ಇಂದಿರಾಗಾಜಿನ ಮನೆ ಆವರಣದಲ್ಲಿ 1980ರ ಸುಮಾರಿಗೆ ಆರಂಭಗೊಂಡ ಡಾ| ಎಂ.ವಿ. ಮಿಣಜಗಿ ಆರ್ಟ್‌ ಗ್ಯಾಲರಿ ಕಟ್ಟಡ 2006ರ ವರೆಗೂ ಉತ್ತಮ ಸ್ಥಿತಿಯಲ್ಲಿಯೇ ಇತ್ತು. ಮೇಲಿಂದ ಮೇಲೆ ಅಲ್ಲಿ ಚಿತ್ರಕಲಾ ಪ್ರದರ್ಶನ, ಏಕವ್ಯಕ್ತಿ ಚಿತ್ರಕಲೆ ಪ್ರದರ್ಶನ, ಚಿತ್ರಕಲೆಗೆ ಸಂಬಂಧಿಸಿದ ಸಂವಾದ-ಗೋಷ್ಠಿಯಂತಹ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆನಂತರದಲ್ಲಿ ಆರ್ಟ್‌ ಗ್ಯಾಲರಿ ಹಲವು ಸಮಸ್ಯೆಗಳಿಗೆ ಸಿಲುಕಿತು. ಮತ್ತೂಂದೆಡೆ ಕಾರ್ಯಕ್ರಮಗಳ ಕೊರತೆಯೂ ಉಂಟಾಯಿತು. ನಿಧಾನಕ್ಕೆ ಆರ್ಟ್‌ ಗ್ಯಾಲರಿ ಕಟ್ಟಡ ತನ್ನ ಮೂಲಧ್ಯೇಯದ ಬದಲಾಗಿ ಅನ್ಯ ಕಾರ್ಯಗಳಿಗೆ ಬಳಕೆಯಾಗತೊಡಗಿತು. ಕೆಲ ತಿಂಗಳ ಮಟ್ಟಿಗೆ ಅಗಸ್ತ್ಯ ಫೌಂಡೇಶನ್‌ ಪ್ರಯೋಗಾಲಯಕ್ಕೆ ನೀಡಲಾಯಿತು. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಕೆಲವು ಬಾರಿ ಪ್ರಸ್ತಾಪವಾದರೂ ಚಿತ್ರಕಲೆಗೆ ಪೂರಕವಾಗಿ ಕಟ್ಟಡ ರೂಪನೆ ಕಾರ್ಯ ಮಾತ್ರ ಆಗಲಿಲ್ಲ.

ಬರಲಿಲ್ಲ ಮೇಯರ್‌ ನೆರವು: ಸರಿಸುಮಾರು 12-13 ವರ್ಷ ಚಿತ್ರಕಲೆ ಕಾರ್ಯಗಳಿಂದ ದೂರವಾಗಿಯೇ ಉಳಿದಿದ್ದ ಗ್ಯಾಲರಿ 2019ರ ಜನವರಿಯಿಂದ ಮತ್ತೆ ಚಿತ್ರಕಲೆ ಕಾರ್ಯಕ್ರಮಗಳ ದೃಷ್ಟಿಯಿಂದ ಸಕ್ರಿಯತೆ ಪಡೆದುಕೊಂಡಿದೆ. ಇದ್ದ ವ್ಯವಸ್ಥೆಯಲ್ಲಿ, ಹಲವು ಕೊರತೆಗಳ ನಡುವೆಯೇ ಚಿತ್ರಕಲೆ ಪ್ರದರ್ಶನ, ಕೆಲವೊಂದು ಕಾರ್ಯಕ್ರಮಗಳು ಪುನರಾರಂಭಗೊಂಡಿವೆ.

ಡಾ| ಎಂ.ವಿ. ಮಿಣಜಗಿ ಆರ್ಟ್‌ ಗ್ಯಾಲರಿ ಅನ್ಯರ ಪಾಲಾಗಬಾರದು, ಮತ್ತೆ ಗ್ಯಾಲರಿಯಲ್ಲಿ ಚಿತ್ರಕಲೆ ವೈಭವ ಮೈದಳೆಯಬೇಕೆಂಬ ಉದ್ದೇಶದೊಂದಿಗೆ ಅನೇಕ ಚಿತ್ರಕಲಾವಿದರು, ಗ್ಯಾಲರಿಯ ಸ್ವಚ್ಛತೆ ಕಾರ್ಯಕ್ಕೆ ಮುಂದಾಗಿದ್ದರು. ಹಲವು ವರ್ಷಗಳಿಂದ ಪಾಳು ಬಂಗಲೆಯಂತಾಗಿದ್ದ ಕಟ್ಟಡವನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಂಡಿದ್ದರು. ಕಟ್ಟಡ ದುರಸ್ತಿ ಇನ್ನಿತರ ಕಾರ್ಯಗಳಿಗೆ ನೆರವು ನೀಡುವಂತೆ ಪಾಲಿಕೆಗೆ ಮನವಿ ಸಲ್ಲಿಸಿದ್ದರು.

Advertisement

ಮಹಾಪೌರರಾಗಿದ್ದ ಸುಧೀರ ಸರಾಫ್ ಅವರು ಕಟ್ಟಡ ದುರಸ್ತಿಗೆ ಪಾಲಿಕೆಯಿಂದ 1 ಲಕ್ಷ ರೂ. ಅನುದಾನದ ಭರವಸೆ ನೀಡಿದ್ದರು. ಇಂದಿಗೂ ಆ ಹಣ ಬಂದಿಲ್ಲ. ಚಿತ್ರಕಲಾವಿದರೇ ತಮ್ಮ ಸ್ವಂತ ಖರ್ಚಿನಲ್ಲಿ ಕಟ್ಟಡ ಸ್ವಚ್ಛತೆ, ಬಣ್ಣ ಬಳಿಯುವುದು ಇನ್ನಿತರ ಕಾರ್ಯಗಳನ್ನು ಮಾಡಿದ್ದಾರೆ. ಆದರೆ, ಮಳೆ ಬಂದರೆ ಕಟ್ಟಡ ಸೋರಿಕೆಯಾಗುತ್ತಿದೆ. ಮೇಲ್ಭಾಗದ ಕಿಟಕಿಗಳ ಗಾಜುಗಳನ್ನು ಕೆಲ ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಗೋಡೆ ಕೆಲವೊಂದು ಕಡೆ ಬಿರುಕು ಕಾಣಿಸಿಕೊಂಡಿದೆ. ಸರಿಯಾದ ಲೈಟ್ ವ್ಯವಸ್ಥೆ ಇಲ್ಲವಾಗಿದ್ದು, ಸಂಜೆ 6 ಗಂಟೆ ಒಳಗಾಗಿ ಚಿತ್ರಕಲಾ ಪ್ರದರ್ಶನ ಬಂದ್‌ ಮಾಡಬೇಕಾಗಿದೆ.

ಚಿತ್ರಕಲೆಯಲ್ಲಿ ತಮ್ಮದೇ ಸಾಧನೆ ಹೊಂದಿದ್ದ ಡಾ| ಎಂ.ವಿ. ಮಿಣಜಗಿ ಮುಂಬಯಿನಲ್ಲಿ ನೆಲೆಸಿದ್ದರೂ ಮೂರುಸಾವಿರ ಮಠದ ಜಗದ್ಗುರುಗಳ ಸೂಚನೆ ಮೇರೆಗೆ ಹುಬ್ಬಳ್ಳಿಗೆ ಆಗಮಿಸಿ ಚಿತ್ರಕಲಾ ಕಾಲೇಜು ಆರಂಭಿಸಿದವರು. ಜತೆಗೆ ಅವಳಿನಗರದಲ್ಲಿ ಚಿತ್ರಕಲೆ ಸಂಸ್ಕೃತಿ ವಿಜೃಂಭಿಸಲು ಮಹತ್ವದ ಕೊಡುಗೆ ನೀಡಿದ್ದು, ಹಲವು ಐತಿಹಾಸಿಕ ಚಿತ್ರಗಳಿಗೆ ತಮ್ಮ ಕುಂಚದ ಮೂಲಕ ಸ್ಪರ್ಶ ನೀಡಿ ಇಂದಿಗೂ ಅವುಗಳನ್ನು ನೋಡುವ ಭಾಗ್ಯ ಒದಗಿಸಿದ್ದಾರೆ. ಅಂತಹ ಕಲಾಸಾಧಕರ ಹೆಸರಿನ ಆರ್ಟ್‌ ಗ್ಯಾಲರಿಗೆ ಹೆಚ್ಚು ಸೌಲಭ್ಯಗಳನ್ನು ನೀಡುವ ಮೂಲಕ, ಚಿತ್ರಕಲೆಗೆ ಪ್ರೋತ್ಸಾಹಿಸುವ ಕೆಲಸ ಆಗಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ ಎಂಬ ನೋವು ಕಾಡುತ್ತಿದೆ.

ಡಾ| ಎಂ.ವಿ. ಮಿಣಜಗಿ ಆರ್ಟ್‌ ಗ್ಯಾಲರಿಯನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿ ಶೀಘ್ರವೇ ಚಿತ್ರಕಲೆ ಕಲಾವಿದರ ನಿಯೋಗದಿಂದ ಸಚಿವ ಜಗದೀಶ ಶೆಟ್ಟರ ಹಾಗೂ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಕಟ್ಟಡ ದುರಸ್ತಿ ಮಾಡಬೇಕು, ಇಲ್ಲವೇ ಬೇರೆ ಜಾಗ ನೀಡಿ ಅಲ್ಲಿ ಕಟ್ಟಡ ನಿರ್ಮಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ. • ಆರ್‌.ಬಿ. ಗರಗ, ಅಧ್ಯಕ್ಷ, ಡಾ| ಎಂ.ವಿ. ಮಿಣಜಗಿ ಆರ್ಟ್‌ ಗ್ಯಾಲರಿ

ಚಿತ್ರಕಲಾ ವೇದಿಕೆಗೆ ಬೇಕು ಸ್ಮಾರ್ಟ್‌ ಸಿಟಿ ಸ್ಪರ್ಶ!:

ಸ್ಮಾರ್ಟ್‌ ಸಿಟಿ ಯೋಜನೆಯಡಿ ಮತ್ತೂಮ್ಮೆ ಇಂದಿರಾಗಾಜಿನ ಮನೆ, ಮಹಾತ್ಮಾಗಾಂಧಿ ಉದ್ಯಾನವನದ ಸಂಪೂರ್ಣ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಇದೇ ಯೋಜನೆಯಡಿ ಡಾ| ಎಂ.ವಿ. ಮಿಣಜಗಿ ಆರ್ಟ್‌ ಗ್ಯಾಲರಿಯನ್ನೂ ಅಭಿವೃದ್ಧಿ ಪಡಿಸಬೇಕು ಎಂಬ ಬೇಡಿಕೆ ಚಿತ್ರ ಕಲಾವಿದರದ್ದಾಗಿದೆ. ಅಭಿವೃದ್ಧಿ ನೆಪದಲ್ಲಿ ಆರ್ಟ್‌ ಗ್ಯಾಲರಿ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಆಗಬಾರದು. ಚಿತ್ರಕಲೆ ಪ್ರದರ್ಶನ-ಸಂವಾದಕ್ಕೆ ಇರುವ ಏಕೈಕ ವೇದಿಕೆ ಇದಾಗಿದೆ ಎಂಬುದು ಚಿತ್ರಕಲಾವಿದರ ಅನಿಸಿಕೆ.
Advertisement

Udayavani is now on Telegram. Click here to join our channel and stay updated with the latest news.

Next