Advertisement

ಸಾರ್ವಜನಿಕ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಮಾಡಿ

10:22 AM Jun 19, 2019 | Team Udayavani |

ಲಕ್ಷ್ಮೇಶ್ವರ: ಪಟ್ಟಣದ ವಾರ್ಡ್‌ ನಂ-13ರ ಗೌರಿ ಓಣಿಯಲ್ಲಿರುವ ಸಾರ್ವಜನಿಕ ಶೌಚಾಲಯ ನೀರಿನ ವ್ಯವಸ್ಥೆ ಮತ್ತು ನಿರ್ವಹಣೆ ಇಲ್ಲದಿದ್ದರಿಂದ ಬೀಗ ಹಾಕಿರುವುದನ್ನು ಪ್ರಶ್ನಿಸಿ ಮಂಗಳವಾರ ವಾರ್ಡ್‌ನ ಮಹಿಳೆಯರು ಪುರಸಭೆಗೆ ದೌಡಾಯಿಸಿ, ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರಿಗೆ ಮುಕ್ತವಾಗಿಸಬೇಕು ಎಂದು ಒತ್ತಾಯಿಸಿದರು.

Advertisement

ವಾರ್ಡ್‌ನಲ್ಲಿರುವ ಜನರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಸಾರ್ವಜನಿಕ ಶೌಚಾಲಯವು ನೀರು ಮತ್ತು ನಿರ್ವಹಣೆ ವ್ಯವಸ್ಥೆ ಇಲ್ಲದಿದ್ದರಿಂದ ಕಳೆದ 8-10 ದಿನಗಳಿಂದ ಬಾಗಿಲು ಹಾಕಿದೆ. ಇದರಿಂದ ಸಾರ್ವಜನಿಕ ಶೌಚಾಲಯವನ್ನೇ ಅವಲಂಬಿಸಿರುವ ಬಹುತೇಕ ನಿವಾಸಿಗಳು ಮುಖ್ಯವಾಗಿ ಮಹಿಳೆಯರು, ವೃದ್ಧರಿಗೆ ಸಾಕಷ್ಟು ಸಮಸ್ಯೆ ಎದುರಾಗಿದೆ. ಓಣಿ ಕಿಷ್ಕಿಂಧೆಯಂತಿದ್ದು, ಇಲ್ಲಿನ ನಿವಾಸಿಗರಿಗೆ ವೈಯಕ್ತಿಕ ಶೌಚಾಲಯ ಹೊಂದಲು ಸ್ಥಳಾವಕಾಶದ ಕೊರತೆಯಿದೆ.

ನಿರ್ವಹಣೆ-ನೀರಿನ ವ್ಯವಸ್ಥೆ ಇಲ್ಲದ್ದರಿಂದ ಶೌಚಾಲಯ ಗಬ್ಬು ನಾರುತ್ತಿದ್ದು, ಇಡೀ ವಾತಾವರಣ ಹದಗೆಟ್ಟಿದೆ. ಆದ್ದರಿಂದ ಕೂಡಲೇ ಶೌಚಾಲಯ ಸ್ವಚ್ಛಗೊಳಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ ಅವರಿಗೆ ಮನವಿ ಮಾಡಿದರು. ಈ ಸಮಯದಲ್ಲಿ ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ, ಆಗಿರುವ ಸಮಸ್ಯೆ ಶೀಘ್ರ ಬಗೆಹರಿಸುವಂತೆ ಸಲಹೆ ಸೂಚನೆ ನೀಡಿದರು.

ಮಹಿಳೆಯರ ಸಮಸ್ಯೆ ಆಲಿಸಿದ ಕಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ ಮಾತನಾಡಿ, ಸಾರ್ವಜನಿಕರ ಶೌಚಾಲಯಕ್ಕೆ ನೀರಿನ ಸಂಪರ್ಕ ಒದಗಿಸಿದ್ದ ಬೋರ್‌ವೆಲ್ನ ಮೋಟರ್‌ ಹಾಳಾಗಿದೆ. ಕೂಡಲೇ ದುರಸ್ತಿ ಮಾಡಿಸಿ ಅನುಕೂಲ ಮಾಡಿಕೊಡುತ್ತೇವೆ ಎಂದ ಅವರು, ಪುರಸಭೆಯಿಂದ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಎಲ್ಲರಿಗೂ ಮುಕ್ತ ಅವಕಾಶ ಅನುದಾನ ಕಲ್ಪಿಸಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಲು ಆದ್ಯತೆ ನೀಡಿ ಎಂದು ಮನವಿ ಮಾಡಿದರು.

ಗಂಗಮ್ಮ ಬಾಳಿಕಾಯಿ, ಸುಜಾತಾ ಸವಣೂರ, ಅಕ್ಕಮ್ಮ ಯತ್ನಳ್ಳಿ, ಅನ್ನಪೂರ್ಣ ತೆಗ್ಗಳ್ಳಿ, ಸುನಂದಾ ಜಬಡಿ, ಲತಾ ಸವಣೂರ, ಲಲಿತಾ ಕನವಳ್ಳಿ ಸೇರಿದಂತೆ ಅನೇಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next