Advertisement

ಇಸ್ರೇಲಿ ರಾಯಭಾರ ಕಚೇರಿ ಬಳಿ ಸ್ಫೋಟದ ವೇಳೆ 45 ಸಾವಿರ ಮೊಬೈಲ್‌‌ಗಳು ಸಕ್ರೀಯ!

09:06 PM Jan 30, 2021 | Team Udayavani |

ಹೊಸದಿಲ್ಲಿ: ಇಸ್ರೇಲಿ ರಾಯಭಾರ ಕಚೇರಿಯ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಸ್ಫೋಟದ ಸಮಯದಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ 45,000 ಮೊಬೈಲ್ ಫೋನ್‌ಗಳು ಸಕ್ರಿಯವಾಗಿದ್ದವು ಎಂದು ಪ್ರಾಥಮಿಕ ತನಿಖೆಯ ಸಂದರ್ಭ ತಿಳಿದು ಬಂದಿವೆ.

Advertisement

ತನಿಖಾ ತಂಡವು ಆ ಪ್ರದೇಶಗಳ ಮೊಬೈಲ್ ಟವರ್‌ಗಳ ಮಾಹಿತಿಗಳನ್ನು ಸಂಗ್ರಹಿಸಲು ಮುಂದಾಗಿದೆ. ಆದರೆ ಘಟನೆ ನಡೆದ ಸಂದರ್ಭದಲ್ಲಿ ಸ್ಫೋಟಕ್ಕೆ ಕಾರಣರಾದ ವ್ಯಕ್ತಿಗಳು ತಮ್ಮ ಬಳಿ ಫೋನ್ ಇಟ್ಟುಕೊಂಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ದಿಲ್ಲಿ ಪೊಲೀಸರ ಅಪರಾಧ ವಿಭಾಗವು ಇಲ್ಲಿಗೆ ಆಗಮಿಸಲು ಮತ್ತು ಹೊರ ಹೋಗುವುದಕ್ಕಾಗಿ ಬಳಸಿದ ಕ್ಯಾಬ್‌ಗಳ ಮಾಹಿತಿಯನ್ನು ಕಲೆಹಾಕುತ್ತಿದೆ. ಶುಕ್ರವಾರ ಕ್ಯಾಬ್‌ಗಳನ್ನು ಕಾಯ್ದಿರಿಸಿದವರ ಡೇಟಾವನ್ನು ಪರಿಶೀಲಿಸುತ್ತಿದೆ. ಇವುಗಳಲ್ಲಿ ಓಲಾ ಮತ್ತು ಉಬರ್ ಸಹಿತ ಇತರ ಕ್ಯಾಬ್ ಸೇವೆಗಳು ಸೇರಿವೆ. ಶುಕ್ರವಾರ ಮಧ್ಯಾಹ್ನ 3ರಿಂದ ಸಂಜೆ 6ರ ವರೆಗೆ ಯಾರೆಲ್ಲ ಕ್ಯಾಬ್ ತೆಗೆದುಕೊಳ್ಳುವವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಸಿಸಿಟಿವಿ ದೃಶ್ಯಾವಳಿಗಳು
ಇಬ್ಬರು ಶಂಕಿತರು ಕ್ಯಾಬ್‌ನಿಂದ ಇಳಿಯುವುದನ್ನು ಪತ್ತೆ ಹಚ್ಚಲಾಗಿದೆ. ಘಟನ ಸ್ಥಳದ ಸಮೀಪವಿರುವ ಸಿಸಿಟಿವಿಯಿಂದ ಇಬ್ಬರು ಶಂಕಿತರನ್ನು ಪೊಲೀಸರು ಗುರುತಿಸಿದ್ದಾರೆ. ಇದರಲ್ಲಿ ಅವರಿಬ್ಬರು ಕ್ಯಾಬ್‌ನಿಂದ ಇಳಿಯುವುದು ಸೆರೆಯಾಗಿದೆ. ಪೊಲೀಸರು ಕ್ಯಾಬ್ ಚಾಲಕನನ್ನು ವಿಚಾರಿಸಿದಾಗ ಶಂಕಿತರ ರೇಖಾಚಿತ್ರ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಶುಕ್ರವಾರ ತಡರಾತ್ರಿ ಹಲವು ಪ್ರದೇಶಗಳ ಮೇಲೆ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಅವರಿಂದ ಪಡೆದ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ.

ಟೆಲಿಗ್ರಾಮ್ ಖಾತೆ ತನಿಖೆ
ಇಸ್ರೇಲಿ ರಾಯಭಾರ ಕಚೇರಿ ಬಳಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಸೈಬರ್ ಸೆಲ್, ಟೆಲಿಗ್ರಾಮ್ ಖಾತೆಯ ಬಗ್ಗೆ ತನಿಖೆ ನಡೆಸುತ್ತಿದೆ. ಟೆಲಿಗ್ರಾಂನಿಂದ ಸ್ಫೋಟದ ಹೊಣೆಯನ್ನು ಹೊತ್ತಿರುವ ಸ್ಕ್ರೀನ್‌ಶಾಟ್ ವೈರಲ್ ಆಗಿದೆ. ಅದರಲ್ಲಿ ಜೈಶ್-ಉಲ್-ಹಿಂದ್ ಎಂಬ ಸಂಘಟನೆಯು ಸ್ಫೋಟದ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಎಂದು ಹೇಳಲಾಗಿದೆ. ಆದರೆ ಅದನ್ನು ಇನ್ನೂ ದೃಢೀಕರಿಸಲಾಗಿಲ್ಲ.

Advertisement

ಭಯೋತ್ಪಾದಕ ದಾಳಿ ಎಂದು ಬಣ್ಣಿಸಿದ ಇಸ್ರೇಲ್‌
ಶುಕ್ರವಾರ ನಡೆದ ಸ್ಫೋಟವನ್ನು ಇಸ್ರೇಲಿ ರಾಯಭಾರಿ ರಾನ್ ಮಾಲ್ಕಾ ಅವರು ಭಯೋತ್ಪಾದಕ ದಾಳಿ ಎಂದು ಕರೆದಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಮಾಲ್ಕಾ ಅವರು ಇದು ಭಯೋತ್ಪಾದಕ ದಾಳಿ ಎಂದು ಹೇಳಲು ಸಾಕಷ್ಟು ಸಾಕ್ಷ್ಯಗಳಿವೆ. ಈ ಘಟನೆ ನಮಗೆ ಆಶ್ಚರ್ಯ ಹುಟ್ಟಿಸಿಲ್ಲ ಎಂದಿದ್ದಾರೆ. ಕಳೆದ ಕೆಲವು ವಾರಗಳಿಂದ ನಾವು ಎಚ್ಚರಿಕೆಯಿಂದ ಇದ್ದೆವು ಎಂದಿದ್ದಾರೆ. ಸ್ಫೋಟಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನು ತನಿಖೆ ನಡೆಸಲಾಗುತ್ತಿದೆ. ದಿಲ್ಲಿಯಲ್ಲಿ ಇಸ್ರೇಲಿ ರಾಜತಾಂತ್ರಿಕರ ಮೇಲೆ 2012ರ ದಾಳಿ ಸೇರಿದಂತೆ ವಿಶ್ವದಾದ್ಯಂತ ನಡೆಯುತ್ತಿರುವ ಕಾರ್ಯಾಚರಣೆಯ ಲಿಂಕ್‌ಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ತನಿಖೆಗಾಗಿ ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್ ತಂಡ ದಿಲ್ಲಿಗೆ ಆಗಮಿಸುವ ನಿರೀಕ್ಷೆ ಇದೆ. ಎನ್‌ಎಸ್‌ಎ ಮಟ್ಟದಲ್ಲಿ ಮಾತುಕತೆ ನಡೆಸಿದ ಅನಂತರ ಇಸ್ರೇಲ್ ಸರಕಾರ ಈ ನಿರ್ಧಾರ ಕೈಗೊಂಡಿದೆ.

ವಿಶ್ವಾದ್ಯಂತ ತನ್ನ ರಾಯಭಾರ ಕಚೇರಿಗಳ ಸುರಕ್ಷತೆಯನ್ನು ಹೆಚ್ಚಿಸಲು ಇಸ್ರೇಲ್ ನಿರ್ಧರಿಸಿದೆ. ಈ ನಡುವೆ ಎನ್ಎಸ್‌ಜಿ ತಂಡ ದಿಲ್ಲಿಯ ಇಸ್ರೇಲ್ ರಾಯಭಾರ ಕಚೇರಿಯನ್ನು ತಲುಪಿದ್ದು, ಸ್ಫೋಟದ ವಿಧಾನಗಳನ್ನು ತನಿಖೆ ನಡೆಸುತ್ತಿದೆ. ರಾಜಧಾನಿಯಲ್ಲಿ ವಾಸಿಸುತ್ತಿರುವ ಕೆಲವು ಇರಾನಿಯನ್ನರನ್ನು ಪ್ರಶ್ನಿಸಲಾಗುತ್ತಿದೆ. ವೀಸಾಗಳ ಅವಧಿ ಮುಗಿದ ಕೆಲವು ಇರಾನಿನ ನಾಗರಿಕರು ಇದರಲ್ಲಿ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ತನಿಖೆಯಲ್ಲಿ ಇದುವರೆಗೆ ಕಂಡುಬಂದ ಪ್ರಮುಖ ಸಾಕ್ಷ್ಯಗಳು

  • ಫೋರೆನ್ಸಿಕ್ ತಂಡದ ತನಿಖೆಯಲ್ಲಿ ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಬಳಸಲಾಗಿದೆ ಎಂದು ತಿಳಿದುಬಂದಿದೆ.
  •  ಸ್ಥಳದಲ್ಲೇ, ಕ್ರೈಂ ಬ್ರಾಂಚ್ ತಂಡವು ಇಸ್ರೇಲಿ ರಾಯಭಾರಿಯ ಹೆಸರಿನಲ್ಲಿ ಅರ್ಧ ಸುಟ್ಟ ಸ್ಕಾರ್ಫ್ ಮತ್ತು ಲಕೋಟೆಯನ್ನು ವಶಕ್ಕೆ ಪಡೆದುಕೊಂಡಿದೆ.
  • ಮೂಲಗಳ ಪ್ರಕಾರ, ಈ ಲಕೋಟೆಯ ಒಳಗಿನಿಂದ ಪತ್ರವನ್ನೂ ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ‘ಇದು ಟ್ರೇಲರ್’ ಎಂದು ಬರೆಯಲಾಗಿದೆ. ಫೋರೆನ್ಸಿಕ್ ತಂಡ ಈಗ ಬೆರಳಚ್ಚಿನ ತನಿಖೆ ನಡೆಸುತ್ತಿದೆ.
  • ತನಿಖಾ ಸಂಸ್ಥೆಗಳು ಘಟನ ಸ್ಥಳದಿಂದ ಮುರಿದ ತಂಪು ಪಾನೀಯಾದ ಕ್ಯಾನ್ ಮತ್ತು ಬಾಲ್ ಬೇರಿಂಗ್‌ಗಳನ್ನು ವಶಪಡಿಸಿಕೊಂಡಿವೆ. ಈ ತುಣುಕುಗಳನ್ನು ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ.

29ನೇ ವಾರ್ಷಿಕೋತ್ಸವದ ವೇಳೆ ಸ್ಫೋಟ
ದೂತಾವಾಸದ ಕಟ್ಟಡದಿಂದ 150 ಮೀಟರ್ ದೂರದಲ್ಲಿರುವ ಸಂಭವಿಸಿದ ಸ್ಫೋಟದಲ್ಲಿ ಯಾರೂ ಗಾಯಗೊಂಡಿಲ್ಲ, ಆದರೆ ಹತ್ತಿರದಲ್ಲಿ ನಿಲ್ಲಿಸಿದ್ದ ನಾಲ್ಕರಿಂದ ಐದು ವಾಹನಗಳು ಹಾನಿಗೊಳಗಾಗಿವೆ. ಭಾರತ-ಇಸ್ರೇಲ್ ರಾಜತಾಂತ್ರಿಕ ಸಂಬಂಧಗಳ 29ನೇ ವಾರ್ಷಿಕೋತ್ಸವವಾದ್ದರಿಂದ ಸ್ಫೋಟದ ಬಗ್ಗೆ ಕಳವಳವೂ ಹೆಚ್ಚಾಗಿದೆ.

9 ವರ್ಷಗಳ ಹಿಂದೆ ಇಸ್ರೇಲ್ ಅನ್ನು ಗುರಿಯಾಗಿಸಲಾಗಿತ್ತು
ಈ ಘಟನೆಗೂ ಮೊದಲು ಫೆಬ್ರವರಿ 2012ರಲ್ಲಿ ಇಸ್ರೇಲಿ ರಾಯಭಾರ ಕಚೇರಿಯ ಕಾರನ್ನು ಗುರಿಯಾಗಿಸಲಾಗಿತ್ತು. 2012ರ ಫೆಬ್ರವರಿ 13 ರಂದು ಭಾರತದ ಇಸ್ರೇಲ್ ರಾಯಭಾರಿಯ ಕಾರಿನಲ್ಲಿ ಸ್ಫೋಟ ಸಂಭವಿಸಿತ್ತು. ರಾಯಭಾರಿಯ ಕಾರು ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next