Advertisement

ಅರೇಕಾ ಯುರೇಕಾ!

09:01 AM Jun 18, 2019 | Sriram |

ಅಡಕೆಮರ ಏರುವ ಯಂತ್ರವನ್ನು ರಿಮೋಟ್‌ನಿಂದಲೇ ನಿಯಂತ್ರಿಸಬಹುದು. ಇದು ಎಲ್ಲ ಬೆಳೆಗಾರರೂ ಬಳಸುವಷ್ಟು ಸರಳ. ಯಂತ್ರದ ತೂಕ ಕೇವಲ 20 ಕೆಜಿ ಮಾತ್ರ…

Advertisement

ಅಡಕೆಮರಗಳಿಗೆ ಮಳೆಗಾಲದಲ್ಲಿ ಮದ್ದು ಸಿಂಪಡಿಸಲೇಬೇಕು. ಇಲ್ಲದಿದ್ದರೆ ಕೊಳೆರೋಗ ನಿಶ್ಚಿತ. ಆದರೆ, ಮರವೇರಿ ಔಷಧಿ ಹೊಡೆಯುವವರ ಡಿಮ್ಯಾಂಡ್‌ಗೆ, ಬೆಳೆಗಾರರು ಸುಸ್ತು ಹೊಡೆಯುತ್ತಾರೆ. ಗೊನೆ ತೆಗೆಯುವ ವಿಚಾರದಲ್ಲೂ ಅಷ್ಟೇ. ಬೆಳೆಗಾರರ ಇಂಥ ಚಡಪಡಿಕೆಗಳನ್ನು ನಿವಾರಿಸಿ, ಅವರ ಮೊಗದಲ್ಲಿ ಮುಗುಳ್ನಗೆ ಮೂಡಿಸುವ ಕಾರ್ಯವನ್ನು ಇಲ್ಲೊಂದು ಯಂತ್ರ ಮಾಡಿದೆ. ಇದೇ ಔಷಧಿ ಹೊಡೆಯುತ್ತೆ, ಇದೇ ಗೊನೆ ಇಳಿಸುತ್ತೆ!

ರತ್ನಗಿರಿ ಇಂಪೆಕ್ಸ್‌ ಸಂಸ್ಥೆಯ ಆವಿಷ್ಕಾರವಿದು. ಕಳೆದ ಎರಡು ವರ್ಷಗಳಿಂದ ಆಯ್ದ ಬೆಳೆಗಾರರ ತೋಟಗಳಲ್ಲಿ ನಿರಂತರ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿ ಎಲ್ಲ ವಿಧದಲ್ಲಿಯೂ ಸೂಕ್ತ, ಸುರಕ್ಷಿತ ಎಂದು ಮನದಟ್ಟಾದ ನಂತರವೇ ಸಂಸ್ಥೆ ಇದನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಅಡಕೆಮರ ಏರುವ ಯಂತ್ರವನ್ನು ರಿಮೋಟ್‌ನಿಂದಲೇ ನಿಯಂತ್ರಿಸಬಹುದು. ಇದು ಎಲ್ಲ ಬೆಳೆಗಾರರೂ ಬಳಸುವಷ್ಟು ಸರಳ. ಯಂತ್ರದ ತೂಕ ಕೇವಲ 20 ಕೆಜಿ ಮಾತ್ರ. ಒಬ್ಬನೇ ವ್ಯಕ್ತಿ ಇದನ್ನು ಸರಾಗವಾಗಿ ಮರಕ್ಕೆ ಜೋಡಿಸಬಹುದು. ಮರ ಏರಲು ಹೆಚ್ಚು ಹಿಡಿತವಿರುವ ತ್ರಿಕೋನಾಕೃತಿಯಲ್ಲಿ ರಬ್ಬರ್‌ ಚಕ್ರಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಪಾಚಿಕಟ್ಟಿದ ಮರವನ್ನೂ ಇದು ಸರಾಗವಾಗಿ ಏರಿ ಇಳಿಯಬಲ್ಲದು. ಕೇವಲ ಒಂದೇ ನಿಮಿಷದಲ್ಲಿ ಇದು ಮರ ಏರಿ ಕೆಳಗೆ ಇಳಿಯುತ್ತದೆ.

ಯಂತ್ರದಲ್ಲಿ ಆಂಟೆನಾ ಮಾದರಿಯಲ್ಲಿ ಗೊನೆ ಕತ್ತರಿಸುವ ಸಾಧನ ಅಳವಡಿಸಲಾಗಿದೆ. ಮರ ಏರಿದ ನಂತರ ಬಹಳ ಅಚ್ಚುಕಟ್ಟಾಗಿ ಗೊನೆ ಕತ್ತರಿಸಿ ಕೆಳಗೆ ಹೊತ್ತು ತರುವಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದಾಗಿ ಗೊನೆ ಕೆಳಗೆ ಬಿದ್ದು ಅಡಕೆಹಣ್ಣುಗಳು ಕೆಳಗೆ ಬಿದ್ದು ಚೆಲ್ಲಾಪಿಲ್ಲಿಯಾಗುವ ಸಾಧ್ಯತೆಯೇ ಇಲ್ಲ. ಮಳೆಗಾಲದಲ್ಲಿ ಮದ್ದು ಸಿಂಪಡಿಸುವ ಕೆಲಸವನ್ನು ಇದು ಬಹಳ ಶೀಘ್ರವಾಗಿ ಮಾಡುತ್ತದೆ. ಒಂದು ಮರವೇರಿದರೆ, ಸುತ್ತಲಿನ 15- 20 ಮರಗಳಿಗೆ ಇದು ಶಿಲೀಂಧ್ರನಾಶಕ ಸಿಂಪಡಿಸಬಲ್ಲದು.

ಇದಕ್ಕಾಗಿ ಉದ್ದನೆಯ ಪೈಪ್‌, ಸ್ಪ್ರೆàಯಿಂಗ್‌ ನಾಜಲ್‌ ಅಳವಡಿಸಬೇಕು. ಕೆಳಗಿರುವ ಡ್ರಮ್‌ನಲ್ಲಿ ದ್ರಾವಣ ತುಂಬಿ ಪಂಪ್‌ ಮಾಡುವ ಸಣ್ಣ ಯಂತ್ರ (ಇದು ಸಹ ರತ್ನಗಿರಿ ಇಂಪೆಕÕ… ಸಂಸ್ಥೆಯ ಅಗ್ರಿಮಾರ್ಟ್‌ನಲ್ಲಿ ಲಭ್ಯ) ಬಳಸಬೇಕು. ಎಕ್ಸಲೇಟರ್‌ ಕೊಟ್ಟಷ್ಟೂ ಬಹುದೂರಕ್ಕೆ ದ್ರಾವಣ ಚಿಮ್ಮುತ್ತದೆ. ಮೇಲೇರಿ ಸ್ಪ್ರೆà ಮಾಡುತ್ತಿರುವ ಯಂತ್ರವನ್ನು 360 ಡಿಗ್ರಿಯಲ್ಲಿ ಸುತ್ತಲೂ ತಿರುಗಿಸಬಹುದು. ಯಾವ ದಿಕ್ಕಿಗೆ ಯಂತ್ರ ತಿರುಗಿಸಬೇಕು ಎಂಬುದನ್ನು ಕೆಳಗೆ ನಿಂತು ರಿಮೋಟ್‌ ಹಿಡಿದ ವ್ಯಕ್ತಿಯೇ ನಿರ್ಧರಿಸಬಹುದು.

Advertisement

ಉಳಿತಾಯ
ಕೃಷಿಕಾರ್ಮಿಕರಿಂದ ಗೊನೆ ಕೊಯ್ಯುವ ಕೆಲಸ ಮಾಡಿಸಿದಾಗ 1 ಎಕರೆಗೆ ತಗುಲುವ ಸರಾಸರಿ ವೆಚ್ಚ 12, 500 ರೂ. (ಹನ್ನೆರಡುವರೆ ಸಾವಿರ ರೂಪಾಯಿ) ಈ ಯಂತ್ರ ಬಳಸಿದರೆ 5, 500 ರೂ. (ಐದೂವರೆ ಸಾವಿರ ರೂಪಾಯಿ)ಯಲ್ಲಿ ಕೆಲಸ ಮುಗಿಯುತ್ತದೆ. ಒಂದು ಎಕರೆಗೆ 7, 000 ರೂ. ಉಳಿತಾಯವಾಗುತ್ತದೆ. ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ಕೇವಲ 1 ಲೀಟರ್‌ ಪೆಟ್ರೋಲ್‌ ಬಳಸಿದರೆ 200 ಮರಗಳ ಗೊನೆ ಕೊಯ್ಯುವ/ ಮದ್ದು ಬಿಡುವ ಕೆಲಸವನ್ನು ಮಾಡಬಹುದು. ತೋಟದಲ್ಲಿ ಈ ಯಂತ್ರ ಬಳಸುವ ಸಮಯದಲ್ಲಿ ಇಬ್ಬರೇ ವ್ಯಕ್ತಿಗಳು ಇದ್ದರೂ ಸಾಕು. ಇವರಲ್ಲಿ ಒಬ್ಬರು ರಿಮೋಟ್‌ನಿಂದ ಯಂತ್ರ ನಿಯಂತ್ರಿಸುತ್ತಾರೆ. ಮತ್ತೂಬ್ಬರು ಅದು ಕೊಯ್ದು ಕೆಳಗೆ ತಂದ ಗೊನೆಯನ್ನು ಎತ್ತಿ ಪಕ್ಕಕ್ಕಿಡುತ್ತಾರೆ.

ಆತಂಕಕ್ಕೆ ಆಸ್ಪದವಿಲ್ಲ…
ಯಂತ್ರ ಮರ ಏರಿದ ನಂತರ ಕಳಚಿ ಕೆಳಗೆ ಬಿದ್ದರೆ ಎಂಬ ಆತಂಕಕ್ಕೆ ಅವಕಾಶವೇ ಇಲ್ಲ. ಯಾವುದೇ ಗಾತ್ರದ ಮರವನ್ನಾದರೂ ಯಂತ್ರದ ಚಕ್ರಗಳು ಗಟ್ಟಿಯಾಗಿ ಹಿಡಿದಿರುತ್ತವೆ. ಇದರ ಜೊತೆಗೆ ಚೈನ್‌ ಲಾಕ್‌ ಸಿಸ್ಟಮ್‌ ಕೂಡ ಇದೆ. ಇದರಿಂದ ನಿರ್ಭಯವಾಗಿ ಯಂತ್ರವನ್ನು ಬಳಸಬಹುದು.

ಹೆಚ್ಚಿನ ಮಾಹಿತಿಗೆ: 94808 86513

– ಕುಮಾರ ರೈತ

Advertisement

Udayavani is now on Telegram. Click here to join our channel and stay updated with the latest news.

Next