Advertisement

ಪಶ್ಚಿಮಘಟ್ಟದವರು ಅಭಿವೃದ್ಧಿಯಿಂದ ವಂಚಿತರಾಗಬಾರದಲ್ಲವೇ?

06:00 AM Oct 26, 2018 | |

ಪರಿಸರವಾದಿಗಳು ಪರಿಸರ ಪೂರಕ ಉದ್ಯಮಗಳ ಬಗ್ಗೆ ಮಾತನಾಡುತ್ತಾರೆ. ಅಂಥ‌ ಉದ್ಯಮಗಳು ಯಾವುವು ಎಂದು ಮಾತ್ರ ವಿವರಿಸುವುದಿಲ್ಲ. ಕೆಲವರಂತೂ ಹೈನುಗಾರಿಕೆ ಮಾಡಿ, ಕೋಳಿ ಸಾಕಾಣಿಕೆ ಮಾಡಿ, ಜೇನು ಕೊಯ್ಯಿರಿ, ಉಪ್ಪಗೆ ಹಣ್ಣು ಹೆಕ್ಕಿ ತನ್ನಿ, ಕೌಳಿ ಹಣ್ಣು ಸಂಗ್ರಹಿಸಿ ಬದುಕು ನಡೆಸಿ ಎಂದು ಸಲಹೆ ಕೊಡುತ್ತಾರೆ. ಆದರೆ, ಇವು ಎಷ್ಟು ನಿರುದ್ಯೋಗಿಗಳಿಗೆ ಬದುಕು ನೀಡಬಲ್ಲವು? 

Advertisement

ಪಶ್ಚಿಮಘಟ್ಟದ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಪ್ರೊ. ಮಾಧವ ಗಾಡ್ಗಿàಳ್‌ ಮತ್ತು ಕಸ್ತೂರಿರಂಗನ್‌ ಸಮಿತಿಗಳು ವಿಸ್ತೃತ ವರದಿ ಸಲ್ಲಿಸಿವೆ. ಪ್ರೊ. ಗಾಡ್ಗಿàಳ್‌ರ ವರದಿ ತುಂಬಾ ಕಠಿಣ (harsh) ಆಗಿದ್ದು, ಪರೋಕ್ಷವಾಗಿ ಪಶ್ಚಿಮಘಟ್ಟದ ಸುತ್ತ ಮುಳ್ಳಿನ ತಂತಿಯ ಬೇಲಿ ಹಾಕುವಂತೆ ಸೂಚಿಸುವಂತಿದೆ. ಆದರೆ, ಕಸ್ತೂರಿ ರಂಗನ್‌ ಸಮಿತಿ, ಗಾಡ್ಗಿàಳ್‌ ವರದಿಯನ್ನು ಸ್ವಲ್ಪ ಮೆತ್ತಗಾಗಿಸಿದ್ದು ಮತ್ತು ತಿಳಿಯಾಗಿಸಿದ್ದು (Watered Down), ಪಶ್ಚಿಮಘಟ್ಟದ ನಿವಾಸಿಗಳು ಸ್ವಲ್ಪ ಉಸಿರಾಡುವಂತೆ ಇದೆ ಎಂದು ವಿಶ್ಲೇಷಿಸಲಾಗುತ್ತದೆ.
 
ಮೊದಲ ವರದಿಯನ್ನು ಪರಿಸರವಾದಿಗಳು ಹೃತೂ³ರ್ವಕವಾಗಿ ಸ್ವಾಗತಿಸಿದ್ದರೆ, ಕಸ್ತೂರಿ ರಂಗನ್‌ ವರದಿ ಕೆಲವರ ಹಿತಾಸಕ್ತಿಗೆ ಬಾಗಿದೆ ಎಂದು ಸಂದೇಹಿಸಿದ್ದಾರೆ. ಈ ಎರಡು ವರದಿಗಳ ಬಗೆಗೆ, ಅವುಗಳ ತತ್ಕಾಲೀನ ಮತ್ತು ದೂರಗಾಮಿ ಪರಿಣಾಮಗಳು ಮತ್ತು ಪ್ರಯೋಜನಗಳ ಬಗೆಗೆ ಮಾಧ್ಯಮದಲ್ಲಿ ಮತ್ತು ಪರಿಸರ ಸಂಬಂಧಿ ವೇದಿಕೆಗಳಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ಮಾಧವ ಗಾಡ್ಗಿàಳ್‌ರ ವರದಿ ಬಗೆಗೆ ಪಶ್ಚಿಮಘಟ್ಟ ಶ್ರೇಣಿಯ ಬಹುತೇಕ ರಾಜ್ಯಗಳು ಸಂಪೂರ್ಣವಾಗಿ ಒಪ್ಪಿಲ್ಲವೆಂದು ಹೇಳಲಾಗುತ್ತಿದ್ದು, ಈ ಕಾರಣಕ್ಕಾಗಿಯೇ ಕಸ್ತೂರಿರಂಗನ್‌ ಸಮಿತಿಯನ್ನು ರಚಿಸಲಾಗಿತ್ತು. ಕಸ್ತೂರಿರಂಗನ್‌ ವರದಿ ಗಾಡ್ಗಿàಳ್‌ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸದಿದ್ದರೂ, ಆ ವರದಿಯಲ್ಲಿ ಸಾಕಷ್ಟು ಮಾರ್ಪಾಡು ಮಾಡಿ ಪರಿಸರವಾದಿಗಳನ್ನು ಮತ್ತು ಅಭಿವೃದ್ಧಿಯ ಹರಿಕಾರರನ್ನು, ಹೀಗೆ ಇಬ್ಬರನ್ನೂ ಸಮಾಧಾನಪಡಿಸಲು ಪ್ರಯತ್ನಿಸಿದೆ.

ಈಗ, ಹಸಿರು ನ್ಯಾಯಾಧಿಕರಣದ ಆದೇಶದಂತೆ ಈ ವರದಿಗಳ ಅನ್ವಯ ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ¾ ವಲಯ ಎಂದು ಸಾರುವ ಮತ್ತೂಂದು ಕರಡು ಅಧಿಸೂಚನೆಯನ್ನು ಪ್ರಕಟಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೊದಲು 2014ರಲ್ಲಿ ಕೇಂದ್ರ ಸರಕಾರ ಇಂಥ‌  ಕರಡು ಅಧಿಸೂಚನೆ ಹೊರಡಿಸಿತ್ತು. ಆದರೆ, ಕೇಂದ್ರ ಮತ್ತು ಸಂಬಂಧಪಟ್ಟ ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯಗಳಾದ ಗುಜರಾತ್‌, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡುಗಳೊಂದಿಗೆ ಸಹಮತ ಏರ್ಪಡದಿರುವುದರಿಂದ ಅಧಿಸೂಚನೆ ಬೆಳಕು ಕಾಣಲಿಲ್ಲ. ಪುನಃ ಕೇಂದ್ರ ಸರ್ಕಾರವು, ಅಧಿಸೂಚನೆಯನ್ನು ವಿರೋಧಿಸುವವರ ಸಲಹೆಗಳನ್ನು ಪರಿಗಣಿಸಿ ಈಗ ಇನ್ನೊಂದು ಅಧಿಸೂಚನೆ ಹೊರಡಿಸುವ ತಯಾರಿಯಲ್ಲಿ ಇದೆ. 

ಪಶ್ಚಿಮ ಘಟ್ಟ ಶ್ರೇಣಿಯ ಆರು ರಾಜ್ಯಗಳಲ್ಲಿ, ಐದು ರಾಜ್ಯಗಳು ಸ್ವಲ್ಪ ಬದಲಾವಣೆಯೊಂದಿಗೆ ಇಂಥ ಅಧಿಸೂಚನೆಯನ್ನು ಒಪ್ಪಲು ತಯಾರಿದ್ದರೂ, ಕರ್ನಾಟಕ ಮಾತ್ರ ಸ್ವಲ್ಪ ಬಿಗು ನಿಲುವು ತಳೆದಿದಿದೆೆ. ಅರಣ್ಯ ರಕ್ಷಣೆಗೆ ಈಗಾಗಲೇ ಸಾಕಷ್ಟು ನಿಯಮಾವಳಿಗಳು, ಕಾಯ್ದೆ – ಕಾನೂನುಗಳು ಇದ್ದು, ಇನ್ನೊಂದು ಕಾನೂನಿನ ಅಗತ್ಯವಿದೆಯೇ ಎಂದು ಅರಣ್ಯಮಂತ್ರಿಗಳು ಪ್ರಶ್ನಿಸುತ್ತಿದ್ದಾರೆ. ಅವರು ರಾಜ್ಯದ 1980ರ ಅರಣ್ಯ ಸಂರಕ್ಷಣಾ ಕಾನೂನನ್ನು ಉಲ್ಲೇಖೀಸುತ್ತಾರೆ. ಇಂಥ ಅಧಿಸೂಚನೆಯಿಂದ ರಾಜ್ಯದ ಅರ್ಥಿಕತೆಯ ಮೇಲೆ ಗಂಭೀರ ಪರಿಣಾಮವಾಗುತ್ತದೆ ಎಂದು ಒತ್ತಿ ಹೇಳುತ್ತಾರೆ. ಅವರ ಪ್ರಕಾರ, ಇಂಥ ಕ್ರಮದಿಂದ ಕೆಂಪು ವರ್ಗದ ಉದ್ಯಮಗಳಿಗೆ ಪಶ್ಚಿಮಘಟ್ಟದಲ್ಲಿ ನಿರ್ಬಂಧ ಹೇರಿಕೆಯಾಗಲಿದ್ದು, ಜನಜೀವನದ ಮೇಲೆ ಪರಿಣಾಮ ಬೀರುತ್ತದೆ. 

ಅದರೆ, ಕೆಂಪು ಉದ್ಯಮಗಳೆಂದರೆ ಭಾರೀ ಮಾಲಿನ್ಯ ಉಂಟುಮಾಡುವ ಕೀಟ ನಾಶಕ, ಪೆಟ್ರೋ ಕೆಮಿಕಲ್ಸ್‌, ಕಾಗದ ಮತ್ತು ಸಿಮೆಂಟ್‌ ಕೈಗಾರಿಕೆಗಳು ಆಗಿದ್ದು, ಅವು ಜನಜೀವನದ ಮೇಲೆ ಹೇಗೆ ಪರಿಣಾಮ ಬೀರಬಹುದು ಎನ್ನುವುದನ್ನು ಅವರು ವಿವರಿಸಿಲ್ಲ.

Advertisement

ಪಶ್ಚಿಮಘಟ್ಟ ಪ್ರದೇಶವು ಕೇಂದ್ರ ಸರ್ಕಾರ ಇಚ್ಛಿಸಿದಂತೆ ಪರಿಸರ ಸೂಕ್ಷ¾ ವಲಯ ಪಟ್ಟಿಗೆ ಸೇರ್ಪಡೆಯಾದರೆ, ಈ ಪ್ರದೇಶಗಳಲ್ಲಿ ಹೊಸದಾಗಿ ಉಷ್ಣ ವಿದ್ಯುತ್‌ ಸ್ಥಾವರ, ಪರಿಸರ ಮಾಲಿನ್ಯಕಾರಕ ಕೈಗಾರಿಕೆಗಳು, ಬೃಹತ್‌ ಟೌನ್‌ಶಿಪ್‌ಗ್ಳು ಮುಂತಾದ ನಗರಾಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ಪರಿಸರ ಸಂರಕ್ಷಣೆ ದೃಷ್ಟಿಯಲ್ಲಿ ಕೆಲವು ಉದ್ಯಮಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯದಲ್ಲಿ ಅರ್ಥವಿಲ್ಲದಿಲ್ಲ. ಅದರೆ, ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಅಭಿವೃದ್ಧಿಯನ್ನು ತಡೆಹಿಡಿಯುವುದೂ ಸರಿಯಾದ ಕ್ರಮವಲ್ಲ. ಇಂದು ಪಶ್ಚಿಮಘಟ್ಟದ ಜನರು ಪರಿಸರ ಸಂಬಂಧಿ ಕಾರಣಗಳಿಗಾಗಿ ಅಭಿವೃದ್ಧಿಯಿಂದ ವಂಚಿತರಾಗುತ್ತಿದ್ದಾರೆ. 

ಪಶ್ಚಿಮ ಘಟ್ಟದಲ್ಲಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ 80% ಭೂಮಿಯನ್ನು ಅರಣ್ಯ ವ್ಯಾಪಿಸಿದ್ದು, 829151 ಹೆಕ್ಟೇರ್‌ನಲ್ಲಿ ಅರಣ್ಯವಿದೆ. ಜಿಲ್ಲೆಯ ಅರಣ್ಯವ್ಯಾಪ್ತಿಯ ಬಗೆಗೆ ಗೊಂದಲವಿದೆ. ಆ ಮಾತು ಬೇರೆ. ಕಂದಾಯ ಭೂಮಿ ಸಂಪೂರ್ಣವಾಗಿ ಬಳಕೆಯಾಗುತ್ತಿದ್ದು, ಯಾವುದೇ ಅಭಿವೃದ್ಧಿ ಚಟುವಟಿಕೆಗಳಿಗೆ ಭೂಮಿ ಸಿಗದಂತಾಗಿದೆ. ಒಂದು ಸಾರ್ವಜನಿಕ ಶೌಚಾಲಯ, ಶಾಲೆ-ಕಾಲೇಜು, ಆಸ್ಪತ್ರೆ, ಬಸ್‌ ನಿಲ್ದಾಣ, ರಸ್ತೆ ನಿರ್ಮಿಸಲು, ಉದ್ಯಮ ಸ್ಥಾಪಿಸಲು ಅರಣ್ಯ ಭೂಮಿ ಕೇಳಿ ದಶಕಗಳ ಕಾಲ ಕಾಯುವ ಪರಿಸ್ಥಿತಿ ಇದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ರಸ್ತೆ, ಹೆದ್ದಾರಿ ನಿರ್ಮಾಣ, ರಸ್ತೆ ಅಗಲೀಕರಣ,ರೈಲು ಯೋಜನೆಗಳು ಕನಸಿನ ಮಾತುಗಳಾಗಿವೆ. ಈ ಭಾಗದಲ್ಲಿ ಯಾವುದೇ ಒಂದು ಯೋಜನೆ ಪ್ರಸ್ತಾಪವಾಗಲಿ, ಪರಿಸರವಾದಿಗಳು ಕೂಡಲೇ ತಡೆ ಒಡ್ಡುತ್ತಾರೆ. ವೃಕ್ಷ ಸಂಕುಲ, ಜೀವ ಸಂಕುಲದ ಸಂರಕ್ಷಣೆಯ ಹೆಸರಿನಲ್ಲಿ ವಿರೋಧಿಸುತ್ತಾರೆ. ಪರಿಸರ ಪೂರಕ ಉದ್ಯಮಗಳ ಬಗೆಗೆ ಭಾಷಣ ಕೊರೆಯುತ್ತಾರೆ. ಆ ಪರಿಸರ ಪೂರಕ ಉದ್ಯಮಗಳು ಯಾವುವು ಎಂದು ಮಾತ್ರ ಯಾರೂ ವಿವರಿಸುವುದಿಲ್ಲ. ಕೆಲವರಂತೂ ಹೈನುಗಾರಿಕೆ ಮಾಡಿ, ಕೋಳಿ ಸಾಕಾಣಿಕೆ ಮಾಡಿ, ಜೇನು ಕೊಯ್ಯಿರಿ, ಉಪ್ಪಗೆ ಹಣ್ಣು ಹೆಕ್ಕಿ ತನ್ನಿ, ಕೌಳಿ ಹಣ್ಣು ಸಂಗ್ರಹಿಸಿ ಬದುಕು ನಡೆಸಿ ಎಂದು ಸಲಹೆ ಕೊಡುತ್ತಾರೆ. ಇವು ಕೂಡಾ ಬದುಕನ್ನು ಮುನ್ನಡೆಸುವ ಉದ್ಯೋಗಗಳೇ: ಆದರೆ, ಇವು ಎಷ್ಟು ನಿರುದ್ಯೋಗಿಗಳಿಗೆ ಬದುಕು ನೀಡಬಲ್ಲವು? ಪರಿಸರದ ಹೆಸರಿನಲ್ಲಿ, ಆನೆ ಕಾರಿಡಾರ್‌, ಹುಲಿ ಕಾರಿಡಾರ್‌ ಹೆಸರಿನಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯನ್ನು ನಿಲ್ಲಿಸಲು ಶತಾಯಗತಾಯ ಹೋರಾಟ ನಡೆಸಿದ್ದಾರೆ. ಈ ದೇಶದ ಯಾವ ರೈಲು ಯೋಜನೆಯೂ ಒಳಗಾಗದಂಥ ಸಮಿತಿಗಳ ಅಗ್ನಿ ಪರೀಕ್ಷೆಗೆ ಇದು ಒಳಗಾಗಿದೆ. ಎರಡು ದಶಕಗಳ ನಂತರವೂ, ತೆರಿಗೆದಾರನ 300 ಕೋಟಿ ವ್ಯಯವಾದ ನಂತರವೂ ಈ ರೈಲು ಹಳಿ ಏರಲಿಲ್ಲ. ಇದೇ ಛಲವನ್ನು ಅರಣ್ಯ ಒತ್ತುವರಿಯನ್ನು ತಡೆಯಲು, ಅರಣ್ಯ ಸಂಪತ್ತಿನ ಲೂಟಿಯನ್ನು ತಡೆಯಲು ವ್ಯಯಿಸಿದ್ದರೆ? ಎಂದು ಪ್ರಜ್ಞಾವಂತರು ಕೇಳುತ್ತಾರೆ. ಈ ದೇಶದಲ್ಲಿ ಅರಣ್ಯ ಮಧ್ಯದಲ್ಲಿ ಎಲ್ಲೂ ರೈಲು ಮಾರ್ಗಗಳಿಲ್ಲವೇ? ರೈಲು ಮಾರ್ಗಗಳೇ ಅರಣ್ಯನಾಶಕ್ಕೆ ಕಾರಣವಾದರೆ, ಅನೆ, ಹುಲಿ ಸಂತತಿಗಳ ನಿರ್ನಾಮಕ್ಕೆ ಕಾರಣವಾದರೆ, ಅರಣ್ಯ ಮಧ್ಯೆ ಹಾದು ಹೋಗುವ ಎಲ್ಲಾ ರಸ್ತೆ-ರೈಲು ಮಾರ್ಗಗಳನ್ನು ಮುಚ್ಚಲಿ ಎಂದು ಅಭಿವೃದ್ಧಿ ಹರಿಕಾರರು ಅಕ್ರೋಶ ವ್ಯಕ್ತಪಡಿಸುತ್ತಾರೆ.

ವಿಪರ್ಯಾಸವೆಂದರೆ, ಪಶ್ಚಿಮಘಟ್ಟವನ್ನು ಎಂದೂ ನೋಡದವರು, ಮುಂಬೈ, ಬೆಂಗಳೂರು ಮತ್ತು ದೆಹಲಿಯಲ್ಲಿ ಕುಳಿತು ಪಶ್ಚಿಮಘಟ್ಟದ ಬಗ್ಗೆ, ಅದರ ಸಂರಕ್ಷಣೆಯ ಬಗ್ಗೆ ಮತ್ತು ಅದನ್ನು ಹೇಗೆ No Mans Island ನಂತೆ ಉಳಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಮಾಧ್ಯಮದಲ್ಲಿ ಸುದೀರ್ಘ‌ವಾಗಿ ಬರೆಯುತ್ತಾರೆ, ಮಾತನಾಡುತ್ತಾರೆ. ಇತ್ತೀಚಿನ ಕೊಡಗಿನ ಭೂಕುಸಿತ, ಜಲಪ್ರಳಯಕ್ಕೆ ಹೋಮ್‌ ಸ್ಟೇಗಳು, ರೆಸಾರ್ಟ್‌ಗಳು ಮತ್ತು ಕಾಡಿನಲ್ಲಿ ಕೃಷಿ ಚಟುವಟಿಕೆಗಳೇ ಕಾರಣವೆಂದು ಬರೆದು ಅವರ ಬದುಕಿನ ಆಶಯಕ್ಕೂ ಕೊಡಲಿ ಇಡಲು ಪ್ರಯತ್ನಿಸಿದರು. ಈ ದುರಂತದ ಹಿಂದಿನ ನಿಜವಾದ ಕಾರಣವನ್ನು ಹೊರತೆಗೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಹಾಗೆಯೇ, ಪಶ್ಚಿಮಘಟ್ಟ ನಿವಾಸಿಗಳ ಬದುಕಿನ ಬವಣೆ ಬಗ್ಗೆೆ ಒಂದಕ್ಷರವನ್ನೂ ಬರೆಯಲಿಲ್ಲ. ಇಂದು ಮಲೆನಾಡು ಮತ್ತು ಪಶ್ಚಿಮಘಟ್ಟ ಪ್ರದೇಶದಲ್ಲಿ ಜನರು, ಅಭಿವೃದ್ಧಿಗಾಗಿ ಕಾಯ್ದು ಸುಸ್ತಾಗಿ ಉದ್ಯೋಗ, ವ್ಯವಹಾರ, ಶಿಕ್ಷಣ ಅರಸಿ ನಗರಗಳತ್ತ ಗುಳೇ ಹೋಗುತ್ತಿದ್ದಾರೆ. ಮನೆಗಳು ವೃದ್ಧಾಶ್ರಮಗಳಾಗುತ್ತಿವೆ. ಸ್ಥಳೀಯ ಪತ್ರಿಕೆಗಳಲ್ಲಿ “ತೋಟ ಮಾರಾಟಕ್ಕಿದೆ’ ಜಾಹೀರಾತು ಕಾಣುತ್ತಿದೆ. ಪರಿಸರ ಕಾಳಜಿಗೆ ಅರ್ಥವಿದೆ. ಆದರೆ, ಇದು ಜನರು ನೆಮ್ಮದಿಯ ಬದುಕು ನೀಗಲು ಪೂರಕವಾಗುವಂತೆ ಇರಬೇಕು. ಅವರ ಬೇಕು-ಬೇಡಗಳಿಗೂ ಸ್ಪಂದಿಸಬೇಕು. ಪಶ್ಚಿಮಘಟ್ಟದ ಮಹತ್ವವನ್ನು ಅರಿಯದವರು ಅಲ್ಲಿದ್ದವರ ಬದುಕಿನ ಜಂಜಾಟ-ಸಂಕಟಗಳನ್ನು ತಿಳಿಯದವರು ಅವರ ಭವಿಷ್ಯವನ್ನು ಬರೆಯುವುದು, ಅವರ ಬದುಕಿಗೆ ಮಾರ್ಗದರ್ಶನ ಮಾಡುವುದು ಸರಿಯಲ್ಲ. ಆ ಭಾಗದ ಜನರನ್ನು ಒಳಗೊಳ್ಳದ ನಿರ್ಣಯ, ನಿರ್ಣಯವಾಗದು.

– ರಮಾನಂದ ಶರ್ಮಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next