Advertisement

ನೋಡ ಬನ್ನಿ ಅರ್ಬಿ

11:04 PM Jun 19, 2019 | mahesh |

ಮಳೆಗಾಲದಲ್ಲಿ ಬೋರ್ಗರೆವ ಜಲಪಾತಗಳ ನಡುವೆ ಒಂದಷ್ಟು ಹೊತ್ತು ಕಳೆದರೆ ಮನಸ್ಸಿಗೆ ಹಾಯ್‌ ಎನಿಸುತ್ತದೆ. ಇಡೀ ಜಗತ್ತನ್ನೇ ಮರೆಸುವ ಶಕ್ತಿ ಜಲಪಾತಗಳಿಗಿರುತ್ತವೆ. ತಂಪಾದ ಗಾಳಿ, ಇಂಪಾದ ಹಕ್ಕಿಗಳ ಕಲರವ, ಹಸುರು ತುಂಬಿದ ಪ್ರದೇಶ, ನಿಶ್ಯಬ್ದ ಕಾನನ ಇವಿಷ್ಟು ಸಾಕು ಮನಸ್ಸನ್ನು ಶಾಂತಗೊಳಿಸಲು. ಪ್ರಕೃತಿಯ ಸುಂದರತೆಯನ್ನು ಸವಿಯಬಯಸುವ ಪ್ರಕೃತಿ ಪ್ರಿಯರಿಗೆ ಶೈಕ್ಷಣಿಕ ನಗರಿ ಮಣಿಪಾಲ ದಲ್ಲಿರುವ ಅರ್ಬಿ ಪಾಲ್ಸ್‌ ಕೂಡ ಉತ್ತಮ ಸ್ಥಳ.

Advertisement

ಮಳೆಗಾಲ ಪ್ರಾರಂಭವಾಯಿತೆಂದರೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹಲವಾರು ಜಲಪಾತಗಳು ತಮ್ಮ ಸೌಂದರ್ಯವನ್ನು ವೃದ್ಧಿಸಿಕೊಂಡು ಭೋರ್ಗರೆಯುತ್ತವೆ. ಜನರು ಈ ಜಲಪಾತಗಳಡಿಯಲ್ಲಿ ಜಳಕವಾಡಲು ಮುಗಿ ಬೀಳುತ್ತಾರೆ. ಕರಾವಳಿಯಲ್ಲೂ ಅಲ್ಲಲ್ಲಿ ಪುಟ್ಟ ತೊರೆಗಳು ಮೋಹಕ ಜಲಪಾತಗಳಾಗಿ ಜೀವ ತಳೆಯುವುದು ಸರ್ವೇ ಸಾಮಾನ್ಯ. ಈ ಮಾದರಿಯ ಒಂದು ಜಲಪಾತ ಶೈಕ್ಷಣಿಕ ನಗರಿ ಎಂದೇ ಹೆಸರುವಾಸಿಯಾಗಿರುವ ಮಣಿಪಾಲದ ಹೊರಭಾಗದಲ್ಲಿದೆ. ಇದುವೇ ಅರ್ಬಿ ಜಲಪಾತ.

ಸಾಕಷ್ಟು ಮಳೆ ಸುರಿದರೆ ದಟ್ಟ ಕಾನನದ ನಡುವೆ ಇಳಿಜಾರಿನಲ್ಲಿ ಮೈದುಂಬಿ ಹರಿಯುತ್ತಿದೆ ಅರ್ಬಿ ಜಲಪಾತ. ಈ ಜಲಪಾತವನ್ನು ನೋಡುವುದೇ ಕಣ್ಣುಗಳಿಗೆ ಸೊಗಸು. ತಳುಕುತ್ತಾ ಬಳುಕುತ್ತಾ ಕಲ್ಲಿನಿಂದ ಕಲ್ಲಿಗೆ ಹಂತ ಹಂತವಾಗಿ ಹರಿಯುವಾಗ ಕ್ಷೀರಧಾರೆಯೇ ಹರಿದು ಬಂದಂತಹ ಅನುಭವ.
ಮಣಿಪಾಲದಿಂದ ಅಲೆವೂರಿಗೆ ಹೋಗುವ ರಸ್ತೆಯಲ್ಲಿ ಸುಮಾರು ಎರಡು ಕಿಲೋಮೀಟರ್‌ ಹೋದರೆ ದಶರಥ ನಗರವೆಂಬ ಸ್ಥಳ ಸಿಗುತ್ತದೆ. ಇಲ್ಲಿಂದ ಎಡಕ್ಕೆ ವೈಷ್ಣವಿ ದುರ್ಗಾ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು ಒಂದೂವರೆ ಕಿಲೋಮೀಟರ್‌ ಸಾಗಿದರೆ ಸಿಗುತ್ತದೆ ಅರ್ಬಿ ಜಲಪಾತ.
ನಗರದ ಧಾವಂತದ ಬದುಕಿನಿಂದ ಬೇಸತ್ತವರಿಗೆ ದಿನದ ಒಂದಿಷ್ಟು ಹೊತ್ತು ಪ್ರಕೃತಿ ಮಡಿಲಲ್ಲಿ ವಿಶ್ರಾಂತಿ ಪಡೆಯಲು ಇದು ಹೇಳಿ ಮಾಡಿಸಿದ ಜಾಗ. ಇಲ್ಲಿನ ಪ್ರಶಾಂತ ವಾತಾವರಣ ಒಂದು ಅವ್ಯಕ್ತ ನೆಮ್ಮದಿಯನ್ನು ನೀಡುತ್ತದೆ. ಒಂದೆರಡು ತಾಸು ಅಥವಾ ಅರ್ಧ ದಿನದ ಪಿಕ್‌ನಿಕ್‌ಗೆ ಸೂಕ್ತ ಜಾಗವಿದು.
ಬಹಳ ವರ್ಷಗಳಿಂದ ಪ್ರಕೃತಿಯ ಮಡಿಲಲ್ಲಿ ನಿಶ್ಶಬ್ದವಾಗಿ ಹರಿಯುತ್ತಿದ್ದ ಅರ್ಬಿ ಜಲಪಾತ ಈಗ ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದಾಗಿ ಜನಪ್ರಿಯಗೊಂಡಿದೆ. ಹಲವಾರು ಕವಲುಗಳಾಗಿ ಶುಭ್ರ ನೀರಿನಿಂದ ಹರಿಯುವ ಅರ್ಬಿ ಜಲಪಾತವನ್ನು ನೋಡಲು ಕಾಲೇಜು ವಿದ್ಯಾರ್ಥಿಗಳ ದಂಡೇ ಹರಿದುಬರುತ್ತಿದೆ, ರಜಾದಿನಗಳಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ.
ಜಲಪಾತದ ಪಕ್ಕದಲ್ಲೇ ವೈಷ್ಣವಿದುರ್ಗಾ ದೇವಸ್ಥಾನ ಇದ್ದು ಇಲ್ಲಿಗೆ ಬರುವ ಭಕ್ತರು ದೇವರ ದರ್ಶನ‌ ಪಡೆದು ಈ ಜಲಪಾತದ ಸೊಬಗನ್ನು ಸವಿಯುತ್ತಾರೆ.

ಇಲ್ಲಿಗೆ ಭೇಟಿ ನೀಡಿದ ನಿಸರ್ಗ ಪ್ರಿಯರು ಫೋಟೊ, ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವುದರಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಾರ ಪಡೆಯುತ್ತಿದೆ. ತೀರಾ ಆಳವೂ ಇಲ್ಲ, ರಭಸವೂ ಇಲ್ಲ. ಹೀಗಾಗಿ ನೀರಾಟವಾಡಲು ಚೆನ್ನಾಗಿದೆ. ಮಕ್ಕಳು ಕೂಡಾ ನೀರಿಗಿಳಿದು ಆಡಬಹುದು. ಹಿರಿಯರು, ಕಿರಿಯರು ಕುಟುಂಬ ಸಮೇತರಾಗಿ ಬಂದು ಜಲಧಾರೆಯ ಸೌಂದರ್ಯವನ್ನು ನೋಡಿ ಕಣ್ತುಂಬಿಕೊಳ್ಳುವುದು ಈಗ ಸಾಮಾನ್ಯ ದೃಶ್ಯ.

ಸಾಕಷ್ಟು ಮಳೆಯಾದರೆ ಮಾತ್ರ ಈ ಜಲಪಾತ ತುಂಬಿ ಹರಿಯುತ್ತದೆ. ಹೀಗಾಗಿ ಜೂನ್‌ನಿಂದ ಸೆಪ್ಟಂಬರ್‌ ಮಧ್ಯೆ ಬಂದರೆ ಜಲಪಾತದ ವೈಭವವನ್ನು ಪೂರ್ಣ ಪ್ರಮಾಣದಲ್ಲಿ ವೀಕ್ಷಿಸಬಹುದು. ಸಣ್ಣ ಸಣ್ಣ ತೊರೆಗಳಿಂದ ಸೃಷ್ಟಿಯಾಗಿರುವ ಜಲಪಾತವು ಅಪಾಯಕಾರಿಯಾಗಿಲ್ಲವಾದರೂ ಜಾರುವ ಕಲ್ಲುಗಳ ಮೇಲೆ ನಡೆದಾಡುವಾಗ ಜಾಗ್ರತೆ ವಹಿಸುವುದು ಒಳಿತು.

Advertisement

ಸದಾಕಾಲ ಈ ಜಲಪಾತದಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡುತ್ತಾ ಕಲ್ಲುಬಂಡೆಗಳ ಮೇಲೆ ನಿಂತು ಫೋಟೋ ತೆಗೆಸಿಕೊಂಡು ಜಲಪಾತದ ಸೌಂದರ್ಯವನ್ನು ಸವಿಯುತ್ತಾರೆ. ಜಲಪಾತ ಅಪಾಯಕಾರಿಯಲ್ಲದ ಪರಿಣಾಮ ಮಕ್ಕಳು ನೀರಿನಲ್ಲಿ ಸ್ವತ್ಛಂದವಾಗಿ ಆಟವಾಡುತ್ತಾರೆ.
ಅಂದಹಾಗೆ ನೀವು ಇಲ್ಲಿಗೆ ಭೇಟಿ ನೀಡಿಲ್ಲವಾದರೆ ಮಳೆಗಾಲ ಮುಗಿಯುವುದರೊಳಗೆ ಒಮ್ಮೆ ಭೇಟಿ ಕೊಡಿ, ಒಟ್ಟಿನಲ್ಲಿ ಅರ್ಬಿ ಫಾಲ್ಸ… ನಿಸರ್ಗ ಪ್ರಿಯರಿಗೆ ಹೇಳಿಮಾಡಿಸಿದಂತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ…

ರೂಟ್‌ ಮ್ಯಾಪ್‌
·  ಮಂಗಳೂರಿನಿಂದ ಉಡುಪಿಗೆ 55.9 ಕಿಲೋ ಮೀಟರ್‌
·    ಉಡುಪಿಯಿಂದ ಮಣಿಪಾಲಕ್ಕೆ 8 ಕಿ.ಮೀ. ದೂರವಿದೆ.
·    ಮಣಿಪಾಲದಿಂದ ಅರ್ಬಿ ಫಾಲ್ಸ್‌ಗೆ ಮೂರುವರೆ ಕಿ.ಮೀ. ದೂರವಿದೆ.
·    ದಶರಥ ನಗರದಿಂದ ಕಾಲ್ನಡಿಗೆಯೇ ಉತ್ತ ಮ.
·    ಉಡುಪಿ, ಮಣಿ ಪಾಲದಿಂದ ಸಾಕಷ್ಟು ಬಸ್‌ ಸೌಲಭ್ಯವಿದೆ.
·    ಜೂನ್‌ ತಿಂಗಳಾಂತ್ಯಕ್ಕೆ ಅರ್ಬಿ ಫಾಲ್ಸ್‌ಗೆ ಭೇಟಿ ಕೊಟ್ಟರೆ ಪ್ರಕೃತಿಯ ಸುಂದರ ನೋಟವನ್ನು
ಕಣ್ತುಂಬಿಕೊಳ್ಳಬಹುದು.
·    ಮಣಿಪಾಲ ಹತ್ತಿರದಲ್ಲಿರುವುದರಿಂದ ಊಟ, ವಸತಿ ಸಮಸ್ಯೆಯಿಲ್ಲ.

-   ಊರ್ಮಿಳಾ

Advertisement

Udayavani is now on Telegram. Click here to join our channel and stay updated with the latest news.

Next