Advertisement

ಹೇ..! ಎಪ್ರಿಲ್‌ ಫೂಲ್‌ : ಇದು ಮೂರ್ಖರ ಅಲ್ಲಲ್ಲ ; ಮೂರ್ಖರ ದಿನದ ಕಥೆ

12:25 AM Apr 01, 2021 | Team Udayavani |

ಎಪ್ರಿಲ್‌ 1 ತುಂಬಾ ವಿಶೇಷವಾದ ದಿನ. ವರ್ಷದ 365 ದಿನಗಳ ಪೈಕಿ ಜನರು ಲಘುವಾಗಿ ತೆಗೆದುಕೊಳ್ಳುವ ದಿನ ಇದು. ವ್ಯಕ್ತಿಯೋರ್ವ ಇಂದು ತಾನು ಮೂರ್ಖನಾಗಿ ಇತರರನ್ನು ಮೂರ್ಖರನ್ನಾಗಿಸುವ ದಿನ. ಈ ದಿನಕ್ಕೂ ಮೂರ್ಖತನಕ್ಕೂ ಏನೂ ಸಂಬಂಧವಿಲ್ಲವಾದರೂ ಬಹು ಹಿಂದಿನಿಂದಲೂ ಈ ದಿನವನ್ನು “ಮೂರ್ಖರ ದಿನ’ ಎಂದು ಕರೆಯುತ್ತಾ ಬರಲಾಗಿದೆ. ಇತರರಿಗೆ ಏನಾದರೂ ಸುಳ್ಳು ಹೇಳಿ ನಂಬುವಂತೆ ಮಾಡಿ ಮೂರ್ಖರನ್ನಾಗಿಸುತ್ತಾರೆ. ಬೇರೆಯವರು ಆ ಸುಳ್ಳನ್ನು ನಂಬಿ ಬೇಸ್ತು ಬಿದ್ದರೆ ಕೊನೆಗೆ ಅವರಿಗೆ ನಿಜ ವಿಷಯವನ್ನು ಹೇಳಿ “ಎಪ್ರಿಲ್‌ ಫ‌ೂಲ್‌’ ಎಂದು ಜೋರಾಗಿ ನಗುತ್ತಾರೆ. ಇಲ್ಲಿ ಅವರ ಸುಳ್ಳನ್ನು ನಂಬಿದವರೇ ಮೂರ್ಖರು. ಕೆಲವೊಮ್ಮೆ ಜನರು ಬೇರೆಯವರನ್ನು ಮೂರ್ಖರನ್ನಾಗಿಸಲು ಹೋಗಿ ತಾವೇ ಮೂರ್ಖರಾಗುವ ಸ್ವಾರಸ್ಯಕರ ಪ್ರಸಂಗ ಗಳೂ ನಡೆಯುವುದುಂಟು. ಬಹುತೇಕರು ಈ ದಿನ ದಂದು ಒಂದಲ್ಲ ಒಂದು ರೀತಿಯಲ್ಲಿ ಮೂರ್ಖ ರಾಗುವ ಘಟನೆಗಳು ನಡೆದೇ ನಡೆಯುತ್ತವೆ.

Advertisement

ಉಲ್ಲೇಖಗಳು ಏನು? :

ಈ ದಿನದ ಕುರಿತಂತೆ ಹಲವಾರು ಕಥೆಗಳಿವೆ. ಪ್ರಾಚೀನ ಕಾಲದಲ್ಲಿ ರೋಮನ್ನರು ಎಪ್ರಿಲ್‌ 1 ಅನ್ನು ಹೊಸ ವರ್ಷವೆಂದು ಆಚರಿಸುತ್ತಿದ್ದರಂತೆ. ಕೆಲವು ಚಾರಿತ್ರಿಕ ದಾಖಲೆಗಳ ಪ್ರಕಾರ ಎಪ್ರಿಲ್‌ ಫ‌ೂಲ್‌ ಪರಂಪರೆಯ ಆದಿಯನ್ನು 1582ರ ಫ್ರಾನ್ಸ್‌ನ ಇತಿಹಾಸದಲ್ಲಿ ಗುರುತಿಸಲಾಗುತ್ತದೆ. 1581ರ ಹೊಸ ವರ್ಷದ ಸಂದರ್ಭವನ್ನು ಎಂಟು ದಿನಗಳ ಕಾಲ ಆಚರಿಸಲಾಗಿತ್ತು. ಎಪ್ರಿಲ್‌ 1ರಂದು ಕೊನೆಯ ದಿನವಾಗಿತ್ತು. ಚಾಲ್ಸ್ ದೊರೆಯು ಗ್ರೆಗೋರಿಯನ್‌ ಕ್ಯಾಲೆಂಡರನ್ನು ಜಾರಿಗೊಳಿಸಿದ ಅನಂತರ ಹೊಸ ವರ್ಷಾಚರಣೆಯನ್ನು ಜ.1ಕ್ಕೆ ಬದಲಾಯಿಸಲಾಗಿತ್ತು. ಆ ಕಾಲದಲ್ಲಿ ಸಂಪರ್ಕ ಮಾಧ್ಯಮ ಸೀಮಿತವಾಗಿದ್ದ ಪರಿಣಾಮ ಈ ಬದಲಾವಣೆಯ ಸುದ್ದಿ ಅನೇಕ ದೇಶಗಳಿಗೆ ತಲು ಪಲು ಹಲವು ವರ್ಷಗಳೇ ಬೇಕಾಯಿತು. ಕೆಲವು ಸಂಪ್ರದಾಯಸ್ಥರು ಹೊಸ ಕ್ಯಾಲೆಂಡರ್‌ ಅನ್ನು ಒಪ್ಪಿಕೊಳ್ಳದೆ ಎ. 1ರಂದೇ ಹೊಸ ವರ್ಷಾಚರಣೆ ಮಾಡುತ್ತಿದ್ದರು. ಅವರನ್ನು  ಮೂರ್ಖರೆಂದು ಕರೆಯಲಾರಂಭಿಸಿದರು. ಈ ಸಮುದಾಯಗಳು ಜನರಿಂದ ಅಪಹಾಸ್ಯಕ್ಕೀಡಾದವು.  ಕ್ರಮೇಣ ಒಂದು ಪರಂಪರೆಯಾಗಿ ಬೆಳೆದು ಎ.1 ಮೂರ್ಖ ರನ್ನಾಗಿ ಮಾಡುವ ದಿನವಾಗಿ ಆಚರಿಸಲ್ಪಡುತ್ತಿದೆ.

ಹಲವು ಹೆಸರುಗಳು :

ಇದು 18ನೇಯ ಶತಮಾನದಲ್ಲಿ ಸ್ಕಾಟ್ಲೆಂಡ್‌ ಮತ್ತು ಇಂಗ್ಲೆಂಡಿಗೂ ವಿಸ್ತರಣೆಗೊಂಡು, ಬ್ರಿಟಿಷ್‌ ಮತ್ತು ಫ್ರೆಂಚ್‌ ವಸಾಹತುಗಳಲ್ಲೂ ಬೆಳೆಯಿತು. ಹಾಗಾಗಿ ಎಪ್ರಿಲ್‌ ಫ‌ೂಲ್‌ ದಿನಾಚರಣೆ ಜಾಗತಿಕ ಹಾಸ್ಯ ಹಬ್ಬವಾಗಿ ಪರಿಣಮಿಸಿ ವಿವಿಧ ದೇಶಗಳಲ್ಲಿ ವಿಭಿನ್ನ ಸ್ವರೂಪಗಳಲ್ಲಿ ವ್ಯಕ್ತವಾಗತೊಡಗಿತು. ಕಾಲಕ್ರಮೇಣ ಜನಸಾಮಾನ್ಯರನ್ನು ಕುಚೇಷ್ಟೆ ಮಾಡುವುದು ಸರ್ವವ್ಯಾಪಿಯಾಗತೊಡಗಿತು. ಇಂಗ್ಲೆಂಡಿನಲ್ಲಿ ಎಪ್ರಿಲ್‌ 1ರ ಮುಂಜಾನೆ ಮಾತ್ರ ಕುಚೇಷ್ಟೆ ಮಾಡಲಾಗುತ್ತದೆ. ಮಧ್ಯಾಹ್ನದ ಅನಂತ ರ ಕುಚೇಷ್ಟೆ ಮಾಡುವುದು ಒಳಿತಲ್ಲವಂತೆ. ರೋಮ್‌ನಲ್ಲಿ ಈ ದಿನವನ್ನು ಹಿಲೇರಿಯಾ ಹಬ್ಬ ಎಂದು ಆಚರಿಸಲಾಗುತ್ತದೆ.

Advertisement

ಬೇಸರಿಸಿಕೊಳ್ಳಬೇಡಿ: ಸಣ್ಣ ಪುಟ್ಟ ಜೋಕು ಗಳೊಂದಿಗೆ ಇಲ್ಲ ಸಲ್ಲದ ಸುದ್ದಿಗಳನ್ನು ಹೇಳಿ ಮೂರ್ಖರನ್ನಾಗಿಸಲಾಗುತ್ತದೆ. ಇದು ಕೇವಲ ತಮಾಷೆಗಾಗಿ ಮಾಡುವ ಕೃತ್ಯಗಳಾದ್ದರಿಂದ ಯಾರೂ ಬೇಸರಿಸಿಕೊಳ್ಳುವುದೂ ಇಲ್ಲ.

ಇವುಗಳಲ್ಲಿ ನಾವೂ ನೀವು ಸೇರಿದ್ದೇವೆ… :

 

  • ವಾಹನವನ್ನು ಸದಾ ಎಡಭಾಗದಿಂದಲೇ ಓವರ್‌ ಟೇಕ್‌ ಮಾಡುವುದು.
  • ಹೆಲ್ಮೆಟ್‌ ಕೈಯಲ್ಲಿ ಹಿಡಿದು ಗಾಡಿ ಓಡಿಸುವುದು.
  • ಮನೆಯಿಂದ ದಿನಾ ಲೇಟಾಗಿ ಹೊರಟು ಸಿಗ್ನಲ್‌ ಜಂಪ್‌ ಮಾಡುವುದು. ಬಸ್‌, ರೈಲು ಮಿಸ್ಸಾದರೆ ಬೈಯುವುದು.
  • ಇಂದು ಬೇಗ ಮಲಗಿ ನಾಳೆ ಬೇಗ ಏಳುತ್ತೇನೆ ಎಂಬುದು.
  • ನೋಟ್ಸ್‌, ಅಸೈನ್‌ಮೆಂಟ್‌ ಎಲ್ಲವನ್ನೂ ಕಡೆಯ ಕ್ಷಣದಲ್ಲಿ ಮಾಡುವುದು, ಪರೀಕ್ಷೆಗೆ ಸಿದ್ಧರಾಗುವುದೂ ಕಡೆಯ ದಿನ.
  • ಮನೆಯಲ್ಲಿ ಅಡುಗೆ ಮಾಡಲು ಉದಾಸೀನವಾಗಿ, ಇವತ್ತು ಹೊರಗೆ ತಿನ್ನೋಣ, ನಾಳೆ ರೂಂ ಅಲ್ಲಿ ಅಡುಗೆ ಮಾಡೋಣ ಎಂದು ಸ್ವಿಗ್ಗಿ, ಝೊಮೆಟೋಗೆ ಆರ್ಡರ್‌ ಮಾಡುವ ಜನ.
  • ಇಡೀ ದಿನ ತಮ್ಮ ಕೆಲಸಕಾರ್ಯಗಳೆಲ್ಲವನ್ನು ಬಿಟ್ಟು ಟಿವಿಯ ಮುಂದುಗಡೆ ಕುಳಿತು ಕ್ರಿಕೆಟ್‌ ನೋಡಿ ತಂಡ ಸೋತ ಮೇಲೆ ಇದೆಲ್ಲ ಫಿಕ್ಸಿಂಗ್‌ ಎನ್ನುವುದು.
  • ತಿಂಗಳಿಡೀ ಮನೆಯ ಎಲ್ಲ ದೀಪಗಳನ್ನು ಉರಿಸಿ ಬಿಲ್‌ ಬಂದ ಮೇಲೆ ಕೈಸುಟ್ಟುಕೊಳ್ಳುವುದು.
  • ಬ್ಯಾಂಕ್‌ ಕೆಲಸ, ತೆರಿಗೆ ಪಾವತಿ, ಎಕ್ಸಾಂ ಫೀ ಎಲ್ಲವನ್ನು ಕೊನೇ ದಿನ ತುಂಬುವುದು.
  • ನಾಳೆ ನೋಟ್ಸ್‌ ತೋರಿಸುತ್ತೇನೆ, ನೋಟ್ಸ್‌ ಮನೆಯಲ್ಲೇ ಬಾಕಿ ಎಂಬುದು.
  • ಬಸ್‌ಪಾಸ್‌ ಅನ್ನು ತರಲು ಮರೆತು ಕಂಡಕ್ಟರ್‌ ಪಾಸ್‌ ಚೆಕ್‌ ಮಾಡುವ ಸಂದರ್ಭ ನನ್ನಲ್ಲೂ ಪಾಸ್‌ ಇದೆ ಎಂದು ತೋರಿಸಲು ಸುಮ್ಮನೆ ಜೇಬಿಗೆ ಕೈ ಹಾಕುವುದು.

ಪ್ರತೀ ದಿನ ಮೂರ್ಖರ ದಿನ; ಆದರೆ ಯಾರಿಗೆ? :

ಕೋವಿಡ್‌ ಬಳಿಕ ಜನ ಜೀವನವೇ ತುಂಬಾ ಕಠಿನವಾಗಿದೆ. ಮುಕ್ತವಾಗಿ ನಗುವುದಕ್ಕೂ ಸಮಯವಿಲ್ಲದೆ ಕಚೇರಿ, ಮನೆ ಇತರ ಕಾರ್ಯದಲ್ಲೇ ಜನರು ಬ್ಯುಸಿ ಆಗಿದ್ದಾರೆ. ಆದರೆ ಪ್ರತೀ ದಿನ ಒಂದಲ್ಲ ಒಂದು ಸನ್ನಿವೇಶಗಳಲ್ಲಿ ಜನರು ಮರುಳಾಗುತ್ತಿದ್ದಾರೆ. ಆಳುವ ಸರಕಾರಗಳ ಘೋಷಣೆಗಳು, ರಾಜಕೀಯ ಪಕ್ಷಗಳ ಕಲರ್‌ಫ‌ುಲ್‌ ಭರವಸೆಗಳು ಯಾವತ್ತೂ ಈಡೇರುವುದೇ ಇಲ್ಲ. ಎಲ್ಲ ಹಳ್ಳಿಗಳಿಗೂ ವಿದ್ಯುತ್‌ ಸಂಪರ್ಕ ಎಂಬ ಆಶ್ವಾಸನೆಯನ್ನು ನಂಬಿದ ಜನ 7 ದಶಕಗಳಿಂದಲೂ ಮೂರ್ಖರಾಗುತ್ತಲೇ ಇ¨ªಾರೆ. ನಮ್ಮನ್ನಾಳುವವರು ದಿನ ನಿತ್ಯವೂ ಜನರನ್ನು ಎಪ್ರಿಲ್‌ ಫ‌ೂಲ್‌ ಮಾಡುತ್ತಿರುತ್ತಾರೆ.

ಈಗ ಪಂಚರಾಜ್ಯಗಳಲ್ಲಿ ಚುನಾವಣೆಯ ಸಮಯ. ಸುಳ್ಳು, ಪೊಳ್ಳು ಭರವಸೆಗಳ‌ನ್ನೇ ನಾಯಕರು ಅಲ್ಲಿ ಸುರಿಯತೊಡಗಿದ್ದಾರೆ.

ಪರೀಕ್ಷೆ ರದ್ದು ! :

“ರಾಜ್ಯ ಶಿಕ್ಷಣ ವ್ಯವಸ್ಥೆಯೇ ಅಲ್ಲೋಲಕಲ್ಲೋಲವಾಗುವ ಸುದ್ದಿಯೊಂದನ್ನು ಬ್ರೇಕ್‌ ಮಾಡಿದ್ದೇವೆ.’ “ಐ ಲೈಕ್‌ ಎಜುಕೇಶನ್‌ ವಿಥೌಟ್‌ ಎಕ್ಸಾಮಿನೇಶನ್‌’ ಎಂಬ ವಾಟ್ಸ್‌ ಆ್ಯಪ್‌ ಸ್ಟೇಟಸ್‌ಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ ವಾರ್ಷಿಕ ಪರೀಕ್ಷೆಗಳನ್ನು ರದ್ದುಗೊಳಿಸಲು ಮುಂದಾ ಗಿದೆ. ಈ ಕುರಿತಂತೆ ಇಲಾಖೆ “ಕೂ’ ಮೂಲಕ ಮಾಹಿತಿ ಹಂಚಿಕೊಂಡಿದ್ದು, ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದೆ. ಇದು ರಾಜ್ಯಾದ್ಯಂತ ವಿದ್ಯಾರ್ಥಿಗಳಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಆದರೆ ಹೆತ್ತವರು ಮತ್ತು ಆಗ ತಾನೆ ಶಿಕ್ಷಣ ಮುಗಿಸಿದವರು ಈ ಕ್ರಮವನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಬೆನ್ನಲ್ಲೆ ತಾನು “ಕೂ’ ಮೂಲಕ ನೀಡಿದ ಮಾಹಿತಿಯನ್ನು ಇಲಾಖೆ ಡಿಲೀಟ್‌ ಮಾಡಿದ್ದು, “ಕಣ್ತಪ್ಪಿನಿಂದ ಪ್ರಕಟವಾಗಿದೆ. ಅಂಥ ಯಾವುದೇ ಪ್ರಸ್ತಾವ ಇಲ್ಲ’ ಎಂದು ಹೇಳಿ ಪ್ರಕರಣಕ್ಕೆ ತೆರೆ ಎಳೆದಿದೆ.

ಇಂಟರ್‌ನೆಟ್‌ ಬಂದ್‌! :

ರಾಜ್ಯದಲ್ಲಿ ನಡೆಯುತ್ತಿರುವ ಕೆಲವು ಘಟನೆ ಗಳಿಗೆ ಸಾಮಾಜಿಕ ಮಾಧ್ಯಮಗಳು ಪರೋಕ್ಷವಾಗಿ ಕಾರಣವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂಟರ್‌ನೆಟ್‌ ಬ್ಯಾನ್‌ ಮಾಡುವ ನಿರ್ಧಾರವನ್ನು ಸರಕಾರ ಕೈಗೊಂಡಿದೆ. ಮಾಹಿತಿ ಪ್ರಕಾರ ಸಿ.ಡಿ. ಪ್ರಕರಣ ಬೆಳಕಿಗೆ ಬಂದ ಬಳಿಕ ಕೆಲವು ಸಚಿವರು, ಶಾಸಕರು ಇಂಟರ್‌ನೆಟ್‌ ಬಂದ್‌ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದರು. ಈ ವಿಚಾರ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಿದ್ದು, ಸರ್ವಾನುಮತ ದಿಂದ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಕೋವಿಡ್ ಮುಗಿದ ಬಳಿಕ ಇದು ಜಾರಿಯಾಗಲಿದೆ. ಕೋವಿಡ್ ಎರಡನೇ ಅಲೆ ರಾಜ್ಯದಲ್ಲಿ ಭೀಕರವಾಗಿದ್ದು, ಇದು ಹೀಗೆ ಮುಂದುವರಿದರೆ ಮತ್ತೆ ಆನ್‌ಲೈನ್‌ ಶಿಕ್ಷಣ ಮತ್ತು ವರ್ಕ್‌ ಫ್ರಮ್‌ ಹೋಂನ ಆವಶ್ಯಕತೆ ಇದೆ. ಹೀಗಾಗಿ ಸದ್ಯ ಇದರ ಜಾರಿ ಇಲ್ಲ. ಅಂದಹಾಗೆ ಸಂಪುಟ ಸಭೆಗೆ ಮಾನ್ಯ ಶಿಕ್ಷಣ ಸಚಿವರು ಗೈರಾಗಿದ್ದರು.

ರಾಜ್ಯದಲ್ಲಿ  ಸಿ.ಡಿ. ಬ್ಯಾನ್‌! :

ರಾಜ್ಯದಲ್ಲಿ ಸಿ.ಡಿ. ವಿಚಾರ ತೀವ್ರ ಚರ್ಚೆಗೀಡಾಗುತ್ತಿದೆ. ಈ ಕುರಿತಂತೆ ಸರಕಾರದ ಮಟ್ಟದಲ್ಲಿ ಸಮಾನ ಮನಸ್ಕರ ಸಭೆ ನಡೆದಿದ್ದು, ಇದರಲ್ಲಿ ಸಿ.ಡಿ.ಯನ್ನು ರಾಜ್ಯದಲ್ಲಿ  ಬ್ಯಾನ್‌ ಮಾಡಲು ಚಿಂತನೆ ನಡೆಸಲಾಗಿದೆ.  ರಾಜಕಾರಣಿಗಳ ಮಾನ ಕಾಪಾಡಿಕೊಳ್ಳಲು ಇದು ಸರಿಯಾದ ನಡೆ ಎಂದು ಹೆಸರು ಹೇಳಲು ಇಚ್ಛಿಸದ ನಾಯಕರು ಅಭಿ ಪ್ರಾಯಪಟ್ಟಿದ್ದಾರೆ. ಈ ಬೆನ್ನಲ್ಲೇ ಖ್ಯಾತ ಹಾರ್ಡ್‌ಡಿಸ್ಕ್ ಮತ್ತು ಪೆನ್‌ಡ್ರೈವ್‌ ತಯಾ ರಕ ಸಂಸ್ಥೆ ತನ್ನ ಉತ್ಪನ್ನ ಗಳ ಮೇಲೆ ಶೇ. 65ರ ವಿನಾಯಿತಿ ನೀಡಿದೆ. ಹೀಗಾಗಿ ಸಿ.ಡಿ. ಬದಲು ಹಾರ್ಡ್‌ ಡಿಸ್ಕ್/ ಪೆನ್‌ಡ್ರೈವ್‌ಗೆ ಬೇಡಿಕೆ ಬಂದಿದೆ. ಇದು ಹೆಚ್ಚು ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು, ಕಾಪಿ ವೇಗವೂ ಹೆಚ್ಚಾಗಿದೆ. ಸಹಜವಾಗಿಯೇ ಸಿ.ಡಿ. ದಂಧೆಕೋರರು ಇದೀಗ ಹಾರ್ಡ್‌ಡಿಸ್ಕ್, ಪೆನ್‌ಡ್ರೈವ್‌ಗಳ ಮೊರೆ ಹೋಗಿದ್ದಾರೆ.

ಶಾಲಾ  ಶುಲ್ಕ ಇಲ್ಲ ! :

ದೇಶದಲ್ಲಿ ಮುಂದಿನ ವರ್ಷದಿಂದ ಶಿಕ್ಷಣ ಸಂಪೂರ್ಣ ಉಚಿತವಾಗಲಿದೆ. ಯಾವುದೇ ಬೋಧನ ಶುಲ್ಕಗಳನ್ನು ನೀಡಬೇಕಾಗಿಲ್ಲ ಎಂದು “ಅವರು’ ಹೇಳಿದ್ದಾರೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದ್ದು ಶಿಕ್ಷಣದ ಗುಣಮಟ್ಟದ ಜತೆಗೆ ಶೇ. 100ರ ಸಾಕ್ಷರತೆ ಸಾಧ್ಯವಾಗಲಿದೆ. ಈ ನಿರ್ಧಾರದಿಂದ ಸರಕಾರದ ಖಜಾನೆಗೆ ಕೋಟ್ಯಂತರ ರೂ. ಗಳ ಹೊರೆ ಬೀಳಲಿದೆ ಎಂದು ಹೇಳಲಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ  ರಾಜ್ಯ ಆರ್ಥಿಕ ಸಂಕಷ್ಟದಲ್ಲಿದೆ. ಹೀಗಾಗಿ ಸದ್ಯಕ್ಕೆ ಅಂಥ ಯಾವುದೇ ಯೋಜನೆಯ ಜಾರಿ ಇಲ್ಲ ಎಂದು ಸರಕಾರ ಇದೇ ವೇಳೆ ಸ್ಪಷ್ಟ ಪಡಿಸಿದೆ.

ಮಳೆಗಾಲದ ಅವಧಿ ವಿಸ್ತರಣೆ! :

ರಾಜ್ಯದಲ್ಲಿ ಈ ಬಾರಿ ಮಳೆಗಾಲದ ಅವಧಿಯನ್ನು ಬದಲಾಯಿಸಲು ಚಿಂತನೆ ನಡೆದಿದೆ. ಇಡೀ ವರ್ಷದ ಮಳೆ ಜೂನ್‌-ಜುಲೈ-ಅಗಸ್ಟ್‌ ತಿಂಗಳಲ್ಲಿ ಸುರಿಯುವ ಬದಲು ಅದನ್ನು ಎಲ್ಲ ತಿಂಗಳುಗಳಲ್ಲಿ ಸುರಿಯುವಂತೆ ಮಾಡಲು ಚಿಂತಿಸಲಾಗಿದೆ. ಯಾಕೆಂದರೆ ಈ ಮೂರು ತಿಂಗಳುಗಳಲ್ಲಿ ಜಲಪ್ರಳಯ ಸಂಭವಿಸಿ ಪ್ರಾಣ ಹಾನಿ ಮತ್ತು ಭಾರೀ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗುತ್ತದೆ. ಹೀಗಾಗಿ ಪ್ರಾಕೃತಿಕ ವಿಕೋಪ ತಪ್ಪಿಸಲು ಸರಕಾರ ಈ ನಡೆ ಅನುಸರಿಸಿದೆ. ಮಲೆನಾಡು ಮತ್ತು ಕರಾವಳಿಯಲ್ಲಿ ಹೆಚ್ಚು ಮಳೆ ಸುರಿಯುವ ಕಾರಣ ಅದನ್ನು ಉತ್ತರಕ್ಕೆ ಕೊಂಡೊಯ್ಯಲೂ ಚರ್ಚೆ ನಡೆದಿದೆ. ಈ ಮಳೆಗಾಲದ ಅವಧಿ ವಿಸ್ತರಣೆಗೆ ಕರ್ನಾಟಕ ಸಮ್ಮತಿ ಸೂಚಿಸಿದ್ದು, ಗಡಿ ಹಂಚಿಕೊಂಡಿರುವ ಇತರ ರಾಜ್ಯಗಳು ಇನ್ನಷ್ಟೇ ತೀರ್ಮಾನ ಕೈಗೊಳ್ಳಬೇಕಿದೆ. ಆದರೆ ಕೇರಳ ಮತ್ತು ತಮಿಳುನಾಡಿನಲ್ಲಿ ಚುನಾವಣೆ ನಡೆಯುತ್ತಿದ್ದು, ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸರಕಾರ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವಂತಿಲ್ಲ.

ಇವು ನೆನಪಿರಲಿ :

  1. ದಿನದ ಹಿನ್ನೆಲೆಯಲ್ಲಿ ಯಾರನ್ನೂ ನೋಯಿಸಲು ಪ್ರಯತ್ನಿಸಬೇಡಿ. ಬದಲಾಗಿ ಸದಾ ನಗು ಮತ್ತು ಹಾಸ್ಯಕ್ಕೆ ದಿನವನ್ನು ಸೀಮಿತವಾಗಿರಿಸಿ. ಪ್ರಾಂಕ್‌ ಕರೆಗಳನ್ನು ಮಾಡಿ, ಸುಳ್ಳುಗಳನ್ನು ಹೇಳಿ. ಆದರೆ ಯಾರಿಗೂ ತಪ್ಪು ಮಾಹಿತಿಯನ್ನು ನೀಡಬೇಡಿ. ಅದರಲ್ಲೂ ಮುಖ್ಯವಾಗಿ ಕೋವಿಡ್‌ ಕುರಿತಂತೆ ಸುಳ್ಳು ಸಂದೇಶ ರವಾನೆಯಾಗುವುದು ಬೇಡ.
  2. ಇಡೀ ದಿನ ಎಪ್ರಿಲ್‌ ಪೂಲ್‌ ಎನ್ನುತ್ತಾ ಇರಬೇಡಿ. ಬೆಳಗ್ಗೆ  ಮಾತ್ರ ಇದು ಹೆಚ್ಚು ಪರಿಣಾಮಕಾರಿ. ಮಧ್ಯಾಹ್ನದ ಬಳಿಕ ಇದು ತನ್ನ ಸ್ವಾದವನ್ನು ಕಳೆದುಕೊಳ್ಳುತ್ತದೆ.
Advertisement

Udayavani is now on Telegram. Click here to join our channel and stay updated with the latest news.

Next