Advertisement

ಕ್ವಾರಂಟೈನ್‌ ಕೇಂದ್ರಕ್ಕೊಬ್ಬ ನೋಡಲ್‌ ಅಧಿಕಾರಿ ನೇಮಿಸಿ: ಕೋಟ

01:27 PM May 20, 2020 | mahesh |

ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲ 4 ಸಾವಿರದಷ್ಟು ಮಂದಿ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇದ್ದು ಪ್ರತಿ ಕ್ವಾರಂಟೈನ್‌ ಕೇಂದ್ರ ಕ್ಕೊಬ್ಬರಂತೆ ನೋಡೆಲ್‌ ಅಧಿಕಾರಿಯನ್ನು ನೇಮಿಸಬೇಕು. ಅಲ್ಲಿನ ಉಸ್ತುವಾರಿ ಅವರೇ ನೋಡಿಕೊಳ್ಳಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Advertisement

ಅವರು ಮಂಗಳವಾರ ಅಪರಾಹ್ನ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಕ್ವಾರಂಟೈನ್‌ ಕೇಂದ್ರಗಳ ನಿರ್ವಹಣೆ ಕುರಿತು ಸಭೆ ನಡೆಸಿ, ವಿಎ, ಗ್ರಾಮಸಹಾಯಕ, ಪಿಡಿಒ ಅವರನ್ನು ನೇಮಿಸಬೇಕು. ಹೆಚ್ಚುವರಿ ಅಧಿಕಾರಿಗಳು ಬೇಕಾದರೆ ಬೇರೆಡೆಯಿಂದ ತರಿಸಬೇಕು ಎಂದರು.

ಕ್ವಾರಂಟೈನ್‌ ಕೇಂದ್ರದಲ್ಲಿ ಇರುವ ಗರ್ಭಿಣಿಯರು, ಹಿರಿಯ ನಾಗರಿಕರು, ಮಕ್ಕಳ ಸ್ವಾಬ್‌ ಟೆಸ್ಟ್‌ ಮಾಡಿ ನೆಗೆಟಿವ್‌ ಬಂದ ಕೂಡಲೇ ಹೋಂ ಕ್ವಾರಂಟೈನ್‌ಗೆ ಒಳಪಡಿಸಿ ಎಂದರು. ಕ್ವಾರಂಟೈನ್‌ ಕೇಂದ್ರದಲ್ಲಿ ಇರುವ ಮಕ್ಕಳಿಗೆ ಸ್ಥಳೀಯ ಅಂಗನವಾಡಿಯವರು ಹಾಲು ಖರೀದಿಸಿ ಬಿಸಿ ಮಾಡಿ ನೀಡಬೇಕು. ಇದರ ವೆಚ್ಚ ಜಿಲ್ಲಾಡಳಿತ ನೀಡಲಿದೆ. ಕ್ವಾರಂಟೈನ್‌ ಕೇಂದ್ರದಲ್ಲಿರುವವರಿಗೆ ತುರ್ತು ಆವಶ್ಯಕ ಸಾಮಾಗ್ರಿ ನೀಡಿದರೆ ಅದರ ಬಿಲ್‌ ಕೂಡಾ ಸರಕಾರವೇ ಭರಿಸಲಿದೆ. ಕ್ವಾರಂಟೈನ್‌ ಕೇಂದ್ರಗಳ ಕಸ ವಿಲೇವಾರಿಯನ್ನು ಬಯೋ ಮೆಡಿಕಲ್‌ ತ್ಯಾಜ್ಯ ನಿರ್ವಹಣೆ ಮಾಡುವ ನಿಗದಿತ ಸಂಸ್ಥೆ ಮಾಡಬೇಕಿದ್ದು ಪುರಸಭೆ ವ್ಯಾಪ್ತಿಯಲ್ಲಿ ಆಗುತ್ತಿದೆ. ಇತರೆಡೆ ಪಿಡಿಒಗಳು ತತ್‌ಕ್ಷಣ ಕ್ರಮ ಜರಗಿಸಬೇಕು ಎಂದರು. ಮುಖ್ಯಮಂತ್ರಿಗಳ ಸೂಚನೆಯಂತೆ ತಾತ್ಕಾಲಿಕವಾಗಿ ಸೇವಾ ಸಿಂಧು ಆ್ಯಪ್‌ ಬಂದ್‌ ಆಗಿರುವುದರಿಂದ ಅಕ್ರಮವಾಗಿ ಹೊರ ರಾಜ್ಯದಿಂದ ಬರುವವರ ಮೇಲೆ ನಿಗಾ ವಹಿಸಲಾಗುವುದು ಎಂದರು.

ಕೆಎಸ್‌ಆರ್‌ಟಿಸಿ ವತಿಯಿಂದ ಬೆಂಗಳೂರಿಗೆ 8, ಹುಬ್ಬಳ್ಳಿಗೆ 1 ಬಸ್‌, ಬೈಂದೂರು, ಸಿದ್ದಾಪುರ ಮೊದಲಾದ 5 ಮಾರ್ಗಗಳಿಗೆ ಬಸ್‌ ಬಿಡಲಾಗಿದೆ. ರಾಜ್ಯದ ಇತರ ಊರುಗಳಿಗೆ ಬೇಡಿಕೆ ಬಂದಿಲ್ಲ. ಬೇಡಿಕೆ ಬಂದಂತೆ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ ಎಂದು ಡಿಪೋ ಮೆನೇಜರ್‌ ರಾಜೇಶ್‌ ತಿಳಿಸಿದರು. ಖಾಸಗಿ ಬಸ್‌ ಇಲ್ಲದ ವೇಳೆ ಕೆಎಸ್‌ಆರ್‌ಟಿಸಿ ಸೇವೆ ನೀಡಿದರೆ ಜನರ ಬಳಿಗೆ ತಲುಪಬಹುದು ಎಂದು ಸಚಿವರು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್‌ ಉಡುಪ, ಎರಡು ತಾಲೂಕಿನ ಕ್ವಾರಂಟೈನ್‌ ಕೇಂದ್ರಗಳಲ್ಲಿ ಒಟ್ಟು 60 ಗರ್ಭಿಣಿಯರಿದ್ದು 40 ಜನರ ಪರೀಕ್ಷೆ ಆಗಿದೆ. 447 ಮಕ್ಕಳಿದ್ದಾರೆ. ಕುಂದಾಪುರ ತಾಲೂಕಿನ 44 ಕೇಂದ್ರಗಳಲ್ಲಿ 1,740 ಜನ, ಬೈಂದೂರು ತಾಲೂಕಿನ 27 ಕೇಂದ್ರಗಳಲ್ಲಿ 2,247 ಜನರಿದ್ದಾರೆ. ಈ ಪೈಕಿ 487 ಜನರ ಗಂಟಲದ್ರವ ಮಾದರಿ ಕಳುಹಿಸಲಾಗಿದೆ. ವರದಿ ಬಂದಿಲ್ಲ. 16 ಲ್ಯಾಬ್‌ ಟೆಕ್ನಿಶಿಯನ್‌ ಇದ್ದಾರೆ. ಒಬ್ಬರ ತಪಾಸಣೆಗೆ 12 ನಿಮಿಷ ಬೇಕಾಗುತ್ತದೆ. ಕಿಯೋಸ್ಕ್ಗಳ ಕೊರತೆಯಿದೆ. 1 ದಿನದಲ್ಲಿ 150 ಮಂದಿಯ ಮಾದರಿ ಸಂಗ್ರಹಿಸಬಹುದು ಎಂದು ವಿವರಿಸಿದರು.

Advertisement

ಬೈಂದೂರು ಆಸ್ಪತ್ರೆ ವೈದ್ಯಾಧಿಕಾರಿ ಡಾ| ಪ್ರೇಮಾನಂದ್‌, ಮೂರು ಜಿಲ್ಲೆಗೆ ಒಂದೇ ಪ್ರಯೋಗಾಲಯ ಇದ್ದ ಕಾರಣ ವರದಿ ವಿಳಂಬವಾಗುತ್ತಿತ್ತು. ಪ್ರಯೋಗಾಲಯದಲ್ಲಿ ದಿನವೊಂದಕ್ಕೆ 250 ವರದಿ ಸಿದ್ಧವಾಗುತ್ತದೆ. ಉಡುಪಿ ಜಿಲ್ಲೆಯ 60ರಷ್ಟು ವರದಿ ಬರುತ್ತದೆ. ಈವರೆಗೆ 1,918 ವರದಿ ಬಂದಿದ್ದು 542 ಫ‌ಲಿತಾಂಶ ವರದಿ ಬಾಕಿ ಇದೆ ಎಂದರು.
ಬಿಸಿಎಂ ಹಾಸ್ಟೆಲ್‌ನ 54 ಸಿಬಂದಿಯನ್ನು ಕ್ವಾರಂಟೈನ್‌ ಸೇವೆಗೆ ಬಳಸಬಹುದು ಎಂದು ಬಿಸಿಎಂ ಅಧಿಕಾರಿ ಮಾದಾರ್‌ ಹೇಳಿದರು.

ಎಎಸ್‌ಪಿ ಹರಿರಾಮ್‌ ಶಂಕರ್‌, ಪ್ರತಿದಿನ ಕ್ವಾರಂಟೈನ್‌ ಕೇಂದ್ರದಲ್ಲಿ ದಿಢೀರ್‌ ಹಾಜರಿ ಕರೆಯಲಾಗುವುದು. ಹೊರಗೆ ಹೋದವರ ಮೇಲೆ, ಅವರನ್ನು ಬಂದು ಸಂಪರ್ಕಿಸುವವರ ಮೇಲೆ, ಕೇಂದ್ರದಲ್ಲಿ ಅನಧಿಕೃತ ವ್ಯಕ್ತಿಗಳಿದ್ದರೆ ಅವರ ಮೇಲೆ ಕೇಸು ದಾಖಲಿಸಲಾಗುವುದು ಎಂದರು.
ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ಜಿ. ಪಂ. ಸದಸ್ಯರಾದ ಬಾಬು ಹೆಗ್ಡೆ ತಗ್ಗರ್ಸೆ, ಗೌರಿ ದೇವಾಡಿಗ, ತಾ. ಪಂ.ಅಧ್ಯಕ್ಷೆ ಶ್ಯಾಮಲಾ ಕುಂದರ್‌, ಉಪಾಧ್ಯಕ್ಷ ರಾಮ್‌ಕಿಶನ್‌ ಹೆಗ್ಡೆ, ಸದಸ್ಯರಾದ ಪ್ರವೀಣ್‌ಕುಮಾರ ಶೆಟ್ಟಿ ಕಡೆR, ಕರಣ್‌ ಪೂಜಾರಿ, ಕಾರ್ಯ ನಿರ್ವಹಣಾಧಿಕಾರಿಗಳಾದ ಕೇಶವ್‌ ಶೆಟ್ಟಿಗಾರ್‌, ಭಾರತಿ, ತಹಶೀಲ್ದಾರ್‌ಗಳಾದ ತಿಪ್ಪೇಸ್ವಾಮಿ, ಬಿ.ಪಿ.ಪೂಜಾರ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ಗಳಾದ ಗೋಪಿಕೃಷ್ಣ, ಸುರೇಶ್‌ ನಾಯಕ್‌, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next