Advertisement

ಮಾ. 23ರಿಂದ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಕೆ ಆರಂಭ

10:06 PM Mar 18, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ 15 ಸಾವಿರ ಶಿಕ್ಷಕ ಹುದ್ದೆ ನೇಮಕಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ಆಕಾಂಕ್ಷಿಗಳಿಗೆ ರಾಜ್ಯ ಸರಕಾರವು ಸಿಹಿ ಸುದ್ದಿ ನೀಡಿದೆ.

Advertisement

ಪದವೀಧರ ಪ್ರಾಥಮಿಕ ಶಾಲಾ (6-8ನೇ ತರಗತಿ) ಶಿಕ್ಷಕರ ನೇಮಕಾತಿಗಾಗಿ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಮೇ 21 ಮತ್ತು 22ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಸಿಇಟಿ ಪರೀಕ್ಷೆ ನಡೆಸುವ ಸಂಬಂಧ ಮಾ. 21ರಂದು ವೇಳಾಪಟ್ಟಿ ಪ್ರಕಟಿಸಲಿದ್ದು, ಮಾ. 23ರಿಂದ ಎ. 22ರ ವರೆಗೆ ಒಂದು ತಿಂಗಳ ಕಾಲ ಅರ್ಜಿ ಸಲ್ಲಿಸಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ.

ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ಸಾವಿರ ಹುದ್ದೆಗಳು ಕಲ್ಯಾಣ ಕರ್ನಾಟಕಕ್ಕೆ ಮತ್ತು ಉಳಿದ 10 ಸಾವಿರ ಹುದ್ದೆಗಳು ರಾಜ್ಯದ ಇತರ ಜಿಲ್ಲೆಗಳಿಗೆ ನೇಮಕ ಮಾಡಲಾಗುತ್ತದೆ. ಪ್ರಮುಖವಾಗಿ ಈ ಹಿಂದೆ ಎರಡು ಬಾರಿ ನಡೆಸಿದ ಸಿಇಟಿಯಲ್ಲಿ ಇಂಗ್ಲಿಷ್‌, ಗಣಿತ, ವಿಜ್ಞಾನ, ಜೀವ ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಕಡಿಮೆ ಸಂಖ್ಯೆಯ ಶಿಕ್ಷಕರು ನೇಮಕವಾಗಿದ್ದರು. ಈ ಬಾರಿ ಈ ವಿಷಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಅರ್ಹತಾ ಅಂಕ ಕಡಿಮೆ :

2017ರ ಸಿಇಟಿಯಲ್ಲಿ 10 ಸಾವಿರ ಹುದ್ದೆಗಳಿಗೆ ಕೇವಲ 3,389 ಮತ್ತು 2019ರಲ್ಲಿ 10,565 ಹುದ್ದೆಗಳಿಗೆ 1,994 ಅಭ್ಯರ್ಥಿಗಳು ಮಾತ್ರ ಅರ್ಹತೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಸಿಇಟಿ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಅರ್ಹತಾ ಮಾನದಂಡದ ಅಂಕಗಳನ್ನು ಕಡಿಮೆ ಮಾಡಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಪತ್ರಿಕೆ-2ರಲ್ಲಿ ಈವರೆಗೆ ಅರ್ಹತೆ ಪಡೆಯಲು ಶೇ. 50 ಅಂಕಗಳನ್ನು ಪಡೆಯಬೇಕಿತ್ತು. ಪ್ರಸಕ್ತ ಪರೀಕ್ಷೆಯಲ್ಲಿ ಕನಿಷ್ಠ ಅರ್ಹತೆಯಲ್ಲಿ ಶೇ. 45 ಅಂಕಗಳಿಗೆ ಇಳಿಸಲಾಗಿದೆ. ಅದೇ ರೀತಿ ಪತ್ರಿಕೆ-3ರಲ್ಲಿ ಶೇ. 60 ಇದ್ದ ಅರ್ಹತಾ ಅಂಕವನ್ನು ಶೇ. 50ಕ್ಕೆ ಇಳಿಸಲಾಗಿದೆ.

Advertisement

ಸಿಇಟಿಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗಳು ಮೂರು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಪತ್ರಿಕೆ-1 ಸಾಮಾನ್ಯ ಜ್ಞಾನ 150 ಅಂಕಗಳಿರಲಿದ್ದು, ಬಹು ಆಯ್ಕೆ ಮಾದರಿಯಲ್ಲಿರುತ್ತದೆ. ಈ ಪರೀಕ್ಷೆಯಲ್ಲಿ ಯಾವುದೇ ಕನಿಷ್ಠ ಅರ್ಹತೆ ಪಡೆಯುವ ಅಗತ್ಯವಿಲ್ಲ. ಆದರೆ, ಒಟ್ಟಾರೆ ಅಂಕಗಳನ್ನು ಪರಿಗಣಿಸಲಾಗುತ್ತದೆ. ಪತ್ರಿಕೆ-2 ಅಭ್ಯರ್ಥಿಗಳು ಬೋಧಿಸುವ ವಿಷಯಗಳ ಐಚ್ಛಿಕ ವಿಷಯಗಳಾಗಿರುತ್ತವೆ. 150 ಅಂಕಗಳಿಗೆ ಪರೀಕ್ಷೆ ಇರುತ್ತದೆ. ಪತ್ರಿಕೆ-3 ಆಯಾ ಭಾಷಾ ಮಾಧ್ಯಮಗಳು (ಕನ್ನಡ, ಇಂಗ್ಲಿಷ್‌, ಹಿಂದಿ, ತಮಿಳು, ತೆಲಗು, ಉರ್ದು) 100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದರು.

ತೃತೀಯ ಲಿಂಗಿಗಳಿಗೂ ಅವಕಾಶ :

ಈ ಬಾರಿಗೆ ಮಾತ್ರ ಅನ್ವಯವಾಗುವಂತೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ತಲಾ 2 ವರ್ಷಗಳ ವಯೋಮಿತಿ ಸಡಿಲಿಸಲಾಗಿದೆ. ಇದೇ ಮೊದಲ ಬಾರಿಗೆ ಶೇ. 1ರಷ್ಟು ಹುದ್ದೆಗಳನ್ನು ತೃತೀಯ ಲಿಂಗಿಗಳಿಗೆ ಮೀಸಲಿಡಲಾಗಿದೆ.

30 ಸಾವಿರ ಖಾಲಿ ಹುದ್ದೆ :

ಪ್ರಾಥಮಿಕ ಶಾಲೆಗಳಲ್ಲಿ (1-8ನೇ ತರಗತಿ) ಸುಮಾರು 30 ಸಾವಿರಕ್ಕಿಂತ ಹೆಚ್ಚಿನ ಶಾಲಾ ಶಿಕ್ಷಕರ ಕೊರತೆ ಇದೆ. ಇಂಗ್ಲಿಷ್‌ನಲ್ಲಿ ಸುಮಾರು 2,500, ಗಣಿತದಲ್ಲಿ 20 ಸಾವಿರ, ಸಮಾಜ ವಿಜ್ಞಾನ 6 ಸಾವಿರ, ಜೀವ ವಿಜ್ಞಾನ 4 ಸಾವಿರ ಹುದ್ದೆಗಳು ಖಾಲಿ ಇವೆ. ಈ ಬಾರಿ ಗಣಿತ ಸಮಾಜ ವಿಷಯಗಳ ಶಿಕ್ಷಕರ ಹುದ್ದೆ ಭರ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶಿಕ್ಷಕರ ಕೊರತೆ ನೀಗಿಸುವುದಕ್ಕಾಗಿ ಪ್ರತೀ ವರ್ಷ ಎರಡು ಬಾರಿ ಟಿಇಟಿ ಮತ್ತು ಒಂದು ಬಾರಿ ಸಿಇಟಿ ಮೂಲಕ ಶಿಕ್ಷಕರ ನೇಮಕಾತಿ ನಡೆಸಲಾಗುತ್ತದೆ. ಹಾಲಿ ಸುಮಾರು 1.5 ಲಕ್ಷ ಟಿಇಟಿ ಅರ್ಹತೆ ಹೊಂದಿರುವವರು ಇದರಲ್ಲಿ ಒಂದು ಲಕ್ಷ ಜನ ಸಮಾಜಶಾಸ್ತ್ರ ವಿಷಯದಲ್ಲಿಯೇ ಅರ್ಹತೆ ಹೊಂದಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌. ಸೆಲ್ವಕುಮಾರ್‌ ಹಾಗೂ ಆಯುಕ್ತ ಡಾ| ಆರ್‌. ವಿಶಾಲ್‌ ಉಪಸ್ಥಿತರಿದ್ದರು.

ಶಿಕ್ಷಕರ ಕೊರೆ ನೀಗಿಸುವ ಉದ್ದೇಶದಿಂದ 15 ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದ್ದು, ಮುಂದಿನ 6ರಿಂದ 8 ತಿಂಗಳಿನಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ.ಬಿ.ಸಿ. ನಾಗೇಶ್‌, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

ಯಾವ ವಿಷಯಗಳಿಗೆ ಎಷ್ಟು ಶಿಕ್ಷಕರ ಹುದ್ದೆ? :

ವಿಷಯ               / ಕಲ್ಯಾಣ ಕರ್ನಾಟಕ/  ಇತರ ಜಿಲ್ಲೆಗಳಿಗೆ/            ಒಟ್ಟು

ಇಂಗ್ಲಿಷ್‌              /250/     1,250/   1,500

ಗಣಿತ, ವಿಜ್ಞಾನ/              2,000     /4,500   /6,500

ಸಮಾಜ              2,250/   2,750     /5000

ಜೀವ ವಿಜ್ಞಾನ/ 500/       1,500     /2,000

ಒಟ್ಟು   5,000     /10,000 / 15,000

Advertisement

Udayavani is now on Telegram. Click here to join our channel and stay updated with the latest news.

Next