Advertisement

ಅಮಿತ್‌ ಶಾಗೆ ಶಾಸಕಿ ರೂಪಾಲಿ ಭೇಟಿ : ಹಾಲಕ್ಕಿ ಒಕ್ಕಲಿಗರನ್ನು ಎಸ್ಟಿಗೆ ಸೇರಿಸಲು ಮನವಿ

05:59 PM Oct 16, 2021 | Team Udayavani |

ಕಾರವಾರ: ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು. ಈ ಸಂಬಂಧ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕೆಂದು ಶಾಸಕಿ ರೂಪಾಲಿ ಎಸ್‌. ನಾಯ್ಕ ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಮನವಿ ಸಲ್ಲಿಸಿದ್ದಾರೆ. ಗುರುವಾರ ಗೋವಾಕ್ಕೆ ಆಗಮಿಸಿದ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಅವರು ಕ್ಷೇತ್ರದ ಅಭಿವೃದ್ಧಿ, ಸೀಬರ್ಡ್‌ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರೆಂದು ಪರಿಗಣಿಸುವುದು, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಅನುಷ್ಠಾನ, ನೌಕಾನೆಲೆಯಲ್ಲಿ ಶಿಪ್‌ ಯಾರ್ಡ್‌ ಹಾಗೂ ಸರ್ವೀಸ್‌ ಇಂಡಸ್ಟ್ರೀ ಸ್ಥಾಪನೆಯ ಮೂರು ಮುಖ್ಯ ಬೇಡಿಕೆಗಳನ್ನು ಗೃಹ ಸಚಿವರಿಗೆ ಲಿಖೀತ ರೂಪದಲ್ಲಿ ನೀಡಿದರು.

Advertisement

ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕೆನ್ನುವುದು ಸುಮಾರು 1.50 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಹಾಲಕ್ಕಿ ಒಕ್ಕಲಿಗರ ಬಹುಕಾಲದ ಬೇಡಿಕೆಯಾಗಿದೆ. ಪದ್ಮಶ್ರೀ ಸುಕ್ರಿ ಗೌಡ ಹಾಗೂ ಪದ್ಮಶ್ರೀ ತುಳಸಿ ಗೌಡ ಹಾಲಕ್ಕಿ ಸಮುದಾಯದಿಂದ ಬಂದು ನಾಡಿಗೆ, ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಹಾಲಕ್ಕಿ ಒಕ್ಕಲಿಗರ ಬಗ್ಗೆ ಈಗಾಗಲೆ ವೈಜ್ಞಾನಿಕ ಅಧ್ಯಯನ ನಡೆಸಲಾಗಿದೆ ಹಾಗೂ ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸನ್ನೂ ಮಾಡಲಾಗಿದೆ. ಹಾಲಕ್ಕಿ ಒಕ್ಕಲಿಗರ ಈ ನ್ಯಾಯಯುತ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಬೇಕು. ಹಾಲಕ್ಕಿ ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಸಹ ವಿವರಿಸಿದರು.

ನಿರಾಶ್ರಿತರ ಕುಟುಂಬಕ್ಕೊಂದು ಉದ್ಯೋಗ: ಸೀಬರ್ಡ್‌ ನೌಕಾನೆಲೆಯಲ್ಲಿ 4,604 ಕುಟುಂಬಗಳು ನಿರಾಶ್ರಿತರಾಗಿವೆ. ಈಗ 968 ಜನರಿಗೆ ಉದ್ಯೋಗ ನೀಡಲಾಗಿದೆ. ದೇಶದ ರಕ್ಷಣೆಗಾಗಿ ತ್ಯಾಗ ಮಾಡಿದ ಉಳಿದ ನಿರಾಶ್ರಿತರ ಪ್ರತಿ ಕುಟುಂಬಕ್ಕೊಂದು ಉದ್ಯೋಗ ನೀಡುವಂತಾಗಬೇಕು ಎಂದು ಮನವಿ ಮಾಡಿದರು.

ಸೀಬರ್ಡ್‌ ನೌಕಾನೆಲೆ ನಿರಾಶ್ರಿತರು ದೇಶದ ರಕ್ಷಣೆಗಾಗಿ ತಮ್ಮ ಆಸ್ತಿಪಾಸ್ತಿಯನ್ನು ತ್ಯಾಗ ಮಾಡಿದ್ದಾರೆ. ಈ ಕಾರಣಕ್ಕಾಗಿ ಇವರನ್ನು ರಾಷ್ಟ್ರೀಯ ಸಂತ್ರಸ್ತರೆಂದು ಪರಿಗಣಿಸಿ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ, ಇತರ ಸೌಲಭ್ಯ ಕಲ್ಪಿಸಿ ಅವರು ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿದರು.

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ: ಪ್ರಧಾನಿಮಂತ್ರಿಗಳಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರು ಶಿಲಾನ್ಯಾಸ ಮಾಡಿದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಕಾನೂನು ಹಾಗೂ ಪರಿಸರದ ತೊಡಕಿನಿಂದ ಸ್ಥಗಿತಗೊಂಡಿದೆ. ಈ ರೈಲು ಮಾರ್ಗಕ್ಕೆ ಇರುವ ಕಾನೂನಿನ ಅಡ್ಡಿ ಆತಂಕಗಳನ್ನು ನಿವಾರಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಕರಾವಳಿಯ ಪ್ರದೇಶದ ಅಭಿವೃದ್ಧಿಯ ಬಾಗಿಲು ತೆರೆಯುವ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಬೇಕು ಎಂದು ಮನವಿ ಮಾಡಿದರು.

Advertisement

ನೌಕಾನೆಲೆಯಲ್ಲಿ ಶಿಪ್‌ ಯಾರ್ಡ್‌ ನಿರ್ಮಾಣ: ನೌಕಾನೆಲೆಯಲ್ಲಿ ಶಿಪ್‌ ಯಾರ್ಡ ನಿರ್ಮಾಣ, ನೌಕಾನೆಲೆಗೆ ಅಗತ್ಯವಿರುವ ಉಪಕರಣ, ಸಾಮಗ್ರಿಗಳ ಉತ್ಪಾದನೆಗೆ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಮೂಲಕ ನಿರಾಶ್ರಿತರು ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ದೊರಕಿಸಿಕೊಟ್ಟು, ಈ ಪ್ರದೇಶದ ಆರ್ಥಿಕ ಚಟುವಟಿಕೆಗಳ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕೆಂದು ಶಾಸಕರು ವಿನಂತಿಸಿದರು.

ಸುವರ್ಣ ಸೌಧದ ಎದುರು ಧರಣಿ ನಡೆಸಲು ನಿರ್ಧಾರ

ಜಿಲ್ಲೆಯ ಹಾಲಕ್ಕಿ ಒಕ್ಕಲಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒತ್ತಾಯಿಸಿ ಮುಂಬರುವ ಬೆಳಗಾವಿ ಅಧಿವೇಶನ ಸಮಯದಲ್ಲಿ ಸುವರ್ಣ ಸೌಧದ ಎದುರು ಒಂದು ದಿನದ ಧರಣಿ ನಡೆಸಿ ಕರ್ನಾಟಕ ಸರಕಾರದ ಮುಖಾಂತರ ಕೇಂದ್ರ ಸರಕಾರಕ್ಕೆ ಒತ್ತಡ ಹಾಕಲು ನಿರ್ಧರಿಲಾಗಿದೆ ಎಂದು ಮಾಜಿ ಶಾಸಕ ಸತೀಶ್‌ ಸೈಲ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಜ್ಜಿ ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ತನ್ನ ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸಲು ನಿರ್ಧರಿಸಿದ್ದೇನೆ ಎಂಬ ಹೇಳಿಕೆ ಕೊಟ್ಟ ಹಿನ್ನೆಲೆಯಲ್ಲಿ ಗುರುವಾರ ಅಂಕೋಲಾ ತಾಲೂಕಾ ಕಾಂಗ್ರೆಸ್‌ ನಾಯಕರೊಂದಿಗೆ ಸುಕ್ರಜ್ಜಿಯವರ ನಿವಾಸಕ್ಕೆ ತೆರಳಿ ಅವರ ಬೇಡಿಕೆಗಳನ್ನು ಆಲಿಸಲಾಯಿತು. ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಹಾಲಕ್ಕಿ ಸಮಾಜದ ಬೇಡಿಕೆ ನ್ಯಾಯ ಸಮ್ಮತವಾಗಿದ್ದು, ಈ ಬೇಡಿಕೆ ಈಡೇರಿಸಲು ಯಾವ ಮಟ್ಟದ ಹೋರಾಟಕ್ಕೂ ಸಿದ್ಧ. ಇಡೀ ಉತ್ತರ ಕನ್ನಡದ ಜನತೆ ಹಾಲಕ್ಕಿ ಒಕ್ಕಲಿಗರ ಬೆನ್ನಿಗಿದ್ದಾರೆ ಎಂಬ ಭರವಸೆಯನ್ನೂ ಸುಕ್ರಜ್ಜಿಯವರಿಗೆ ನೀಡಲಾಯಿತು.

ಪದ್ಮಶ್ರೀ ಪ್ರಶಸ್ತಿ ಹಿಂತಿರುಗಿಸ ಬೇಡಿ ಎಂದು ಸುಕ್ರಜ್ಜಿ ಯವರಿಗೆ ಮನವರಿಕೆ ಮಾಡಲಾಯಿತು. ತದನಂತರ ಅಲ್ಲಿಯೇ ಅಂಕೋಲಾ ಹಾಲಕ್ಕಿ ಸಮುದಾಯ ನಾಯಕರು ಹಾಗೂ ಇತರ ಮುಖಂಡರು ಈ ಕುರಿತು ಗಂಭೀರ ಚರ್ಚೆ ನಡೆಸಿ ಹಾಲಕ್ಕಿ ಒಕ್ಕಲಿಗರ ಬೇಡಿಕೆ ಈಡೇರಿಕೆಗಾಗಿ ಪûಾತೀತ ಹೋರಾಟದ ಅವಶ್ಯಕತೆ ಇದ್ದು, ಇದರ ಪ್ರಾರಂಭಿಕ ಹಂತವಾಗಿ ಕರ್ನಾಟಕ ವಿಧಾನ ಮಂಡಲದ ಮುಂಬರುವ ಬೆಳಗಾವಿ ಅಧಿವೇಶನ ಸಮಯದಲ್ಲಿ ಧರಣಿ ನಡೆಸಿ ಮುಖ್ಯ ಮಂತ್ರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಕೆಗಾಗಿ ಒತ್ತಡ ಹೇರಲು ನಿರ್ಧರಿಸಲಾಯಿತು.

ಸಮಾಲೋಚನಾ ಸಭೆ ಬಳಿಕ ಹಾಜರಿದ್ದ ಹಾಲಕ್ಕಿ ಸಮಾಜದ ಮತ್ತು ಇತರ ನಾಯಕರೊಂದಿಗೆ ಹಾಲಕ್ಕಿ ಸಮಾಜದ ಜಿಲ್ಲಾಧ್ಯಕ್ಷ ವೈದ್ಯ ಹನುಮಂತ ಬೊಮ್ಮು ಗೌಡರನ್ನು ಭೇಟಿಯಾಗಿ ಧರಣಿ ನಿರ್ಧಾರದ ಕುರಿತು ಅವರೊಡನೆ ಚರ್ಚಿಸಲಾಯಿತು. ವೈದ್ಯ ಹನುಮಂತ ಗೌಡರು ಈ ನಿರ್ಧಾರಕ್ಕೆ ತಮ್ಮ ಪೂರ್ಣ ಸಹಮತ ಸೂಚಿಸಿ, ಕೇಂದ್ರ ಮಟ್ಟದಲ್ಲಿ ಈವರೆಗೆ ನಡೆದ ಪ್ರಯತ್ನದ ಪೂರ್ಣ ವಿವರಗಳನ್ನು ದಾಖಲೆಗಳ ಮೂಲಕ ನಮ್ಮೊಂದಿಗೆ ಚರ್ಚಿಸಿ ಹಾಲಕ್ಕಿ ಒಕ್ಕಲಿಗರ ಬೇಡಿಕೆ ಈಡೇರಿಕೆಗಾಗಿ ಇಡೀ ಉತ್ತರ ಕನ್ನಡ ಜನತೆಯ ಬೆಂಬಲ ಪûಾತೀತ ವಾಗಿ ಅತಿ ಅವಶ್ಯಕವಾಗಿದೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು.

ಸಮಾಲೋಚನಾ ಸಭೆಯಲ್ಲಿ ಮಾಜಿ ಶಾಸಕ ಕೆ.ಎಚ್‌. ಗೌಡ, ರಮಾನಂದ ಬಿ. ನಾಯಕ, ಪಾಂಡುರಂಗ ಗೌಡ, ಪ್ರಕಾಶ್‌ ಗೌಡ , ಪಾಂಡು ಗೌಡ, ಸುಜಾತ ಗಾಂವ್ಕರ, ಮಂಜೇಶ್ವರ ನಾಯಕ ಬೇಲೀಕೆರಿ, ಕೆ. ಶಂಭು ಶೆಟ್ಟಿ, ವಿನೋದ ಗಾಂವ್ಕರ್‌, ಸುಕ್ರು ಗೌಡ, ಮಾದೇವ ಗೌಡ, ಮಂಜುನಾಥ್‌ ಡಿ. ನಾಯ್ಕ, ಯುವ ಮುಖಂಡರಾದ ಮಂಜುನಾಥ್‌ ನಾಯ್ಕ, ಸುರೇಶ್‌ ನಾಯ್ಕ ಅಸ್ಲಾಗದ್ದೆ, ಲೋಕೇಶ್‌ ಮತ್ತಿತರು ಇದ್ದರು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next