Advertisement

ಕಬ್ಬು ಬೆಳೆಗಾರರಲ್ಲಿ ಆತಂಕದ ಕಾರ್ಮೋಡ

03:09 PM Nov 19, 2018 | Team Udayavani |

ಸಿರುಗುಪ್ಪ: ಈ ವರ್ಷ ಕಾರ್ಖಾನೆ ಆರಂಭಿಸುವುದಿಲ್ಲ ಎಂದು ದೇಶನೂರು ಗ್ರಾಮದಲ್ಲಿರುವ ಎನ್‌.ಎಸ್‌. ಎಲ್‌. ಶುಗರ್ ಕಾರ್ಖಾನೆ ಆಡಳಿತ ಮಂಡಳಿ ಖಡಾಖಂಡಿತವಾಗಿ ಹೇಳಿದ್ದು, ಇದನ್ನೇ ನಂಬಿಕೊಂಡು ಸಿರುಗುಪ್ಪ ಮತ್ತು ಸಿಂಧನೂರು ತಾಲೂಕಿನ 8 ಸಾವಿರ ಎಕರೆ ಪ್ರದೇಶದಲ್ಲಿ ರೈತರು ಕಬ್ಬು ಬೆಳೆದಿರುವ ರೈತರು ಆತಂಕಕ್ಕೀಡಾಗಿದ್ದಾರೆ.

Advertisement

ಸಿರುಗುಪ್ಪ ಮತ್ತು ಸಿಂಧನೂರು ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ರೈತರಿಗೆ ಕಬ್ಬು ಬೆಳೆಯಿರಿ, ನಾವೇ ಖರೀದಿಸುತ್ತೇವೆಂದು ಕಾರ್ಖಾನೆಯವರು ಮನೆ-ಮನೆಗೆ ತೆರಳಿ ಮನವಿ ಮಾಡಿದ್ದರು. ನಂತರ ಬೇರೆ ಬೆಳೆ ಬೆಳೆಯದಂತೆ ಒಪ್ಪಂದ ಮಾಡಿಕೊಂಡು ಕಬ್ಬನ್ನೇ ಬೆಳೆಯುವಂತೆ ನೋಡಿಕೊಂಡಿದ್ದರು. ಕಬ್ಬು ಬೆಳೆಯಲು ರೈತರು ಒಂದು ಎಕರೆಗೆ ಸುಮಾರು 60-70 ಸಾವಿರ ರೂ. ಖರ್ಚು ಮಾಡಿದ್ದು, ಈಗ ಕಬ್ಬು ಕಟಾವಿನ ಹಂತಕ್ಕೆ ಬಂದು ನಿಂತಿದೆ. 

ಆದರೆ ಈ ವರ್ಷ ಕಾರ್ಖಾನೆ ಆರಂಭಿಸುವುದಿಲ್ಲ, ಕಬ್ಬು ಖರೀದಿಸಲು ಸಾಧ್ಯವಿಲ್ಲವೆಂದು ಕಾರ್ಖಾನೆ ಆಡಳಿತ ಮಂಡಳಿ ಹೇಳುತ್ತಿರುವುದರಿಂದ ಸಾಲ ಮಾಡಿ ಬೆಳೆದ ಕಬ್ಬನ್ನು ಏನು ಮಾಡಬೇಕು? ಹೇಗೆ ಮಾರಾಟ ಮಾಡಬೇಕು? ಎಂಬುದು ತಿಳಿಯದೇ ರೈತರು ಕಂಗಾಲಾಗಿದ್ದಾರೆ.

ಅಷ್ಟೇ ಅಲ್ಲ ಕಬ್ಬು ಬೆಳೆಗಾರರಿಗೆ ಒಂದು ಕೋಟಿ ರೂ. ಬಾಕಿ ಹಾಗೂ ಸಹಾಯಧನ 2 ಕೋಟಿ ರೂ. ಸೇರಿದಂತೆ ಒಟ್ಟು ಮೂರೂವರೆ ಕೋಟಿ ರೂ.ಗಳು ಕಾರ್ಖಾನೆಯಿಂದ ರೈತರಿಗೆ ಬಾಕಿ ಬರಬೇಕಿದೆ. ಈ ಕುರಿತು ಅ.23ರಂದು ಕಾರ್ಖಾನೆ ಆಡಳಿತ ಮಂಡಳಿ ಮತ್ತು ರೈತರ ಮಧ್ಯೆ ನಡೆದ ಸಭೆಯಲ್ಲಿ ಚರ್ಚಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಕಾರ್ಖಾನೆ ಆರಂಭಿಸಲು ಮತ್ತು ಕಬ್ಬು ಖರೀದಿಸಲು ಮುಂದಾಗಿಲ್ಲ.

ಸಿರುಗುಪ್ಪ ಮತ್ತು ಸಿಂಧನೂರು ತಾಲೂಕಿನ ರೈತರು 9 ಸಾವಿರ ಲಕ್ಷ ಟನ್‌ ಕಬ್ಬು ಬೆಳೆದಿದ್ದು, ರೈತರೊಂದಿಗೆ ಮಾಡಿಕೊಂಡ ಒಪ್ಪಂದದಂತೆ ತಕ್ಷಣವೇ 100 ಕೋಟಿ ಮೌಲ್ಯದ ಕಬ್ಬು ಖರೀದಿಸಿ ಕಾರ್ಖಾನೆ ಪ್ರಾರಂಭಿಸಬೇಕು. ಇಲ್ಲದಿದ್ದರೆ ಸಾಲಮಾಡಿ ಕಬ್ಬು ಬೆಳೆದ ರೈತರು ಆತ್ಮಹತ್ಯೆಯ ಹಾದಿ ಹಿಡಿಯಬೇಕಾಗುತ್ತದೆ. 
 ಗೌಸ್‌ಸಾಬ್‌, ರೈತ ಮುಖಂಡ

Advertisement

ಕಾರ್ಖಾನೆಯವರು ಕಬ್ಬು ಖರೀದಿಸದಿದ್ದರೆ ಉಂಟಾಗುವ ನಷ್ಟದಿಂದ ವಿಷ ಕುಡಿದು ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಸರ್ಕಾರ ಮಧ್ಯೆ ಪ್ರವೇಶಿಸಿ ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಳ್ಳಬೇಕು.
 ರಂಗಪ್ಪ, ರೈತ, ಉತ್ತನೂರು 

ಎನ್‌.ಎಸ್‌.ಎಲ್‌. ಸಕ್ಕರೆ ಕಾರ್ಖಾನೆ ಸಕ್ಕರೆ ಮಾರಾಟದೊಂದಿಗೆ ವಿದ್ಯುತ್‌ ಉತ್ಪಾದಿಸುವ ಮೂಲಕ ಆರ್ಥಿಕವಾಗಿ ಲಾಭ ಗಳಿಕೆಯತ್ತ ಸಾಗಿತ್ತು. ಆದರೆ ವಿದ್ಯುತ್‌ಗೆ ಉತ್ತಮ ಬೆಲೆ ದೊರೆಯದಿದ್ದರಿಂದ ಸಕ್ಕರೆ ಕಾರ್ಖಾನೆ ಮುಚ್ಚಲು ನಿರ್ಧರಿಸಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಸಕ್ಕರೆ ಸಚಿವ ಕೆ.ಜೆ. ಜಾರ್ಜ್‌ ಮತ್ತು ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನಿಸುತ್ತೇನೆ.
 ಎಂ.ಎಸ್‌.ಸೋಮಲಿಂಗಪ್ಪ, ಶಾಸಕ 

Advertisement

Udayavani is now on Telegram. Click here to join our channel and stay updated with the latest news.

Next