ಗೋಣಿಕೊಪ್ಪಲು : ವಿಶ್ವ ತಂಬಾಕು ಮುಕ್ತ ದಿನಾಚರಣೆಯ ಅಂಗವಾಗಿ ಕೊಡಗು ದಂತ ಮಹಾವಿದ್ಯಾಲಯ ಭಾರತೀಯ ದಂತ ವೈದ್ಯಕೀಯ ಸಂಘ, ಕಾವೇರಿ ಪದವಿ ಪೂರ್ವ ಕಾಲೇಜು ಗೋಣಿಕೊಪ್ಪಲು, ವಿದ್ಯಾರತ್ನ ಎಜುಕೇಷನ್ ಟ್ರಸ್ಟ್ ವಿರಾಜಪೇಟೆ ಸಂಯುಕ್ತಾಶ್ರಯದಲ್ಲಿ ವಿರಾಜಪೇಟೆಯಿಂದ ಅರಕೋಲಗೋಡಿ ನವರೆಗೆ ಬೃಹತ್ ಜನಜಾಗೃತಿ ಅಭಿಯಾನ ನಡೆಯಿತು.
ಅಭಿಯಾನಕ್ಕೆ ವಿದ್ಯಾರತ್ನ ಎಜುಕೇಷನ್ ಟ್ರಸ್ಟ್ನ ನಿರ್ದೇಶಕರಾದ ಚಕ್ಕೇರ ಸಮುನ್ ಕಿರಣ್ ಚಾಲನೆ ನೀಡಿದರು. ಅನಂತರ ಮಾತನಾಡಿದ ಅವರು ಇಂದು ಯುವ ಸಮೂಹ ಬಾಲ್ಯದಿಂದಲೇ ತಂಬಾಕು ವ್ಯಸನಿಗಳಾಗುತ್ತಿರುವುದು ಕಂಡು ಬರುತ್ತಿದೆ. ಇದು ಬಿಟ್ಟರೂ ಬಿಡದ ಮಾಯಾಂಗನ ಜಾಲ. ಜೀವನ ಪೂರ್ತಿ ಚಟವಾಗಿ ಬದಲಾಗಿ ಮಾರಕ ಖಾಯಿಲೆಗೆ ತುತ್ತಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಆದ್ದರಿಂದ ಎಲ್ಲರೂ ಜಾಗೃತರಾಗಿರಬೇಕೆಂದು ಕರೆ ನೀಡಿದರು.
ಜನಜಾಗೃತಿ ಅಭಿಯಾನವು ಗೋಣಿ ಕೊಪ್ಪಲು, ತಿತಿಮತಿ, ಪಿರಿಯಾಪಟ್ಟಣ, ಶನಿವಾರಸಂತೆ ಮೂಲಕ ಸಂಚರಿಸಿ ಅರಕಲಗೋಡು ಮೈದಾನದ ಬೃಹತ್ ವೇದಿಕೆಯ ಕಾರ್ಯಕ್ರಮದಲ್ಲಿ ಸಮಾಗಮಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷರಾಗಿ ಮಾತ ನಾಡಿದ ಅರಕಲಗೋಡು ತಾಲೂಕು ಆರೋಗ್ಯ ಅಧಿಕಾರಿ ಸ್ವಾಮಿ ಗೌಡ ಎಲ್ಲ ದಿನವನ್ನು ತಂಬಾಕು ರಹಿತ ದಿನವನ್ನಾಗಿ ಮಾಡಬೇಕಾಗುತ್ತದೆ. ತಂಬಾಕು ನಿಷೇಧಿಸಿ ಮಕ್ಕಳನ್ನು ರಕ್ಷಿಸಿ, ಇಂದು ವಿಶ್ವದೆಲ್ಲೆಡೆ ತಂಬಾಕು ವಸ್ತುಗಳ ಸೇವನೆಯಿಂದ ಹಲವಷ್ಟು ಕಾಯಿಲೆಗಳಿಗೂ, ಸಾವು- ನೋವುಗಳಿಗೂ ಕಾರಣ ರಾಗುತ್ತಿದ್ದೇವೆ. ಆದ್ದರಿಂದ ಪ್ರತಿಯೊಬ್ಬರೂ ಪ್ರತಿ ಪ್ರಜೆಗಳ ಮನ ಮುಟ್ಟುವಂತೆ ತಂಬಾಕು ನಿಷೇಧದಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯಬೇಕು. ಹಾಗಾದರೆ ಮಾತ್ರ ಆರೋಗ್ಯವಂತ ಸಮಾಜವನ್ನು ಕಟ್ಟಬಹುದು ಎಂದರು.
ಅರಕಲಗೋಡಿನ ರೋಟರಿ ಕ್ಲಬ್ನ ಅಧ್ಯಕ್ಷ ಮೋಹನ್, ವಿರಾಜಪೇಟೆ ದಂತ ಮಹಾವಿದ್ಯಾಲಯದ ಎನ್.ಎಸ್.ಎಸ್. ಅಧಿಕಾರಿ ಮತ್ತು ಪ್ರಾಧ್ಯಾಪಕ ಡಾ| ಎಸ್. ಆನಂದ್, ಕಾವೇರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಕ್ರಮ್, ದಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಕಾವೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.