Advertisement

ಕುಮಾರಸ್ವಾಮಿ ಟೀಕಿಸಲು ಅನ್ಸಾ ರಿ-ಜಮೀರ್‌ಗಿಲ್ಲ ನೈತಿಕತೆ

10:42 AM Oct 19, 2021 | Team Udayavani |

ಕಲಬುರಗಿ: ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಟೀಕಿಸಲು ಸಿದ್ದರಾಮಯ್ಯ ಅವರ ಬೆಂಬಲಿಗ ಕಾಂಗ್ರೆಸ್‌ ಮುಖಂಡರಾದ ಇಕ್ಬಾಲ್‌ ಅನ್ಸಾರಿ, ಜಮೀರ್‌ ಅಹ್ಮದ್‌ ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಜೆಡಿಎಸ್‌ ಮುಖಂಡ ನಾಸಿರ್‌ ಹುಸೇನ್‌ ಉಸ್ತಾದ್‌ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ ಕುಮಾರಸ್ವಾಮಿ ಏನೂ ಸಹಾಯ ಮಾಡಿಲ್ಲ. ಡೀಲ್‌ ಮಾಸ್ಟರ್‌ ಎಂದು ಜಮೀರ್‌ ಅಹ್ಮದ್‌ ಹೇಳಿದ್ದಾರೆ. ಆದರೆ, ಜಮೀರ್‌ ಅಹ್ಮದ್‌ ಅವರೇ ದೊಡ್ಡ ಡೀಲ್‌ ಮಾಸ್ಟರ್‌ ಆಗಿದ್ದಾರೆ. ಕುಮಾರಸ್ವಾಮಿ ಅವರಿಂದ ಅಲ್ಪಸಂಖ್ಯಾತ ಸಮುದಾಯದ ಮುಖಂಡರಿಗೆ ಅನ್ಯಾಯವಾಗಿದ್ದರೆ ಅವರೇಕೆ ಆಗಲೇ ಜೆಡಿಎಸ್‌ ಬಿಟ್ಟು ಬರಲಿಲ್ಲ ಎಂದು ಪ್ರಶ್ನಿಸಿದರು.

ಜಮೀರ್‌ ಅಹ್ಮದ್‌ ಜೆಡಿಎಸ್‌ನಿಂದ ಗೆಲುವು ಸಾ ಧಿಸಿದ್ದರು. ಇಕ್ಬಾಲ್‌ ಅನ್ಸಾರಿ ಕೂಡ ಜೆಡಿಎಸ್‌ ಪಕ್ಷದಿಂದಲೇ ಶಾಸಕರಾಗಿದ್ದು. ಆದರೆ, ಈಗ ಅಲ್ಪಸಂಖ್ಯಾತರಿಗೆ ಕುಮಾರಸ್ವಾಮಿ ಅನ್ಯಾಯ ಮಾಡಿದ್ದಾರೆ ಎಂದು ಯಾವ ಮುಖ ಹೊತ್ತು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಅನುದಾನವನ್ನು ಹೆಚ್ಚಳ ಮಾಡಿದ್ದೇ ಕುಮಾರಸ್ವಾಮಿ. ಹೀಗಾಗಿ ಕುಮಾರಸ್ವಾಮಿ ಬಗ್ಗೆ ಮಾತನಾಡಲು ಜಮೀರ್‌ ಅಹ್ಮದ್‌ ಮತ್ತು ಇಕ್ಬಾಲ್‌ ಅನ್ಸಾರಿ ಅನರ್ಹರು ಎಂದು ವಾಗ್ಧಾಳಿ ನಡೆಸಿದರು.

ಮುಸ್ಲಿಂ ಸಮುದಾಯ ಶೇ.18 ಜನಸಂಖ್ಯೆ ಹೊಂದಿದೆ. ಆದರೆ, ಇಲ್ಲಿಯವರೆಗೆ ಕಾಂಗ್ರೆಸ್‌ನವರು ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷರನ್ನೂ ಮಾಡಲು ಆಗಿಲ್ಲ. ಕಾಂಗ್ರೆಸ್‌ನಿಂದ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದ ಸಂದರ್ಭದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಒಬ್ಬರೂ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಿಲ್ಲ. ಇದೇನಾ ಅಲ್ಪಸಂಖ್ಯಾತರ ಬಗ್ಗೆ ಕಾಂಗ್ರೆಸ್‌ ಗೆ ಇರುವ ಕಾಳಜಿ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಮೆರವಣಿಗೆಗೆ ತಡೆ; ಮುಸ್ಲಿಮರ ಆಕ್ರೋಶ

Advertisement

ಮೈತ್ರಿಗೆ ಕಾಂಗ್ರೆಸ್‌ ತಯಾರಿಲ್ಲ

ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ ತಯಾರಿಲ್ಲ. ಕಾಂಗ್ರೆಸ್‌ಗೆ ಕೋಮು ಶಕ್ತಿಗಳನ್ನು ಹೊರಗೆ ಇಡುವುದರಲ್ಲೂ ಆಸಕ್ತಿ ಇಲ್ಲ. ಬದಲಾಗಿ ಜೆಡಿಎಸ್‌-ಬಿಜೆಪಿ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸಿದರೆ ಅದನ್ನೇ ಕಾಂಗ್ರೆಸ್‌ ಬಳಸಿಕೊಂಡು ಜೆಡಿಎಸ್‌ ಬಗ್ಗೆ ಅಪಪ್ರಚಾರ ಮಾಡಿಕೊಂಡು ತಿರುಗಾಡುವ ಕುತಂತ್ರದಲ್ಲಿ ಇದೆ ಎಂದು ನಾಸಿರ್‌ ಹುಸೇನ್‌ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ ಸುರಾನ್‌ ಮತ್ತು ಮುಖಂಡರು ಇದ್ದರು.

ಜೆಡಿಎಸ್‌ಗೆ ಮೇಯರ್‌ ಸ್ಥಾನ ಬಿಟ್ಟುಕೊಡಬೇಕೆಂಬುದು ನಮ್ಮ ಬೇಡಿಕೆ. ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಯಾರು ಮುಂದೆ ಬರುತ್ತಾರೋ ಅವರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ. ಮೇಲಾಗಿ ನಾವು ಕಾಂಗ್ರೆಸ್‌ನೊಂದಿಗೆ ಮೈತ್ರಿಗೆ ಸಿದ್ಧರಿದ್ದೇವೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯನವರು ನಮ್ಮ ಪಕ್ಷದ ವರಿಷ್ಠರೊಂದಿಗೆ ಇಲ್ಲಿಯವರೆಗೂ ಮಾತುಕತೆ ಮಾಡಿಲ್ಲ. -ನಾಸಿರ್‌ ಹುಸೇನ್‌ ಉಸ್ತಾದ್‌ ಜೆಡಿಎಸ್‌ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next