Advertisement

ರಾಜ್ಯದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮ ಬಯಲು: ತಂದೆ, ಮಗ ವಶಕ್ಕೆ

09:56 PM Aug 21, 2022 | Team Udayavani |

ಗದಗ: ನಗರದಲ್ಲಿ ಇತ್ತೀಚೆಗೆ ಕೆಪಿಟಿಸಿಎಲ್‌ ಕಿರಿಯ ಸಹಾಯಕ ಹುದ್ದೆಗಾಗಿ ನಡೆದಿದ್ದ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ಆರೋಪದ ಮೇಲೆ ಗದುಗಿನ ಮುನ್ಸಿಪಲ್‌ ಕಾಲೇಜಿನ ಉಪ ಪ್ರಾಚಾರ್ಯ ಮಾರುತಿ ಸೋನಾವನೆ ಹಾಗೂ ಅವರ ಮಗ ಸಮೀತ್‌ ಕುಮಾರ್‌ನನ್ನು ಬೆಳಗಾವಿ ಸೈಬರ್‌ ಕ್ರೈಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ನಗರದ ಮುನ್ಸಿಪಲ್‌ ಕಾಲೇಜು ಸೇರಿದಂತೆ ಗದಗ-ಬೆಟಗೇರಿ ಅವಳಿ ನಗರದ 21 ಪರೀಕ್ಷಾ ಕೇಂದ್ರಗಳಲ್ಲಿ ಆ. 7ರ ಭಾನುವಾರದಂದು ಪರೀಕ್ಷೆ ನಡೆದಿತ್ತು. ಈ ವೇಳೆ ತಂದೆ ಮತ್ತು ಮಗ ಇಬ್ಬರೂ ಸೇರಿಕೊಂಡು ಪ್ರಶ್ನೆಪತ್ರಿಕೆ ಸೋರಿಕೆಗೆ ಕೈ ಜೋಡಿಸಿದ್ದರು ಎನ್ನಲಾಗಿದೆ.

ಪತ್ರಕರ್ತನ ಸೋಗಿನಲ್ಲಿ ಮುನ್ಸಿಪಲ್‌ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಕಾಲೇಜಿನ ಉಪ ಪ್ರಾಚಾರ್ಯ ಮಾರುತಿ ಅವರ ಮಗ ಸಮಿತ್‌ ಕುಮಾರ್‌, ತನ್ನ ಮೊಬೈಲ್‌ನಲ್ಲಿ ಪ್ರಶ್ನೆಪತ್ರಿಕೆಗಳ ಫೋಟೊ ತೆಗೆದುಕೊಂಡಿದ್ದಾನೆ. ಜೊತೆಗೆ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ ಫೋಟೋಗಳನ್ನು ರಾಜ್ಯದ ಬೇರೆ ಬೇರೆ ಪರೀಕ್ಷಾ ಕೇಂದ್ರಗಳಿಗೂ ಕಳಿಸಿರುವ ಸಾಧ್ಯತೆಗಳಿವೆ ಎಂದು ಸೈಬರ್‌ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಆರೋಪಿಯ ಮೊಬೈಲ್‌ಗಾಗಿ ಪೊಲೀಸರು ತೀವ್ರ ಶೋಧ ನಡೆಸಿದರೂ ಸಿಕ್ಕಿಲ್ಲ. ಈ ಸಂಬಂಧ ಪೊಲೀಸರು ಕಾಲೇಜಿನ ಪ್ರಾಂಶುಪಾಲರನ್ನು ಭಾನುವಾರ ವಿಚಾರಣೆ ನಡೆಸಿದರು.

ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವ ಜಾಡು ಹಿಡಿದು ಬಂದ ಬೆಳಗಾವಿ ಪೊಲೀಸರು ತನಿಖೆ ಮುಂದುವರಿಸಿದ್ದು, ಕೃತ್ಯದ ಹಿಂದಿರುವ ವ್ಯಕ್ತಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next