Advertisement

Meerut; ಕೌನ್ಸಿಲರ್‌ಗಳ ನಡುವೆ ಮಾರಾಮಾರಿ: ಬಿಜೆಪಿ ಶಾಸಕರಿಗೂ ಥಳಿತ

07:42 PM Dec 30, 2023 | Team Udayavani |

ಮೀರತ್ : ನಗರದ ಮುನ್ಸಿಪಲ್ ಕಾರ್ಪೊರೇಷನ್‌ ನ ಶನಿವಾರ ನಡೆದ ಸಭೆಯಲ್ಲಿ ಕೌನ್ಸಿಲರ್‌ಗಳ ನಡುವೆ ಮಾರಾಮಾರಿ ನಡೆದಿದ್ದು, ಶಾಸಕರ ಮೇಲೂ ಹಲ್ಲೆ ನಡೆಸಲಾಗಿದೆ.

Advertisement

ಸಮಾಜವಾದಿ ಪಕ್ಷ, ಬಿಜೆಪಿ ಮತ್ತು ಬಹುಜನ ಸಮಾಜ ಪಕ್ಷದ ಕೌನ್ಸಿಲರ್‌ಗಳ ನಡುವೆ ಘರ್ಷಣೆ ನಡೆದಿದೆ. ಸಭೆಯಲ್ಲಿ ಬಿಜೆಪಿ ಕೌನ್ಸಿಲರ್ ರೇಖಾ ಸಿಂಗ್ ಮನೆ ತೆರಿಗೆ ಕುರಿತು ಹೇಳಿಕೆ ನೀಡಿದ ನಂತರ ಘರ್ಷಣೆ ಆರಂಭವಾಗಿದೆ ಎಂದು ಹೇಳಲಾಗಿದೆ.

ಎಸ್ ಪಿ ಮತ್ತು ಬಿಎಸ್ ಪಿ ಪಕ್ಷಗಳ ಕೌನ್ಸಿಲರ್‌ಗಳು ಇದನ್ನು ವಿರೋಧಿಸಿ ವಾಗ್ವಾದಕ್ಕಿಳಿದಿದ್ದು ಕೋಲಾಹಲ ಮತ್ತು ತೀವ್ರ ಜಗಳಕ್ಕೆ ಕಾರಣವಾಯಿತು. ಕೌನ್ಸಿಲರ್‌ಗಳು ಒಬ್ಬರನ್ನೊಬ್ಬರು ಎಳೆದಾಡಿದ ಕಾರಣ ಹೋರಾಟ ಸದನದ ಆಚೆಗೂ ವಿಸ್ತರಿಸಿ ರಸ್ತೆಗೂ ಬಂದಿದೆ.

ಕೌನ್ಸಿಲರ್‌ಗಳನ್ನು ಸಮಾಧಾನಪಡಿಸಲು ಬಂದ ಬಿಜೆಪಿ ಎಂಎಲ್‌ಸಿ ಧರ್ಮೇಂದ್ರ ಭಾರದ್ವಾಜ್ ಅವರಿಗೂ ಥಳಿಸಲಾಗಿದೆ. ಹೊಡೆದಾಟದ ವೇಳೆ ತೆಗೆದ ವಿಡಿಯೋಗಳಲ್ಲಿ ಭಾರದ್ವಾಜ್ ಅವರು ಕೌನ್ಸಿಲರ್‌ಗೆ ಹೊಡೆಯುತ್ತಿರುವುದು ಕಂಡುಬಂದಿದೆ. ಹೊಡೆದಾಟಕ್ಕಿಳಿದಿದ್ದ ಕೌನ್ಸಿಲರ್‌ಗಳನ್ನು ಪ್ರತ್ಯೇಕಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

Advertisement

ಸ್ಥಳಕ್ಕೆ ಆಗಮಿಸಿದ ಮೀರತ್‌ನ ಬಿಜೆಪಿ ಶಾಸಕ ಸೋಮೇಂದ್ರ ತೋಮರ್‌, ಹೊಡೆದಾಡಿದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಮೀರತ್ ಮೇಯರ್ ಹರಿಕಾಂತ್ ಅಹ್ಲುವಾಲಿಯಾ ತಿಳಿಸಿದ್ದಾರೆ.

ಶಾಮ್ಲಿ ಪುರಸಭೆಯ ಮಂಡಳಿಯ ಸಭೆಯು ಕೌನ್ಸಿಲ್‌ನ ಇಬ್ಬರು ಸದಸ್ಯರ ನಡುವೆ ತೀವ್ರ ವಾಗ್ವಾದ ಮತ್ತು ಹೊಡೆದಾಟ ನಡೆದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಘಟನೆಯ ವಿಡಿಯೋವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಹಂಚಿಕೊಂಡು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next