Advertisement

ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟ

01:20 AM Feb 27, 2020 | mahesh |

ಉಡುಪಿ: ಕರ್ನಾಟಕ ಜಾನಪದ ಅಕಾಡೆಮಿಯ 2019ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಮತ್ತು ಜಾನಪದ ತಜ್ಞ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದ್ದು, ಉತ್ತರ ಕನ್ನಡದ ಶತಾಯುಷಿ ಕಲಾವಿದ ಹುಸೇನಾಲಿ ಬುಡನ್‌ ಸಾಬ್‌ ಸೇರಿದ್ದಾರೆ.

Advertisement

ಉಡುಪಿಯಲ್ಲಿ ವಿದ್ಯಾರ್ಥಿ ಗಳಿಗಾಗಿ ನಡೆಯು ತ್ತಿರುವ ಜಾನಪದ ಪ್ರಕಾರಗಳ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಆಗಮಿಸಿದ್ದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ. ಮಂಜಮ್ಮ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಜಿಲ್ಲೆಗೆ ಒಬ್ಬರಂತೆ ಹಿರಿಯ ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಮಟ್ಟದಲ್ಲಿ ಅಕಾಡೆಮಿ ಸದಸ್ಯರು ಮತ್ತು ಸಮಿತಿಗಳು ಸೂಚಿಸಿದ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇದುವರೆಗೆ ಗುರುತಿಸದೆ ಇರುವ ಪ್ರತಿಭಾನ್ವಿತ ಕಲಾವಿದರನ್ನು ಹುಡುಕಿ ಆಯ್ಕೆ ಮಾಡಿಕೊಳ್ಳಲಾಗಿದೆ. ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ಸಾಂಬ್ರಾಣಿ ಗ್ರಾಮದ ಸಿದ್ಧಿ ಢಮಾಮಿ ನೃತ್ಯಗಾರ್ತಿ, 103ರ ಇಳಿವಯಸ್ಸಿನ ಹುಸೇನಾಲಿ ಬುಡೆನ್‌ ಸಾಬ್‌ ಅವರ ಹೆಸರು ಪ್ರಶಸ್ತಿ ಪಟ್ಟಿಯಲ್ಲಿ ಸೇರಿರುವುದು ವಿಶೇಷ.

ಪ್ರಶಸ್ತಿಯು 25 ಸಾವಿರ ರೂ. ನಗದು, ಸ್ಮರಣಿಕೆ, ಫ‌ಲ, ತಾಂಬೂಲ ಒಳಗೊಂಡಿರುತ್ತದೆ. ಬಳ್ಳಾರಿ ಜಿಲ್ಲೆಯಲ್ಲಿ ಪ್ರದಾನ ನಡೆಯಲಿದೆ. ಪ್ರದಾನದ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರು
ಎಂ. ಗೌರಮ್ಮ, ಹಲಸೂರು ಬೆಂಗಳೂರು (ಜಾನಪದ ಗಾಯನ), ಲಕ್ಷಮ್ಮ ತೇರಿನಬೀದಿ, ದೊಡ್ಡಬಳ್ಳಾಪುರ (ಭಜನೆ ಪದಗಳು), ಅಂಕನಹಳ್ಳಿ ಶಿವಣ್ಣ ಕೂಟಗಲ್‌, ರಾಮನಗರ (ಪೂಜಾ ಕುಣಿತ), ಅಂಗಡಿ ವೆಂಕಟೇಶಪ್ಪ, ಕಾಡಹಳ್ಳಿ ಕೋಲಾರ (ತತ್ವಪದ), ರಂಗಯ್ಯ ಕುಣಿಗಲ್‌, ತುಮಕೂರು (ಜಾನಪದ ಗೀತೆ), ಪಿ.ಜಿ. ಪರಮೇಶ್ವರಪ್ಪ, ಜಗಳೂರು, ದಾವಣಗೆರೆ (ವೀರಗಾಸೆ), ತಿಪ್ಪಣ್ಣ ದೊಡ್ಡಸಿದ್ಧಹಳ್ಳಿ, ಚಿತ್ರದುರ್ಗ (ಗೊರವರ ಕುಣಿತ), ಮುನಿರೆಡ್ಡಿ ಮುರುಗಮಲ್ಲ, ಚಿಕ್ಕಬಳ್ಳಾಪುರ (ಜಾನಪದ ಗಾಯನ), ಜಿ.ಸಿ. ಮಂಜಪ್ಪ ಗೌತಮಪುರ ಶಿವಮೊಗ್ಗ (ಡೊಳ್ಳುಕುಣಿತ), ಮಾದಶೆಟ್ಟಿ, ನಂಜನಗೂಡು ಮೈಸೂರು (ಕಂಸಾಳೆ ನೃತ್ಯ), ಸ್ವಾಮಿಗೌಡ ಪಾಂಡವಪುರ, ಮಂಡ್ಯ (ಬೀಸುವ ಪದಗಳು ಮತ್ತು ಪುರುಷ ಕಲಾವಿದ), ಗೌರಮ್ಮ ದೊಡ್ಡರಾಯನ ಪೇಟೆ ಚಾಮರಾಜನಗರ (ಸೋಬಾನೆ), ಜೆ.ಕೆ. ರಾಮು ವೀರಾಜಪೇಟೆ, ಕೊಡಗು (ಕೊಡವರ ಕುಣಿತ), ಕಪಿನಿ ಗೌಡ ಶ್ರವಣಬೆಳಗೊಳ, ಹಾಸನ (ಕೋಲಾಟ) ಡಾ| ಎಚ್‌.ಸಿ. ಈಶ್ವರ ನಾಯಕ, ನರಸಿಂಹರಾಜಪುರ ಚಿಕ್ಕಮಗಳೂರು (ನಾಟಿವೈದ್ಯ), ಸಾಧು ಪಾಣಾರ ಅಲೆವೂರು, ಉಡುಪಿ (ಭೂತಕೋಲ), ರುಕ್ಮಯ್ಯ ಗೌಡ, ಪುದುವೆಟ್ಟು ದ.ಕ. (ಸಿದ್ಧವೇಷ), ಸಂಕಮ್ಮ ಮುದುಗಾಪುರ್‌, ರಾಮದುರ್ಗಾ (ಬೆಳಗಾವಿ), ರುಕ್ಮಿಣಿ ಮಲ್ಲಪ್ಪ ಹರನಾಳ ಜಮಖಂಡಿ, ಬಾಗಲಕೋಟೆ (ಮದುವೆ ಹಾಡು), ಮಲ್ಲಯ್ಯ ರಾಚಯ್ಯ ತೋಟಗಂಟೆ, ಧಾರವಾಡ (ಜಾನಪದ ಸಂಗೀತ), ಹನುಮಂತಪ್ಪ ಚಿಕ್ಕಲಿಂಗದಹಳ್ಳಿ, ಹಾವೇರಿ (ಭಜನೆ, ಕೋಲಾಟ), ನಾಗರಾಜ ನಿ. ಜಕ್ಕಮ್ಮನವರ್‌ ನಿಲಗುಂದ, ಗದಗ (ಗೀಗೀಪದ), ನಿಂಬೆವ್ವ ಕೆಂಚಪ್ಪಗುಬ್ಬಿ, ಇಂಗಳೇಶ್ವರ, ವಿಜಯಪುರ (ಸೋಬಾನೆ ಪದ), ಹುಸೇನಾಬಿ ಬುಡೇನ್‌ಸಾಬ್‌ ಹಳಿಯಾಳ, ಉತ್ತರಕನ್ನಡ (ಸಿದ್ಧಿ ಢಮಾಮಿ ನೃತ್ಯ), ಗಂಗಾಧರಯ್ಯ ಸ್ವಾಮಿ ಅಗ್ಗಿಮಠ ಮಕ್ತಾಂಪುರ ಕಲಬುರುಗಿ (ಪುರುವಂತಿಕೆ), ತುಳಸಿರಾಮ ಭೀಮರಾವ ಸುತಾರ, ಭಾಲ್ಕಿ, ಬೀದರ (ಆಲದ ಎಳೆಯಿಂದ ಸಂಗೀತ), ಶಾಂತವ್ವ ಲಚಮಪ್ಪ ಲಮಾಣಿ, ಗೋಲೇಕೊಪ್ಪ ಕೊಪ್ಪಳ (ಲಂಬಾಣಿ ನೃತ್ಯ), ಸೂಗಪ್ಪ ನಾಗಪ್ಪ ದೇವಸುಗೂರು, ರಾಯಚೂರು (ತತ್ವಪದ), ವೇಷಗಾರ ಮೋತಿ ರಾಮಣ್ಣ, ಹರಪನಹಳ್ಳಿ, ಬಳ್ಳಾರಿ (ಹಗಲುವೇಷ), ಶಿವಮೂರ್ತಿ, ತನೀಕೆದಾರ ಪೇಟೆ, ಅಮ್ಮಾಪುರ, ಯಾದಗಿರಿ (ಗೀಗೀಪದ).

Advertisement

ಜಾನಪದ ತಜ್ಞ
ಡಾ| ಜಿ.ಶಂ. ಪರಮಶಿವಯ್ಯ ತಜ್ಞ ಪ್ರಶಸ್ತಿ: ಡಾ| ಚಕ್ಕರೆ ಶಿವಶಂಕರ್‌ ರಾಮನಗರ; ಡಾ| ಬಿ.ಎಸ್‌.
ಗದ್ದಿಗಿಮಠ ತಜ್ಞ ಪ್ರಶಸ್ತಿ: ಕಲಬುರಗಿ ಡಾ| ಬಸವರಾಜ ಪೊಲೀಸ್‌ ಪಾಟೀಲ್‌

ದೈವಾರಾಧಕ ಸಾಧು ಪಾಣಾರ
ಉಡುಪಿ: ರಾಜ್ಯ ಜಾನಪದ ಅಕಾಡೆಮಿಯ ಪ್ರಶಸ್ತಿಗೆ ಆಯ್ಕೆಯಾಗಿರುವ ಉಡುಪಿ ಅಲೆವೂರು ಗ್ರಾಮದ ಮಂಚಿಕೆರೆಯ ದೈವಾರಾಧಕ ಸಾಧು ಪಾಣಾರ ಅವರು ದಿ| ಜೋಗು ದಿ| ಕರ್ಗಿ ದಂಪತಿಯ ಪುತ್ರ. 64ರ ಹರೆಯದ ಅವರು 45 ವರ್ಷಗಳಿಂದ ದೈವಾರಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕಲೆಯು ಅವರಿಗೆ ವಂಶಪಾರಂಪರ್ಯವಾಗಿ ಸಿದ್ಧಿಸಿದೆ. ನರ್ತನ, ನುಡಿಗಟ್ಟು, ಪಾಡ್ದನ ಕಲೆಗಳನ್ನು ಸೊಗಸಾಗಿ ನೆರವೇರಿಸಿಕೊಂಡು ಬಂದಿದ್ದಾರೆ.

ಉಡುಪಿ ಜಿಲ್ಲೆ ಹಾಗೂ ಹೊರ ಊರುಗಳಲ್ಲಿ ಅವರು ದೈವಾರಾಧನೆ ನಡೆಸಿದ್ದಾರೆ. ಮುಖ್ಯವಾಗಿ ಜುಮಾದಿ, ವ್ಯಾಘ್ರ ಚಾಮುಂಡಿ, ಕಲ್ಲುಕುಟ್ಟಿಗ, ಪಂಜುರ್ಲಿ, ಬಗ್ಗು ಪಂಜುರ್ಲಿ, ಬೊಬ್ಬರ್ಯ, ಮಲೆಧೂಮಾವತಿ ದೈವಗಳ ಸೇವೆ ಸಲ್ಲಿಸಿದ್ದಾರೆ. ಅವರ ಕಲಾ ಸೇವೆಯನ್ನು ಗುರುತಿಸಿ ಈಗಾಗಲೇ ಹಲವು ಸಂಘ-ಸಂಸ್ಥೆಗಳು ಗೌರವಿಸಿವೆ. ಪತ್ನಿ ವಸಂತಿ ಪಾಣಾರ, ಪುತ್ರ, ಇಬ್ಬರು ಪುತ್ರಿಯರ ಸಂಸಾರ ಅವರದು. ಪುತ್ರ ದಿನೇಶ್‌ ಪಾಣಾರ ತಂದೆಯ ವೃತ್ತಿಯನ್ನೇ ನಡೆಸುತ್ತಿದ್ದಾರೆ.

ಸಿದ್ಧ ವೇಷದ ರುಕ್ಮಯ್ಯ ಗೌಡ
ಬೆಳ್ತಂಗಡಿ: ಕರ್ನಾಟಕ ಜಾನಪದ ಅಕಾಡೆಮಿಯು ಕೊಡಮಾಡುವ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುವ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ನೇರೊಳªಡಿ ನಿವಾಸಿ ರುಕ್ಮಯ್ಯ ಗೌಡ (ಬಾಬಣ್ಣ ಗೌಡ) ಅವರು ಸುಮಾರು 60 ವರ್ಷಗಳಿಂದ ಪಾರಂಪರಿಕವಾದ ತುಳುನಾಡಿನ ಹಳ್ಳಿಗಳಲ್ಲಿ ಕಾಣ ಸಿಗುವ ಸಿದ್ಧವೇಷ (ಸನ್ಯಾಸಿ ವೇಷ) ಕುಣಿತದಲ್ಲಿ ಹೆಸರುವಾಸಿಯಾಗಿದ್ದಾರೆ.

ಕೃಷಿಕರಾಗಿ ತಮ್ಮ ಜೀವನ ನಡೆಸುತ್ತ ಬಂದಿರುವ 80 ವರ್ಷ ವಯಸ್ಸಿನ ರುಕ್ಮಯ್ಯ ಗೌಡ ಅವರು ತಮ್ಮ ತಂದೆಯ ಕಾಲದಿಂದಲೂ ವಂಶಪಾರಂಪರೆಯಾಗಿ ಸುಗ್ಗಿ ಹುಣ್ಣಿಮೆಯ ಸಂದರ್ಭ ವೇಷ ತೊಟ್ಟು ನಿಗದಿತ 7 ದಿನ ಗ್ರಾಮ ಹಾಗೂ ಹೊರ ಗ್ರಾಮಗಳಿಗೆ ತೆರಳಿ ಪ್ರಸಿದ್ಧಿ ಪಡೆದಿದ್ದರು. ಇವರು ಇಬ್ಬರು ಪುತ್ರಿಯರು ಹಾಗೂ ಮೂವರು ಪುತ್ರರನ್ನು ಹೊಂದಿದ್ದಾರೆ. ಇವರ ಬಳಿಕ ಮಕ್ಕಳು ವಿವಿಧ ಸಿದ್ಧವೇಷದಲ್ಲಿ ಭಾಗಿಯಾಗುತ್ತ ತಂದೆಯ ಕಾಲದಿಂದಲೂ ಉಳಿಸಿ ಕೊಂಡು ಬಂದ ಪರಂಪರೆಯನ್ನು ಉಳಿಸುವಲ್ಲಿ ಸಹಕಾರ ನೀಡುತ್ತಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಸಂತಸವಿದೆ. ಕಲೆಯ ಮಹತ್ವವನ್ನು ಅರಿತು ಪ್ರಶಸ್ತಿಯು ಅರಸಿ ಬಂದಿದೆ. ಹಿರಿಯರಿಂದ ಬಳುವಳಿಯಾಗಿ ಬಂದ ಜಾನಪದ ಕಲೆಯನ್ನು ಮುಂದಿನ ತಲೆಮಾರಿಗೆ ವಿಸ್ತರಿಸುವ ಅಗತ್ಯವಿದೆ.
– ಸಾಧು ಪಾಣಾರ

ಜಾನಪದ ಕಲೆ ಉಳಿಸುವ ನಿಟ್ಟಿನಲ್ಲಿ ಪೂರ್ವಜರಿಂದ ಬಂದ ಕಲೆಯನ್ನು ಸುಮಾರು 50 ವರ್ಷಗಳ ಕಾಲ ನಡೆಸುತ್ತ ಬಂದಿದ್ದೇನೆ. ಈಗ ನಮ್ಮ ಪಂಗಡದವರು ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಹಕಾರ ನೀಡುತ್ತಿದ್ದೇನೆ.
– ರುಕ್ಮಯ್ಯ ಗೌಡ

Advertisement

Udayavani is now on Telegram. Click here to join our channel and stay updated with the latest news.

Next