Advertisement

ಸಿಎಂ ತವರು ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಘೋಷಿಸಿ

06:28 PM Mar 02, 2022 | Team Udayavani |

ಹಾವೇರಿ: ಜಿಲ್ಲೆಯಲ್ಲಿ ಬೃಹತ್‌ ಕೈಗಾರಿಕೆ ಸ್ಥಾಪನೆ, ಪ್ರತ್ಯೇಕ ಡಿಸಿಸಿ ಬ್ಯಾಂಕ್‌, ಸರ್ವಜ್ಞ ಪ್ರಾಧಿಕಾರಕ್ಕೆ ಅನುದಾನ ಹಾಗೂ ಸಿಎಂ ತವರು ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಘೋಷಿಸುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೆಡಿಎಸ್‌ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಬಳಿಕ ಮಾತನಾಡಿದ ಜೆಡಿಎಸ್‌ ಜಿಲ್ಲಾಧ್ಯಕ್ಷ ಜಯಾನಂದ ಜಾವಣ್ಣನವರ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕೈಗಾರಿಕೆ ಸ್ಥಾಪನೆ ಅತ್ಯಗತ್ಯವಾಗಿದೆ. ಉತ್ತರ ಕರ್ನಾಟಕದ ಹೃದಯ ಭಾಗವಾಗಿರುವ ಹಾವೇರಿ ಜಿಲ್ಲೆ ಶೈಕ್ಷಣಿಕ, ವಾಣಿಜ್ಯ, ಸಾಂಸ್ಕೃತಿಕವಾಗಿ ಬೆಳವಣಿಗೆ ಕಂಡಿದೆ. ಸುತ್ತಲಿನ ಜಿಲ್ಲೆಗಳ ಜನರೊಂದಿಗೆ ವ್ಯಾಪಾರ ಉದ್ಯೋಗದಿಂದ ಸಂಚಾರ ಸಂಪರ್ಕ ಹೊಂದಿದೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಹಾವೇರಿ ನಗರದಲ್ಲಿ ಉದ್ಯೋಗ ಸೃಷ್ಟಿಯಾಗಬೇಕಿದೆ
ಎಂದರು.

ಇಲ್ಲಿನ ಯುವ ಸಮೂಹ ಕೆಲಸಕ್ಕಾಗಿ ಬೇರೆ ಬೇರೆ ರಾಜ್ಯ, ಜಿಲ್ಲೆಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿರುದ್ಯೋಗಿ ಪದವೀಧರರು ಕೆಲಸವಿಲ್ಲದೇ ಆತಂಕದಲ್ಲಿದ್ದಾರೆ. ಈ ಎಲ್ಲ ಯುವ ಸಮೂಹಕ್ಕೆ ಕೆಲಸ ದೊರೆಯಬೇಕಾಗಿದೆ. ಹಾವೇರಿಯಲ್ಲಿ ಬೃಹತ್‌ ಕೈಗಾರಿಕೆಗಳು ಹಾಗೂ ಕೃಷಿಗೆ ಪೂರಕವಾಗಿರುವ ಕೈಗಾರಿಕಾ ಘಟಕಗಳು ಹಾಗೂ ಸರ್ಕಾರದ ಉದ್ಯಮಗಳು ಸ್ಥಾಪನೆಗೊಳ್ಳಬೇಕೆಂದು ಒತ್ತಾಯಿಸಿದರು.

ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯಾಗಿ 25ನೇ ವರ್ಷದ ಹೊಸ್ತಿಲಲ್ಲಿದ್ದರೂ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್‌ ಸ್ಥಾಪನೆಯಾಗಿಲ್ಲ. ಧಾರವಾಡ ಡಿಸಿಸಿ ಬ್ಯಾಂಕ್‌ನಲ್ಲಿ 3 ಜಿಲ್ಲೆಗಳಿಂದ ಒಟ್ಟು 540 ಕಷಿ ಪತ್ತಿನ ಸಹಕಾರ ಸಂಘಗಳಿದ್ದು, ಜಿಲ್ಲೆಯಲ್ಲಿ 228ಸಂಘಗಳಿವೆ. ಜಿಲ್ಲೆಗೆ ಹೆಚ್ಚಿನ ರೈತರು ಈ ಬ್ಯಾಂಕಿಗೆ ಅವಲಂಬಿತರಾಗಿದ್ದಾರೆ. ರೈತರ ಬೇಡಿಕೆಗೆ ಅನುಗುಣವಾಗಿ ಸಾಲ ಸೌಲಭ್ಯ ಸಿಗುತ್ತಿಲ್ಲ. ಆದ್ದರಿಂದ ಧಾರವಾಡ ಜಿಲ್ಲೆಯಿಂದ ಡಿಸಿಸಿ ಬ್ಯಾಂಕ್‌ ಹಾವೇರಿ ಜಿಲ್ಲೆಗೆ ಪ್ರತ್ಯೇಕವಾಗಬೇಕು
ಎಂದರು.

ತ್ರಿಪದಿ ಕವಿ ಸರ್ವಜ್ಞ ಜನ್ಮಸ್ಥಳ ಹಿರೇಕೆರೂರ ತಾಲೂಕು ಅಬಲೂರ ಹಾಗೂ ಮಾಸೂರನ್ನು ಅಭಿವೃದ್ಧಿಪಡಿಸಲು ಸರ್ವಜ್ಞ ಪ್ರಾಧಿಕಾರ ರಚನೆಯಾಗಿದೆ. ಪ್ರಾ ಧಿಕಾರಕ್ಕೆ ಕನಿಷ್ಟ 100ಕೋಟಿ ಅನುದಾನವನ್ನು ಆಯವ್ಯಯದಲ್ಲಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

Advertisement

ಜಿಲ್ಲೆಯಲ್ಲಿ ತುಂಗಭದ್ರಾ, ವರದಾ, ಕುಮದ್ವತಿ, ಧರ್ಮ, ನದಿಗಳ ನೀರನ್ನು ರೈತರಿಗೆ ಹಾಗೂ ಜಿಲ್ಲೆಯ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಸದ್ಬಳಕೆ ಮಾಡಲು ನೀರಾವರಿ ಯೋಜನೆಗೆ ಕನಿಷ್ಟ 1000 ಕೋಟಿ ರೂ. ಅನುದಾನ ಬಜೆಟ್‌ನಲ್ಲಿ ಮೀಸಲಿಡಬೇಕು. ಜಿಲ್ಲೆಯ 8 ತಾಲೂಕುಗಳ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗಾಗಿ 500ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಬೇಕೆಂದು ಮನವಿ ಮಾಡಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಜೆಡಿಎಸ್‌ ಮುಖಂಡರಾದ ಕೆ.ಎಸ್‌. ಸಿದ್ದಬಸಪ್ಪ ಯಾದವ, ಕತಲಸಾಬ ಬಣಕಾರ, ಶಂಶಾದಬಿ ಕುಪ್ಪೆಲೂರ, ಕೆ.ಎಂ. ಸುಂಕದ, ಎಸ್‌.ಟಿ. ಹಿರೇಮಠ, ಮೋಹನ ಬಿನ್ನಾಳ, ಎಸ್‌.ಎಸ್‌. ಹಿರೇಮಠ, ಬಸನಗೌಡ್ರ ಸಿದ್ದನಗೌಡ್ರ, ಪ್ರಕಾಶ ಬಾರ್ಕಿ, ಈರಣ್ಣ ನವಲಗುಂದ, ಲೀಲಾವತಿ ಗೌಡಗೇರಿ, ಶಂಕ್ರಮ್ಮ ತಿಮ್ಮೇನಹಳ್ಳಿ, ಕೊಟ್ರೇಶ ಅಂಗಡಿ, ಅಮೀರಜಾನ ಬೇಪಾರಿ, ಮಂಜುನಾಥ ಕನ್ನಾಯಕನವರ, ಸಂಗಪ್ಪ ಪರಶೆಟ್ಟಿ, ಮಹಾಂತೇಶ ಬೇವಿನಹಿಂಡಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next