Advertisement

ಅಣ್ಣನ ನೆನಪು: ವಿಭಿನ್ನ ರಂಗಪ್ರಯೋಗ

04:09 PM Feb 10, 2018 | |

ತೇಜಸ್ವಿಯವರ ಅನೇಕ ಕೃತಿಗಳು ಈಗಾಗಲೇ ಯಶಸ್ವಿಯಾಗಿ ರಂಗಪ್ರಯೋಗಗೊಂಡಿವೆ. ಆ ಸಾಲಿಗೆ ಈಗ “ಅಣ್ಣನ ನೆನಪು’ ಕೂಡ ಸೇರಿಕೊಂಡಿದೆ. ಜ. 31ರ ಸಂಜೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ತೇಜಸ್ವಿಯವರ ಕೃತಿ “ಅಣ್ಣನ ನೆನಪು’ ರಂಗಪ್ರಯೋಗಗೊಂಡಿತು. ದೇವರಾಜು ಅವರ ನೇತೃತ್ವದ “ಪದ ಸಾಂಸ್ಕೃತಿಕ ವೇದಿಕೆ’ಯ ರಂಗಮಾಧ್ಯಮ ತಂಡದ ಒಡಗೂಡಿ ಈ ನಾಟಕವನ್ನು ಪ್ರದರ್ಶಿಸಿತು. 

Advertisement

1994ರ ನವೆಂಬರ್‌ 11ರಂದು ಕುವೆಂಪು ಅವರು ನಿಧನರಾದರು. ತಮ್ಮ ತಂದೆಯ ಅಗಲಿಕೆಯ ದುಃಖವನ್ನು ತೇಜಸ್ವಿ “ಅಣ್ಣನ ನೆನಪು’ಗಳನ್ನು ಬರೆಯುವ ಮೂಲಕ ನೀಗಿಸಿಕೊಂಡರು. ಈ ಮೂಲಕ ಕನ್ನಡಿಗರ ಪಾಲಿಗೆ ರಸ ಋಷಿ, ಮಹಾಕವಿ ಎಂದು ಬಿಂಬಿತವಾಗಿದ್ದ ಕುವೆಂಪು ವ್ಯಕ್ತಿತ್ವದ ಆವರಣ ಪೊರೆ ಕಳಚಿ, ಕುವೆಂಪು ಕೂಡ ನಮ್ಮ ನಿಮ್ಮಂತೆ ಅನ್ನ ತಿನ್ನುವ ಮನುಷ್ಯ ಎಂಬಂತೆ ತೇಜಸ್ವಿ ಚಿತ್ರಿಸಿದ್ದೇ ಈ ಕೃತಿಯ ಮಹತ್ತಿಗೆ ಕಾರಣ. ಇದರೊಂದಿಗೆ ಕರ್ನಾಟಕದ ಸಾಂಸ್ಕೃತಿಕ, ಸಾಹಿತ್ಯಿಕ ವಾತಾವರಣದ ಚಿತ್ರವೂ ಸೇರಿತು. ಒಬ್ಬ ತಂದೆಯಾಗಿ ಕುವೆಂಪು ಹೇಗಿದ್ದರೆಂಬುದರ ಜೊತೆಗೆ ಬೂಸಾ ಪ್ರಕರಣದಂಥ ಘಟನೆಯ ವಿವರವೂ ಸೇರಿ ಕುವೆಂಪು ಅವರೊಂದಿಗೆ ತೇಜಸ್ವಿಯವರ ಆತ್ಮಕಥೆಯ ಪುಟಗಳಾಗಿಯೂ “ಅಣ್ಣನ ನೆನಪು’ ಮಹತ್ವ ಪಡೆಯಿತು. 

ಇಂಥ ಒಂದು ಕೃತಿಯನ್ನು ರಂಗರೂಪಕ್ಕೆ ತಂದು ನಿರ್ದೇಶಿಸುವ ಸಾಹಸವನ್ನು ಎಸ್‌. ರಂಗಸ್ವಾಮಿಯವರು ಯಶಸ್ವಿಯಾಗಿ ಮಾಡಿದರು. ಅಣ್ಣನ ನೆನಪುವಿನಲ್ಲಿ ಅನೇಕ ಪ್ರಸಂಗಗಳ ಜೋಡಣೆಯಿಂದ ನಾಟಕಕ್ಕೆ ರಂಗು ತುಂಬಿತು. ತೇಜಸ್ವಿ-ಕಡಿದಾಳ್‌ ಶಾಮಣ್ಣನ ಸಂಗೀತಾಭ್ಯಾಸ, ಲೈಸೆನ್ಸ್‌ ಇಲ್ಲದೆ ಸೈಕಲ್‌ ಓಡಿಸಿದ್ದಕ್ಕೆ ಪೊಲೀಸಿನವನೊಂದಿಗಾದ ಜಗಳ, ತೇಜಸ್ವಿ ಇಂಗ್ಲಿಷಿನಲ್ಲಿ ಫೇಲಾದುದಕ್ಕೆ ಕುವೆಂಪು ಅವರ ಪ್ರತಿಕ್ರಿಯೆ, ಬ್ರಾಹ್ಮಣ ಮೇಷ್ಟ್ರು ಕುವೆಂಪು ಮಾಂಸಾಹಾರ ತ್ಯಜಿಸಿದ್ದರಿಂದ ಮಹಾಕಾವ್ಯ ರಚಿಸಲು ಸಾಧ್ಯವಾಯೆ¤ಂದು ಎಳೆಯ ಮಕ್ಕಳನ್ನು ದಾರಿ ತಪ್ಪಿಸುವ ಹೇಳಿಕೆ ನೀಡಿದ್ದರ ಕುರಿತು ಕುವೆಂಪು ಖಾರವಾಗಿ ಪ್ರತಿಕ್ರಿಯಿಸಿದ್ದು…ಇವೇ ಮುಂತಾದ ಸನ್ನಿವೇಶಗಳನ್ನು ಜೋಡಿಸಿ, ಇವನ್ನೆಲ್ಲಾ ತೇಜಸ್ವಿ-ಶಾಮಣ್ಣ ನೆನಪಿಸಿಕೊಳ್ಳುತ್ತಾ ಹರಟುತ್ತಿರುವಂತೆ ಸಂಯೋಜಿಸಲಾಗಿತ್ತು. 

ಪ್ರಶಾಂತ ಅಗೇರ ಅವರ ಸಂಗೀತ ನಾಟಕಕ್ಕೆ ಅಷ್ಟೇನೂ ನೆರವು ನೀಡಲಿಲ್ಲ. ಪರೇಶ್‌ ಅವರು ಕುವೆಂಪು ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದರು. ಅವರು ಕುವೆಂಪು ಅವರಂತೆಯೇ ನಿಧಾನವಾಗಿ ಮಾತನಾಡುತ್ತಿದ್ದರೆ ಸಿ.ಆರ್‌.ಸಿಂಹ ನೆನಪಾಗುತ್ತಿದ್ದರು. ಕೈಯಲ್ಲಿ ವಾಕಿಂಗ್‌ ಸ್ಟಿಕ್‌ ಮತ್ತು ಕನ್ನಡಕ ಹಾಕಿದ್ದಿದ್ದರೆ ಕುವೆಂಪು ಪಾತ್ರಕ್ಕೆ ಇನ್ನಷ್ಟು ಮೆರಗು ಮೂಡುತ್ತಿತ್ತು. ಆ್ಯಂಗ್ರಿ ಯಂಗ್‌ ಮ್ಯಾನ್‌ ತೇಜಸ್ವಿ ಪಾತ್ರದಲ್ಲಿ ದೀಪಕ್‌ ಗಾರೇಮನೆ ಸೊಗಸಾಗಿ ಅಭಿನಯಿಸಿದರು. ಶಾಮಣ್ಣನ ಪಾತ್ರಕ್ಕೆ  ದೇವರಾಜ್‌ ಅವರು ನ್ಯಾಯ ಒದಗಿಸಿದರಲ್ಲದೆ ತೇಜಸ್ವಿ-ಶಾಮಣ್ಣ ನಿಜವಾಗಿಯೂ ನಮ್ಮೆದುರು ಕುಳಿತು ಹರಟೆ ಹೊಡೆಯುತ್ತಿರುವರೇನೋ ಎಂಬ ಭ್ರಮೆ ಮೂಡುವಷ್ಟು ಚೆನ್ನಾಗಿತ್ತು. ಕುವೆಂಪು-ತೇಜಸ್ವಿ-ಶಾಮಣ್ಣ- ಈ ಮೂರು ಮುಖ್ಯ ಪಾತ್ರಗಳ ಸೃಷ್ಟಿಯಲ್ಲಿ ಪ್ರಸಾದನ ಮಾಡಿದ ರಾಮಕೃಷ್ಣ ಬೆಳತೂರು ಅವರ ಪರಿಶ್ರಮ ಎದ್ದು ಕಾಣುತ್ತಿತ್ತು.   

ಒಟ್ಟಾರೆ ನಾಟಕದ ಅವಧಿ ಐವತ್ತು ನಿಮಿಷ. ಇನ್ನಷ್ಟು ಸ್ವಾರಸ್ಯಕರವಾದ ಸಂಗತಿಗಳನ್ನು ನಿರ್ದೇಶಕರು ತೋರಿಸಬಹುದಿತ್ತು. ಹೇಮಾವತಿ ಕುವೆಂಪು ಅವರ ಪಾತ್ರದ ನಿರ್ವಹಣೆ ಅಷ್ಟೇನೂ ಸಮಾಧಾನಕರವಾಗಿಲ್ಲದೇ ಇದ್ದದ್ದು ನಾಟಕದ ದೋಷಗಳಲ್ಲೊಂದು ಎನಿಸುತ್ತಿತ್ತು. 

Advertisement

ಯಾವುದೇ ಹೆಚ್ಚಿನ ರಂಗಪರಿಕರಗಳನ್ನೂ ಅವಲಂಬಿಸದೆ ಎಲ್ಲಿಯೂ ಬೋರ್‌ ಆಗದಂತೆ ನಾಟಕವನ್ನು ರಂಗಸ್ವಾಮಿಯವರು ಯಶಸ್ವಿಯಾಗಿ ನಿರ್ದೇಶಿಸಿದ್ದನ್ನು ಶ್ಲಾ ಸಲೇಬೇಕು. ಅಂದಿನ ಮತ್ತೂಂದು ವಿಶೇಷವೆಂದರೆ, ಒಂದು ಕಡೆ ತೇಜಸ್ವಿ ಬರೆದ “ಅಣ್ಣನ ನೆನಪು’ ಪ್ರಯೋಗವಾಗುತ್ತಿದ್ದರೆ, ಪಕ್ಕದಲ್ಲೇ ಕುವೆಂಪು ಅವರ “ಮಲೆಗಳಲ್ಲಿ ಮದುಮಗಳು’ ಪ್ರದರ್ಶನಗೊಳ್ಳುತ್ತಿತ್ತು. ಆಕಸ್ಮಿಕ ಯೋಗಾಯೋಗವೆಂದರೆ ಇದೇ ಅಣ್ಣನ ನೆನಪು ನೋಡಿದ ಕೆಲವು ತರುಣರು ಮದುಮಗಳು ನೋಡಲು ಓಡಿದರು!

 ಡಾ. ಎಚ್‌.ಎಸ್‌.ಸತ್ಯನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next