Advertisement

ಸವಣೂರ ಬಣಕ್ಕೆ ಅಂಜುಮನ್‌ ಚುಕ್ಕಾಣಿ

09:25 AM Jun 17, 2019 | Suhan S |

ಹುಬ್ಬಳ್ಳಿ: ನಗರದ ಅಂಜುಮನ್‌-ಏ-ಇಸ್ಲಾಂ ಸಂಸ್ಥೆಯ ಮುಂದಿನ ಮೂರು ವರ್ಷದ ಆಡಳಿತ ಮಂಡಳಿಗೆ ಇತ್ತೇಹಾರ ಗುಂಪಿನ ಮೊಹಮ್ಮದ್‌ಯುಸುಫ್‌ ಸವಣೂರ ಬಣವು ಜಯಭೇರಿ ಬಾರಿಸಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಆ ಮೂಲಕ ಹ್ಯಾಟ್ರಿಕ್‌ ಸಾಧನೆ ಕನಸು ಕಂಡಿದ್ದ ಮಾಜಿ ಸಚಿವ ಜಬ್ಟಾರಖಾನ್‌ ಹೊನ್ನಳ್ಳಿ ಬಣ ನಿರಾಸೆ ಅನುಭವಿಸಿತು.

Advertisement

ಸಂಸ್ಥೆಯ ಆಡಳಿತ ಮಂಡಳಿ ಅಧಿಕಾರದ ಗದ್ದುಗೆಗಾಗಿ ಕುದುರೆ ಗುರುತಿನ ಮೊಹಮ್ಮದ್‌ಯುಸುಫ್‌ ಸವಣೂರ, ಒಂಟೆ ಗುರುತಿನ ಇಸ್ಮಾಯಿಲ್ಸಾಬ ಕಾಲೇಬುಡ್ಡೆ ಹಾಗೂ ತಕ್ಕಡಿ ಗುರುತಿನ ಅನ್ವರ ಮುಧೋಳ ಬಣಗಳ ನಡುವೆ ತೀವ್ರ ಹಣಾಹಣಿ ನಡೆದಿತ್ತು. ಅಂತಿಮವಾಗಿ ಕುದುರೆ ಗುರುತಿನ ಸವಣೂರು ಬಣವು ಎಲ್ಲ ಕ್ಷೇತ್ರಗಳಲ್ಲಿ ಜಯದ ಕೇಕೆ ಹಾಕಿತು.

ಅಧ್ಯಕ್ಷ ಸ್ಥಾನದ ಹಣಾಹಣಿ: ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೊಹಮ್ಮದ್‌ಯುಸುಫ್‌ ಸವಣೂರ ಅವರು 3483 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿ ಇಸ್ಮಾಯಿಲ್ ಕಾಲೇಬುಡ್ಡೆ (3176 ಮತ) ಅವರನ್ನು 307 ಮತಗಳ ಅಂತರದಿಂದ ಪರಾಭವಗೊಳಿಸಿದರು. ಇನ್ನುಳಿದಂತೆ ಅನ್ವರಹುಸೇನ ಎ. ಮುಧೋಳ 932, ಅಬ್ದುಲ್ಅಜೀಜ ಎ. ದೇಸಾಯಿ 402 ಮತಗಳನ್ನು ಮಾತ್ರ ಪಡೆದರು. ಚಲಾವಣೆಯಾದ 8239 ಮತಗಳಲ್ಲಿ 246 ಮತಗಳು ತಿರಸ್ಕೃತಗೊಂಡಿವೆ.

262 ಮತಗಳ ಗೆಲುವು: ಉಪಾಧ್ಯಕ್ಷ ಸ್ಥಾನದಲ್ಲಿ ಅಲ್ತಾಫ್‌ನವಾಜ ಎಂ. ಕಿತ್ತೂರ 3597 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಅಬ್ದುಲ್ವಹಾಬ್‌ ಎ. ಮುಲ್ಲಾ (3335 ಮತ) ಅವರನ್ನು 262 ಮತಗಳ ಅಂತರದಿಂದ ಸೋಲಿಸಿದರು. ಶಫಿಅಹ್ಮದ ಎಲ್. ಮುದ್ದೇಬಿಹಾಳ 1076 ಮತಗಳನ್ನು ಪಡೆದರು. ಚಲಾವಣೆಯಾದ 8227 ಮತಗಳಲ್ಲಿ 219 ತಿರಸ್ಕೃತವಾಗಿವೆ.

ಖವಾಸ್‌ಗೆ ಸೋಲು: ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಬಶೀರಅಹ್ಮದ ಎ. ಹಳವೂರ 3666 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಅಬ್ದುಲರಜಾಕ ಆರ್‌. ಖವಾಸ್‌ 3248 ಮತ ಪಡೆಯುವ ಮೂಲಕ 418 ಮತಗಳಿಂದ ಪರಾಭವಗೊಂಡರು. ಅಸಿಫಖಾನ ಎಂ. ಪಾಚಾಪುರ 1100 ಮತಗಳನ್ನು ಪಡೆದರು. ಚಲಾವಣೆಯಾದ 8235 ಮತಗಳಲ್ಲಿ 221 ಮತಗಳು ತಿರಸ್ಕೃತಗೊಂಡಿವೆ.

Advertisement

182 ಮತ ತಿರಸ್ಕೃತ: ಗೌರವ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಅಬ್ದುಲಮುನಾಫ ಎಫ್‌. ದೇವಗಿರಿ 3789 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಗೈಬುಸಾಬ ಎಂ. ಹೊನ್ನಾಳ್ಳಿ (3301 ಮತ) ಅವರನ್ನು 488 ಮತಗಳ ಅಂತರದಿಂದ ಸೋಲಿಸಿದರು. ಫಾರೂಕ್‌ ಅಹ್ಮದ ಎಂ. ಅಬ್ಬುನವರ 962 ಮತಗಳನ್ನಷ್ಟೆ ಪಡೆದರು. ಚಲಾವಣೆಯಾದ 8234 ಮತಗಳಲ್ಲಿ 182 ಮತಗಳು ತಿರಸ್ಕೃತವಾಗಿವೆ.

ಖೈರಾತಿಗೆ ಒಲಿದ ಜಯ: ಗೌರವ ಖಜಾಂಚಿ ಸ್ಥಾನಕ್ಕೆ ದಾದಾಹಯಾತ್‌ ಎ. ಖೈರಾತಿ 3017 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಬಾಬಾಜಾನ ಎ. ಚೌಧರಿ (2508 ಮತ) ಅವರನ್ನು 509 ಮತಗಳಿಂದ ಪರಾಭವಗೊಳಿಸಿದರು. ಇನ್ನುಳಿದಂತೆ ಮೊಹಮ್ಮದ ಇರ್ಷಾದ ಎ. ಬಳ್ಳಾರಿ 1092, ಅಬ್ದುಲ ಹಫೀಜ ಎ. ಮನಿಯಾರ 712, ಪರ್ವೇಜ ಜಿ. ಕೊಣ್ಣೂರ 642 ಮತಗಳನ್ನು ಪಡೆದಿದ್ದಾರೆ. ಚಲಾವಣೆಯಾದ 8236 ಮತಗಳಲ್ಲಿ 265 ಮತಗಳು ತಿರಸ್ಕೃತಗೊಂಡಿವೆ.

ಪಠಾಣ ವಿಜಯ: ಆಸ್ಪತ್ರೆ ಮಂಡಳಿ ಕಾರ್ಯದರ್ಶಿ ಸ್ಥಾನಕ್ಕೆ ಮೆಹಬೂಬ ಖಾನ ಎ. ಪಠಾಣ 3263 ಮತಗಳನ್ನು ಪಡೆದು ಮೊಹಿದ್ದೀನ ಖಾನ್‌ ಎ. ಪಠಾಣ (2943 ಮತ)ಅವರನ್ನು 320 ಮತಗಳಿಂದ ಸೋಲಿಸಿದ್ದಾರೆ. ಉಳಿದಂತೆ ಆಸಿಫ್‌ ಇಕ್ಬಾಲ ಎ. ಬಳ್ಳಾರಿ 932, ಅಹ್ಮದಖಾನ ಎ. ಬಾಗೇವಾಡಿ 853 ಮತಗಳನ್ನು ಪಡೆದಿದ್ದಾರೆ. ಚಲಾವಣೆಯಾದ 8233 ಮತಗಳಲ್ಲಿ 242 ಮತಗಳು ತಿರಸ್ಕೃತವಾಗಿವೆ.

ನಾಲ್ಕು ಸ್ಥಾನಕ್ಕೆ ಆಯ್ಕೆ: ಆಸ್ಪತ್ರೆ ಮಂಡಳಿಯ ಸದಸ್ಯರ ನಾಲ್ಕು ಸ್ಥಾನಕ್ಕೆ ಇತ್ತೇಹಾರ ಬಣದ ಅಕ್ಬರ ಡಬ್ಲ್ಯು. ಕುಮಟಾಕರ 3973 ಮತ, ಅಬ್ದುಲರಜಾಕ ಆರ್‌. ನಾಯ್ಕ 3775, ಮಹಮ್ಮದ ಸಿರಾಜ್‌ ಎಂ. ಪಲ್ಲವಾಲೆ 3560, ಸಮಿವುಲ್ಲಾ ಎಂ. ಬೆಳಗಾಂ 3698 ಮತಗಳನ್ನು ಪಡೆದು ಆಯ್ಕೆಯಾದರು. ಚಲಾವಣೆಯಾದ 8221 ಮತಗಳಲ್ಲಿ 185 ಮತಗಳು ತಿರಸ್ಕೃತಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next