ಸಂತೋಷದ ಮೂಲ ಇರುವುದು ಎಲ್ಲಿ ಗೊತ್ತಾ? ಕೃತಜ್ಞತೆಯಲ್ಲಿ. ಬೇರೆಯವರಿಗೆ ಕಷ್ಟದಲ್ಲಿ ಸಹಾಯ ಮಾಡುವುದು, ನಮಗೆ ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸುವುದು ಇದೆಯಲ್ಲ; ಅದು ನಮ್ಮ ಸಂತೋಷವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಸುಖದ ಇನ್ನೊಂದು ಮೂಲ ಅಂದರೆ, ಚಾಪೆ ಎಷ್ಟಿರುತ್ತದೆಯೋ ಅಷ್ಟು ಮಾತ್ರ ಕಾಲು ಚಾಚುವುದು. ನಿಮ್ಮ ಆಸೆಯ ಕಾಲಿಗೆ ತಕ್ಕಷ್ಟು ಚಾಪೆ ಹುಡುಕದೇ ಇರುವುದು. ಅಂದರೆ, ದೇವರು ಇಷ್ಟನ್ನಾದರೂ ಕೊಟ್ಟಿದ್ದಾನಲ್ಲ ಅಂತ ತೃಪ್ತಿ ಪಡುವುದು. ಬೇರೆಯವರನ್ನು ನೋಡಿ ಕರುಬದೇ ಇರುವುದು.
ಬೇಕಿದ್ದರೆ ಗಮನಿಸಿ ನೋಡಿ: ಸದಾ ಕೊರಗುವ ಮನಃಸ್ಥಿಯಲ್ಲಿರುವವರು ಸುಖವಾಗಿರೋಲ್ಲ. ಯಾವ ಮಟ್ಟಿಗೆ ಅಂದರೆ, ನಿದ್ದೆ ಮಾತ್ರೆ ಕೊಟ್ಟರೂ ಅವರ ಕಣ್ಣಿಗೆ ನಿದ್ದೆ ಹತ್ತೂಲ್ಲ. ಕಾರಣ, ಅವನಿಗೆ ಲಕ್ಷ ರುಪಾಯಿ ಸಂಬಳದ ಕೆಲಸ ಸಿಕು¤, ನನಗೇಕೆ ಇಲ್ಲ? ನಾನೇನು ತಪ್ಪು ಮಾಡಿದ್ದೀನಿ ಅಂತ, ಇನ್ನೊಬ್ಬರೊಂದಿಗೆ ತಮ್ಮನ್ನುಹೋಲಿಕೆ ಮಾಡಿಕೊಳ್ಳುತ್ತಾ ಹೋಗುತ್ತಾರೆ. ಅಷ್ಟೇ ಅಲ್ಲ; ಈ ಜನ, ಸಮಾಜ ನನಗೆ ಅನ್ಯಾಯ ಮಾಡಿಬಿಟ್ಟಿತು ಎಂಬ ನೆಗೆಟಿವ್ ಯೋಚನೆಯನ್ನು ಮನಸ್ಸಿಗೆ ತಂದುಕೊಳ್ಳುತ್ತಾರೆ.
ಆನಂತರದಲ್ಲಿ ಚಿಂತೆ ಹೆಚ್ಚುತ್ತಲೇ ಹೋಗುತ್ತದೆ. ಚಿಂತೆಯ ಸಂತೆಯೊಳಗೆ, ಸಂತೋಷ ಕಾಣೆಯಾಗುತ್ತದೆ. ಇದರಿಂದ ಮುಕ್ತಿ ಪಡೆಯಬೇಕು ಅಂದರೆ, ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳದೇ ಬದುಕಲು ಕಲಿಯಬೇಕು. ಬೇರೆಯವರು ಎತ್ತರಕ್ಕೆ ಳೆದಿದ್ದಾರೆ ಅಂದಾಗ, ಅದಕ್ಕೆ ಸಂತೋಷಪಡಿ. ಅವರು ಆ ಸ್ಥಾನ ತಲುಪಲು ಎಷ್ಟು ಕಷ್ಟಪಟ್ಟರು ಎಂಬುದನ್ನು ಗಮನಿಸಿ.
ಆ ದಾರಿ ಒಳ್ಳೆಯದು ಅನಿಸಿದರೆ, ಅದನ್ನು ಅನುಸರಿಸಿಯೇ ನೀವೂ ಹೆಜ್ಜೆಯಿಡಿ. ಅದು ಬಿಟ್ಟು ಕರುಬುವುದು ಸರಿಯಲ್ಲ. ಒಂದು ಸಲ ಕರುಬುವಿಕೆ ಶುರುವಾದರೆ, ಆನಂತರದಲ್ಲಿ ನಿಮ್ಮ ಯೋಚನೆಗಳೆಲ್ಲವೂ ನೆಗೆಟೀವ್ ಆಗುತ್ತವೆ. ಅದೇ ಕಾರಣದಿಂದ ದೈಹಿಕ, ಮಾನಸಿಕ ಖನ್ನತೆ ಜೊತೆಯಾಗುತ್ತದೆ. ಒಂದು ಸತ್ಯವನ್ನು ತಿಳಿಯಬೇಕು. ಈ ಜಗತ್ತಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ಪೇಸ್ ಇದೆ.
ಅದನ್ನು ಹೆಚ್ಚಿಗೆ, ಕಡಿಮೆ ಮಾಡಿಕೊಳ್ಳುವ ಸಾಮರ್ಥ್ಯ, ನೈಪುಣ್ಯ ಎಲ್ಲವೂ ನಮ್ಮಕೈಯಲ್ಲೇ ಇರುವುದು. “ಲೋ, ಆ ಅನಿಲ್ ಕುಂಬ್ಳೆ 15 ಸಿ ಬಸ್ನಲ್ಲಿ ಓಡಾಡ್ತಾ ಇದ್ರು ಕಣೋ… ನಾನೇ ನೋಡಿದ್ದೀನಿ…’ ಅಂತ ಹೇಳ್ಳೋರು ಇದ್ದಾರೆ. ಸರಿ, ಅನಿಲ್ ಕುಂಬ್ಳೆ ಆಗ ಬಸ್ನಲ್ಲಿ ಓಡಾಡಿದರು ಅನ್ನುವುದು ಮುಖ್ಯ ಅಲ್ಲ; ಬಸ್ನಲ್ಲಿ ಓಡಾಡುತ್ತಿದ್ದ ಒಬ್ಬ ಹುಡುಗ, ನಂತರ ಅಂತಾರಾಷ್ಟ್ರೀಯ ಮಟ್ಟದ ಆಟಗಾರನಾಗಿ ಬೆಳೆದನಲ್ಲ, ಅದಷ್ಟೇ ನಮಗೆ ಮುಖ್ಯವಾಗಬೇಕು.
ನೆನಪಿಡಿ: ಎಲ್ಲರೂ ಅನಿಲ್ ಕುಂಬ್ಳೆ ಆಗೋಕಾಗಲ್ಲ, ಹಾಗಂತ ಕರುಬುವ ವಿಚಾರವಲ್ಲ ಇದು. ನೀವು ಕ್ರಿಕೆಟ್ನಲ್ಲಿ ಏನೂ ಮಾಡಲಾಗಲಿಲ್ಲ ಅಂತಾದರೆ ಬಿಡಿ, ನಿಮ್ಮದೇ ಒಂದು ಕ್ಷೇತ್ರ ಗುರುತಿಸಿಕೊಂಡು ಅಲ್ಲಿ ನಾದರೂ ಸಾಧಿಸಬಹುದಲ್ಲ… ಗೊತ್ತಿರಲಿ, ಅನಿಲ್ ಕುಂಬ್ಳೆ ಮಾಡಿದ್ದು, ತೆಂಡೂಲ್ಕರ್ ಕಂಡುಕೊಂಡಿದ್ದು ಇದನ್ನೇ. ಅವರವರ ತಾಕತ್ತು, ಅಭಿರುಚಿ ಅರಿತು, ಬದುಕಿನ ದಾರಿಗಳನ್ನು ಹುಡುಕಿಕೊಂಡದ್ದು.