Advertisement

ಬೇಡಿಕೆ ಈಡೇರಿಕೆಗೆ ಅಂಗನವಾಡಿ ನೌಕರರ ಒತ್ತಾಯ

02:55 PM Sep 05, 2021 | Team Udayavani |

ಗುಂಡ್ಲುಪೇಟೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲೂಕು ಅಂಗನವಾಡಿ ನೌಕರರು ಶಾಸಕ ಸಿ.ಎಸ್‌.ನಿರಂಜನಕುಮಾರ್‌ರಿಗೆ ಮನವಿ
ಸಲ್ಲಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದ ಮುಂದೆ ಜಮಾಯಿಸಿದ ಅಂಗನವಾಡಿ ನೌಕರರು, ರಾಜ್ಯ ಸರ್ಕಾರ ತಾರತಮ್ಯ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರಕೂಗಿದರು.

ಬೇಡಿಕೆಗಳು: ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ವಿಮಲಾ ಮಾತನಾಡಿ, ಕೋವಿಡ್‌ ಫ್ರಂಟ್‌ ಲೈನ್‌ ವಾರಿಯರ್ಸ್‌ ಆಗಿ
ಯಾವುದೇ ಸುರಕ್ಷತೆ ಇಲ್ಲದಿದ್ದರೂ ಕೆಲಸ ನಿರ್ವಹಿಸಿದ್ದೇವೆ. ಮಾನವ ಹಕ್ಕುಗಳ ಆಯೋಗ ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಹೀಗಿದ್ದರೂ ನಮಗೆ ಸರಿಯಾದ ವೇತನ ಕೊಡುತ್ತಿಲ್ಲ. ಐಸಿಡಿಎಸ್‌ 6 ಉದ್ದೇಶಗಳ ಜತೆಗೆ ಭಾಗ್ಯಲಕ್ಷ್ಮೀ, ಸ್ತ್ರೀ ಶಕ್ತಿ, ಚುನಾವಣೆ ಕೆಲಸ, ಆರೋಗ್ಯ
ಇಲಾಖೆ, ಅಂಗವಿಕಲ ಹಿರಿಯ ನಾಗರಿಕರಸಬಲೀಕರಣ ಇಲಾಖೆ, ಗ್ರಾಮಾಭಿವೃದ್ಧಿ ಯೋಜನೆ ಕೆಲಸಗಳನ್ನು ನಿರಂತರವಾಗಿ ಮಾಡಿ
ಕೊಂಡು ಬರುತ್ತಿದ್ದೇವೆ. ಇಷ್ಟೆಲ್ಲ ಮಾಡಿದರೂ ಸರ್ಕಾರ ನಮ್ಮ ಯಾವುದೇ ಬೇಡಿಕೆ ಈಡೇರಿಕೆಗೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ನಾಳೆಯಿಂದಲೇ ಶಾಲೆಗಳ ಪುನಾರಂಭ; ಕೋವಿಡ್‌ ನಿಯಮದಡಿ ಶಾಲೆ ಶುರು

Advertisement

ಅವೈಜ್ಞಾನಿಕ ಕ್ರಮ: ನೂತನ ಶಿಕ್ಷಣ ನೀತಿ ಜಾರಿ ಭಾಗವಾಗಿ 4 ವರ್ಷದ ಮಕ್ಕಳನ್ನು ಶೈಕ್ಷಣಿಕ ವ್ಯವಸ್ಥೆಯಡಿ ತಂದರೆ ಐಸಿಡಿಎಸ್‌ ಯೋಜನೆ
ಉದ್ದೇಶಕ್ಕೆ ಮಾರಕವಾಗುತ್ತದೆ. ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ಕೊಟ್ಟು ಅಂಗನವಾಡಿ ಕೇಂದ್ರವನ್ನು ಮೇಲ್ದರ್ಜೆಗೆ ಉನ್ನತೀಕರಿಸಲು ಬೇಡಿಕೆ ಇಟ್ಟರೆ ಅಂಗನವಾಡಿಯಲ್ಲೇ ಶಿಶು ಪಾಲನಾ ಕೇಂದ್ರ ಸ್ಥಾಪಿಸುವ ಅವೈಜ್ಞಾನಿಕ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ದೂರಿದರು.

ಸೆ.13ರಂದು ಆರಂಭವಾಗುವ ವಿಧಾನ ಸಭೆ ಅಧಿವೇಶದಲ್ಲಿ ಅಂಗನವಾಡಿ ನೌಕರರ ಎಲ್ಲಾ ಸಮಸ್ಯೆ ಚರ್ಚಿಸಿ ಬೇಡಿಕೆ ಈಡೇರಿಕೆಗೆ ಸರ್ಕಾರ ವನ್ನು ಒತ್ತಾಯಿಸುವಂತೆ ಆಗ್ರಹಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಸಿ.ಎಸ್‌. ನಿರಂಜನಕುಮಾರ್‌, ಸಂಬಂಧಪಟ್ಟವರ
ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಸಂಘದ ತಾಲೂಕು ಉಪಾಧ್ಯಕ್ಷೆ ಮಂಜುಳಾ, ಖಜಾಂಚಿ ಸುಮಿತ್ರಾ, ಕಾರ್ಯದರ್ಶಿ ಗುರುಮಲ್ಲಮ್ಮ, ನೌಕರರಾದ ಕೆ. ಜಿ.ಮಹೇಶ್ವರಿ, ಗೌರಿ, ಪುಟ್ಟಸಿದ್ದಮ್ಮ, ಮಹ ದೇವಮ್ಮ, ಗುರುಮಲ್ಲಮ್ಮ,ಭ್ರಮರಾಂಭಿಕಾ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next