Advertisement

ಹೋರಾಟಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಸಿದ್ಧತೆ

10:43 AM Sep 18, 2019 | Suhan S |

ಬೆಳಗಾವಿ: ಕೇಂದ್ರ ಸರ್ಕಾರ ಎಲ್ಲ ವಲಯದಲ್ಲೂ ಉದ್ಯೋಗ ಭದ್ರತೆ ನೀಡುವ ಬದಲು ಕಸಿದುಕೊಳ್ಳುವ ಚಿಂತನೆ ನಡೆಸುತ್ತಿದೆ. ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ಅಪಾಯದಲ್ಲಿದ್ದು, ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷೆ ಎಸ್‌. ವರಲಕ್ಷ್ಮೀ ತಿಳಿಸಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 28 ಲಕ್ಷ ಕಾರ್ಯಕರ್ತೆಯರು ಅಪಾಯದಲ್ಲಿ ಇದ್ದಾರೆ. ಉದ್ಯೋಗ ಭದ್ರತೆ ಒದಗಿಸುವ ಬದಲು ಉದ್ಯೋಗ ಕಸಿದುಕೊಳ್ಳುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಸರ್ಕಾರದ ವಿರುದ್ಧ ಸಹಿ ಚಳವಳಿ, ಬಾಲ ವಿಕಾಸ ಕೇಂದ್ರಗಳಲ್ಲಿ ಜನರಿಂದ ಸಭೆ, ಜಾಥಾ ನಡೆಸಲಾಗುವುದು. ಇದಕ್ಕೂ ಬಗ್ಗದಿದ್ದರೆ ಹೋರಾಟ ತೀವ್ರತೆ ಪಡೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಅಂಗನವಾಡಿ ಕಾರ್ಯಕರ್ತರು ಸರ್ಕಾರದ ಅನೇಕ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಕೌಶಲ ಅಭಿಯಾನ, ಮಾತೃ ವಂದನಾ ಯೋಜನೆಗಳನ್ನು ಹೆಚ್ಚುವರಿಯಾಗಿ ಹೇರುತ್ತಿದ್ದಾರೆ. ಬ್ಯಾಂಕುಗಳ ವಿಲೀನ, ಮೋಟಾರು ಕಾಯ್ದೆ ತಿದ್ದುಪಡಿ, ರೈಲ್ವೆ ಖಾಸಗೀಕರಣ, ಸರ್ಕಾರಿ ಶಾಲೆಗಳಲ್ಲಿ ನರ್ಸರಿ ಆರಂಭಿಸಲು ಸರ್ಕಾರ ಮುಂದಾಗಿದೆ. ಇದು ಸುಮಾರು 1500 ಅಂಗನವಾಡಿ ಕೇಂದ್ರಗಳ ಮೇಲೆ ಪ್ರಭಾವ ಬೀರಲಿದೆ ಎಂದು ಆಪಾದಿಸಿದರು.

ಸರ್ಕಾರದ ವಿವಿಧ ಯೋಜನೆಗಳಿಗೆ ಹೆಚ್ಚುವರಿಯಾಗಿ ಅಂಗನವಾಡಿ ಕಾರ್ಯಕರ್ತೆಯರಿಂದ ಕೆಲಸ ಮಾಡಿಸಿಕೊಳ್ಳಲಾಗುತ್ತಿದ್ದು, ಆದರೆ ಕಳೆದ ಆರು ತಿಂಗಳಿಂದ ಉಳಿದಿರುವ ತಲಾ 18 ಸಾವಿರ ರೂ. ಬಾಕಿ ಹಣ ಇನ್ನೂವರೆಗೆ ಪಾವತಿಸಿಲ್ಲ. ಅಂಗನವಾಡಿ ಕಾರ್ಯಕರ್ತೆಯರ ಪ್ರಾಮಾಣಿಕತೆಯನ್ನು ಪ್ರಶ್ನೆ ಮಾಡಲಾಗುತ್ತಿದೆ. ಎಂಟು ತಿಂಗಳಿಂದ ಕಡತ ವಿಲೇವಾರಿಯಾಗದೇ ಹಣಕಾಸು ಇಲಾಖೆಯಲ್ಲಿ ತುಕ್ಕು ಹಿಡಿದು ಕುಳಿತಿದೆ. ಸಚಿವೆ ಶಶಿಕಲಾ ಜೊಲ್ಲೆ ಅವರು ನಮ್ಮ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

9,500 ರೂ. ಸಿಗಬೇಕಾದ ಸಂಬಳದಲ್ಲಿ ಕೇವಲ 8 ಸಾವಿರ ರೂ. ಮಾತ್ರ ಕೈಗೆ ಸಿಗುತ್ತಿದೆ. ರಾಜ್ಯದಲ್ಲಿ ಪದೇ ಪದೇ ಸರ್ಕಾರಗಳು ಬದಲಾಗುತ್ತಿರುವುದರಿಂದ ಆಡಳಿತ ಸಮರ್ಪಕವಾಗಿ ಇಲ್ಲವಾಗಿದೆ. ಅಧಿಕಾರಿಗಳು ವರ್ಗಾವಣೆ ಆಗುತ್ತಿರುವುದರಿಂದ ಸಮಸ್ಯೆ ತಲೆದೋರಿದೆ. ತಾಲೂಕಿಗೆ ಒಬ್ಬರೇ ಮೇಲ್ವಿಚಾರಕರು ಇದ್ದಾರೆ. ಒಂದು ತಾಲೂಕನ್ನು ಒಬ್ಬರೇ ನಿರ್ವಹಣೆ ಮಾಡಲು ಸಾಧ್ಯವೇ. ಜನಪ್ರತಿನಿಧಿಗಳು ರಾಜಕಾರಣ ಮಾಡುತ್ತಿದ್ದರೆ ಜನರ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಸಮಗ್ರ ಬಾಲ ವಿಕಾಸ ಯೋಜನೆ ಸೇವೆ(ಐಸಿಡಿಎಸ್‌)ಗೆ ಇನ್ನೂವರೆಗೆ ಪ್ರಾಥಮಿಕವಾಗಿ ಅನುದಾನ ಹೆಚ್ಚಳ ಮಾಡಿಲ್ಲ. ಯಾವುದೇ ಸವಲತ್ತು ನೀಡಿಲ್ಲ. ಆರೂವರೆ ಗಂಟೆ ಕೆಲಸ ಹೆಚ್ಚಳ ಮಾಡಲಾಗಿದೆ. ಈ ಮುಂಚೆ ಕೇವಲ ನಾಲ್ಕೂವರೆ ತಾಸು ಕೆಲಸ ಮಾಡುತ್ತಿದ್ದರು. ಮಕ್ಕಳ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ನಿರ್ವಹಿಸುತ್ತಿದ್ದರೂ ಸರ್ಕಾರ ಮಾತ್ರ ನಮ್ಮ ಸಮಸ್ಯೆ ಕೇಳುತ್ತಿಲ್ಲ ಎಂದು ದೂರಿದರು.

Advertisement

ಯೋಜನೆಗಳು ಜಾರಿಯಾದಾಗ ಕಾರ್ಯಕರ್ತೆಯರಿಂದ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಆದರೆ ಅನುದಾನ ಬಿಡುಗಡೆ ಮಾಡದೇ ಸತಾಯಿಸಲಾಗುತ್ತಿದೆ. ಆರು ತಿಂಗಳಾದರೂ ಇನ್ನೂ ಬಾಕಿ ಹಣ ಬಂದಿಲ್ಲ. ಮಹಿಳೆಯರು ಕಣ್ಣೀರು ಸುರಿಸುತ್ತಿದ್ದಾರೆ. ಅಧಿಕಾರಿಗಳು ತಾಂತ್ರಿಕ ಸಮಸ್ಯೆ ಎಂದು ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳಿಗೆ ತರಕಾರಿ, ಮೊಟ್ಟೆಗೆ ಹಣ ಕೊಡುತ್ತಿಲ್ಲ. ಸಚಿವರು, ಹಿರಿಯ ಅಧಿಕಾರಿಗಳು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡುವ ಮುನ್ನ ನಿಮ್ಮ ಕಚೇರಿಗಳಿಗೆ ಹೋಗಿ ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಸರಿಯಾಗಿ ಬರುತ್ತಿದೆಯೇ ಎಂಬುದನ್ನು ಪರಿಶೀಲಿಸುವಂತೆ ಸಲಹೆ ನೀಡಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್‌.ಎಸ್‌. ಸುನಂದಾಮ ಜಿಲ್ಲಾಧ್ಯಕ್ಷೆ ದೊಡ್ಡವ್ವ ಪೂಜಾರಿ, ಮಂದಾ ನೇವಗಿ, ಜಿ.ಎಂ. ಜೈನೇಖಾನ ಸುದ್ದಿಗೋಷ್ಠಿಯಲ್ಲಿದ್ದರು.

ರಾಜ್ಯದಲ್ಲಿ ಸರ್ಕಾರಗಳು ಬದಲಾಗುತ್ತಿರುವುದರಿಂದ ಆಡಳಿತ ಸಮರ್ಪಕವಾಗಿ ಇಲ್ಲವಾಗಿದೆ. ತಾಲೂಕಿಗೆ ಒಬ್ಬರೇ ಮೇಲ್ವಿಚಾರಕರು ಇದ್ದಾರೆ. ಒಂದು ತಾಲೂಕನ್ನು ಒಬ್ಬರೇ ನಿರ್ವಹಣೆ ಮಾಡಲು ಸಾಧ್ಯವೇ. ಜನಪ್ರತಿನಿಧಿಗಳು ರಾಜಕಾರಣ ಮಾಡುತ್ತಿದ್ದರೆ ಜನರ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷೆ ಎಸ್‌. ವರಲಕ್ಷ್ಮೀ ಪ್ರಶ್ನಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next