Advertisement

ಕ್ಷುಲ್ಲಕ ಕಾರಣಕ್ಕೆ ಹೊಡೆದು ಕೊಂದರು

11:40 AM Feb 14, 2017 | Team Udayavani |

ಬೆಂಗಳೂರು: ಬೈಕ್‌ ತಳ್ಳಿಕೊಂಡು ಹೋಗುತ್ತಿದ್ದಾಗ ಅಡ್ಡ ಬಂದ ವಿಚಾರದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ದುಷ್ಕರ್ಮಿಗಳು ಸವಾರನನ್ನು ಹತ್ಯೆ ಮಾಡಿರುವ ಘಟನೆ ಬೇಗೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಬೇಗೂರು ನಿವಾಸಿ ಅರುಣ್‌ ಕುಮಾರ್‌ (30) ಮೃತರು. ಪ್ರಕರಣದ ಆರೋಪಿಗಳಾದ ಸಂತೋಷ್‌ ಮತ್ತು ಮ್ಯಾಥ್ಯೂಸ್‌ ತಲೆ ಮರೆಸಿಕೊಂಡಿದ್ದಾರೆ.

Advertisement

ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಅರುಣ್‌ ಕುಮಾರ್‌ ಪತ್ನಿ ಮತ್ತು ಮಗುವಿನ ಜತೆ ಭಾನುವಾರ ಬೈಕ್‌ನಲ್ಲಿ ಬೇಗೂರು ಮುಖ್ಯರಸ್ತೆಯಲ್ಲಿರುವ ಚರ್ಚ್‌ಗೆ ತೆರಳಿದ್ದರು. ರಾತ್ರಿ ಮನೆಗೆ ಹಿಂದಿರುಗುವಾಗ ಬೈಕ್‌ ಕೆಟ್ಟಿದೆ. ಅರುಣ್‌ ಕುಮಾರ್‌ ಪತ್ನಿ ಮತ್ತು ಮಗುವಿನೊಂದಿಗೆ ರಾತ್ರಿ 10.30ರ ಸುಮಾರಿಗೆ ರಸ್ತೆ ಬದಿ ಬೈಕ್‌ ತಳ್ಳಿಕೊಂಡು ಬರುತ್ತಿದ್ದರು. 

ಅರುಣ್‌ ಬೈಕ್‌ ತಳ್ಳಿಕೊಂಡು ಹೋಗುತ್ತಿದ್ದಾಗ ಆರೋಪಿಗಳು ಅಡ್ಡಬಂದಿದ್ದು, ಈ ವಿಚಾರವಾಗಿ ಅರುಣ್‌ ಮತ್ತು ಆರೋಪಿಗಳ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿದ್ದು, ಆರೋಪಿಗಳು ಅರುಣ್‌ ಮುಖ, ಹೊಟ್ಟೆ ಭಾಗಕ್ಕೆ ಬಲವಾಗಿ ಹೊಡೆದಿದ್ದಾರೆ. 

ಗಂಭೀರವಾಗಿ ಗಾಯಗೊಂಡಿದ್ದ ಅರುಣ್‌ ಕುಮಾರ್‌ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳು ಸುಳಿವು ಪತ್ತೆಯಾಗಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next