Advertisement

ಕನ್ನಡಿಗರ ಕ್ಷಮೆ ಕೇಳಿದ ಸಚಿವ ಅನಂತ್‌ ಹೆಗಡೆ​​​​​​​

06:05 AM Feb 19, 2018 | Team Udayavani |

ಬೆಂಗಳೂರು: ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಭಾನುವಾರ ಫೇಸ್‌ಬುಕ್‌ ಮೂಲಕ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದಾರೆ. “ಪುತ್ತೂರಿನ ಕಾಲೇಜೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಷಯದ ಕುರಿತು ಅನಾವಶ್ಯಕ ಚರ್ಚೆಯಾಗುತ್ತಿದೆ.

Advertisement

ಕನ್ನಡದ ಬಗ್ಗೆ ಅತ್ಯಂತ ಅಭಿಮಾನ, ಪ್ರೀತಿ, ಕಳಕಳಿಯಿಂದ ಮಾತಾಡಿರುವುದನ್ನು ತಿರುಚಿ, ಕೆಲವರಿಗೆ ನೋವಾಗುವಂತೆ ಮಾತನಾಡಿದ್ದಾರೆ ಎನ್ನುತ್ತಿದ್ದಾರೆ. ವಾಸ್ತವಿಕತೆ ಏನೇ ಇರಲಿ. ಇದರಿಂದ ಕನ್ನಡಿಗರಿಗೆ ನೋವಾಗಿದೆ ಎಂದಾದರೆ ಕ್ಷಮೆ ಕೇಳುವುದರಲ್ಲಿ ನನಗೆ ಯಾವುದೇ ಅಳುಕಿಲ್ಲ. ಕರ್ನಾಟಕದ ಜನರು ನನ್ನನ್ನು ಬೆಳೆಸಿದ್ದಾರೆ. ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಅವರ ಎದುರು ಕ್ಷಮೆ ಕೇಳಲು ನನಗೆ ಏನೂ ತೊಂದರೆ ಇಲ್ಲ. ಕನ್ನಡದ ಬಗ್ಗೆ ಅಧ್ಯಯನ ಇನ್ನಷ್ಟು ಅಳವಾಗಿ ಆಗಬೇಕು. ಕನ್ನಡ ತರ್ಜುಮೆ ಮಾಡಿಕೊಂಡು ಕೇಳುವ ಪರಿಸ್ಥಿತಿಗೆ ಬರಬಾರದು. ನಮ್ಮ ಭಾಷೆ ಯಾವತ್ತು ನಮ್ಮ ನೆಲದಲ್ಲಿ ವಿಜೃಂಭಿಸುತ್ತಿರಬೇಕು. ನನ್ನಿಂದ ಕನ್ನಡಿಗರಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಫೇಸ್‌ಬುಕ್‌ ವಿಡಿಯೋ ಮೂಲಕ ಅನಂತ್‌ ಕುಮಾರ್‌ ಹೆಗಡೆ ಮನವಿ ಮಾಡಿಕೊಂಡಿದ್ದಾರೆ.

ಗೃಹ ಸಚಿವ ಸೂಚನೆ: ಸಾಮಾಜಿಕ ಜಾಲ ತಾಣದಲ್ಲಿ ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿಯಾಗಿ ಹಾಗೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗಂಜಿ ಗಿರಾಕಿಗಳು ಎಂದು  ಪೊಸ್ಟ್‌ ಮಾಡಿರುವ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ವಿರುದ್ಧ ಸೈಬರ್‌ ಕ್ರೈಮ್‌ ವಿಭಾಗದಲ್ಲಿ ಪ್ರಕರಣ ದಾಖಲಿಸಲು ಸೂಚಿಸುವುದಾಗಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ರಾಜ್ಯದಲ್ಲಿ ಮೂರು ಜಿಲ್ಲೆಯ ( ದಕ್ಷಿಣ ಕನ್ನಡ,ಉತ್ತರ ಕನ್ನಡ,ಉಡುಪಿ )ವರು ಮಾತ್ರ ಕನ್ನಡವನ್ನು ಶುದ್ಧವಾಗಿ ಮಾತನಾಡುತ್ತಾರೆ ಎಂದು ಹೇಳಿಕೆ ನೀಡಿ ಅದನ್ನು ಸೋಶಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಮಾಡಿದ ಬಗ್ಗೆ ಗೃಹ ಸಚಿವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಕೆಂದ್ರ ಸಚಿವ ಅನಂತಕುಮಾರ ಹೆಗಡೆಯವರು ಮೂರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮಾತನಾಡುವ ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಕನ್ನಡ ಭಾಷೆಯ ಬಗ್ಗೆ ಆ ರೀತಿ ಮಾತನಾಡುವುದು ಸರಿಯಲ್ಲ. ರಾಜ್ಯದ 30 ಜಿಲ್ಲೆಗಳಲ್ಲಿ ಮೂರು ಜಿಲ್ಲೆಯವರ ಕನ್ನಡ ಮಾತ್ರ ಸರಿಯಾಗಿದೆ ಎನ್ನುವುದಾದರೆ ಉಳಿದ ಜಿಲ್ಲೆಗಳವರು ತಿರುಗಿ ಬಿದ್ದರೆ ಏನ್‌ ಮಾಡ್ತೀರಾ ಎಂದು ಪ್ರಶ್ನಿಸಿರುವ ರಾಮಲಿಂಗಾರೆಡ್ಡಿ, ರಾಜ್ಯದ ಜನತೆ ಸೂಕ್ತ ಸಂದರ್ಭದಲ್ಲಿ ತಕ್ಕ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ.

Advertisement

ಅನಂತ ಕುಮಾರ್‌ ಹೆಗಡೆಯವರು  ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಮತ್ತಷ್ಟು ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿದ್ದು, ಕೇಂದ್ರದಿಂದ ಅನುದಾನದಲ್ಲಿ ಬದುಕುವ ಗಂಜಿ ಗಿರಾಕಿಗಳು ಎಂದು ಟೀಕಿಸಿರುವುದಕ್ಕೂ ಗೃಹ ಸಚಿವ ರಾಮಲಿಂಗಾರೆಡ್ಡಿ ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರು ಸಹ ಮೋದಿಯ ಗಂಜಿ ಗಿರಾಕಿಗಳು,  ಜನರ ತೆರಿಗೆ ಹಣವನ್ನು ನೀವೂ ನೆಕ್ಕುತ್ತಾ ಇದ್ದೀರಾ ?ಎಂದು ಅನಂತಕುಮಾರ್‌ ಹೆಗಡೆಗೆ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.

ಸುರೇಶ್‌ ಕುಮಾರ್‌ ವಿರೋಧ: ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿರುವ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ವಿರುದ್ಧ ಸ್ವಪಕ್ಷೀಯರೇ ತಿರುಗಿ ಬಿದ್ದಿದ್ದಾರೆ. ಬಿಜೆಪಿ ವಕ್ತಾರರಾಗಿರುವ ಶಾಸಕ ಸುರೇಶ್‌ ಕುಮಾರ್‌ ಕನ್ನಡ  ಭಾಷೆ ಬಳಕೆ ಕುರಿತು ಅನಂತ ಕುಮಾರ್‌ ಹೆಗಡೆ ಹೇಳಿಕೆಯನ್ನು ವಿರೋಧಿಸಿ, ತಮ್ಮ ಹೇಳಿಕೆಯನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿದ್ದಾರೆ.

ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ, ಬೀದರ್‌ನಿಂದ ಹಿಡಿದು ಚಾಮರಾಜನಗರದ ವರೆಗೆ ವೈವಿಧ್ಯಮಯದಿಂದ ಕೂಡಿರುವ ಕನ್ನಡ ಭಾಷೆಯ ಬಳಕೆಯ ಬಗ್ಗೆ ಆಯಾ ಪ್ರದೇಶದಲ್ಲಿ ಅಭಿಮಾನ ಇದೆ. ಸಚಿವರ ಈ ರೀತಿಯ ಹೇಳಿಕೆ ಒಳ್ಳೆಯ ಸಂಪ್ರದಾಯವಲ್ಲ. ಅದನ್ನು ವಾಪಸ್‌ ಪಡೆಯುವಂತೆ ಬಹಿರಂಗವಾಗಿಯೇ ಅನಂತಕುಮಾರ ಹೆಗಡೆಗೆ ಸುರೇಶ್‌ಕುಮಾರ್‌ ಆಗ್ರಹಿಸಿದ್ದಾರೆ.

ನಟ ಹಾಗೂ ಮಾಜಿ ಶಾಸಕ ಜಗ್ಗೇಶ್‌ ಕೂಡ ಅನಂತಕುಮಾರ್‌ ಹೆಗಡೆ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಹೆಗಡೆಯವರೆ ನೀವು ವ್ಯಾಕರಣ ಶುದ್ಧ ಕನ್ನಡ ಮಾತನಾಡುತ್ತೀರಿ, ಅದು ನನಗೆ ಇಷ್ಟವಾಗಿದೆ. ಹಾಗೆಂದು ಉಳಿದ ಭಾಗದ ಕನ್ನಡಿಗರು ಕನ್ನಡ ಮಾತನಾಡಲು ಬಾರದಿರುವರು ಎನ್ನುವುದು ಸರಿಯಲ್ಲ. ನಾಡಿನ ಪ್ರತಿಯೊಂದು ಭಾಗಕ್ಕೆ ಅದರದೇ ಭಾಷಾ ಸೊಗಡಿದೆ. ನಾನು ತುಮಕೂರು ಗ್ರಾಮೀಣ ಭಾಗದವನು. ನನ್ನ ಭಾಗದಲ್ಲಿ ಗ್ರಾಮೀಣ ಒಕ್ಕಲಿಗ ಮನೆತನದ ಭಾಷೆ ಮಾತನಾಡುತ್ತೇನೆ. ಕಲಾವಿದನಾಗಿ ಎಲ್ಲಾ ಭಾಗದ ಭಾಷೆ ತಪ್ಪಿಲ್ಲದೇ ಬಳಸುತ್ತೇನೆ. ನನಗೆ ಇಷ್ಟರ ಮಟ್ಟಿಗೆ ವ್ಯಾಕರಣದ ತಾಲೀಮು ಇದೆ. ಮಕ್ಕಳಿಗೆ ವ್ಯಾಕರಣ ಶುದ್ಧ ಕನ್ನಡ ಕಲಿಯುವುದಕ್ಕೆ ಪ್ರೇರೇಪಿಸಿರಿ ಎಂದು ತಿವಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next