Advertisement

ಮಂಗಳ ಹಾಡಿದ ಪ್ರಸಂಗಕರ್ತ ಅನಂತರಾಮ ಬಂಗಾಡಿ

05:52 PM May 23, 2019 | mahesh |

ಎಪ್ಪತ್ತು-ಎಂಭತ್ತರ ದಶಕದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲಾಕ್ರಾಂತಿಯೊಂದು ಸಂಭವಿಸಿತು. ಅದು ಯಕ್ಷಗಾನದಲ್ಲಿ ತುಳು ಪ್ರಸಂಗಗಳ ಪ್ರವೇಶ. ಕೇವಲ ಭಾಷೆಯಲ್ಲಿ ಮಾತ್ರ ತುಳುವಲ್ಲ; ಕಥಾವಸ್ತು ಮತ್ತು ವೇಷಭೂಷಣಗಳಲ್ಲಿ ತುಳು ಸಂಸ್ಕೃತಿ ಮೇಳೈಸಿತು. ಯಕ್ಷಗಾನವು ತನ್ನ ಅತಿಮಾನುಷ ಲಕ್ಷಣಗಳನ್ನು ಕಳಚಿ ನಾಟಕೀಯ ಗುಣಗಳೊಂದಿಗೆ ಹೊಸ ಕಲಾರೂಪವಾಗಿ ಮೂಡಿಬಂತು. ಸಹಜವಾಗಿಯೇ ತುಳುವರು ಮೆಚ್ಚಿಕೊಂಡ ಫ‌ಲವಾಗಿ ತುಳು ಯಕ್ಷಗಾನ ಬಹುಕಾಲ ಮೆರೆಯಿತು. ಮೇಳದ ಯಜಮಾನರು, ಆಟ ವಹಿಸಿಕೊಂಡವರು, ಕಲಾವಿದರು ಎಲ್ಲರೂ ಯಶಸ್ಸು ಕಂಡರು. ಅನೇಕ ಕಲಾವಿದರಿಗೆ ತುಳು ಯಕ್ಷಗಾನ ತಾರಾಮೌಲ್ಯವನ್ನು ತಂದು ಕೊಟ್ಟಿತು. ಇಂತಹ ಬೆಳವಣಿಗೆಗೆ ತುಳು ಪ್ರಸಂಗ ಬರೆದ ಅನೇಕ ಪ್ರಸಂಗಕರ್ತರ ಕೊಡುಗೆ ಇದೆ. ಆದರೆ ತುಳು ಯಕ್ಷಗಾನ ಪ್ರಸಂಗಕರ್ತರಲ್ಲಿ ಅಗ್ರಗಣ್ಯ ಕೊಡುಗೆ ನೀಡಿದ ಕೀರ್ತಿ ಅನಂತರಾಮ ಬಂಗಾಡಿಯವರಿಗೆ ಸಲ್ಲುತ್ತದೆ.

Advertisement

ತುಳು ಯಕ್ಷಗಾನದ ಟೆಂಟುಮೇಳಗಳಲ್ಲಿ ಕರ್ನಾಟಕ ಮೇಳವನ್ನು ಪ್ರಾತಿನಿಧಿಕ ಮೇಳ ಎಂಬುದಾಗಿ ಕರೆಯಬಹುದು. ಅನೇಕ ವಿದ್ವತ್‌-ಪ್ರತಿಭಾವಂತರಿದ್ದ ಮೇಳ, ಅನಂತರಾಮ ಬಂಗಾಡಿಯವರು ತುಳುನಾಡಿನ ದೈವಗಳ ಪಾಡನ ಆಧರಿಸಿ ಬ್ರಹ್ಮಬಲಾಂಡಿ, ತುಳುನಾಡ ಬಲಿಯೆಂದ್ರೆ, ಧರ್ಮದೈವ ಕೊಡಮಣಿತ್ತಾಯ, ಕಾನದ ತನಿಯೆ ಮೊದಲಾದ ಪ್ರಸಂಗ ರಚಿಸಿದರು. ಈಗಾಗಲೇ ಪಾಡªನಗಳ ಮೂಲಕ ತಿಳಿದ ಕತೆಯನ್ನು ರಂಗದಲ್ಲಿ ಕಂಡಾಗ ಪ್ರೇಕ್ಷಕರು ರಂಜನೆಯೊಂದಿಗೆ ಭಕ್ತಿಭಾವದಿಂದ ಸ್ವೀಕರಿಸಿದರು. ಪಟ್ಟದ ಪದ್ಮಲೆಯಂತಹ ಪ್ರಸಂಗಗಳು ಮೇಳದ ಗಲ್ಲಾಪಟ್ಟಿಗೆ ತುಂಬಿಸಿತ್ತು. ಅರಸೊತ್ತಿಗೆಯ ಕಥಾ ಚೌಕಟ್ಟಿನಲ್ಲಿಯೇ ಸಾಮಾಜಿಕರ ಬದುಕನ್ನು ಹೆಣೆದು ಕಾಲ್ಪನಿಕ ಪ್ರಸಂಗ ಬರೆಯುವ ಅಪೂರ್ವ ಪ್ರತಿಭೆ ಬಂಗಾಡಿಯವರಿಗೆ ಕರಗತವಾಗಿತ್ತು. ಕಾಡಮಲ್ಲಿಗೆ, ಬೊಳ್ಳಿಗಿಂಡೆ, ಕಚ್ಚಾರ ಮಾಲ್ದಿ, ಶೀಂತ್ರಿದ ಚೆನ್ನಕ್ಕೆ ಮೊದಲಾದ ಪ್ರಸಂಗಗಳು ಬಂಗಾಡಿಯವರ ಮನದಲ್ಲಿ ಮೈದೋರಿದ ಕಲಾಕುಸುಮಗಳು. ಈ ಪ್ರಸಂಗಗಳಿಗೆ ಸೂಕ್ತವಾದ ಕಲಾದಿಗ್ಗಜರೂ ಮೇಳದಲ್ಲಿದ್ದರು. ಬಂಗಾಡಿಯವರ ಪ್ರಸಂಗವನ್ನು ಈ ಮೇರು ಕಲಾವಿದರು ರಸಪಾಕವನ್ನಾಗಿಸಿ ಪ್ರೇಕ್ಷಕರಿಗೆ ಉಣಬಡಿಸಿದರು. ಕಟ್ಟಿದ ಟೆಂಟು ವಾರಗಟ್ಟಲೆ ಬಿಚ್ಚಲಿಲ್ಲ, ದಿನಂಪ್ರತಿಯ ಪ್ರದರ್ಶನಕ್ಕೂ ಟೆಂಟು ತುಂಬಿ ತುಳುಕುತ್ತಿತ್ತು. ಬಂಗಾಡಿಯವರ ಪ್ರಸಂಗಗಳ ಮೂಲಕ ಯಕ್ಷಗಾನದ ರಂಗದಲ್ಲಿ ಬಂಗಾರದ ದಿನಗಳಾಯಿತು. ಹಾಸ್ಯ ರಸಾಯನದೊಂದಿಗೆ ಸಮಾಜದ ವಿಕಾರಗಳನ್ನು ತೆರೆದಿಡುವ ಜೊತೆಗೆ ಆರೋಗ್ಯ ಪೂರ್ಣ ಸಮಾಜದ ಚಿಂತನೆ ಅನಂತರಾಮ ಬಂಗಾಡಿಯವರ ಪ್ರಸಂಗಗಳ ಆಶಯವಾಗಿತ್ತು. ಹಲವು ಪ್ರಸಂಗಗಳ ಧ್ವನಿಸುರುಳಿ ಮಾಡಿ ತುಳು ಯಕ್ಷಗಾನ ಕಂಪು ಮನೆ ಮನೆಗೆ ವಿಸ್ತರಿಸಿದರು. ಆಡುಮಾತಾಗಿದ್ದ ತುಳುವಿಗೆ ಬಂಗಾಡಿಯವರು ರಂಗಮಾನ್ಯತೆ ತಂದುಕೊಟ್ಟರು.

ತುಳು ಮತ್ತು ಕನ್ನಡದಲ್ಲಿ ಜಾನಪದ, ಸ್ಥಳಪುರಾಣ, ಇತಿಹಾಸ, ಸಾಮಾಜಿಕ, ಜನ ಜಾಗೃತಿ ಮೊದಲಾದ ಬಹುವಸ್ತುಗಳನ್ನಾಧರಿಸಿದ ನೂರೈವತ್ತಕ್ಕಿಂತಲೂ ಹೆಚ್ಚು ಪ್ರಸಂಗ ಬರೆದ ಹಿರಿಮೆ ಬಂಗಾಡಿಯವರದ್ದು. ತೊಂಬತ್ತರ ದಶಕದ ಅಂಚಿಗೆ ತುಳು ಪ್ರಸಂಗವನ್ನಾಡುವ ಟೆಂಟುಮೇಳಗಳು ಒಂದೊಂದೆ ನೇಪಥ್ಯಕ್ಕೆ ಸರಿಯಿತು. ಬಂಗಾಡಿಯವರು ಬದುಕಿನ ಕೊನೆಯ ದಿನಗಳವರೆಗೂ ಅಧ್ಯಯನ ಮತ್ತು ಬರಹಗಳನ್ನು ಜೀವನ ಧ್ಯೇಯವನ್ನಾಗಿಸಿ ಅನಾರೋಗ್ಯದ ಮಧ್ಯೆಯೂ ಚಟುವಟಿಕೆಯಿಂದಲೇ ಇದ್ದರು. ಮೇ 12ರಂದು ಕಾಲನ ಕರೆಗೆ ಓಗೊಟ್ಟು ಜೀವನದಾಟಕ್ಕೆ ಮಂಗಳ ಪದ್ಯ ಹಾಡಿದರು.

ಡಾ| ಯೋಗೀಶ ಕೈರೋಡಿ

Advertisement

Udayavani is now on Telegram. Click here to join our channel and stay updated with the latest news.

Next