Advertisement

ಸಮಾನ ವೇತನಕ್ಕೆ ಪ್ರಾಮಾಣಿಕ ಪ್ರಯತ್ನ

12:56 AM Feb 04, 2019 | Team Udayavani |

ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಶ್ರೇಣಿ ಹಾಗೂ ವೇತನಕ್ಕೆ ಅನುಗುಣವಾಗಿ ಪೊಲೀಸ್‌ ಇಲಾಖೆಯ ಸಿಬ್ಬಂದಿಗೂ ಸಮಾನ ಶ್ರೇಣಿ ಹಾಗೂ ಸಮಾನ ವೇತನ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.

Advertisement

ಪೊಲೀಸ್‌ ಸಿಬ್ಬಂದಿ ವೇತನ ಪರಿಷ್ಕರಣೆ ಕುರಿತಂತೆ ‘ಔರಾದ್ಕರ್‌ ಸಮಿತಿ ವರದಿ ಜಾರಿ ಅನುಮಾನ’ ಎಂಬ ಶೀರ್ಷಿಕೆ ಅಡಿ ‘ಉದಯವಾಣಿ’ ಭಾನುವಾರ ಪ್ರಕಟಿಸಿದ ವಿಶೇಷ ವರದಿಗೆ ಪ್ರತಿಕ್ರಿಯಿಸಿದ ಅವರು, ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಭತ್ಯೆಗೆ ಹೆಚ್ಚು ಒತ್ತು ನೀಡುವುದಕ್ಕಿಂತ ಪ್ರಮುಖವಾಗಿ ವೇತನ ಶ್ರೇಣಿ ಸಮಾನತೆಗೆ ಹೆಚ್ಚು ಆದ್ಯತೆ ನೀಡಲು ಪ್ರಯತ್ನಿಸಲಾಗುತ್ತಿದೆ. ಇತರ ಇಲಾಖೆಯಲ್ಲಿ ಅದೇ ಶ್ರೇಣಿಯಲ್ಲಿರುವ ಸಿಬ್ಬಂದಿ ಪಡೆಯುತ್ತಿರುವ ವೇತನವನ್ನು ಪೊಲೀಸ್‌ ಇಲಾಖೆ ಸಿಬ್ಬಂದಿಗೂ ಕಲ್ಪಿಸಿ ಸಮಾನತೆ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ರಾಘವೇಂದ್ರ ಔರಾದ್ಕರ್‌ ನೇತೃತ್ವದ ಸಮಿತಿ ಪ್ರಮುಖವಾಗಿ ಸರ್ಕಾರದ ಇತರ ಇಲಾಖೆಗಳ ಸಿಬ್ಬಂದಿಯ ಶ್ರೇಣಿ ಹಾಗೂ ವೇತನ ಆಧರಿಸಿ ಪೊಲೀಸ್‌ ಸಿಬ್ಬಂದಿಗೂ ಶ್ರೇಣಿ ಆಧಾರಿತವಾಗಿ ಸಮಾನ ವೇತನ ನೀಡಬೇಕು ಎಂದು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಶಿಫಾರಸು ಮಾಡಿತ್ತು.

ಇತ್ತೀಚೆಗೆ ಹಿರಿಯ ಐಪಿಎಸ್‌ ಅಧಿಕಾರಿಗಳ ಜತೆ ಸಭೆ ನಡೆಸಿದ್ದ ಗೃಹ ಸಚಿವ ಎಂ.ಬಿ.ಪಾಟೀಲ್‌ ಅವರು, ಹಣಕಾಸಿನ ಕೊರತೆ ಹಿನ್ನೆಲೆಯಲ್ಲಿ ಸಮಿತಿಯ ಎಲ್ಲ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುವುದಿಲ್ಲ. ಆದರೆ, ಪ್ರಸ್ತುತ ನೀಡುತ್ತಿರುವ ವಿಶೇಷ ಭತ್ಯೆಯನ್ನು ಶೇಕಡಾ ಪ್ರಮಾಣದಲ್ಲಿ (ಅಂದಾಜು 500 ರಿಂದ 700 ರೂ.) ಹೆಚ್ಚಳ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಬಹುದು ಎಂದು ಹೇಳಿರುವುದು ಮೂಲಗಳಿಂದ ತಿಳಿದು ಬಂದಿತ್ತು. ಆ ಮಾಹಿತಿ ಆಧರಿಸಿ ‘ಉದಯವಾಣಿ’ ಭಾನುವಾರ ವಿಶೇಷ ವರದಿ ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next