Advertisement

ವಿಧಾನ-ಕದನ 2023: ಹು-ಧಾ “ಪಶ್ಚಿಮ”ದಲ್ಲಿ ಮುಳುಗಿಸಲು ಕಸರತ್ತು

11:40 PM Mar 24, 2023 | Team Udayavani |

ಧಾರವಾಡ: ಇಲ್ಲೇನಿದ್ದರೂ ಅಭಿವೃದ್ಧಿಯದ್ದೇ ಚರ್ಚೆ. ಇಲ್ಲಿ ಸೋತವರು ಮರಳಿ ಗೆದ್ದೇ ಇಲ್ಲ. ಗೆದ್ದವರು ಮತ್ತೆ ಸೋಲು ಕಂಡಿದ್ದೇ ಇಲ್ಲ. ಕರ, ಕಮಲ, ದಳ ಮೂರು ಪಕ್ಷಗಳಿಂದಲೂ ಡಜನ್‌ಗಟ್ಟಲೇ ಆಕಾಂಕ್ಷಿಗಳು. ಒಟ್ಟಿನಲ್ಲಿ ಈ ಚುನಾವಣೆಯಲ್ಲಂತೂ ಯಾವ ಪಕ್ಷದ ಅಭ್ಯರ್ಥಿ ಯಾರು ಎನ್ನುವುದೇ ಮತದಾರರಿಗೆ ತೀವ್ರ ಗೊಂದಲವಾಗಿ ಹೋಗಿದೆ.

Advertisement

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿನ ಸದ್ಯದ ರಾಜಕೀಯ ಚಿತ್ರಣವಿದು. 2008ರಲ್ಲಿ ಪ್ರಥಮ ಬಾರಿಗೆ ಉದಯವಾದ ಈ ಕ್ಷೇತ್ರ ಅರ್ಧ ಹುಬ್ಬಳ್ಳಿ-ಅರ್ಧ ಧಾರವಾಡ ನಗರ ಪ್ರದೇಶವನ್ನು ಒಳಗೊಂಡು ಹು-ಧಾ ಅರ್ಧನಾರೀಶ್ವರ ರೂಪ ತಾಳಿಕೊಂಡಿದ್ದು, ಬೆಲ್ಲದ ಕುಟುಂಬದ ಕಬಾjದಲ್ಲಿದೆ.
ಮೊದಲು ಹುಬ್ಬಳ್ಳಿ ನಗರ ಮತ್ತು ಧಾರವಾಡ ನಗರ ವ್ಯಾಪ್ತಿಯ ಈ ವಿಧಾನಸಭಾ ಕ್ಷೇತ್ರವು ಇದೀಗ ಪಶ್ಚಿಮ ಕ್ಷೇತ್ರವೆಂದು ಕರೆಯಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 4ರ ಪಶ್ಚಿಮ ಭಾಗದಲ್ಲಿನ ಪ್ರದೇಶಗಳನ್ನು ಒಳಗೊಂಡು ರಚನೆಯಾಗಿದೆ. ಮೊಟ್ಟ ಮೊದಲು ಚಂದ್ರಕಾಂತ ಬೆಲ್ಲದ ಆಯ್ಕೆಯಾದರೆ ಅನಂತರ ಎರಡು ಬಾರಿ ಅವರ ಪುತ್ರ ಅರವಿಂದ ಬೆಲ್ಲದ ಆಯ್ಕೆಯಾಗಿ ಇದೀಗ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಅವರನ್ನ ಬಿಟ್ಟು ಇವರನ್ನ ಬಿಟ್ಟು ಇವರ್ಯಾರು?: ಸದ್ಯಕ್ಕೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಅರವಿಂದ ಬೆಲ್ಲದ ಶಾಸಕರಾಗಿದ್ದರೂ ಈ ಬಾರಿ ಹು-ಧಾ ಮೇಯರ್‌ ಮತ್ತು ಕ್ರಿಯಾಶೀಲ ರಾಜಕಾರಣಿಯಾಗಿ ಕೆಲಸ ಮಾಡುತ್ತಿರುವ ಈರೇಶ ಅಂಚಟಗೇರಿ ಹೆಸರು ಮುನ್ನೆಲೆಗೆ ಬಂದಿದೆ. ಬೆಲ್ಲದ ಕುಟುಂಬಕ್ಕೆ ಏಕೆ ಸತತ ಟಿಕೆಟ್‌ ಎನ್ನುವ ಪ್ರಶ್ನೆ ಬಿಜೆಪಿ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದ್ದು, ಗುಜರಾತ್‌ ಮಾದರಿಯಲ್ಲಿ ಟಿಕೆಟ್‌ ಹಂಚಿಕೆಯಾದರೆ ಈ ಬಾರಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಈರೇಶ ಅಂಚಟಗೇರಿ ಅವರಿಗೆ ಟಿಕೆಟ್‌ ನೀಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇನ್ನು ಕಾಂಗ್ರೆಸ್‌ನಲ್ಲಿ ಡಜನ್‌ಗಟ್ಟಲೇ ಆಕಾಂಕ್ಷಿಗಳಿದ್ದು, ಪಿ.ಎಚ್‌. ನೀರಲಕೇರಿ, ಮಯೂರ ಮೋರೆ, ದೀಪಕ್‌ ಚಿಂಚೋರೆ ಮತ್ತು ಬಸವರಾಜ ಸಹಿತ ಅನೇಕರು ಈಗಾಗಲೇ ತಾವೇ ಅಭ್ಯರ್ಥಿಗಳು ಎಂದು ಬಿಂಬಿಸಿಕೊಂಡಾಗಿದೆ. ಇನ್ನು ಜೆಡಿಎಸ್‌ನಿಂದ ಗುರುರಾಜ್‌ ಹುಣಸಿಮರದ ಇದೇ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಬಹಳ ದಿನಗಳಿಂದ ತಯಾರಿ ನಡೆಸಿದ್ದಾರೆ.

ಕೈ ಸೇರಿದ ಲಿಂಬಿಕಾಯಿ: ಬಿಜೆಪಿ ಕಟ್ಟಾ ಕಾರ್ಯಕರ್ತ ಹಾಗೂ ಬಿ.ಎಸ್‌.ಯಡಿಯೂರಪ್ಪ ಆಪ್ತರಾಗಿದ್ದ ಮೋಹನ ಲಿಂಬಿಕಾಯಿ ಸದ್ದುಗದ್ದಲ ಮಾಡದೇ ಕಳೆದ ವಾರ ಕೈ ಹಿಡಿದು, ತಾವು ಹು-ಧಾ ಪಶ್ಚಿಮ ಕ್ಷೇತ್ರದ ಆಕಾಂಕ್ಷಿ ಎಂದು ಬಿಂಬಿಸಿಕೊಂಡಿದ್ದಾರೆ. ಲಿಂಬಿಕಾಯಿ ಕೈ ಸೇರುತ್ತಿದ್ದಂತೆಯೇ ಕೈನಲ್ಲಿದ್ದ 10ಕ್ಕೂ ಹೆಚ್ಚು ಜನ ಟಿಕೆಟ್‌ ಆಕಾಂಕ್ಷಿಗಳು ಒಟ್ಟಾಗಿ ಪತ್ರಿಕಾಗೋಷ್ಠಿಯನ್ನೇ ಮಾಡಿ ಲಿಂಬಿಕಾಯಿ ಅವರಿಗೆ ಟಿಕೆಟ್‌ ಕೊಡುವುದನ್ನು ವಿರೋಧಿಸಿದ್ದು, ಒಂದು ವೇಳೆ ಟಿಕೆಟ್‌ ನೀಡಿದರೆ ನಾವು ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎನ್ನುವ ಸಂದೇಶವನ್ನು ಕಾಂಗ್ರೆಸ್‌ ಮುಖಂಡರಿಗೆ ರವಾನಿಸಿದ್ದಾರೆ. ಈ ಮೊದಲು ಯಾರೇ ಒಬ್ಬರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದರೂ ಇನ್ನುಳಿದವರು ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎನ್ನುತ್ತಿದ್ದ ಕಾಂಗ್ರೆಸ್‌ ಮುಖಂಡರು ಇದ್ದಕ್ಕಿದ್ದಂತೆ ಅಸಮಾಧಾನ ಸ್ಫೋಟಿಸಿ ಕೆಪಿಸಿಸಿ ಮುಖಂಡರಿಗೆ ಬಿಸಿ ಮುಟ್ಟಿಸಿದ್ದಾರೆ.

ಲಿಂಗಾಯತರ ಭದ್ರಕೋಟೆ
ಇನ್ನು ಈ ಕ್ಷೇತ್ರದಲ್ಲಿ ಲಿಂಗಾಯತರೇ ನಿರ್ಣಾಯಕ ರಾಗಿದ್ದು ಸಾಮಾನ್ಯವಾಗಿ ಎಲ್ಲ ಪಕ್ಷಗಳು ಈ ಸಮುದಾಯದ ಅಭ್ಯರ್ಥಿಗಳಿಗೆ ಮಣೆ ಹಾಕುತ್ತ ಬಂದಿವೆ. ಕ್ಷೇತ್ರದಲ್ಲಿ ಅಂದಾಜು 28 ಸಾವಿರ ಲಿಂಗಾಯತರಿದ್ದಾರೆ. ಅದರಲ್ಲೂ ಪಂಚಮಸಾಲಿ ಮತ್ತು ಬಣಜಿಗರು ಅಧಿಕ ಸಂಖ್ಯೆಯಲ್ಲಿದ್ದು, ಈ ವರೆಗಿನ ಚುನಾವಣೆಯಲ್ಲಿ ಹೆಚ್ಚು ಬಾರಿ ಇದೇ ಸಮುದಾಯದವರು ಗೆದ್ದಿದ್ದಾªರೆ. ಈ ಬಾರಿ ಬಿಜೆಪಿಯಿಂದ ಬೆಲ್ಲದ ಅಥವಾ ಅಂಚಟಗೇರಿ, ಕೈ ಪಕ್ಷದಿಂದ ಮೋಹನ ಲಿಂಬಿಕಾಯಿ ಜೆಡಿಎಸ್‌ನಿಂದ ಗುರುರಾಜ್‌ ಹುಣಸಿಮರದ ಕಣಕ್ಕಿಳಿದರೆ 3 ಪಕ್ಷಗಳು ಲಿಂಗಾಯತರಿಗೆ ಮಣೆ ಹಾಕಿದಂತಾಗಲಿದೆ.

Advertisement

ಅರವಿಂದ ಬೆಲ್ಲದ್‌ಗೆ ರಾಜಾಹುಲಿ ಪಂಜಾ ಏಟು?
ಇನ್ನು ಶಾಸಕ ಅರವಿಂದ ಬೆಲ್ಲದ ಅವರು ಬಿ.ಎಸ್‌. ಯಡಿಯೂರಪ್ಪ ಅನಂತರ ತಾವೇ ಸಿಎಂ ಎಂದು ಬಿಂಬಿಸಿಕೊಂಡು ಓಡಾಡಿದ್ದರು. ಅಷ್ಟೇ ಅಲ್ಲ, ಬಿಎಸ್‌ವೈ ಸಂಪುಟದಲ್ಲಿ ಸಚಿವ ಸ್ಥಾನ ವಂಚಿತರಾದಾಗ ಬಹಿರಂಗವಾಗಿಯೇ ಅವರ ವಿರುದ್ಧ ಮಾತನಾಡಿದ್ದರು. ಇದರ ಪ್ರತಿಫಲವೆಂಬಂತೆ ಇಂದು ರಾಷ್ಟ್ರೀಯ ಸಂಸದೀಯ ಮಂಡಳಿಯಲ್ಲಿ ಸ್ಥಾನ ಪಡೆದುಕೊಂಡಿರುವ ರಾಜಾಹುಲಿ ಬೆಲ್ಲದ್‌ಗೆ ಬಿಸಿ ಮುಟ್ಟಿಸದೇ ಇರಲ್ಲ ಎಂಬ ಮಾತುಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ. ಇದರ ಭಾಗವಾಗಿಯೇ ಅವರ ಪರಮಾಪ್ತ ಮೋಹನ ಲಿಂಬಿಕಾಯಿ ಅವರು ಕಾಂಗ್ರೆಸ್‌ ಸೇರಿ ಬೆಲ್ಲದ ವಿರುದ್ಧ ಕಣಕ್ಕಿಳಿದಿದ್ದಾರೆ ಎನ್ನುವ ಮಾತುಗಳು ರಿಂಗಣಿಸುತ್ತಿವೆ.

~ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next