Advertisement

ಘಟನೆಯೊಂದು ಕಲಿಸಿದ ಜೀವನ ಪಾಠ

11:21 AM Jun 27, 2020 | mahesh |

ಜೀವನವೆಂದರೆ ಅನುಭವಗಳ ಭಂಡಾರ. ಅನುಭಗಳು ಕಲಿಸುವ ಪಾಠ ಜೀವನದುದ್ದಕ್ಕೂ ಆದರ್ಶ ಮತ್ತು ಅನುಕರಣೀಯ. ನಮ್ಮ ಜೀವನ ಇನ್ನೊಬ್ಬರಿಗೆ ಆದರ್ಶವಾಗಬಹುದು. ಇನ್ನೊಬ್ಬರ ಜೀವನ ಮತ್ತು ಅವರ ಪರಿಪಕ್ವವಾದ ಅನುಭವದ ಒಂದು ಮಾತು ನಮ್ಮಲ್ಲಿ ಅದ್ವಿತೀಯ ಬದಲಾವಣೆಗೆ ಕಾರಣವಾಗಬಹುದು.

Advertisement

ನನ್ನ ಜೀವನದಲ್ಲಿ ಘಟಿಸಿದ ಒಂದು ಘಟನೆ ಪ್ರೀತಿ, ವಿಶ್ವಾಸ ಮತ್ತು ಮಾನವೀಯ ಮೌಲ್ಯಗಳನ್ನು ತಿಳಿ ಹೇಳಿದೆ. ಸದಾ ಹಣದಿಂದಲೇ ಎಲ್ಲ, ಹಣವಿದ್ದರೆ ಮಾತ್ರ ಬದುಕು ಎಂಬ ಧೋರಣೆ ತಳೆದಿದ್ದ ನನ್ನ ಮನಸ್ಸಿನ ಭಾವನೆಯನ್ನು ಹಿರಿಯರೊಬ್ಬರು ಬದಲಾಯಿಸಿದ್ದಾರೆ.

ಕಾಲೇಜಿಗೆ ಹೊರಟ ನಾನು ನನ್ನ ಗೆಳತಿಯರೊಂದಿಗೆ ಹರಟೆ ಹೊಡೆಯುತ್ತಾ ಸಾಗುತ್ತಿದ್ದೆ. ಹೀಗೆ ಮಾತುಗಳ ಮಧ್ಯೆಅಕಸ್ಮಾತಾಗಿ “ಹಣಕ್ಕೆ ಮಾತ್ರ ಬೆಲೆ ಅಲ್ವಾ? ಹಣದಿಂದಲೇ ಎಲ್ಲ, ಜಗತ್ತಿನಲ್ಲಿ ಹಣಕ್ಕಿರುವ ಬೆಲೆ ಮಾನವೀಯತೆಗೆ ಇಲ್ಲ ಲೋಕವೆಲ್ಲಾ ಹಣಮಯ’ ಎಂದು ಹಣ ಮತ್ತು ಮನುಷ್ಯನ ಬೆಲೆಯ ಬಗ್ಗೆ ಚರ್ಚಿಸುತ್ತಾ ಕಾಲೇಜು ತಲುಪಿದ್ದು ಗೊತ್ತೇ ಆಗಲಿಲ್ಲ. ಕಾಕತಾಳೀಯವೋ ಎಂಬಂತೆ ಅಂದಿನ ಪಾಠ ಕೂಡ ಹಣದ ಬಗ್ಗೆಯೇ ಇತ್ತು.

ಸೊಗಸಾದ ಪಾಠ ಅದಾಗಿತ್ತು. ಹಣದ ಬಗ್ಗೆ ಮನುಷ್ಯನಿಗಿರುವ ವ್ಯಾಮೋಹವನ್ನು ಸುಂದರವಾಗಿ ವರ್ಣಿಸುವ ಪಾಠ ಅದಾಗಿತ್ತು. “ಹಣದಿಂದಲೇ ಜೀವನ ಅಲ್ಲ, ಇವತ್ತಿರುವ ವ್ಯಕ್ತಿ ನಾಳೆ ಇರುವುದಿಲ್ಲ. ಹಣವು ಅಷ್ಟೇ ಇವತ್ತು ನಮ್ಮ ಬಳಿ ನಾಳೆ ಇನ್ನೊಬ್ಬರ ಬಳಿ’ ಎಂಬ ಆಶಯವನ್ನು ಅದು ಹೇಳಿತ್ತು.
ಅಸ್ವಸ್ಥನಾಗಿರುವ ಒಬ್ಬ ರೋಗಿಗೆ ನೀವು ಹಣ ಕೊಡಲು ಮುಂದಾದರೆ ಅವನು ಅದನ್ನು ಸ್ವೀಕರಿಸಲಾರ. ಬದಲಾಗಿ ಅವನಿಗೆ ಬೇಕಾಗಿರುವುದು ಸಾಂತ್ವನದ ಮಾತುಗಳು. ದೇವರಿದ್ದಾನೆ ಎಂಬ ಭರವಸೆಯನ್ನು ಅವನಲ್ಲಿ ತುಂಬುವ ಪ್ರಯತ್ನ ಮಾಡಿ. ಆಗ ಅವರ ಮುಖದಲ್ಲಿ ಚೈತನ್ಯ ಮೂಡುವುದನ್ನು ನೀವು ಕಾಣಬಹುದು. ವೃದ್ಧರ ಬಳಿ ಕೇಳಿ ಸೌಜನ್ಯದ ನಾಲ್ಕು ಮಾತುಗಳನ್ನಾಡಿ. ಅನಾಥರ ಬಳಿ ಪ್ರೀತಿ ಮತ್ತು ವಾತ್ಸಲ್ಯಕ್ಕಿರುವ ಬೆಲೆ ತಿಳಿಯಬೇಕು.

ಹಣದಿಂದಲೇ ಎಲ್ಲ ಎನ್ನುತ್ತಿದ್ದ ನನ್ನ ಭಾವನೆ ಬದಲಾಯಿತು. ಅಂದು ನಾನು ದೃಢ ನಿರ್ಧಾರ ಮಾಡಿದೆ. ನನಗೆ ಮಾನವೀಯ ಮೌಲ್ಯಕ್ಕಿರುವ ಬೆಲೆ ಅರಿವಾಯಿತು. ಹಣ ಜೀವನಕ್ಕೆ ಮುಖ್ಯ ಆದರೆ ಹಣ ಸಂಪಾದಿಸುವುದೇ ಜೀವನದ ಉದ್ದೇಶವಾಗಬಾರದು. ಹಣದ ಮೇಲಿರುವ ಪ್ರೀತಿಯನ್ನು ಮನುಷ್ಯರ ಮೇಲೆ ತೋರಿಸಿ. ಇರುವುದನ್ನೆಲ್ಲಾ ಬಿಟ್ಟು ಇರದೆಡೆಗೆ ಹಾತೊರೆಯುವ ಬದಲು ಇದ್ದುದರಲ್ಲೇ ಸಂತೃಪ್ತ ರಾಗೋಣ, ಸಂತೋಷ ವಾಗಿರೋಣ.

Advertisement


ಕವನ ದೇವಾಡಿಗ , ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next