Advertisement

ಬೊಂಬೆಯಾಟ ಪರಿಚಯಿಸುವ ಪ್ರಯತ್ನ

02:51 PM Nov 30, 2022 | Team Udayavani |

ಕುದೂರು: ತೊಗಲು ಬೊಂಬೆಯಾಟ, ಸೂತ್ರದ ಬೊಂಬೆಯಾಟ, ಸಲಾಕೆ ಬೊಂಬೆಯಾಟ, ಚಿತ್ರಕಲೆ, ಹಾಡು, ನೃತ್ಯ ಮತ್ತು ಬೆಳಕಿನ ಅಂಶಗಳನ್ನು ಮೇಳೈಸಿಕೊಂಡು ಮುನ್ನಡೆಯುವ ಪ್ರದರ್ಶನ ಚಿತ್ರಕಲೆ, ವಿಜ್ಞಾನ, ಪುರಾಣ, ಇತಿಹಾಸ, ಕಾವ್ಯಗಳು ಮತ್ತು ಬದುಕಿನ ತೋಳಲಾಟವನ್ನು ಮೇಳೈಸಿಕೊಂಡ ವಿಶಿಷ್ಟವಾದ ಜನಪದ ಕಲೆ. ಈಗ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ.

Advertisement

ತೊಗಲು ಬೊಂಬೆಯಾಟ ಕಲೆಯನ್ನು ಪೋಷಿಸಲು ತಂಡವೊಂದು ಪೌರಾಣಿಕ ಕಥೆಗಳನ್ನು ನವೀನ ಕಲ್ಪನೆಗಳೊಂದಿಗೆ ಯುವ ಜನತೆಗೆ ಪರಿಚಯಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದೆ. ಪಾರಂಪರಿಕ ಗ್ರಾಮೀಣ ಕಲೆಯಾದ ತೊಗಲು ಗೊಂಬೆಯಾಟವನ್ನು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೂರಾರು ಪ್ರದರ್ಶನಗಳನ್ನು ಯಶಸ್ವಿಯಾಗಿ ನೀಡಿದೆ.

ಆಧುನೀಕರಣಕ್ಕೆ ಸಿಕ್ಕಿ ನಾಶ: ಆಧುನೀಕರಣಕ್ಕೆ ಸಿಲುಕಿ ಕಾಲ ಕ್ರಮೇಣ ತೊಗಲು ಗೊಂಬೆಯಾಟದ ಪ್ರದರ್ಶನಕ್ಕೆ ಬೇಡಿಕೆ ಕಡಿಮೆಯಾಗಿದೆ. ಬೊಂಬೆಯಾಟ ಜನರಿಗೆ ಮನರಂಜನೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು. ಈ ಹಿಂದೆ ಭಾರತದಲ್ಲಿ 4 ಸಾವಿರಕ್ಕೂ ಹೆಚ್ಚು ಬಗೆಯ ಬೊಂಬೆಯಾಟಗಳಿದ್ದವು. ಇದು ಕೇವಲ ಮನರಂಜನೆ ಮಾತ್ರವಲ್ಲದೆ, ಜನ ಜಾಗೃತಿಯನ್ನು ಮೂಡಿಸುತ್ತಿತ್ತು. ಇಂಥಹ ಅದ್ಭುತ ಕಲೆ ಇಂದು ತೊಗಲು ಗೊಂಬೆ, ಸೂತ್ರದ ಬೊಂಬೆ ಮೆರೆಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಸೂತ್ರದ ಸಲಾಕೆ ಬೊಂಬೆಯಾಟದ ಕಲೆಯನ್ನು ಕೇವಲ ಎರಡು ತಂಡಗಳು ಮಾತ್ರ ಪ್ರದರ್ಶನ ಮಾಡುತ್ತಿವೆ. ಇದರಲ್ಲಿ ಒಂದು ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯ ದೊಡ್ಡಮುದಿಗೆರೆ ಗ್ರಾಮದಲ್ಲಿ ಜನಿಸಿ, ಬೆಂಗಳೂರಿನಲ್ಲಿ ನೆಲೆಸಿರುವ ಎಂ.ಆರ್‌.ರಂಗನಾಥ್‌ ರಾವ್‌ ಪುತ್ಥಳಿ ತಂಡ.

ಆಟಕ್ಕೆ ಹೊಸ ರೂಪ: ಬೊಂಬೆಯಾಟದಲ್ಲಿ ನಾಲ್ಕು ಬಗೆಯ ಅಟಗಳಿವೆ. ಸೂತ್ರದ ಬೊಂಬೆ, ತೊಗಲುಬೊಂಬೆ, ಸೂತ್ರದ ಸಲಾಕೆ ಬೊಂಬೆ ಮತ್ತು ಕೈಗನಸು ಬೊಂಬೆಯಾಟ ಎಂಬ ನಾಲ್ಕು ಬಗೆಯ ಆಟಗಳಿವೆ. ಅದರಲ್ಲಿ ಮಾಗಡಿ ತಾಲೂಕಿನ ನರಸಿಂಗರಾಯರು ಸೂತ್ರದ ಬೊಂಬೆಯಾಟಕ್ಕೆ ಕಬ್ಬಿಣದ ಸರಳುಗಳನ್ನು ಬಳಕೆ ಮಾಡಿ, ಈ ಆಟಕ್ಕೆ ಹೊಸ ರೂಪ ನೀಡಿದ್ದರು.

7 ಸಾವಿರಕ್ಕೂ ಹೆಚ್ಚು ಪ್ರದರ್ಶನ: ಮಾಗಡಿ ತಾಲೂಕಿನ ದೊಡ್ಡಮುದವಾಡಿಯ ಎಂ.ಆರ್‌. ರಂಗನಾಥ್‌ ರಾವ್‌ ಹಾಗೂ ಅವರ ಮಕ್ಕಳಾದ ಶ್ರೀನಿವಾಸ್‌, ವಿಜಯ್‌ ಬೊಂಬೆಯಾಟವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಮಾಗಡಿ ನೆಲದ ಜನಪದ ಕಲೆಯನ್ನು ಆಸ್ಟ್ರೇಲಿಯಾ, ಸ್ವಿಜರ್‌ ಲ್ಯಾಂಡ್‌, ಜಪಾನ್‌, ಪೋಲ್ಯಾಂಡ್‌, ಲಾಸ್‌ ಏಂಜಲೀಸ್‌ ದೇಶಗಳಲ್ಲಿ ಪರಿಚಯಿಸಿದ ಕೀರ್ತಿ ಎಂ.ಆರ್‌.ರಂಗನಾಥರಾವ್‌ ಅವರಿಗೆ ಸಲ್ಲುತ್ತದೆ. ಇದಲ್ಲದೆ, ದೇಶದಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ಸೂತ್ರದ ಸಲಾಕೆ ಬೊಂಬೆಯಾಟವನ್ನು ಪ್ರದರ್ಶನ ಮಾಡಿದ್ದಾರೆ. ಸೂತ್ರದ ಜೊತೆಗೆ ಕಬ್ಬಿಣದ ಸಲಾಕೆ ಹಾಕಿಕೊಂಡು ಪ್ರದರ್ಶನ ಮಾಡುವ ಆಟವನ್ನು ರಾಮನಗರ, ಬೆಂಗಳೂರು ಗ್ರಾಮಾಂತರ, ಮೈಸೂರು ಪ್ರಾಂತ್ಯಗಳಲ್ಲಿ ಮಾಗಡಿ ರಂಗಪುತ್ಥಳಿ ಶೈಲಿಯ ಬೊಂಬೆಯಾಟ ಎಂದು ಕರೆಯುತ್ತಾರೆ.

Advertisement

ಒಂದೊಂದು ಬೊಂಬೆ 12 ಕೆ.ಜಿ. ತೂಕ: ಇತರೆ ಬೊಂಬೆಯಾಟಕ್ಕೂ ಸಲಾಕೆ ಸೂತ್ರದ ಬೊಂಬೆಯಾಟಕ್ಕೂ ವ್ಯತ್ಯಾಸವಿದೆ. ಮಾಗಡಿ ನೆಲದ ರಂಗಪುತ್ಥಳಿ ತಂಡದವರು ಪರಿಚಯ ಮಾಡಿರುವ ಬೊಂಬೆಯಾಟದಲ್ಲಿ ಸೂತ್ರದ ಜೊತೆಗೆ ಕಬ್ಬಿಣದ ಸಲಾಕೆಗಳನ್ನು ಬಳಕೆ ಮಾಡಲಾಗಿದೆ. ಬೇರೆ ಬೇರೆ ಬೊಂಬೆಗಳು ಚಿಕ್ಕದಾಗಿ ಹಗುರವಾಗಿವೆ. ಆದರೆ, ಈ ಸೂತ್ರದ ಸಲಾಕೆ ಬೊಂಬೆಯೂ 12 ಕೆ.ಜಿ ತೂಗುತ್ತದೆ. ಇವುಗಳನ್ನು ಮರದಿಂದ ತಯಾರು ಮಾಡಲಾಗಿದೆ. ಮರೆಯಾದ ಬೊಂಬೆ ಪ್ರದರ್ಶನ: ಇಷ್ಟೆಲ್ಲಾ ಹೆಗ್ಗಳಿಕೆ ಇರುವ ಬೊಂಬೆಯಾಟಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರೋತ್ಸಾಹ ಸಿಗದಿರುವುದು ದುರಂತ.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬೊಂಬೆಯಾಟದಂತಹ ಕಲೆಯನ್ನು ಬಳಸಿಕೊಂಡರೆ, ಕಲೆ ಮತ್ತು ಕಲಾವಿದರಿಗೆ ಜೀವ ಕೊಟ್ಟಂತಾಗುತ್ತದೆ. ಸಲಾಕೆ ಬೊಂಬೆಯಾಟದಲ್ಲಿ ನರಕಾಸುರನ ವಧೆ, ಭಕ್ತ ಮಾರ್ಕೆಂಡೇಯ, ರಾಮಾಯಣ, ಶ್ರೀಕೃಷ್ಣಪರಿಜಾತ, ಭಕ್ತಪಹ್ಲಾದ, ಇತ್ತೀಚೆಗೆ ಸ್ವಾಮಿ ವಿವೇಕಾನಂದರ ಜೀವನವನ್ನು ಬೊಂಬೆಯಾಟಕ್ಕೆ ಅಳವಡಿಸಿಕೊಂಡಿದ್ದಾರೆ. ಪ್ರಾಚೀನ ಕಲೆಯಾದ ಜನಪದ ಕಲೆಗಳಲ್ಲಿ ಸೂತ್ರದ ಬೊಂಬೆ ಸಲಾಕೆ ಬೊಂಬೆ ಹಾಗೂ ತೊಗಲು ಬೊಂಬೆಗಳಿಗೆ ತನ್ನದೆಯಾದ ಮಹತ್ವವಿದೆ. ಕಲಾವಿದರ ಎಷ್ಟೋ ಕುಟುಂಬಗಳು ಜೀವನ ನಿರ್ವಹಣೆ ಸಾಧ್ಯವಾಗದೆ, ಈ ಕಲೆಯ ಸಹವಾಸವೇ ಬೇಡ ಎನ್ನುವ ಸ್ಥಿತಿಗೆ ತಲುಪಿವೆ.

ಸೂತ್ರದ ಸಲಾಕೆ ಬೊಂಬೆಯಾಟ ಸಾಂಪ್ರದಾಯಿಕ ಕಲೆ. ಇದನ್ನು ಕರ್ನಾಟಕ ಸರ್ಕಾರ ಬಯಲಾಟ ಅಕಾಡಮಿಗೆ ಸೇರಿಸಿದೆ. ಆದರೆ, ಈ ಕಲೆಯಲ್ಲಿ ಸಂಗೀತ ಮತ್ತು ಸಾಹಿತ್ಯ ಎರಡಕ್ಕೂ ಹೆಚ್ಚಿನ ಮಹತ್ವವನ್ನು ನೀಡಿ ನಾಟಕ ಸ್ವರೂಪದಲ್ಲಿ ಇರುವ ಕಾರಣ, ಬೊಂಬೆಯಾಟವನ್ನು ನಾಟಕ ಅಕಾಡಮಿಗೆ ಸೆರಿಸಿದರೆ, ಈ ಕಲೆಗೆ ಇನ್ನಷ್ಟು ಜನರಿಗೆ ಮತ್ತು ಪ್ರದೇಶಗಳಿಗೆ ತಲುಪಲು ಅನುಕೂಲವಾಗುತ್ತದೆ. – ಎಂ.ಆರ್‌.ರಂಗನಾಥ್‌ ರಂಗಪುತ್ಥಳಿ ಕಲಾವಿದ

ಅದ್ಭುತ ಕಲೆಯಾದ ಬೊಂಬೆಯಾಟಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರೋತ್ಸಾಹ ಸಿಗದಿರುವುದು ದುರಂತ. ಆಯಾ ಜಿಲ್ಲೆಗಳಲ್ಲಿ ಆಚರಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬೊಂಬೆಯಾಟದಂತಹ ಕಲೆಯನ್ನು ಬಳಸಿಕೊಳ್ಳಬೇಕು. ಇದರಿಂದ ಕಲಾವಿದರಿಗೆ ಮತ್ತು ಕಲೆ ಎರಡಕ್ಕೂ ಜೀವ ಕೊಟ್ಟಂತಾಗುತ್ತದೆ. – ಗಂ.ದಯಾನಂದ್‌ ಮಾಜಿ ಅಧ್ಯಕ್ಷ, ಕಸಾಪ

ನಿರ್ಜೀವ ಬೊಂಬೆಗಳನ್ನು ಜೀವಂತವಾಗಿ ಕಾಣುವಂತೆ ಮಾಡಲು ಉತ್ತಮ ಪರಿಣತಿಯ ಅಗತ್ಯವಿದೆ. ಪೌರಾಣಿಕ ಗ್ರಂಥಗಳು ಮತ್ತು ಜನಪ್ರಿಯ ಕಥೆಗಳಿಂದ ಇನ್ನೂ ಸ್ಫೂರ್ತಿ ಪಡೆದಿವೆ. ಟೆಕ್‌ ಯುಗದಿಂದಾಗಿ ಈ ಮನರಂಜನೇಯ ಮೂಡ್‌ ತನ್ನ ಜನಪ್ರಿಯತೆಯನ್ನು ವೇಗವಾಗಿ ಕಳೆದುಕೊಳ್ಳುತ್ತಿದೆ. – ಕೆ.ಆರ್‌.ಯತಿರಾಜು ತಾಪಂ ಮಾಜಿ ಅಧ್ಯಕ್ಷ

– ಕೆ.ಎಸ್‌.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next