Advertisement

ವ್ಯಸನಮುಕ್ತರನ್ನು ಮತ್ತೆ ಮದ್ಯದತ್ತ ಸೆಳೆಯುವ ಯತ್ನ

12:19 AM May 07, 2020 | Team Udayavani |

ಬೆಳ್ತಂಗಡಿ: ಕೋವಿಡ್ -19 ತಡೆಗೆ 40 ದಿವಸಗಳ ಕಾಲ ರಾಜ್ಯಾದ್ಯಂತ ಮುಚ್ಚಲ್ಪಟ್ಟಿದ್ದ ಮದ್ಯದಂಗಡಿಗಳನ್ನು ಹಠಾತ್ತನೆ ತೆರೆಯುವ ಮೂಲಕ ಸಮಾಜದಲ್ಲಿ ಮತ್ತು ಕುಟುಂಬಗಳಲ್ಲಿ ನೆಲೆಸಿರುವ ಶಾಂತಿ, ನೆಮ್ಮದಿಯನ್ನು ಕಸಿದುಕೊಂಡಂತಾಗಿದೆ ಎಂದು ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ವಿ. ರಾಮಸ್ವಾಮಿ ಹೇಳಿದ್ದಾರೆ.

Advertisement

ಮಠಾಧಿಪತಿಗಳು, ಸಮಾಜಪರ ಚಿಂತಕರು ಆಕ್ಷೇಪಿಸಿದರೂ ಸರಕಾರ ಕಿವಿಗೊಡದೆ ತಪ್ಪು ನಿರ್ಧಾರ ಕೈಗೊಂಡಿದೆ. ಲಾಕ್‌ಡೌನ್‌ ಅವಧಿಯವರೆಗೆ ಪ್ರಾರ್ಥನ ಮಂದಿರ, ಮಸೀದಿ, ಚರ್ಚ್‌, ಸಭೆ-ಸಮಾರಂಭಗಳು, ಸಿನೆಮಾ ಮಂದಿರ, ಮಾಲ್‌ಗ‌ಳು ಸಹಿತ ಆವಶ್ಯಕ ವ್ಯವಸ್ಥೆಯನ್ನು ತಡೆಹಿಡಿದು ಆದಾಯದ ದೃಷ್ಟಿಯಿಂದ ಮದ್ಯದಂಗಡಿ ತೆರೆದಿರುವುದು ಖೇದಕರವಾಗಿದೆ.

ಲಾಕ್‌ಡೌನ್‌ ಅವಧಿಯಲ್ಲಿ ವ್ಯಸನಿಗಳ ಚಿಕಿತ್ಸೆ, ಸಲಹೆಗಾಗಿ ವೇದಿಕೆಯ ಮೂಲಕ ಕೈಗೊಳ್ಳಲಾದ ಕ್ರಮಗಳಿಂದಾಗಿ ಸಾವಿರಾರು ಕುಟುಂಬಗಳು ವ್ಯಸನದಿಂದ ಹೊರಬರಲು ಸಾಧ್ಯವಾಗಿದೆ. ಬಹುತೇಕ ಕುಡಿತ ಬಿಟ್ಟವರನ್ನು ಈ ಅವಧಿಯಲ್ಲಿ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಸ್ಪಂದಿಸಿ ವ್ಯಸನ ಮುಕ್ತರಾಗಲು ಪ್ರೋತ್ಸಾಹಿಸಿದ ಪರಿಣಾಮ ಬಹಳಷ್ಟು ಜನರು ಮದ್ಯದಂಗಡಿ ತೆರೆದರೂ ಅದರ ಹತ್ತಿರ ಸುಳಿಯದಿರುವುದು ಸಮಾಧಾನ ತಂದಿದೆ. ಮುಂದಕ್ಕೂ ಈ ನಿಟ್ಟಿನಲ್ಲಿ ವೇದಿಕೆಯಿಂದ ಯೋಜನೆಗಳನ್ನು ಹಾಕಿಕೊಂಡು ವ್ಯಸನಮುಕ್ತರ ನೆರವಿಗೆ ಸಹಕರಿ ಸಲಾಗುವುದು ಎಂದು ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್‌ ವಿ. ಪಾಯಸ್‌ ಅವರು ತಿಳಿಸಿದ್ದಾರೆ.

ವ್ಯಸನಮುಕ್ತರು ಸ್ವ ಉದ್ಯೋಗಿಗಳಾಗಿ ಬದಲಾಗಬೇಕು, ಅವರದ್ದೇ ಆದ ಸ್ವಸಹಾಯ ಸಂಘಗಳನ್ನು ರಚಿಸಿ, ಮೂಲ ಸೌಕರ್ಯಗಳ ಬಗ್ಗೆ ಆಸಕ್ತಿ ತೋರಿಸಿ ಸಾಧಕರಾಗಿ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು, ಈ ನಿಟ್ಟಿನಲ್ಲಿ ವೇದಿಕೆಯು ಸಹ ಕರಿಸಲಿದೆ ಎಂದು ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಸಂಚಾಲಕ ಡಾ| ಎಲ್‌.ಎಚ್‌. ಮಂಜುನಾಥ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಕುಡಿತ ಬಿಟ್ಟವರು ಅದೃಷ್ಟವಂತರಾಗಿದ್ದಾರೆ. ಅನಿವಾರ್ಯವಾಗಿ ಯಾವುದೇ ಒತ್ತಡವಿಲ್ಲದೆ ವ್ಯಸನಮುಕ್ತರಾಗಲು, ಸ್ವ ವಿಮರ್ಶೆಯಿಂದ ಸ್ವ ನಿರ್ಧಾರ ಕೈಗೊಳ್ಳಲು ಅವರಿಂದ ಸಾಧ್ಯವಾಗಿದೆ. ಸ್ವಂತ ಪ್ರಯತ್ನಕ್ಕೆ ಸಿಗುವ ಸಂತೋಷದ ಬೆಲೆಯನ್ನು ಅರ್ಥ ಮಾಡಿಕೊಂಡು ಶಾಶ್ವತ ಪಾನಮುಕ್ತಿಗೆ ಪ್ರಯತ್ನಿಸಬೇಕು. ಮದ್ಯದಂಗಡಿ ತೆರೆದ ಸಂದರ್ಭದಲ್ಲೂ ವ್ಯಸನಿಗಳಾಗದೆ ಉಳಿಯುವುದು ಹಾಗೂ ಬೆಳೆಯುವುದು ಶ್ರೇಷ್ಠ ಸಾಧನೆ.
– ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು,
ಶ್ರೀ ಕ್ಷೇತ್ರ ಧರ್ಮಸ್ಥಳ

Advertisement
Advertisement

Udayavani is now on Telegram. Click here to join our channel and stay updated with the latest news.

Next