Advertisement

“ಅಮ್ಮಾ…ನಿಜವಾಗಿಯೂ ದೇವರಿದ್ದಾನಾ? ಎಂದು ಪ್ರಶ್ನಿಸಿದೆ

03:23 PM Mar 02, 2021 | Team Udayavani |

ನಾನು ದೇವರನ್ನು ನಂಬುತ್ತೇನೆ… ಆದರೂ ಕೇಳ್ಳೋಣವೆನ್ನಿಸಿ, “ಅಮ್ಮಾ…ನಿಜವಾಗಿಯೂ ದೇವರಿದ್ದಾನಾ? ಅಥವಾ ಜೀವನದಲ್ಲಿ ನಡೆಯುವ ಕೆಲವೊಂದು ಅಪರೂಪದ ಸಂಗತಿಗಳನ್ನು ಕಂಡು ಅದು ದೇವರ ಪವಾಡ ಎಂದು ನಂಬುತ್ತೇವೆಯೋ ಹೇಗೆ?’ ಎಂದು ಇತ್ತೀಚೆಗೆ ತಾಯಿಯ ಬಳಿ ಪ್ರಶ್ನಿಸಿದೆ.

Advertisement

ಕಿರು ನಗುವನ್ನು ಚೆಲ್ಲಿದ ನನ್ನಮ್ಮ, “ನಾನೊಂದು ಘಟನೆ ಹೇಳುವೆ. ಅಂದಿನಿಂದ ನಾನೂ ಸಹ ಹೆಚ್ಚಾಗಿ ದೇವರನ್ನು ನಂಬಿದೆ. ಅದು ಬೇರೆಯವರ ಜೀವನದಲ್ಲಿ ನಡೆದದ್ದು ಅಲ್ಲ, ನಮ್ಮ ಜೀವನದ್ದೇ; ನಿನಗೂ ನೆನಪಿರಬಹುದು’ ಎಂದರು.
ಮುಂದುವರಿಸಿ, “ಒಂದನೇ ತರಗತಿಯಲ್ಲಿ ಸಣ್ಣ ಘಟನೆ ನಡೆಯಿತು. ಘಟನೆ ಎಂದು ಹೇಳುವುದಕ್ಕಿಂತ “ಅನುಭವ’ ಎಂದರೆ ಅದಕ್ಕೆ ಮತ್ತಷ್ಟು ಪ್ರಾಶಸ್ತ್ಯ ಸಿಗಬಹುದೇನೋ. ಧೀರಜ್‌(ನೈಜ ಹೆಸರನ್ನು ಬಳಸಲಿಲ್ಲ) ನಿನ್ನನ್ನು ತಳ್ಳಿ ಬೀಳಿಸಿದಾಗ ಏನಾಯಿತು ನೆನಪಿದೆಯೇ?’ ಎಂದು ಕೇಳಿದರು.

ಸ್ವಲ್ಪ ಆಲೋಚಿಸಿ, “ಹೌದಮ್ಮ ಸರಿಯಾಗಿ ನೆನಪಿದೆ’ ಎಂದು ಹೇಳಿ, ನೆನಪಿದ್ದ ಸಂಗತಿ ಮತ್ತೂಮ್ಮೆ ಹೇಳತೊಡಗಿದೆ. ಒಂದನೇ ತರಗತಿಯಲ್ಲಿರುವಾಗ ನನಗೆ ಆತ್ಮೀಯ ಗೆಳೆಯರೆಂದು ಯಾರೂ ಇರಲಿಲ್ಲ. ಸ್ವಲ್ಪ ಮಾತು; ಕಿರು ನಗೆ; ಮನೆಯವರು ಹೇಳಿದ ಹಾಗೆ ಕೆಲವೊಮ್ಮೆ ಕೇಳದೆ ಹಠ ಹಿಡಿದರೂ ಶಿಕ್ಷಕರು ಹೇಳಿದ್ದನ್ನು ಚಾಚೂ ತಪ್ಪದೆ ಮಾಡುತ್ತಿದ್ದೆ, ಅದು ಎಷ್ಟೇ ಕಷ್ಟವಿರಲಿ, ಸಾಧಿಸಿಯೇ ಸಿದ್ಧ ಎನ್ನುವ ಮನೋಭಾವ ಇತ್ತು.ಯಾರನ್ನೂ ಅಷ್ಟಾಗಿ ಹಚ್ಚಿಕೊಳ್ಳುತ್ತಿರಲಿಲ್ಲ. ನಾನಾಗಿ ಯಾರಿಗೂ ಕೀಟಲೆ ಮಾಡುತ್ತಿರಲಿಲ್ಲ.

ಅದೊಂದು ಮಳೆಗಾಲದ ದಿನ. ಶಾಲೆಯಲ್ಲಿರುವಾಗ, ಜೋರಾಗಿ ಮಳೆ ಬರಲಿ ಎಂದು ಆಶಿಸುವ ವಿದ್ಯಾರ್ಥಿಗಳೇ ಹೆಚ್ಚು. ಮಳೆ ಬಿರುಸಾಗಿ ಬಂದೊಡನೆ ಮಾಡಿಗೆ ಬೀಳುವ ಮಳೆ ಹನಿಯ ನಾದ, ಜೋರಾಗಿ ಗಾಳಿ ಬೀಸುವಾಗ ಕಿಟಕಿಗಳು ಬಡಿದು ಕೊಳ್ಳುವುದು, ಸಿಡಿಲಿನ ಸದ್ದಿಗೆ ಕಿವಿ ಭದ್ರವಾಗಿ ಹಿಡಿಯುವುದು, ಜಗಲಿಯ ಕೆಳಗೆ ಇಟ್ಟಿದ್ದ ಚಪ್ಪಲಿ ತೇಲಿಕೊಂಡು ಯಾನ ಹೊರಟ ಕೂಡಲೆ ಮಕ್ಕಳು ಹೊರಗಡೆ ಹೋಗಿ, ಅದನ್ನು ಹಿಡಿಯುವುದು…ಹೇಳುತ್ತಾ ಹೋದರೆ ಅಂತ್ಯವಿರದು.. ಇವೆಲ್ಲ ನೆಪದಿಂದಾಗಿ ಪಾಠ ಮಾಡುದಿಲ್ಲವಲ್ಲಾ ಅದೇ ಖುಷಿ .

ಆ ದಿನ ಶನಿವಾರ. ಮಧ್ಯಾಹ್ನದ ಬಳಿಕ ಮನೆಗೆ ಬಿಡುತ್ತಾರಲ್ಲ, ಹಾಗಾಗಿ ಬುತ್ತಿ ಕೊಂಡುಹೋಗಿರಲಿಲ್ಲ. ಜಗಲಿಯ ಅಂಚಿನಲ್ಲಿ ಕುಳಿತು, ಮಳೆ ನೀರು ರಭಸದಿ ಹರಿಯುವುದನ್ನು ನೋಡುತ್ತಿದ್ದೆ. ಹಿಂದೆಯಿಂದ ಬಂದ ಧೀರಜ್‌ ನನ್ನನ್ನು ಒಮ್ಮೆಲೆ ನೀರಿಗೆ ತಳ್ಳಿಬಿಟ್ಟ. ಅನಿರೀಕ್ಷಿತ ಘಟನೆಯಿಂದ ಒಂದು ಕ್ಷಣ ದಂಗಾಗಿಬಿಟ್ಟೆ. ಮೆಲ್ಲನೆ ಎದ್ದೆ. ಬಟ್ಟೆ ಪೂರ್ತಿ ಕೆಸರಾಗಿತ್ತು. ಮೊಣಕಾಲಿಗೆ ತುಸು ಏಟಾಗಿ ರಕ್ತ ಸುರಿಯುತ್ತಿತ್ತು. ಆ ಕ್ಷಣ ಏನನ್ನೂ ಮಾತನಾಡದೆ, ಅಳುತ್ತ ನಳ್ಳಿಯ ಕಡೆ ಹೋಗಿ, ಬಟ್ಟೆ ಶುಚಿಗೊಳಿಸಿ, ಮುಖ, ಕೈ, ಕಾಲು ತೊಳೆದೆ. ಅಷ್ಟರಲ್ಲಿ, ನಮ್ಮ ಎಚ್‌.ಎಂ. ನನ್ನನ್ನು ಕಂಡು, “ಏನಾಯಿತು ?’ ಎಂದು ಕೇಳಿದರು.

Advertisement

“ನಾನು ಜಗಲಿಯಲ್ಲಿ ಕುಳಿತಿರುವಾಗ ಧೀರಜ್‌ ಕೆಳಗೆ ದೂಡಿದ’ ಎಂದೆ. “ಧೀರಜ್‌ ನಿಲ್ಲು…ಅವನಿಗೇ…’ ಎಂದು ಹೇಳಿ ಧೀರಜ್‌ನನ್ನು ಕರೆದು ಬೆತ್ತ ಹಿಡಿದು ಬಂದರು. ಅಷ್ಟರವರೆಗೆ ನಗುತ್ತಿದ್ದ ಧೀರಜ್‌ನ ಮುಖ ಬಾಡಿತು. “ಏಕೆ ತಳ್ಳಿದೆ?’ ಎಂದು ಬೈದ ಎಚ್‌.ಎಂ. ಅವನಿಗೆ ನಾಗರಬೆತ್ತದಿಂದ ಹೊಡೆದರು. ಇನ್ನು ಹೀಗೆ ಮಾಡಬಾರದು ಎಂದು ಗದರಿಸಿ ಹೇಳುವಷ್ಟರಲ್ಲಿ ಶಾಲೆಯ ಲಾಂಗ್‌ ಬೆಲ್‌ ಬಾರಿಸಿಯಾಗಿತ್ತು. ಮನೆಗೆ ಓಡುವವರು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಅವರನ್ನು ಕಳುಹಿಸಿ, ಕಾಲಿಗೆ ಮುಲಾಮು ಹಚ್ಚಿ ಎಚ್‌.ಎಂ. ನಮ್ಮನ್ನೂ ಕಳುಹಿಸಿದರು.

ಸ್ವಲ್ಪ ಮಟ್ಟಿಗೆ ನೆಮ್ಮದಿಯ ಭಾವ. ಆದರೂ ಮನೆಯಲ್ಲಿ ಹೇಳದೆ ದುಃಖ ಹೋಗದು. ಅಳುವ ಮೊಗದೊಂದಿಗೆ ಮನೆಯತ್ತ ತೆರಳಿದೆ. ತಾಯಿಯ ಬಳಿ ಶಾಲೆಯಲ್ಲಿ ನಡೆದ ಸಂಗತಿಯನ್ನೆಲ್ಲ ಹೇಳಿದೆ. ಕ್ಷಣಕಾಲ ದಂಗಾದ ತಾಯಿ ಸಮಾಧಾನ ಪಡಿಸುತ್ತ, “ನೋಡು ಕಂದಾ, ನೀನು ಅವನಿಗೆ ಏನೂ ಉಪಟಳ ಮಾಡಲಿಲ್ಲ ಅಲ್ವಾ. ಹಾಗಾಗಿ ನಾಳೆ ದೇವರು ಅವನನ್ನು ತಳ್ಳಿ ಹಾಕುತ್ತಾನೆ’ ಎಂದರು.

ಒಂದೆರಡು ದಿನಗಳ ಬಳಿಕ, ಮನೆಗೆ ಹಿಂದಿರುಗುವಾಗ ನನ್ನ ಮೊಗದಲ್ಲಿದ್ದ ಸಂತಸವನ್ನು ಕಂಡ ತಾಯಿ, ಏನಾಯಿತು?ಬಹಳ ಖುಷಿಯಲ್ಲಿ ಇದ್ದಿ’ ಎಂದು ಪ್ರಶ್ನಿಸಿದರು. “ಏನಿಲ್ಲ ಅಮ್ಮಾ, ಇಂದು ದೇವರು ಬಂದು ಧೀರಜ್‌ನನ್ನು ತಳ್ಳಿ ಹಾಕಿದರು’ ಎಂದು ಖುಷಿಯಿಂದ ಹೇಳಿದೆ. ಕ್ಷಣ ಕಾಲ ಮೌನ ವಹಿಸಿದ ತಾಯಿ ಹೇಳಿದರು, “ನೋಡು, ಅಂದು ನಾನು ಕೇವಲ ನಿನ್ನ ಸಂತೋಷಕ್ಕಾಗಿ ದೇವರು ತಳ್ಳಿಹಾಕುತ್ತಾನೆ ಎಂದು ಹೇಳಿದೆನಷ್ಟೇ. ಅವನ ಮೊಣಕಾಲಿಗೆ ಏಟಾಗಿ, ಚಿಕಿತ್ಸೆ ಪಡೆದು ಬರುವಂತಾಯಿತು. ನಾನು ಹೇಳಿದ್ದರ ಹಿಂದೆ ಯಾವ ದುರುದ್ದೇಶವೂ ಇರಲಿಲ್ಲ. ಆದರೆ ಪ್ರಾಮಾಣಿಕದ ಪಥದಲ್ಲಿ ನಡೆದವರಿಗೆ ಯಾರಾದರೂ ಕೇಡನ್ನು ಬಯಸಿದರೆ, ಭಗವಂತ ತಿರುಗೇಟನ್ನು ನೀಡುತ್ತಾನೆ ಎಂಬುದು ಆ ಸಣ್ಣ ಘಟನೆಯಿಂದ ತಿಳಿಯುತ್ತದೆ’ ಎಂದು ವಿವರಿಸಿದರು.

ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾರೇ ಕೇಡು ಬಯಸಿದರೆ ಒಂದಲ್ಲ ಒಂದು ದಿನ ಅದರ ಪರಿಣಾಮ ಅನುಭವಿಸುತ್ತಾರೆ ಎನ್ನುವುದು ನನ್ನ ಅನುಭವಕ್ಕೆ ಬಂದ ಸಂಗತಿ.


ಸಮ್ಯಕ್‌ ಜೈನ್‌, ನೂಜಿಬಾಳ್ತಿಲ, ಸಾಫಿಯೆನ್ಶಿಯಾ ಬೆಥನಿ ಕಾಲೇಜು, ನೆಲ್ಯಾಡಿ 

Advertisement

Udayavani is now on Telegram. Click here to join our channel and stay updated with the latest news.

Next