Advertisement

Amrit Bharat ರೈಲು ಸೇವೆ; ಜನಸಾಮಾನ್ಯರಿಗೆ ಲಕ್ಸುರಿ ಪ್ರಯಾಣದ ಅನುಭವ

12:21 PM Dec 29, 2023 | Team Udayavani |

ವಿಶ್ವದ ಎರಡನೇ ಅತೀದೊಡ್ಡ ಮತ್ತು ಏಷ್ಯಾದಲ್ಲಿಯೇ ಬೃಹತ್‌ ರೈಲ್ವೇ ಜಾಲವನ್ನು ಹೊಂದಿರುವ ಭಾರತದಲ್ಲಿ ಪ್ರತೀ ದಿನ 10 ಮಿಲಿಯನ್‌ಗಿಂತಲೂ ಹೆಚ್ಚು ಜನ ತಮ್ಮ ಪ್ರಯಾಣಕ್ಕೆ ರೈಲನ್ನೇ ಅವಲಂಬಿಸಿದ್ದಾರೆ. 2019ರಲ್ಲಿ ಆರಂಭಿಸಲಾದ ವಂದೇ ಭಾರತ್‌ ಎಕ್ಸ್ ಪ್ರೆಸ್ ರೈಲಿನ ಸೇವೆ ಕ್ಷಿಪ್ರ ಅವಧಿಯಲ್ಲಿ ದೇಶಾದ್ಯಂತ ಜನಮೆಚ್ಚುಗೆ ಗಳಿಸಿದೆ.

Advertisement

ಭಾರತೀಯ ರೈಲ್ವೇ ಈಗ ದೇಶದ ಸಾಮಾನ್ಯ ವರ್ಗ ಹಾಗೂ ಮಧ್ಯಮ ವರ್ಗದವರನ್ನು ದೃಷ್ಟಿಯಲ್ಲಿರಿಸಿಕೊಂಡು “ಅಮೃತ್‌ ಭಾರತ್‌ ರೈಲು”ಗಳನ್ನು ಪರಿಚಯಿಸಲು ಸಜ್ಜಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಡಿ.30 ರಂದು ಈ ಹೊಸ ರೈಲು ಸೇವೆಗೆ ಹಸುರು ನಿಶಾನೆ ತೋರಲಿದ್ದಾರೆ. ಹಾಗಾದರೆ ಏನಿದು ಹೊಸ ರೈಲು ಸೇವೆ, ಈ ರೈಲುಗಳಲ್ಲಿ ಬಳಸಲಾಗಿರುವ ತಂತ್ರಜ್ಞಾನ, ಪ್ರಯಾಣಿಕಸ್ನೇಹಿ ಉಪಕ್ರಮಗಳು, ಸೌಲಭ್ಯಗಳ ಬಗೆಗೆ ಇಲ್ಲಿದೆ ಸಮಗ್ರ ಮಾಹಿತಿ.

ಏನಿದು ಅಮೃತ್‌ ಭಾರತ್‌ ಎಕ್ಸ್‌ಪ್ರೆಸ್‌?

“ವಂದೇ ಭಾರತ್‌ ಎಕ್ಸ್‌ಪ್ರೆಸ್‌’ ರೈಲಿನ ಮಾದರಿಯಲ್ಲಿಯೇ ಈ ರೈಲು ಕೂಡ ಇರಲಿದ್ದು ಆರಂಭದಲ್ಲಿ ಇದಕ್ಕೆ “ವಂದೇ ಸಾಧಾರಣ್‌’ ಎಂದು ನಾಮಕರಣ ಮಾಡಲಾಗಿತ್ತು. ಈಗ ಅಮೃತ್‌ ಭಾರತ್‌ ಎಂದು ಪುನರ್‌ ನಾಮಕರಣ ಮಾಡಲಾಗಿದ್ದು ಕಿತ್ತಳೆ ಮತ್ತು ಬೂದು ಬಣ್ಣವನ್ನು ಹೊಂದಿರಲಿದೆ. ಸಾಮಾನ್ಯ ಜನರಿಗೆ ಕಾಯ್ದಿರಿಸದ, ಹೆಚ್ಚು ಆರಾಮದಾಯಕ ಹಾಗೂ ವೇಗದ ಪ್ರಯಾಣವನ್ನು ಒದಗಿಸಲು ಭಾರತೀಯ ರೈಲ್ವೇ ಅಮೃತ್‌ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳನ್ನು ಪರಿಚಯಿಸುತ್ತಿದೆ.

Advertisement

ಗಂಟೆಗೆ 130 ಕಿ.ಮೀ. ವೇಗದ ಸಾಮರ್ಥ್ಯ ಹಾಗೂ ಪುಶ್‌ ಪುಲ್‌ ತಂತ್ರಜ್ಞಾನ ಹೊಂದಿರುವ ರೈಲು ಇದಾಗಿದ್ದು, ವಲಸೆ ಕಾರ್ಮಿಕರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಪುಶ್‌-ಪುಲ್‌ನ ಮುಖ್ಯ ಉದ್ದೇಶ ರೈಲಿನ ವೇಗವರ್ಧನೆ. ಇದರಿಂದ ಪ್ರಯಾಣದ ಸಮಯ ಕಡಿಮೆಯಾಗಿ ಗುರಿಯನ್ನು ಬಹಳ ಬೇಗ ತಲುಪಲು ಸಾಧ್ಯವಾಗಲಿದೆ. ಜನಸಾಮಾನ್ಯರು ಮತ್ತು ಮಧ್ಯಮ ವರ್ಗದ ಜನರಿಗೆ “ಲಕ್ಸುರಿ’ ಪ್ರಯಾಣದ ಅನುಭವವನ್ನು ಈ ರೈಲು ಒದಗಿಸಲಿದ್ದು ಉಳಿದ ಲಕ್ಸುರಿ ರೈಲುಗಳ ಪ್ರಯಾಣ ದರಕ್ಕೆ ಹೋಲಿಸಿದರೆ ಈ ರೈಲಿನ ಪ್ರಯಾಣ ದರ ಕಡಿಮೆಯಾಗಿರಲಿದೆ.

ಏನಿದು ಪುಶ್‌-ಪುಲ್‌ ತಂತ್ರಜ್ಞಾನ ?

ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವವನ್ನು ನೀಡಲು ರೈಲುಗಳಲ್ಲಿ ಪುಶ್‌-ಪುಲ್‌ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ಈ ತಂತ್ರಜ್ಞಾನದಲ್ಲಿ ರೈಲಿನ ಎರಡು ತುದಿಗಳಲ್ಲಿ 6,000 ಎಚ್‌ಪಿ ಸಾಮರ್ಥ್ಯದ ಎರಡು WAP5 ಲೋಕೊಮೋಟಿವ್‌ ಎಂಜಿನ್‌ಗಳನ್ನು ಬಳಸಲಾಗುತ್ತದೆ. ಈ ಎರಡು ಎಂಜಿನ್‌ಗಳು ಒಂದಾಗಿ ಕಾರ್ಯನಿರ್ವಹಿಸಿ ರೈಲು ಹೊರಡುವ ವೇಗವನ್ನು ಹೆಚ್ಚಿಸಿ, ನಿಧಾನಗೊಳಿಸುವ ಸಮಯವನ್ನು ಕಡಿಮೆ ಮಾಡುತ್ತದೆ. ಇದರಿಂದ ರೈಲಿನ ಸರಾಸರಿ ವೇಗ ಹೆಚ್ಚಾಗುತ್ತದೆ. ಅಲ್ಲದೇ ಈ ರೈಲನ್ನು ಹಿಂದಿರುಗಿಸಲು ಇನ್ನೊಂದು ತುದಿಗೆ ತಿರುಗಿಸುವ ಅಗತ್ಯ ಬೀಳುವುದಿಲ್ಲ. ಇದರಿಂದ ನಿಲ್ದಾಣದಲ್ಲಿ ಹೆಚ್ಚಿನ ಸಮಯ ವ್ಯರ್ಥವಾಗುವುದನ್ನು ತಡೆಯುತ್ತದೆ.

ಎಲ್ಲೆಲ್ಲಿ ಸಂಚರಿಸಲಿದೆ ಅಮೃತ್‌ ಭಾರತ್‌ ಎಕ್ಸ್‌ಪ್ರೆಸ್‌?

ಮೊದಲ ಅಮೃತ್‌ ಭಾರತ್‌ ಎಕ್ಸ್ ಪ್ರೆಸ್ ರೈಲು ಉತ್ತರಪ್ರದೇಶದ ಅಯೋಧ್ಯೆಯಿಂದ ಬಿಹಾರದ ದರ್ಬಾಂಗ್‌ ನಡುವೆ ಸಂಚರಿಸಲಿದೆ. ಈ ರೈಲು ಶ್ರೀರಾಮ ಮತ್ತು ಸೀತಾಮಾತೆಯ ಜನ್ಮಸ್ಥಳಗಳಾದ ಅಯೋಧ್ಯೆ ಮತ್ತು ಸೀತಾಮಡಿಯನ್ನು ಹಾದುಹೋಗಲಿರುವುದು ವಿಶೇಷ.

ಇನ್ನು ಎರಡನೇ ರೈಲನ್ನು ದಕ್ಷಿಣ ಭಾರತದಲ್ಲಿ ಪರಿಚಯಿಸಲಾಗುತ್ತಿದ್ದು, ಇದು ಬೆಂಗಳೂರು ಮತ್ತು ಮಾಲ್ಡಾ ನಡುವೆ ಸಂಚರಿಸಲಿದೆ. ಡಿಸೆಂಬರ್‌ 30ರಂದು ಪ್ರಧಾನಿ ನರೇಂದ್ರ ಮೋದಿ ಈ ಎರಡು ಅಮೃತ್‌ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಸದ್ಯೋಭವಿಷ್ಯದಲ್ಲಿ ಇನ್ನಷ್ಟು ಅಮೃತ್‌ ಭಾರತ್‌ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸುವ ಗುರಿಯನ್ನು ಭಾರತೀಯ ರೈಲ್ವೇ ಹಾಕಿಕೊಂಡಿದೆ.

ಹೂಡಿಕೆಯಲ್ಲಿ ಬದಲಾವಣೆ ಸಾಧ್ಯತೆ

2023-24ರ ಕೇಂದ್ರ ಬಜೆಟ್‌ನಲ್ಲಿ ರೈಲ್ವೇ ಇಲಾಖೆಗೆ ದಾಖಲೆಯ 2,40,000 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಕೇಂದ್ರ ಸರಕಾರ ದೇಶದ ರೈಲ್ವೇ ವ್ಯವಸ್ಥೆಯನ್ನು ನವೀಕರಿಸಲು ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯ ಕಡೆಗೆ ಗಮನ ಹರಿಸುತ್ತಿದ್ದು, ಈ ಬಾರಿಯ ಬಜೆಟ್‌ನಲ್ಲಿ ಇನ್ನೂ ಹೆಚ್ಚಿನ ಪಾಲು ನೀಡಬಹುದೆಂದು ಊಹಿಸಲಾಗಿದೆ.

ವಂದೇ ಭಾರತ್‌ನೊಂದಿಗೆ ಇದೀಗ ಅಮೃತ್‌ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ಪರಿಚಯಿಸಲ್ಪಡುತ್ತಿರುವುದರಿಂದ ಇದು ಹೂಡಿಕೆದಾರರನ್ನು ಆಕರ್ಷಿಸುವುದರ ಜತೆಗೆ ಷೇರುಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ 3,000 ಹೊಸ ರೈಲುಗಳನ್ನು ಪರಿಚಯಿಸುವ ಗುರಿ ಸರಕಾರದ್ದಾಗಿದ್ದು, ಪ್ರಸ್ತುತ ಇರುವ 800 ಕೋಟಿ ರೈಲ್ವೇ ಪ್ರಯಾಣಿಕರ ಪ್ರಮಾಣವನ್ನು 1,000 ಕೋಟಿಗೆ ಏರಿಸುವ ಗುರಿಯನ್ನು ಹೊಂದಿದೆ.

ವಂದೇ ಭಾರತ್‌ ರೈಲು ಸೇವೆ ಮತ್ತಷ್ಟು ಚುರುಕು

ಸೆಮಿ ಹೈ ಸ್ಪೀಡ್‌ ರೈಲುಗಳ ಮೂಲಕ ದೇಶದ ಪ್ರತೀ ಮೂಲೆ ಮೂಲೆಗೂ ತಲುಪಲು ವಿಶ್ವದ ಅತ್ಯುತ್ತಮ ರೈಲು ಸೇವೆಯನ್ನು ಒದಗಿಸುವ ಉದ್ದೇಶದಿಂದ 2019ರಲ್ಲಿ ವಂದೇ ಭಾರತ್‌ ರೈಲು ಸೇವೆಯನ್ನು ಪ್ರಾರಂಭಿಸಲಾಯಿತು. ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದಲ್ಲಿ ಚಲಿಸುವ ಈ ರೈಲು ಕಡಿಮೆ ಪ್ರಯಾಣ ಸಮಯದೊಂದಿಗೆ, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಆಗಸ್ಟ್‌ 2024ರ ಒಳಗಾಗಿ ದೇಶದಲ್ಲಿ ದೇಶಾದ್ಯಂತ ಒಟ್ಟು 75 ವಂದೇ ಭಾರತ್‌ ಏಕ್ಸ್‌ಪ್ರೆಸ್‌ ರೈಲುಗಳನ್ನು ಓಡಿಸುವ ಗುರಿಯನ್ನು ಸರಕಾರ ಹಾಕಿಕೊಂಡಿದೆ.

ರಾಜ್ಯಕ್ಕೆ ಮತ್ತೆರಡು ವಂದೇ ಭಾರತ್‌ ಎಕ್ಸ್ ಪ್ರೆಸ್

ಡಿ. 30ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು-ಮಡಗಾಂವ್‌ ಹಾಗೂ ಬೆಂಗಳೂರು -ಕೊಯಮತ್ತೂರು ಸಹಿತ ಒಟ್ಟು ಆರು ಮಾರ್ಗಗಳಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಇದರೊಂದಿಗೆ ರಾಜ್ಯದ ಕರಾವಳಿಗರ ಬಹುದಿನಗಳ ಬೇಡಿಕೆಯೊಂದು ಈಡೇರಿದಂತಾಗಿದೆ.

  • ಸೀತಾ-ರಾಮರ ಜನ್ಮಸ್ಥಳದ ಮೂಲಕ ಹಾದುಹೋಗಲಿವೆ ಮೊದಲೆರಡು ಅಮೃತ್‌ ಭಾರತ್‌ ರೈಲುಗಳು
  •  ಆಧುನಿಕ ತಂತ್ರಜ್ಞಾನದಿಂದ ಕೂಡಿದ ಸ್ವದೇಶದಲ್ಲೇ ನಿರ್ಮಾಣವಾಗುತ್ತಿವೆ ಈ ಹೊಸ ರೈಲುಗಳು
  • ಎಸಿ ರಹಿತವಾದರೂ ವಂದೇ ಭಾರತ್‌ ಎಕ್ಸ್‌ಪ್ರೆಸ್‌ನ ಬಹುತೇಕ ಸೌಲಭ್ಯಗಳು ಲಭ್ಯ ­
  • ಮೊದಲ ಹಂತದಲ್ಲಿಯೇ ಬೆಂಗಳೂರಿಗೂ ಒಂದು ಅಮೃತ್‌ ಭಾರತ್‌ ರೈಲು

ಸ್ವದೇಶಿ ತಂತ್ರಜ್ಞಾನ

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ತಯಾರಿಸುತ್ತಿರುವ ಚೆನ್ನೈಯ ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿಯಲ್ಲಿಯೇ ಅಮೃತ್‌ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗುತ್ತಿದೆ.

ಹೇಗಿರಲಿದೆ ಅಮೃತ್‌ ಭಾರತ್‌ ರೈಲು?

  • ಅಮೃತ್‌ ಭಾರತ್‌ ರೈಲು ಒಟ್ಟು 22 ಕೋಚ್‌ಗಳನ್ನು ಹೊಂದಿದ್ದು ಎಸಿ ರಹಿತವಾಗಿರಲಿವೆ. 8 ಸಾಮಾನ್ಯ ಎರಡನೇ ದರ್ಜೆಯ ಕೋಚ್‌ಗಳನ್ನು ಹೊಂದಿರುವ ಈ ರೈಲುಗಳಲ್ಲಿ ಪ್ರಯಾಣಿಸಲು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಅಗತ್ಯವಿಲ್ಲ. 12 ಎರಡನೇ ದರ್ಜೆಯ 3 ಶ್ರೇಣಿಯ ಸ್ಲಿàಪರ್‌ ಕೋಚ್‌ಗಳನ್ನು ಹೊಂದಿರಲಿದೆ. ಇದರ ಜತೆ ಎರಡು ಗಾರ್ಡ್‌ ಕ್ಯಾಬಿನ್‌ ಇರಲಿದೆ. ಈ ರೈಲುಗಳಲ್ಲಿ ಅಂಗವಿಕಲರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ.
  • ಗಂಟೆಗೆ ಗರಿಷ್ಠ 130 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
  • ಇದರಲ್ಲಿ 1,800 ಪ್ರಯಾಣಿಕರು ಏಕಕಾಲದಲ್ಲಿ ಪ್ರಯಾಣಿಸಬಹುದು.
  • ಪ್ರಯಾಣಿಕರ ಸುರಕ್ಷೆಗಾಗಿ ಸಿಸಿ ಕೆಮರಾ ಕಣ್ಗಾವಲು ಇರಲಿದೆ.
  • ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತೀ ಆಸನದ ಬಳಿಯೂ ಮೊಬೈಲ್‌ ಚಾರ್ಜರ್‌ ಪಾಯಿಂಟ್‌, ನೀರಿನ ಬಾಟಲ್‌ ಹೋಲ್ಡರ್‌, ಸುಧಾರಿತ ಲಗೇಜ್‌ ರ್ಯಾಕ್‌ಗಳು ಇರಲಿವೆ.
  • ಸುಧಾರಿತ ವಿನ್ಯಾಸ ಮತ್ತು ಉತ್ತಮ ಅನುಭವ ನೀಡುವ ಆಸನ ವ್ಯವಸ್ಥೆಯನ್ನು ಹೊಂದಿದೆ.
  • ಶೌಚಾಲಯದಲ್ಲಿ ಏರೋಸಾಲ್‌ ಆಧಾರಿತ ಅಗ್ನಿಶಾಮಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
  • ರೇಡಿಯಂ ಇಲ್ಯುಮಿನೇಶನ್‌ ಫ್ಲೋರಿಂಗ್‌ ಸ್ಟ್ರಿಪ್ಸ್‌ಗಳನ್ನು ಹೊಂದಿದೆ.

-ಸುಶ್ಮಿತಾ, ನೇರಳಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next